Site icon Vistara News

ವಿಸ್ತಾರ TOP 10 NEWS | ನಾಡಹಬ್ಬವನ್ನು ಉದ್ಘಾಟಿಸಿದ ರಾಷ್ಟ್ರಪತಿಯಿಂದ ರಾಜಸ್ಥಾನ ಬಿಕ್ಕಟ್ಟಿನವರೆಗೆ ಪ್ರಮುಖ ಸುದ್ದಿಗಳಿವು

TOP 10 NEWS 26092022

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಭಾರತದ ರಾಷ್ಟ್ರಪತಿ ಉದ್ಘಾಟನೆ ಮಾಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೊದಲ ರಾಜ್ಯ ಪ್ರವಾಸ ಇದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈಗಾಗಲೆ ಹಣಕಾಸು, ಆರೋಗ್ಯ ಕುರಿತು ಯೂಟ್ಯೂಬ್‌ ಚಾನೆಲ್‌ಗಳನ್ನು ಸಮರ್ಪಿಸಿರುವ ʼವಿಸ್ತಾರ ಮೀಡಿಯಾʼ, ನಾಗರಿಕರ ಆಧ್ಯಾತ್ಮಿಕ ವಿಕಾಸಕ್ಕಾಗಿ ʼವಿಸ್ತಾರ ಓಂಕಾರʼ ಚಾನೆಲ್‌ಗೆ ಸೋಮವಾರ ಚಾಲನೆ ನೀಡಿದೆ. ರಾಜಸ್ಥಾನ ಕಾಂಗ್ರೆಸ್‌ ಬಿಕ್ಕಟ್ಟು ಹೊಸ ತಿರುವು ಪಡೆದಿದೆ, ಷೇರುಪೇಟೆ ಬೃಹತ್‌ ಕುಸಿತ ಕಂಡಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Mysuru Dasara | ಭಾರತೀಯ ಸಂಸ್ಕೃತಿಯ ಪ್ರತೀಕ ಮೈಸೂರು ದಸರಾ: ಕನ್ನಡ ನುಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ನಾಡಹಬ್ಬ ಮೈಸೂರು ದಸರಾ ಕರ್ನಾಟಕವಷ್ಟೆ ಅಲ್ಲ, ಇಡೀ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ. ಮಹಿಳಾ ಸಬಲೀಕರಣ, ಸಾಕ್ಷರತೆಯ ಪ್ರೇರಣೆಯಾಗಿದೆ ಎಂಬ ಸಂದೇಶವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೀಡಿದ್ದಾರೆ. ಮೈಸೂರು ಮಹಾರಾಜ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರಾಷ್ಟ್ರಪತಿಯಾದ ನಂತರ ಇದು ದ್ರೌಪದಿ ಮುರ್ಮು ಅವರು ನಡೆಸಿರುವ ಮೊದಲ ರಾಜ್ಯ ಪ್ರವಾಸ.
“ದೇವಿ ಚಾಮುಂಡೇಶ್ವರಿ ಉತ್ಸವದಂದು ಎಲ್ಲರಿಗೂ ನನ್ನ ಮನಃಪೂರ್ವಕ ನಮಸ್ಕಾರಗಳು. ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು” ಎನ್ನುತ್ತ ಕನ್ನಡದಲ್ಲೆ ಮಾತನ್ನು ಆರಂಭಿಸಿದರು. ದೇಶದ ಎಲ್ಲರಿಗೂ ದಸರಾ ಶುಭಾಶಯಗಳು. ಕರ್ನಾಟಕದ ನಾಡಹಬ್ಬ ಮೈಸೂರು ದಸರಾ ಆರಂಭದಂದು ಎಲ್ಲರಿಗೂ ಶುಭಾಶಯ ಕೋರುತ್ತೇನೆ ಎಂದ ರಾಷ್ಟ್ರಪತಿ, ನಮ್ಮ ಆಧ್ಯಾತ್ಮಿಕ, ಸಾಂಸ್ಕೃತಿಕ, ಲೋಕಪರಂಪರೆಯಲ್ಲಿ ಚಾಮುಂಡೇಶ್ವರಿ ಪರಮಪೂಜ್ಯ ಎಂದರು.
ನವರಾತ್ರಿ ಆಚರಣೆ ಹಾಗೂ ಮೈಸೂರು ದಸರಾ ಕುರಿತ ಎಲ್ಲ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

2. PFI Targets | ಬಿಜೆಪಿ-ಆರೆಸ್ಸೆಸ್ ನಾಯಕರು, ಸರ್ಕಾರಿ ಸಂಸ್ಥೆಗಳ ವಿರುದ್ಧ ಪ್ರತೀಕಾರದ ದಾಳಿಗೆ ಪಿಎಫ್ಐ ಸ್ಕೆಚ್ಚು!
ದೇಶಾದ್ಯಂತ ನಡೆದ ಎನ್ಐಎ ಕಾರ್ಯಾಚರಣೆಯ ಪ್ರತೀಕಾರವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸರ್ಕಾರಿ ಸಂಸ್ಥೆಗಳು, ಬಿಜೆಪಿ ಮತ್ತು ಆರ್‌ಎಸ್ಎಸ್ ನಾಕರರು ಮತ್ತು ಅವರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ದಾಳಿ (PFI Targets) ನಡೆಸುವ ಪ್ಲ್ಯಾನ್ ಮಾಡಿಕೊಂಡಿವೆ ಎಂಬ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳಿಗೆ ಲಭ್ಯವಾಗಿದೆ.
ತಮ್ಮ ಉನ್ನತ ನಾಯಕರಾಗಿರುವ ಇ ಅಬುಬಕರ್, ಇಎಂ ಅಬ್ದುರ್ ರಹಿಮಾನ್, ಇಎಂ ಆ್ಯಂಡ್ ಕೋಯಾ, ಕಲೀಮ್ ಕೋಯಾ ಸೇರಿದಂತೆ ಇನ್ನಿತರ ನಾಯಕರನ್ನು ಎನ್ಐಎ ಬಂಧಿಸಿದ್ದಕ್ಕೆ ಪಿಎಫ್ಐ ವ್ಯಗ್ರಗೊಂಡಿದೆ. ಈ ಕಾರಣಕ್ಕಾಗಿ ಸಾರ್ವಜನಿಕ ಶಾಂತಿಯನ್ನು ಕದಡುವ ಕೆಲಸಕ್ಕೆ ಪಿಎಫ್ಐ ಸಜ್ಜಾಗಿದೆ ಎಂಬ ಸುಳಿವು ದೊರೆತಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಆರೆಸ್ಸೆಸ್‌ ಧರ್ಮ ಜಾಗರಣ ಮುಖಂಡನ ಕಾರಿನ ಮೇಲೆ KILL YOU, JIHAD ಬರಹ, ಚಕ್ರದ ಗಾಳಿ ತೆಗೆದು ಬೆದರಿಕೆ

3. ಆಧ್ಯಾತ್ಮಿಕ ಉನ್ನತಿಗಾಗಿ ವಿಸ್ತಾರ ʼಓಂಕಾರʼ ಯುಟ್ಯೂಬ್‌ ಚಾನೆಲ್‌ ಆರಂಭ
ವಿಸ್ತಾರ ನ್ಯೂಸ್‌ ಮೀಡಿಯಾ ಬಳಗದ ಮೂರನೇ ಯೂಟ್ಯೂಬ್‌ ಚಾನೆಲ್‌ ʼವಿಸ್ತಾರ ಓಂಕಾರʼವನ್ನು ತುಮಕೂರು ರಾಮಕೃಷ್ಣ- ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು.
ʼಓಂಕಾರʼ ಯೂಟ್ಯೂಬ್‌ ವಾಹಿನಿಯು ಸರ್ವರ ಆಧ್ಯಾತ್ಮಿಕ- ಮಾನಸಿಕ ನೆಮ್ಮದಿ, ಆನಂದಕ್ಕೆ ಪೂರಕವಾದ ವಿಚಾರಗಳನ್ನು ಪ್ರಸ್ತುತಪಡಿಸಲಿದೆ. ಇದು ವಿಸ್ತಾರ ನ್ಯೂಸ್‌ ಬಳಗದ ನಾಲ್ಕನೇ ಕೊಡುಗೆ. ಈಗಾಗಲೇ vistaranews.com ವೆಬ್‌ ತಾಣ, ಆರ್ಥಿಕ ಶಿಕ್ಷಣ ಒದಗಿಸುವ ʼಮನಿ ಪ್ಲಸ್‌ʼ ಹಾಗೂ ಆರೋಗ್ಯ ವಿಚಾರಗಳಲ್ಲಿ ಅರಿವು ಮೂಡಿಸುವ ʼಹೆಲ್ತ್‌ʼ ಯೂಟ್ಯೂಬ್‌ ಚಾನೆಲ್‌ಗಳು ವೀಕ್ಷಕರಿಗೆ ಲಭ್ಯ ಇವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ಮನುಷ್ಯನ ಉನ್ನತಿಗೆ ಅಧ್ಯಾತ್ಮವೇ ತಳಹದಿ: ವಿಸ್ತಾರ ʻಓಂಕಾರʼ ಯುಟ್ಯೂಬ್‌ ಚಾನೆಲ್ ಉದ್ಘಾಟಿಸಿ ಸ್ವಾಮಿ ವೀರೇಶಾನಂದ ಸರಸ್ವತೀ ವ್ಯಾಖ್ಯಾನ
ಸಕಾರಾತ್ಮಕತೆ ಬೆಳೆಸುವುದು ವಿಸ್ತಾರ ಓಂಕಾರ ಯುಟ್ಯೂಬ್‌ ಚಾನೆಲ್‌ ಉದ್ದೇಶ: ಹರಿಪ್ರಕಾಶ್‌ ಕೋಣೆಮನೆ

4. Vistara Exclusive | ಏಳುಕೊಂಡಲವಾಡನಿಗೆ ಕರ್ನಾಟಕದಲ್ಲಿದೆ ಏಳು ಕಡೆ ಆಸ್ತಿ
ವಿಶ್ವದ ಅತ್ಯಂತ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲ (tirupati tirumala) ವೆಂಕಟೇಶ್ವರ ದೇಗುಲದ ಆಸ್ತಿ ಎಷ್ಟು ಎಂಬುದು ಕೊನೆಗೂ ಬಹಿರಂಗಗೊಂಡಿದೆ. ಏಳುಕೊಂಡಲವಾಡ ಕರ್ನಾಟಕದಲ್ಲಿ ಏಳು ಕಡೆ ಒಟ್ಟು ಹತ್ತು ಆಸ್ತಿಯನ್ನು ಹೊಂದಿದ್ದಾನೆ.
ಈ ದೇಗುಲದ ಆಡಳಿತದ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಮ್‌ (ಟಿಟಿಡಿ) ದೇಶಾದ್ಯಂತ ಇರುವ ಈ ದೇಗುಲದ ಆಸ್ತಿಯ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದು, 85,705 ಕೋಟಿ ರೂ. ಮೌಲ್ಯದ ಜಾಗ, ಜಮೀನು ಹೊಂದಿರುವುದಾಗಿ ತಿಳಿಸಿದೆ. ಇದರಲ್ಲಿ ರಾಜ್ಯದಲ್ಲಿರುವ ಹತ್ತು ಆಸ್ತಿ ವಿವರಗಳು ಸೇರಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

5. ಎಲೆಕ್ಷನ್ ಹವಾ | ತೀರ್ಥಹಳ್ಳಿ | ಗೃಹಸಚಿವ ಆರಗ ಜ್ಞಾನೇಂದ್ರ ತವರೂರಿನಲ್ಲಿ ಕಾಂಗ್ರೆಸ್‌ನದ್ದು ಒಡೆದ ಮನೆ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ರಾಜಕೀಯ ಸ್ಥಿತಿಗತಿ ತಿಳಿಸುವ ʼಎಲೆಕ್ಷನ್‌ ಹವಾʼ ಸರಣಿಯಲ್ಲಿ ಈಗಾಗಲೆ ಹುಬ್ಬಳ್ಳಿ-ಧಾರವಾಡ, ಮಂಡ್ಯ, ಹಾಸನದ ನಂತರ ಇಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವಿಶ್ಲೇಷಣೆ ಮೂಲಕ ಶಿವಮೊಗ್ಗ ಜಿಲ್ಲೆ ಪೂರ್ಣಗೊಂಡಿದೆ. ತೀರ್ಥಹಳ್ಳಿ ಕ್ಷೇತ್ರದ ʼಎಲೆಕ್ಷನ್‌ ಹವಾʼ ಓದಲು ಇಲ್ಲಿ ಕ್ಲಿಕ್‌ ಮಾಡಿ.

6. RSS | ಭಾರತದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಹಿಂದೂ: ಆರೆಸ್ಸೆಸ್ ಸರಸಂಘಚಾಲಕ ಮೋಹನ್‌ ಭಾಗವತ್
ಭಾರತದಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬರೂ ಹಿಂದೂಗಳೇ (RSS) ಆಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್‌ ಭಾಗವತ್‌ ಅವರು ಹೇಳಿದ್ದಾರೆ.
ಹಿಂದೂ ಧರ್ಮ ಎಂದರೆ ಒಂದು ಮತವಲ್ಲ, ಇದು ಜೀವನ ವಿಧಾನ ಎಂದು ಶಿಲ್ಲೋಂಗ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು. ಹಿಮಾಲಯದಿಂದ ಹಿಂದೂ ಮಹಾಸಾಗರದ ತನಕ, ಸಿಂಧೂ ನದಿ ದಂಡೆಯಲ್ಲಿ ಹರಡಿರುವ ಭಾರತದಲ್ಲಿ ವಾಸಿಸುತ್ತಿರುವ ಎಲ್ಲರನ್ನೂ ಸಾಂಪ್ರದಾಯಿಕವಾಗಿ ಹಿಂದೂಗಳು ಎನ್ನುತ್ತಾರೆ. ಮೊಗಲು ಇಸ್ಲಾಮ್‌ ಅನ್ನೂ, ಬ್ರಿಟಿಷರು ಕ್ರೈಸ್ತ ಮತವನ್ನು ಪ್ರಚುರಪಡಿಸಿದರೂ, ಹಿಂದೂಗಳು ಮೊದಲೇ ಇಲ್ಲಿದ್ದರು ಎಂದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

7. Zerodha | ಜೆರೋಧಾ ಉದ್ಯೋಗಿಗಳಿಗೆ ಫಿಟ್ನೆಸ್‌ ಚಾಲೆಂಜ್‌, ಗೆದ್ದರೆ 1 ತಿಂಗಳಿನ ಸಂಬಳ ಬೋನಸ್
ಬೆಂಗಳೂರು ಮೂಲದ ಆನ್‌ಲೈನ್‌ ಷೇರು ಟ್ರೇಡಿಂಗ್‌ ಕಂಪನಿ ಜೆರೋಧಾ, (Zerodha) ತನ್ನ ಉದ್ಯೋಗಿಗಳಿಗೆ ಫಿಟ್ನೆಸ್‌ ಚಾಲೆಂಜ್‌ ಅನ್ನು ಮುಂದಿಟಿದ್ದು, ಇದರಲ್ಲಿ ನಿಗದಿತ ಗುರಿ ಮುಟ್ಟಿದವರಿಗೆ ಒಂದು ತಿಂಗಳಿನ ವೇತನ ಸಿಗಲಿದೆ. ಹಾಗೂ ಒಬ್ಬ ಅದೃಷ್ಟಶಾಲಿಗೆ 10 ಲಕ್ಷ ರೂ. ಬಹುಮಾನ ಸಿಗಲಿದೆ.
ಜೆರೋಧಾ ಸ್ಥಾಪಕ ಮತ್ತು ಸಿಇಒ ನಿತಿನ್‌ ಕಾಮತ್‌ ಅವರು ಈ ವಿಷಯವನ್ನು ತಿಳಿಸಿದ್ದು, ದಿನಕ್ಕೆ ಕನಿಷ್ಠ 350 ಕ್ಯಾಲೊರಿಗಳನ್ನು ಕರಗಿಸಬೇಕು ಎಂದು ಟ್ವೀಟ್‌ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಅವರು ಮಾಡಿದ್ದು, ನಿಗದಿತ ಗುರಿಯನ್ನು ಮುಟ್ಟುವವರಿಗೆ 1 ತಿಂಗಳಿನ ವೇತನವನ್ನು ಬೋನಸ್‌ ಆಗಿ ನೀಡಲಾಗುವುದು. ಒಬ್ಬ ಅದೃಷ್ಟಶಾಲಿಗೆ 10 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

8. Ghulam Nabi Azad | ಕಾಶ್ಮೀರದಲ್ಲಿ ಸಕ್ರಿಯರಾದ ಗುಲಾಂ ನಬಿ ಆಜಾದ್​​ರಿಗೆ ಉಗ್ರರಿಂದ ಜೀವ ಬೆದರಿಕೆ
ಕಾಂಗ್ರೆಸ್​ ತೊರೆದು ಈಗ ಜಮ್ಮು-ಕಾಶ್ಮೀರಕ್ಕೆ ಹೋಗಿ ಅಲ್ಲಿ ಹೊಸದಾದ ರಾಜಕೀಯ ಪಕ್ಷವನ್ನು ಕಟ್ಟಲು ನಿರ್ಧಾರ ಮಾಡಿರುವ ಗುಲಾಂ ನಬಿ ಆಜಾದ್​​ಗೆ ಉಗ್ರರಿಂದ ಜೀವ ಬೆದರಿಕೆ ಎದುರಾಗಿದೆ. ಗುಲಾಂ ನಬಿ ಆಜಾದ್​ ಅವರು ಹೊಸದಾದ ರಾಷ್ಟ್ರೀಯ ಪಕ್ಷವನ್ನು ಹುಟ್ಟುಹಾಕಲು ನಿರ್ಧರಿಸಿದ್ದು, ಅದರ ಮೊದಲ ಘಟಕವನ್ನು ಜಮ್ಮು-ಕಾಶ್ಮೀರದಲ್ಲಿ ಪ್ರಾರಂಭ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ನೂತನ ಪಕ್ಷ ಪ್ರಾರಂಭದ ಭಾಗವಾಗಿ ಮಿಷನ್​ ಕಾಶ್ಮೀರ್​ ಶುರುವಿಟ್ಟುಕೊಂಡಿದ್ದು ಅಲ್ಲಿ ಸಾರ್ವಜನಿಕ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಱಲಿಗಳನ್ನು ಆಯೋಜಿಸುತ್ತಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

9. Rajasthan Congress Crisis | ಬಂಡಾಯಕ್ಕೆ ಮಣಿದ ಕಾಂಗ್ರೆಸ್‌ ಹೈಕಮಾಂಡ್‌, ಅಧ್ಯಕ್ಷ ಸ್ಪರ್ಧೆಯಿಂದ ಗೆಹ್ಲೋಟ್ ಔಟ್
ರಾಜಸ್ಥಾನದಲ್ಲಿ ಉಂಟಾದ ಕಾಂಗ್ರೆಸ್‌ ಬಿಕ್ಕಟ್ಟು ಅನಿರೀಕ್ಷಿತ ತಿರುವು ಪಡೆದಿದೆ. ಅಶೋಕ್‌ ಗೆಹ್ಲೋಟ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡಿದ್ದಕ್ಕೇ ಅವರ ಬಣದ ೯೨ ಶಾಸಕರು ರಾಜೀನಾಮೆ ನೀಡಿ, ಬಂಡಾಯದ ಬಾವುಟ (Rajasthan Congress Crisis) ಹಾರಿಸಿದ ಕಾರಣ ಈಗ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಸ್ಪರ್ಧೆಯ ಕಣದಿಂದಲೇ ಗೆಹ್ಲೋಟ್‌ ಅವರು ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಬಂಡಾಯದ ಬಾವುಟಕ್ಕೆ ಹೆದರಿ ಕಾಂಗ್ರೆಸ್‌ ಹೈಕಮಾಂಡೇ ಇಂಥದ್ದೊಂದು ತೀರ್ಮಾನ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಜಯ್‌ ಮಾಕೇನ್‌ ಅವರು ಇಡೀ ದಿನ ಬಂಡಾಯ ಶಾಸಕರ ಜತೆ ಮಾತುಕತೆ ನಡೆಸಿ, ಮನವೊಲಿಸಲು ಯತ್ನಿಸಿದರೂ ಶಾಸಕರು ಒಪ್ಪದ ಕಾರಣ ಈಗ ಅಶೋಕ್‌ ಗೆಹ್ಲೋಟ್‌ ಅವರೇ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಹಾಗೂ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

10. Sensex crash | ಸೆನ್ಸೆಕ್ಸ್‌ 821 ಅಂಕಗಳ ಕುಸಿತ, ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟ
ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ ಬೆಳಗ್ಗೆ 821 ಅಂಕಗಳ ಕುಸಿತಕ್ಕೀಡಾಯಿತು. ಸೆನ್ಸೆಕ್ಸ್‌ ಮಧ್ಯಾಹ್ನದ ವೇಳೆಯಲ್ಲಿ 821 ಅಂಕ ಕುಸಿದು (Sensex crash) 57,316 ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 260 ಅಂಕ ಕಳೆದುಕೊಂಡು 17,067 ಕ್ಕೆ ಇಳಿಯಿತು. ಕಳೆದ ನಾಲ್ಕು ದಿನಗಳಿಂದ ಸೆನ್ಸೆಕ್ಸ್‌ ಕುಸಿತದ ಹಾದಿಯಲ್ಲಿದೆ. ಇಂದಿನ ಕುಸಿತದ ಪರಿಣಾಮ ಹೂಡಿಕೆದಾರರು 7 ಲಕ್ಷ ಕೋಟಿ ರೂ. ಕಳೆದುಕೊಂಡರು. ಬಿಎಸ್‌ಇಯಲ್ಲಿ ನೋಂದಾಯಿತ ಕಂಪನಿಗಳ ಷೇರುಗಳ ಮಾರುಕಟ್ಟೆ ಮೌಲ್ಯ 269.86 ಲಕ್ಷ ಕೋಟಿ ರೂ.ಗೆ ಇಳಿಯಿತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Exit mobile version