Site icon Vistara News

Modi In Karnataka : ಯಾದಗಿರಿಯ ಪರಂಪರೆ ನಮಗೆಲ್ಲ ಹೆಮ್ಮೆ, ಇದು ತೊಗರಿಯ ಬಟ್ಟಲು: ಪ್ರಧಾನಿ ಮೋದಿ ಶ್ಲಾಘನೆ

modi-in-karnataka-PM lauds Yadagiris heritage and agriculture

ಯಾದಗಿರಿ: ಯಾದಗಿರಿ ಜಿಲ್ಲೆಯ ಪರಂಪರೆ ಹಾಗೂ ಕೃಷಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಭಾಷಣವನ್ನು ಆರಂಭಿಸಿ ನೆರೆದವರನ್ನು ಸಂತಸಪಡಿಸಿದರು.

“ಕರ್ನಾಟಕದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ವಂದನೆಗಳು” ಎಂದ ಪ್ರಧಾನಿ ಮೋದಿ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಜನರೇ ಕಾಣುತ್ತಿದ್ದಾರೆ. ಹೆಲಿಪ್ಯಾಡ್‌ನಲ್ಲೂ, ಕಾರ್ಯಕ್ರಮದಲ್ಲಿ, ಪೆಂಡಾಲ್‌ ಹೊರಗೂ ಬಿಸಿಲಿನಲ್ಲಿ ಜನರು ನಿಂತಿದ್ದಾರೆ. ನೀವು ನೀಡುತ್ತಿರುವ ಈ ಪ್ರೀತಿ, ಆಶೀರ್ವಾದವೇ ನಮ್ಮೆಲ್ಲರ ಬಹುದೊಡ್ಡ ಶಕ್ತಿ ಎಂದು ಪ್ರಶಂಸಿಸಿದರು.

ಯಾದಗಿರಿಯು ಸಮೃದ್ಧ ಇತಿಹಾಸವನ್ನು ಒಳಗೊಂಡಿದೆ. ರಟ್ಟಿಹಳ್ಳಿ ಕೋಟೆಯು ನಮ್ಮ ಪೂರ್ವಜರ ಸಾಮರ್ಥ್ಯದ ಪ್ರತೀಕ. ನಮ್ಮ ಪರಂಪರೆ, ನಮ್ಮ ಸಂಸ್ಕೃತಿ ಹಾಗೂ ಪರಂಪರೆಯೊಂದಿಗೆ ನಂಟು ಹೊಂದಿದ ಅನೇಕ ಸ್ಥಳಗಳು ಈ ಕ್ಷೇತ್ರದಲ್ಲಿವೆ. ಮಹಾನ್‌ ರಾಜಾ ವೆಂಕಟಪ್ಪ ನಾಯಕ ತಮ್ಮ ಉತ್ತಮ ಆಡಳಿತದಿಂದಾಗಿ ಈ ಪ್ರದೇಶ ವಿಖ್ಯಾತವಾಗಿತ್ತು. ಈ ಪರಂಪರೆಯ ಮೇಲೆ ನಮಗೆ ಗೌರವವಿದೆ ಎಂದರು.

ಈ ಕ್ಷೇತ್ರವು ತೊಗರಿಯ ಬಟ್ಟಲು. ಇಲ್ಲಿನ ತೊಗರಿಯು ದೇಶದ ಆಮದನ್ನು ಕಡಿಮೆ ಮಾಡಿದೆ. ಕೇಂದ್ರ ಸರ್ಕಾರವು ಶೇ.80ಹೆಚ್ಚಿನ ತೊಗರಿಯನ್ನು ಕೇಂದ್ರ ಸರ್ಕಾರ ಖರೀದಿಸಿದೆ. ಹಿಂದಿನ ಸರ್ಕಾರಗಳು ಕೇವಲ ಕೆಲವು ನೂರಾರು ಕೋಟಿ ರೂ. ವೆಚ್ಚದಲ್ಲಿ ಖರೀದಿ ಮಾಡುತ್ತಿದ್ದರೆ ನಾವು ಸಾವಿರಾರು ಕೋಟಿ ರೂ. ಮೊತ್ತದಲ್ಲಿ ಖರೀದಿ ಮಾಡಿದ್ದೇವೆ. ಸಿರಿಧಾನ್ಯಗಳಿಗೆ ಒತ್ತು ನೀಡುತ್ತಿದ್ದೇವೆ. ಕರ್ನಾಟಕದಲ್ಲಿ ರಾಗಿ ಹಾಗೂ ಜೋಳದ ಉತ್ಪಾದನೆ ಹೆಚ್ಚಿದೆ. ಇದನ್ನು ವಿಶ್ವಾದ್ಯಂತ ಪ್ರಚಾರ ಮಾಡಲು ಡಬಲ್‌ ಇಂಜಿನ್‌ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲೂ ಕರ್ನಾಟಕದ ರೈತರು ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದರು.

ಇದನ್ನೂ ಓದಿ | Modi In Karnataka | ಅನ್ಯ ಸರ್ಕಾರಗಳಿಗೆ ವೋಟ್‌ ಬ್ಯಾಂಕ್‌ ಆದ್ಯತೆ; ನಮಗೆ ಅಭಿವೃದ್ಧಿಯೇ ಆದ್ಯತೆ: ಪ್ರಧಾನಿ ಮೋದಿ

Exit mobile version