Site icon Vistara News

Reels Tragedy: ರೀಲ್ಸ್‌ ಮಾಡುವಾಗ ಕುತ್ತಿಗೆಗೆ ದಾರ ಬಿಗಿದು ಬಾಲಕ ಸಾವು; ವಿಡಿಯೊ ಇದೆ

Reels Tragedy


ಇತ್ತೀಚಿನ ದಿನಗಳಲ್ಲಿ ರೀಲ್ಸ್ ಅವಾಂತರ (viral video) ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ರೀಲ್ಸ್ ಮಾಡಲು ಹೋಗಿ ಕೆಲವರು ಅಪಾಯದ ಸುಳಿಯಲ್ಲಿ ಸಿಲುಕುತ್ತಿದ್ದರೆ, ಇನ್ನೂ ಕೆಲವರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೀಗ 7ನೇ ತರಗತಿ ವಿದ್ಯಾರ್ಥಿಯೊಬ್ಬ ರೀಲ್ಸ್ ಮಾಡಲು ತನ್ನ ಕುತ್ತಿಗೆಗೆ ದಾರ ಕಟ್ಟಿಕೊಂಡಿದ್ದ. ಆದರೆ ಅದು ಬಿಗಿದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮಧ್ಯಪ್ರದೇಶದ ಮೊರೆನಾದಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Reels Tragedy) ಆಗುತ್ತಿದೆ.

ಶನಿವಾರ ಸಂಜೆ ಅಂಬಾ(Ambah)ದಲ್ಲಿ ಈ ಘಟನೆ ನಡೆದಿದ್ದು, ಮೃತ ಬಾಲಕನನ್ನು 11 ವರ್ಷದ ಕರಣ್ ಪರ್ಮಾರ್ ಎಂದು ಗುರುತಿಸಲಾಗಿದೆ. ಕರಣ್ ಲೇನೆ ರಸ್ತೆಯ ಖಾಲಿ ಜಾಗದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದನು. ಅದೇ ಸಮಯದಲ್ಲಿ ಅವನು ರೀಲ್ಸ್ ಮಾಡಲು ದಾರವನ್ನು ಕುತ್ತಿಗೆಗೆ ಕಟ್ಟಿಕೊಂಡು ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ. ದುರದೃಷ್ಟವಶಾತ್, ಆ ವೇಳೆ ದಾರ ಕುತ್ತಿಗೆಗೆ ಬಿಗಿದುಕೊಂಡ ಪರಿಣಾಮ ಅವನ ಪ್ರಾಣಪಕ್ಷಿ ಹಾರಿಹೋಗಿದೆ.

ಅವನೊಂದಿಗೆ ಆಟವಾಡುತ್ತಿದ್ದ ಸ್ನೇಹಿತರು ಅವನು ಉಸಿರುಗಟ್ಟಿ ಒದ್ದಾಡುತ್ತಿರುವುದನ್ನು ನಟನೆ ಎಂದು ತಪ್ಪಾಗಿ ಭಾವಿಸಿದರು. ಹಾಗಾಗಿ ಅವರಿಗೆ ಅದು ನಿಜ ಎಂದು ತಿಳಿಯುವ ಹೊತ್ತಿಗೆ ಕರಣ್ ಸಾವನಪ್ಪಿದ್ದ ಎನ್ನಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಮರಕ್ಕೆ ನೇತಾಡುತ್ತಿರುವ ನೂಲನ್ನು ಮೊದಲು ಕಾಣಬಹುದು. ಅದಕ್ಕೆ ಕರಣ್ ತನ್ನ ಕುತ್ತಿಗೆಗೆ ಹಾಕಿ, ನಂತರ ಒದ್ದಾಡುತ್ತಿರುವಂತೆ ನಟಿಸುತ್ತಿದ್ದರೆ, ಈ ಅಪಾಯದ ಬಗ್ಗೆ ಅರಿವಿಲ್ಲದ ಆತನ ಸ್ನೇಹಿತರು ಅವನು ಕೇವಲ ನಟಿಸುತ್ತಿದ್ದಾರೆ ಎಂದು ನಂಬಿದ್ದರು. ನಂತರ ನಿಜ ಅರಿತುಕೊಂಡ ಸ್ನೇಹಿತರು ಅವನ ಬಳಿಗೆ ಬರುವುದರೊಳಗೆ ಆತ ಸಾವನಪ್ಪಿರುವುದು ತಿಳಿದಿದೆ. ಗಾಬರಿಗೊಂಡ ಅವರು ಫೋನ್ ಅನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ರೋಗ ಗುಣಪಡಿಸುವುದಾಗಿ ಹೇಳಿ ಯುವತಿಯ ತಲೆಗೆ 18 ಸೂಜಿ ಚುಚ್ಚಿದ ಮಂತ್ರವಾದಿ!

ವರದಿ ಪ್ರಕಾರ, ಕರಣ್ ಪರ್ಮಾರ್ 7 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶನಿವಾರ ಶಾಲೆಯಿಂದ ಹಿಂದಿರುಗಿದ ನಂತರ, ಲೇನ್ ರಸ್ತೆಯಲ್ಲಿರುವ ತನ್ನ ಮನೆಯ ಮುಂಭಾಗದ ಖಾಲಿ ಜಾಗದಲ್ಲಿ ಆಟವಾಡಲು ಹೋಗಿದ್ದನು. ಅವನು ಎತ್ತರದ ಗೋಡೆಯ ಮೇಲೆ ನಿಂತು, ಕುತ್ತಿಗೆಗೆ ನೂಲನ್ನು ಹಾಕಿಕೊಂಡು ವಿಡಿಯೊ ಮಾಡುತ್ತಿದ್ದನು, ಆಗ ಅವನು ಜಾರಿ ಬಿದ್ದ ಪರಿಣಾಮ ಹಗ್ಗ ಬಿಗಿಯಾಗಿ ಉಸಿರುಗಟ್ಟಿ ಸಾವನಪ್ಪಿದ. ವಿಚಾರ ತಿಳಿದ ನಂತರ, ಕರಣ್ ಮನೆಯವರು ಸ್ಥಳಕ್ಕೆ ಬಂದು, ತಕ್ಷಣ ಅವನನ್ನು ಆಸ್ಪತ್ರೆಗೆ ಕರೆದೊಯ್ಯದರು. ಅಲ್ಲಿ ವೈದ್ಯರು ಅವನು ಸತ್ತಿದ್ದಾನೆ ಎಂದು ತಿಳಿಸಿದ್ದಾರೆ. ಘಟನೆಯ ನಂತರ ಅಂಬಾ ಪೊಲೀಸರು ಸಿವಿಲ್ ಆಸ್ಪತ್ರೆಗೆ ಬಂದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Exit mobile version