Site icon Vistara News

Lok Sabha Election 2024: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗೆ ವರ್ಷಕ್ಕೆ 1.24 ಲಕ್ಷ ರೂ. ಜಮೆ: ರಾಹುಲ್‌ ಗಾಂಧಿ

Lok Sabha Election 2024 Congress will give Rs 1.24 lakh per year to womens accounts says Rahul Gandhi

ಮಂಡ್ಯ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಯಜಮಾನಿಯರಿಗೆ ಮಹಾಲಕ್ಷ್ಮಿ ಯೋಜನೆಯಡಿ ವರ್ಷಕ್ಕೆ 1 ಲಕ್ಷ ರೂಪಾಯಿಯನ್ನು ಕೊಡುತ್ತದೆ. ಇದರ ಹೊರತಾಗಿ ಕಾಂಗ್ರೆಸ್‌ ಸರ್ಕಾರ ನೀಡುತ್ತಿರುವ 24 ಸಾವಿರ ರೂಪಾಯಿ ಸಹ ಮುಂದುವರಿಯಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಘೋಷಣೆ ಮಾಡಿದರು.

ಮಂಡ್ಯದಲ್ಲಿ ಬುಧವಾರ ಏರ್ಪಡಿಸಲಾಗಿರುವ ಕಾಂಗ್ರೆಸ್ ಪ್ರಜಾಧ್ವನಿ- 2 ಸಮಾವೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಪ್ರಚಾರ ಮಾಡಿದ ರಾಹುಲ್‌ ಗಾಂಧಿ, ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನಿಗೆ ಮಾಸಿಕವಾಗಿ 8.5 ಸಾವಿರ ರೂಪಾಯಿ ಪ್ಲಸ್‌ ರಾಜ್ಯ ಸರ್ಕಾರದ 2 ಸಾವಿರ ರೂಪಾಯಿಯಂತೆ ಒಟ್ಟು 10,500 ರೂಪಾಯಿಯನ್ನು ಜಮೆ ಮಾಡಲಾಗುವುದು. ಪುರುಷರು 8 ಗಂಟೆ ಕೆಲಸ ಮಾಡಿದರೆ ಮಹಿಳೆಯರು 16 ಗಂಟೆ ಕೆಲಸ ಮಾಡುತ್ತಾರೆ. ಈ ಕಾರಣಕ್ಕೆ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 1 ಲಕ್ಷ ರೂ. ಕೊಡುವುದಾಗಿ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ರೈತರಿಗೆ ಸಿಗಲಿದೆ ನ್ಯಾಯ

ಲೋಕಸಭೆ ಚುನಾವಣೆಗೆ ಎಐಸಿಸಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದೇವೆ. ಕರ್ನಾಟಕ, ತೆಲಂಗಾಣ ಮಾತ್ರವಲ್ಲ ದೇಶದಲ್ಲಿ ರೈತರು ಕಷ್ಟದಲ್ಲಿ ಇದ್ದಾರೆ. ರೈತರು ಯಾರ ಮುಂದೆಯೂ ತಮ್ಮ ಕೈಚಾಚುವುದಿಲ್ಲ. ತಮಗೆ ಅದು ಕೊಡಿ, ಇದು ಕೊಡಿ ಎಂದು ಬೇಡುವವರಲ್ಲ. ತಮಗೆ ನ್ಯಾಯಯುತವಾಗಿ ಏನೋ ಬೇಕೋ ಅದನ್ನು ಕೊಡಿ ಎಂದು ಮಾತ್ರ ಅವರು ಕೇಳುತ್ತಿದ್ದಾರೆ. ಆ ಕೆಲಸವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಾಡಲಿದೆ ಎಂದು ರಾಹುಲ್‌ ಗಾಂಧಿ ಹೇಳಿದರು.

ವಿಮಾ ಯೋಜನೆ ಹಣವನ್ನು ಕೊಡಿಸುತ್ತೇವೆ

ಭಾರತ್ ಜೋಡೋ ಯಾತ್ರೆ ಮೂಲಕ 4000 ಕಿ.ಮೀ. ಪಾದಯಾತ್ರೆ ಮಾಡಿದ್ದೇನೆ. ಲಕ್ಷಾಂತರ ಜನರನ್ನು ಭೇಟಿ ಮಾಡಿದ್ದೇನೆ. ಅವರ ಕಷ್ಟಗಳನ್ನು ಆಲಿಸಿದ್ದೇನೆ. ದೇಶದ ತುಂಬೆಲ್ಲ ರೈತರು 2-3 ಮನವಿ ಮಾಡಿದ್ದಾರೆ. ಬೇರೆ ವಸ್ತುಗಳಿಗೆ ಸರಿಯಾದ ಬೆಲೆ ಸಿಗುತ್ತದೆ. ಆದರೆ, ನಾವು ಬೆಳೆಯುವ ಭತ್ತ, ಕಬ್ಬು ಸೇರಿದಂತೆ ಬೆಳೆಗಳಿಗೆ ಸರಿಯಾಗಿ ಬೆಲೆ ಸಿಗುತ್ತಿಲ್ಲ. ರಾಷ್ಟ್ರ ವ್ಯಾಪ್ತಿಯಲ್ಲಿ 16 ಲಕ್ಷ ಕೋಟಿ ರೂಪಾಯಿ ಶ್ರೀಮಂತರ ಸಾಲ ಮನ್ನಾ ಆಗುತ್ತದೆ. ರೈತರ ಸಾಲ ಯಾಕೆ ಮನ್ನಾ ಆಗುವುದಿಲ್ಲ? ಪ್ರಧಾನ ಮಂತ್ರಿ ವಿಮಾ ಯೋಜನೆಯಲ್ಲಿ ರೈತರು ಹಣ ಕಟ್ಟಿದರೂ ಕಂಪನಿ ಯಾಕೆ ನಮಗೆ ಪ್ರವಾಹ, ಬರಕ್ಕೆ ಪರಿಹಾರ ಕೊಡಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ನ್ಯಾಯ ಬದ್ಧವಾದ ಎಂಎಸ್‌ಪಿ ಜಾರಿ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ರೈತರ ಎಲ್ಲ ಬೇಡಿಕೆಗಳನ್ನು ಪೂರೈಸುತ್ತೇವೆ. ನರೇಂದ್ರ ಮೋದಿ ತಮ್ಮ ಆಪ್ತರ ಸಾಲ ಮನ್ನಾ ಮಾಡಿದರು. ಅದೇ ರೀತಿ ನಾವು ವಿಮಾ ಯೋಜನೆ ಹಣವನ್ನು ಕೊಡಿಸುತ್ತೇವೆ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದರು.

ಗುತ್ತಿಗೆ, ಅರೆ ಕಾಲಿಕ ಉದ್ಯೋಗ ರದ್ದು; ಸರ್ಕಾರಿ ಉದ್ಯೋಗದ ಖಾತ್ರಿ

ಲಕ್ಷಾಂತರ ಯುವ ಜನತೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅವರು ಅನಿಶ್ಚಿತತೆಯಿಂದ ಕೆಲಸ ಮಾಡುತ್ತಿರುತ್ತಾರೆ. ಹೀಗಾಗಿ ಸರ್ಕಾರಿ ಕಚೇರಿಗಳಲ್ಲಿ ಅರೆ ಸರ್ಕಾರಿ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ವ್ಯವಸ್ಥೆಯನ್ನು ರದ್ದು ಮಾಡಿ ಮುಂದಿನ ನೇಮಕಾತಿಗಳಲ್ಲಿ ಸರ್ಕಾರಿ ಉದ್ಯೋಗದ ಖಾತ್ರಿಯನ್ನು ನೀಡಲಿದ್ದೇವೆ ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದರು.

ರೈತರಿಗೆ, ಮಹಿಳೆಯರಿಗೆ, ನಿರುದ್ಯೋಗಿಗಳಿಗೆ ಹೊಸ ಯೋಜನೆಗಳನ್ನು ತರುತ್ತಿದ್ದೇವೆ. ಪದವಿ ಮುಗಿಸಿದ ಯುವಕರಿಗೆ ಉದ್ಯೋಗ ನಿಶ್ಚಿತ. ಉದ್ಯೋಗ ಭದ್ರತೆಯನ್ನು ನಾವು ನೀಡುತ್ತೇವೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ಸಂದರ್ಶನವೊಂದನ್ನು ನೀಡಿದ್ದರು. ಅದನ್ನು ನೀವೆಲ್ಲರೂ ನೋಡಿರುತ್ತೀರಿ. ಅದರಲ್ಲಿ ಎಲೆಕ್ಟ್ರೋರಲ್ ಬಾಂಡ್ ಬಗ್ಗೆ ಮಾತನಾಡಿದ್ದಾರೆ. ಆ ಭಾಗವನ್ನು ಸರಿಯಾಗಿ ಗಮನಿಸಿ. ಚುನಾವಣಾ ಬಾಂಡ್ ಬಗ್ಗೆ ಮಾತನಾಡುವಾಗ ಮೋದಿ ಕೈ ನಡುಗುತಿತ್ತು. ಎಲೆಕ್ಷನ್ ಬಾಂಡ್‌ನಲ್ಲಿ ದೊಡ್ಡ ಹಗರಣ ನಡೆದಿದೆ. ಎಲೆಕ್ಷನ್ ಬಾಂಡ್ ಮೂಲಕ ಯಾರಿಗೆ ಹಣ ಕೊಡಲಾಗಿದೆ? ಯಾರಿಂದ ಕೊಡಲಿದೆ ಎಲ್ಲವೂ ನಿಗೂಢವಾಗಿದೆ. ಎಲೆಕ್ಷನ್ ಬಾಂಡ್ ಬಗ್ಗೆ ಬಹಿರಂಗವಾಗಿ ತಿಳಿಸಲಿ. ಕೇಂದ್ರ ಸರ್ಕಾರ ಸಿಬಿಐ, ಇಡಿ, ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿಶ್ವದಲ್ಲೇ ಅತ್ಯಂತ ಭ್ರಷ್ಟಾಚಾರ ಅಂದರೆ ಅದುವೇ ಎಲೆಕ್ಷನ್ ಬಾಂಡ್ ಆಗಿದೆ. ಕೈಗಾರಿಕಾ ಸಂಸ್ಥೆಗಳಿಂದ ಹೆದರಿಸಿ, ಬೆದರಿಸಿ ಹಣ ಸಂಗ್ರಹ ಮಾಡಲಾಗಿದೆ. ಈ ವಿಚಾರವನ್ನು ಮಾಧ್ಯಮಗಳು ನೇರವಾಗಿ ಜನರಿಗೆ ಹೇಳಲಾಗುತ್ತಿಲ್ಲ ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು.

ಜೆಡಿಎಸ್‌ಗೆ ಟಾಂಗ್‌

ನಾನು ಕಳೆದ ಚುನಾವಣೆಯಲ್ಲೇ ಹೇಳಿದ್ದೆ. ಜೆಡಿಎಸ್‌ ಪಕ್ಷವು ಬಿಜೆಪಿಯ ಬಿ ಟೀಂ ಆಗಿದೆ ಎಂದು ಮಾತನಾಡಿದ್ದೆ. ಈಗ ಅದು ಬಿ ಟೀಂ ಅಲ್ಲ. ಬಿಜೆಪಿಯ ಪಾಲುದಾರ ಪಕ್ಷವಾಗಿದೆ. ಆ ನಾಯಕರು ಪಾರ್ಟ್ನರ್ಸ್‌ ಆಗಿದ್ದಾರೆ ಎಂದು ರಾಹುಲ್‌ ಗಾಂಧಿ ಟೀಕಿಸಿದರು.

ಎಚ್‌ಡಿಕೆ ಬೆಂಗಳೂರು ಗ್ರಾಮಾಂತರದಲ್ಲೇಕೆ ಸ್ಪರ್ಧಿಸಲಿಲ್ಲ; ಸೋಲಿನ ಭಯವೇ?: ಸಿಎಂ ಪ್ರಶ್ನೆ

ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ಅವರ ಮಗ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರನ್ನು ಕಣಕ್ಕಿಳಿಸಿದ್ದರು. ಆದರೆ, ಅವರಿಗೆ ಸೋಲಾಯಿತು. ಸುಮಲತಾ ಅಂಬರೀಶ್‌ (Sumalatha Amabareesh) ಗೆದ್ದಿದ್ದರು. ಇಂದು ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿಯೇ (Bangalore Rural Lok Sabha constituency) ಸ್ಪರ್ಧೆ ಮಾಡಬಹುದಿತ್ತು. ಆದರೆ, ಅಲ್ಲಿ ಸೋಲುವ ಭಯದಿಂದ ಇಲ್ಲಿಗೆ ಬಂದು ಸ್ಪರ್ಧೆ ಮಾಡುತ್ತಿದ್ದಾರೆ. ಅವರನ್ನು ಈ ಚುನಾವಣೆಯಲ್ಲಿ (Lok Sabha Election 2024) ಮಂಡ್ಯದ ಜನತೆ ಸೋಲಿಸಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದರು.

ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಳ್ಳಲಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಕೋಟಿ ರೂಪಾಯಿಯನ್ನು ಹಾಕುತ್ತೇವೆ ಎಂದು ಹೇಳಿದ್ದರು. ಯಾರ ಖಾತೆಗೂ ಹಣ ಬರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದರು. ಅದೂ ಆಗಲಿಲ್ಲ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲಗಳ ದರ ಹೆಚ್ಚಾಗಿದ್ದು ಬಿಟ್ಟರೆ ಅಚ್ಚೇ ದಿನ್‌ ಬರಲೇ ಇಲ್ಲ. ಆದರೆ, ನಾವು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿ ಮಾಡಿದೆವು. ಈ ಮೂಲಕ ರಾಜ್ಯದ ಜನತೆಗೆ ಬೆಂಬಲವಾಗಿ ನಿಂತಿದ್ದೇವೆ. ನಾವು ಈ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದು ಮಾತ್ರವಲ್ಲ, ಇವೆಲ್ಲವೂ ಜನರಿಗೆ ಮುಟ್ಟಿದೆಯೇ ಎಂಬುದನ್ನು ಸಹ ಖಚಿತ ಮಾಡಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಪಂಚ ಗ್ಯಾರಂಟಿ ಬಗ್ಗೆ ಸಿಎಂ ಉಲ್ಲೇಖ

ಗೃಹ ಲಕ್ಷ್ಮಿ ಯೋಜನೆಯಲ್ಲಿ 1.17 ಕೋಟಿ ಮಹಿಳೆಯರಿಗೆ ಮಾಸಿಕವಾಗಿ ತಲಾ 2000 ಸಾವಿರ ರೂಪಾಯಿ ಕೊಡುತ್ತಾ ಬಂದಿದ್ದೇವೆ. ಅನ್ನಭಾಗ್ಯ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಬಿಜೆಪಿಯವರು ಮೋಸ ಮಾಡಿದರೂ ಸಹ ನಾವು ಹೇಳಿದ 5 ಕೆಜಿ ಅಕ್ಕಿಗೆ ಪ್ರತಿಯಾಗಿ 170 ರೂಪಾಯಿ ಕೊಡುತ್ತಿದ್ದೇವೆ. ಒಂದು ಮನೆಯಲ್ಲಿ ಐದು ಜನರಿದ್ದರೆ, ಅವರ ಕುಟುಂಬಕ್ಕೆ 850 ರೂಪಾಯಿ ಕೊಡುವ ಕೆಲಸವನ್ನು ನಾವು ಮಾಡಿದ್ದೇವೆ. ಯುವ ನಿಧಿ ಯೋಜನೆ ಅಡಿ ನಿರುದ್ಯೋಗಿ ಪದವೀಧರ ಯುವಕರಿಗೆ ತಲಾ 3000 ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂಪಾಯಿ ನೀಡಿದ್ದೇವೆ. ಶಕ್ತಿ ಯೋಜನೆಯಡಿ ಕೋಟ್ಯಂತರ ಮಹಿಳೆಯರು ಸಂಚಾರ ಮಾಡಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿ ಇಂದು ಲಕ್ಷಾಂತರ ಕುಟುಂಬದವರು ಉಚಿತ ವಿದ್ಯುತ್‌ ಪಡೆಯುತ್ತಿದ್ದಾರೆ. ನಮ್ಮ ಯೋಜನೆಯಿಂದ ಅನೇಕರು ಇವುಗಳ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯಕ್ಕೆ ಹೊಸ ಶುಗರ್‌ ಫ್ಯಾಕ್ಟರಿ

ನಾವು ಅಧಿಕಾರಕ್ಕೆ ಬಂದ ಕೂಡಲೇ ಮೈಸೂರು ಶುಗರ್‌ ಫ್ಯಾಕ್ಟರಿಗೆ 50 ಕೋಟಿ ರೂಪಾಯಿಯನ್ನು ಕೂಡಲೇ ಬಿಡುಗಡೆ ಮಾಡಿದ್ದೇವೆ. ಆದರೆ, ಇದು ಪದೇ ಪದೆ ದುರಸ್ತಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯೇ ಹೊಸ ಫ್ಯಾಕ್ಟರಿಯನ್ನು ನಿರ್ಮಾಣ ಮಾಡುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇವೆ. ಅದನ್ನು ನಮ್ಮ ಸರ್ಕಾರ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ಸೇರಿದ ಕರಡಿ ಸಂಗಣ್ಣ; ಪಕ್ಷ ಸೇರ್ಪಡೆಗೆ ಲಕ್ಷ್ಮಣ ಸವದಿ ಕಾರಣ!

ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆ ಮಾಡ್ತೇವೆ

ಮಂಡ್ಯದಲ್ಲಿ ಕೃಷಿ ಕಾಲೇಜನ್ನು ಸ್ಥಾಪನೆ ಮಾಡಬೇಕು ಎಂದು ಸಚಿವ ಎನ್.‌ ಚಲುವರಾಯ ಸ್ವಾಮಿ ಅವರು ಕೇಳಿದ್ದಾರೆ. ಹೀಗಾಗಿ ಇದಕ್ಕೊಂದು ಸಮಿತಿಯನ್ನು ಮಾಡೋಣ. ಬಳಿಕ ಇಲ್ಲಿ ಕಾಲೇಜನ್ನು ನಿರ್ಮಾಣ ಮಾಡೋಣ ಎಂದು ಹೇಳಿದ್ದೇನೆ. ಇನ್ನು ಕೆಆರ್‌ಎಸ್‌ ಬೃಂದಾವನ ಅಭಿವೃದ್ಧಿಗೂ ನಾವು ಮುಂದಾಗುತ್ತಿದ್ದೇವೆ. ವಿಶ್ವೇಶ್ವರಯ್ಯ ನಾಲೆಯನ್ನು ಆಧುನೀಕರಣಗೊಳಿಸುತ್ತೇವೆ. ಆ ಮೂಲಕ ನಾಲೆಯ ಕಟ್ಟಕಡೆಯ ವ್ಯಕ್ತಿಗೂ ನೀರು ಸಿಗುವಂತೆ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Exit mobile version