Site icon Vistara News

Lok Sabha Election 2024: ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ; ಕಾರಣ ಇದು

Lok Sabha Election 2024

Nilesh Kumbhani

ಗಾಂಧಿನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ (Nilesh Kumbhani) ಅವರ ನಾಮಪತ್ರವನ್ನು ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾಧಿಕಾರಿ ಸೌರಭ್ ಪರ್ಘಿ (Saurabh Parghi) ತಿರಸ್ಕರಿಸಿದ್ದಾರೆ (Rejected the nomination form). ನಿಲೇಶ್ ಕುಂಭಾನಿ ಅವರ ಮೂವರು ಅನುಮೋದಕರ ದಾಖಲೆಗಳಲ್ಲಿನ ಸಹಿಗಳ ಪರಿಶೀಲನೆ ವೇಳೆ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ (Lok Sabha Election 2024).

ಭಾರಿ ಪೊಲೀಸ್ ಭದ್ರತೆಯೊಂದಿಗೆ ಭಾನುವಾರ (ಏಪ್ರಿಲ್‌ 21) ಬೆಳಿಗ್ಗೆ 11 ಗಂಟೆಗೆ ತಮ್ಮ ಕಚೇರಿಯಲ್ಲಿ ಪ್ರಾರಂಭವಾದ ವಿಶೇಷ ವಿಚಾರಣೆ ವೇಳೆ ಸೌರಭ್ ಪರ್ಘಿ ಅವರು ವ್ಯತ್ಯಾಸ ಗುರುತಿಸಿದ್ದರು. ಅನುಮೋದಕರಾದ ರಮೇಶ್ ಪೋಲ್ರಾ ಅವರ ಮಾರಾಟ ಪತ್ರದ ಆಧಾರ ಮೇಲೆ, ಚಾಲನಾ ಪರವಾನಗಿಯ ಆಧಾರದ ಮೇಲೆ ಜಗದೀಶ್ ಸವಲಿಯಾ ಮತ್ತು ಅವರ ಪ್ಯಾನ್ ಕಾರ್ಡ್ ಆಧಾರದ ಮೇಲೆ ಧಮೇಲಿಯಾ ಅವರ ಸಹಿಗಳನ್ನು ಪರಿಶೀಲಿಸಿದರು. ಈ ವೇಳೆ ನಾಮನಿರ್ದೇಶನ ಪತ್ರದಲ್ಲಿನ ಸಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿತ್ತು.

1951ರ ಜನ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 36 (2)ರ ಅಡಿಯಲ್ಲಿ ಪಾರ್ಘಿ ಅವರು ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಕೇಂದ್ರ ಸಚಿವ ದರ್ಶನಾ ಜರ್ದೋಶ್ ಬದಲಿಗೆ ಮುಕೇಶ್ ದಲಾಲ್ ಅವರನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಿಜೆಪಿಯ ಈ ಭದ್ರಕೋಟೆಯಲ್ಲಿ ಚುನಾವಣೆಗೆ ತಡೆ ಕೋರಿ ಕಾಂಗ್ರೆಸ್‌ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಲು ನಿರ್ಧರಿಸಿದೆ. ನಾಮಪತ್ರ ಪರಿಶೀಲನೆ ವೇಳೆ ಕುಂಭಾನಿ ಅವರು ತಮ್ಮ ವಕೀಲರಾದ ಜಮೀರ್ ಶೇಖ್ ಮತ್ತು ಬಿ.ಎಂ. ಮಂಗುಕಿಯಾ ಅವರೊಂದಿಗೆ ಹಾಜರಿದ್ದರು.

ನವಸಾರಿ ಕ್ಷೇತ್ರದ ಪಕ್ಷದ ಅಭ್ಯರ್ಥಿಯೂ ಆಗಿರುವ ಕಾಂಗ್ರೆಸ್ ವಕ್ತಾರ ನೈಶಾದ್ ದೇಸಾಯಿ ಈ ಬಗ್ಗೆ ಮಾತನಾಡಿ, “ಸೂರತ್ ಚುನಾವಣಾ ಅಧಿಕಾರಿಯ ಆದೇಶದ ಪ್ರತಿ ನಮಗೆ ಸಿಕ್ಕಿದೆ. ಅದರಲ್ಲಿ ನಮ್ಮ ಸೂರತ್ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಕುಂಭಾನಿ ಅವರು ವಕೀಲ ಬಿ.ಎಂ. ಮಂಗುಕಿಯಾ ಅವರೊಂದಿಗೆ ಅಹಮದಾಬಾದ್‌ಗೆ ತೆರಳಿದ್ದಾರೆ ಮತ್ತು ಅವರು ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಿ ಸೂರತ್‌ನ ಚುನಾವಣಾ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಗುಜರಾತ್ ಹೈಕೋರ್ಟ್‌ಗೆ ಮನವಿ ಸಲ್ಲಿಸಲಿದ್ದಾರೆʼʼ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಗಳ ಹಿಂದೆ ಪಿತೂರಿ ಇದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಆರೋಪಿಸಿದ್ದಾರೆ. “ಪಾಟೀದಾರ್ ಮತಗಳು ಕಾಂಗ್ರೆಸ್‌ಗೆ ಬರುತ್ತಿದ್ದವು. ಮಾತ್ರವಲ್ಲ ಕ್ಷತ್ರಿಯ ಮತದಾರರು ಬಿಜೆಪಿ ವಿರುದ್ಧ ಕೋಪಗೊಂಡಿದ್ದಾರೆ. ಈ ಕ್ಷೇತ್ರದಲ್ಲಿ ನಾವು ಮೇಲುಗೈ ಸಾಧಿಸಿದ್ದೆವು. ಆದ್ದರಿಂದ ಬಿಜೆಪಿ ಪಿತೂರಿ ಮಾಡಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Lok Sabha Election 2024: ಅನಾರೋಗ್ಯ ಹಿನ್ನೆಲೆ; ಮಧ್ಯಪ್ರದೇಶ, ಜಾರ್ಖಂಡ್‌ ರ‍್ಯಾಲಿಗೆ ರಾಹುಲ್‌ ಗಾಂಧಿ ಗೈರು

ʼಆರೋಪದಲ್ಲಿ ಹುರುಳಿಲ್ಲʼ

ಕಾಂಗ್ರೆಸ್ ಆರೋಪವನ್ನು ಸೂರತ್ ನಗರ ಬಿಜೆಪಿ ಅಧ್ಯಕ್ಷ ನಿರಂಜನ್ ಜಜ್ಮೇರಾ ತಳ್ಳಿ ಹಾಕಿದ್ದಾರೆ. “ಈ ವಿಚಾರದಲ್ಲಿ ನಮ್ಮ ಪಾಲ್ಗೊಳ್ಳುವಿಕೆಯ ಬಗ್ಗೆ ಕಾಂಗ್ರೆಸ್‌ ಮುಖಂಡರ ಬಳಿ ಯಾವುದೇ ಪುರಾವೆಗಳಿದ್ದರೆ ಅವರು ಅದನ್ನು ಹಾಜರು ಪಡಿಸಬೇಕು. ಕಾಂಗ್ರೆಸ್ ಅಭ್ಯರ್ಥಿಯೇ ತಮ್ಮ ಬೆಂಬಲಿಗರು ಮತ್ತು ಪ್ರಸ್ತಾವಕರ ಸಹಿಯನ್ನು ನಕಲಿ ಮಾಡಿದ್ದಾರೆ” ಎಂದು ಅವರು ಆರೋಪವನ್ನು ನಿರಾಕರಿಸಿದ್ದಾರೆ.

Exit mobile version