Site icon Vistara News

Lok Sabha Election 2024: ಎಚ್‌.ಡಿ. ಕುಮಾರಸ್ವಾಮಿ ಬೆಂಬಲಕ್ಕೆ ನಿಲ್ತಾರಾ ದರ್ಶನ್?‌ ಏನಂದ್ರು ಸುಮಲತಾ?

Will Darshan Support HD Kumaraswamy in this Lok Sabha Election 2024

ಬೆಂಗಳೂರು: ಪ್ರಸಕ್ತ ಸಾಲಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮಂಡ್ಯ ಕ್ಷೇತ್ರದಿಂದ (Mandya Lok Sabha constituency) ಸ್ಪರ್ಧೆ ಮಾಡುವ ತೀರ್ಮಾನ ಕೈಬಿಟ್ಟು ಕಮಲ ಹಿಡಿದಿರುವ ಸುಮಲತಾ ಅಂಬರೀಶ್‌, ಇನ್ನು ಮುಂದೆ ಬಿಜೆಪಿ ಕಾರ್ಯಕರ್ತಳಾಗಿ ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಮಧ್ಯೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆನ್ನಿಗೆ ನಿಂತು ಪ್ರಚಾರ ಮಾಡಿದ್ದ, ಈಗ ಘೋಷಣೆ ಮಾಡುವಾಗಲೂ ಜತೆಗೇ ಇರುವ ಖ್ಯಾತ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಬಿಜೆಪಿ ಅಥವಾ ಎಚ್‌.ಡಿ. ಕುಮಾರಸ್ವಾಮಿ ಪರ ಮತ ಕೇಳಲಿದ್ದಾರೆಯೇ ಎಂಬ ಪ್ರಶ್ನೆಗೆ ಅವರನ್ನೇ ಕೇಳಬೇಕು ಎಂದು ಸುಮಲತಾ ಉತ್ತರ ಕೊಟ್ಟಿದ್ದಾರೆ.

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್‌, ದರ್ಶನ್‌ ಅವರಾಗಲೀ, ಯಶ್‌ ಅವರಾಗಲೀ ಕಳೆದ ಬಾರಿ ಚುನಾವಣೆಗೆ ನನ್ನ ಬೆನ್ನ ಹಿಂದೆ ನಿಂತು ಕೆಲಸ ಮಾಡಿದರು. ಅವರ ಎಲ್ಲ ಕೆಲಸಗಳನ್ನು ಬದಿಗೊತ್ತಿ. ಇಲ್ಲಿಗೆ ಬಂದು ಪ್ರಚಾರ ಮಾಡಿ ನಮ್ಮೆಲ್ಲರ ಪರವಾಗಿ ನಿಂತರು. ಈ ಬಾರಿ ನಾನೇ ಸ್ಪರ್ಧೆ ಮಾಡಿದ್ದರೆ ಅವರು ಖಂಡಿತವಾಗಿ ನನ್ನ ಪರ ನಿಲ್ಲುತ್ತಿದ್ದರು. ಆದರೆ, ಈಗ ದರ್ಶನ್‌ ಯಾರನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂಬುದನ್ನು ನಾನು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ನೀವು ಅವರನ್ನೇ ಕೇಳಬೇಕು? ಎಂದು ಹೇಳಿದರು.

ಕಳೆದ ಬಾರಿ ನಾನು ಐತಿಹಾಸಿಕವಾಗಿ ಗೆಲುವು ಸಾಧಿಸಿದರೂ ಈ ಬಾರಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ. ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಆಗಿದೆ. ಮೈತ್ರಿ ಒಪ್ಪಂದದ ಪ್ರಕಾರ ಆ ಪಕ್ಷದವರಿಗೆ ಬಿಟ್ಟುಕೊಡಲಾಗಿದೆ ಎಂದು ಹೇಳಿದರು. ಅಲ್ಲದೆ, ನಾನೀಗ ಬಿಜೆಪಿ ಸೇರುತ್ತಿರುವುದರಿಂದ ಪಕ್ಷದ ನೀತಿಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕಿದೆ. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ಪಕ್ಷದ ಚೌಕಟ್ಟಿನೊಳಗೆ ಚರ್ಚೆ ಮಾಡಿ ಹೇಳಬೇಕಾಗುತ್ತದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸಾಕಷ್ಟು ಮಾರ್ಗದರ್ಶನವನ್ನು ನೀಡಿದ್ದಾರೆ. ನನಗೆ ಯಾವ ಕೆಲಸ ಆಗಬೇಕಿದ್ದರೂ ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ಜನರ ಸಲುವಾಗಿ ಬಿಜೆಪಿಯ ಯಾವುದೇ ಸಚಿವಾಲಯಕ್ಕೆ ಹೋದರೂ ನನ್ನ ಮನವಿಗೆ ಸ್ಪಂದಿಸಿದ್ದಾರೆ. ಆದರೆ, ಅಂಬರೀಶ್‌ ಅವರು ದಶಕಗಳ ಕಾಲ ಕಾಂಗ್ರೆಸ್‌ಗೆ ದುಡಿದರೂ ಅವರು ನಮ್ಮನ್ನು ಗೌರವಿಸಲೇ ಇಲ್ಲ. ಕಾಂಗ್ರೆಸ್‌ನಲ್ಲಿ ಅಂಬರೀಶ್‌ ಹಾಗೂ ನಮಗೆ ಅಪಮಾನ ಮಾಡಲಾಗಿದೆ. ನನನ್ನು ಬೇಡ ಎಂದ ಪಕ್ಷಕ್ಕೆ ನಾನು ಹೋಗಲಾರೆ. ಅದೇ ಕಾರಣಕ್ಕಾಗಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಬೆಂಗಾವಲಾಗಿ ನಿಂತ ಬಿಜೆಪಿಗೆ ಸೇರುತ್ತಿದ್ದೇನೆ ಎಂದು ಹೇಳಿದರು.

ದೇಶಕ್ಕೆ ಬೇಕು ನರೇಂದ್ರ ಮೋದಿ

ಇಂದು ದೇಶಕ್ಕೆ ಉತ್ತಮ ಪ್ರಧಾನಿ ಸಿಕ್ಕಿದ್ದಾರೆ. ದೇಶ ಸಂಕಷ್ಟದ ಕಾಲದಲ್ಲಿದ್ದಾಗ ಅವರು ಅಧಿಕಾರವನ್ನು ವಹಿಸಿಕೊಂಡರು. ಆರ್ಥಿಕತೆಯಲ್ಲಿ ದೇಶವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಇಷ್ಟು ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ನರೇಂದ್ರ ಮೋದಿ ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕಿ ಇಲ್ಲ. ಅವರು ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಅಂಥವರನ್ನು ನಾವು ಬೆಂಬಲಿಸಬೇಕು. ದೇಶಕ್ಕಾಗಿ ನಾವು ಮೋದಿ ಅವರನ್ನು ಆಯ್ಕೆ ಮಾಡಬೇಕು. ಅಲ್ಲದೆ, ನಾನು ಪಕ್ಷೇತರ ಸಂಸದೆಯಾಗಿದ್ದರೂ ಅವರು ನನಗೆ ಸಾಕಷ್ಟು ಗೌರವವನ್ನು ನೀಡಿದ್ದಾರೆ. ಮಂಡ್ಯದಲ್ಲಿ ಸ್ಪರ್ಧೆ ವಿಚಾರ ಬಂದಾಗ ನನ್ನನ್ನು ಕರೆಸಿಕೊಂಡು ಪಕ್ಷೇತರವಾಗಿ ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದಾರೆ. ನನ್ನ ಕ್ಷೇತ್ರದ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಿಕೊಟ್ಟರು. ಒಬ್ಬ ಪ್ರಧಾನಿಯೇ ಹೀಗೆ ಗೌರವ ಕೊಡುವಾಗ ನನಗೆ ಇನ್ನೇನು ಬೇಕು? ಹೀಗಾಗಿ ಈ ತೀರ್ಮಾನವನ್ನು ಕೈಗೊಂಡಿದ್ದೇನೆ ಎಂದು ಸುಮಲತಾ ಅಂಬರೀಶ್‌ ಹೇಳಿದರು.

ಅಭಿಮಾನಿಗಳ ಬೇಸರದ ಬಗ್ಗೆ ಸುಮಲತಾ ಹೇಳಿದ್ದೇನು?

ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಕೆಲವರು ಅಸಮಾಧಾನವನ್ನು ಹೊರಹಾಕಿದರಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್‌, ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ನಾನು ಬಿಜೆಪಿ ಸೇರ್ಪಡೆ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಮತ್ತೆ ಕೆಲವರು ಚಪ್ಪಾಳೆ, ಶಿಳ್ಳೆ ಹಾಕಿ ಸಂಭ್ರಮಿಸಿದರು. ಅದು ನಿಮಗೆ ಕೇಳಲಿಲ್ಲವೇ? ಎಂದು ಮರು ಪ್ರಶ್ನೆಯನ್ನು ಹಾಕಿದರು. ನೋಡಿ, ಯಾವುದೇ ವಿಷಯದಲ್ಲಿಯಾದರೂ ಯಾರನ್ನೂ ನೂರಕ್ಕೆ ನೂರು ಮೆಚ್ಚಿಸಲು ಆಗುವುದಿಲ್ಲ. ಈ ವಿಷಯದಲ್ಲಿ ಕೆಲವರಿಗೆ ಈಗ ಅಸಮಾಧಾನ ಆಗಿರಬಹುದು. ಆದರೆ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಅಂಬರೀಶ್‌ ಅವರ ಅಭಿಮಾನಿಗಳು ಸದಾ ನನ್ನ ಬೆನ್ನ ಹಿಂದೆ ಇರಲಿದ್ದಾರೆ ಎಂಬ ನಂಬಿಕೆ ನನಗೆ ಇದೆ. ಈ ಹಿನ್ನೆಲೆಯಲ್ಲಿ ನಾನು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಸುಮಲತಾ ಅಂಬರೀಶ್‌ ಹೇಳಿದರು.

ಎಚ್‌ಡಿಕೆ ಬೆಂಬಲ ಕೋರಿದ್ದಾರೆ

ಎಚ್‌.ಡಿ. ಕುಮಾರಸ್ವಾಮಿ ಅವರದ್ದು ಸೌಜನ್ಯಯುತ ಭೇಟಿಯಾಗಿತ್ತು. ಅವರು ನನ್ನನ್ನು ಭೇಟಿ ಮಾಡಿದ ವೇಳೆ ಈಗಿನ ಚುನಾವಣೆ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ಹಳೆಯದ್ದನ್ನೆಲ್ಲ ಮರೆತು ಬಿಡಿ ಎಂದು ಮನವಿ ಮಾಡಿದ್ದರು. ಅಲ್ಲದೆ, ತಮಗೆ ಬೆಂಬಲ ಸೂಚಿಸಿ ಎಂದೂ ಅವರು ಕೇಳಿಕೊಂಡಿದ್ದರು ಎಂದು ಎಚ್‌ಡಿಕೆ ಭೇಟಿ ಬಗ್ಗೆ ಸುಮಲತಾ ಅಂಬರೀಶ್‌ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Lok Sabha Election 2024: ಸುಮಲತಾ ಅಂಬರೀಶ್‌ ಪಕ್ಷೇತರ ಸ್ಪರ್ಧೆ ಇಲ್ಲ; ಬಿಜೆಪಿ ಸೇರ್ಪಡೆ

ಇದು ನನ್ನ ಕಾರ್ಯಕರ್ತರ ಹಾಗೂ ಮಂಡ್ಯ ಜಿಲ್ಲೆಯ ಜನತೆಯ ಹಿತಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿದೆ. ಮಂಡ್ಯವೇ ನನ್ನ ಕರ್ಮ ಭೂಮಿ. ಹೀಗಾಗಿ ನನ್ನ ರಾಜಕಾರಣ ಮಂಡ್ಯ ಬಿಟ್ಟು ಒಂದಿಂಚೂ ಸಾಗದು. ಮುಂದೆ ನನಗೆ ಬೇರೆ ಬೇರೆ ಅವಕಾಶಗಳು ಸಿಗಬಹುದು. ಆದರೆ, ಮಂಡ್ಯದ ಜನರನ್ನು ಎಂದಿಗೂ ಮರೆಯಲಾರೆ ಎಂದು ಸುಮಲತಾ ಅಂಬರೀಶ್‌ ಹೇಳಿದರು.

Exit mobile version