Site icon Vistara News

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

Raja Marga Column depressed

Raja Marga Column : ನನ್ನ ಸ್ನೇಹಿತರೊಬ್ಬರು ತುಂಬಾನೆ ಡಿಪ್ರೆಸ್ (Friend in Depression) ಆಗಿದ್ದರು. ಅವರು ಹೇಳುವ ಪ್ರಕಾರ ಅವರಿಗೆ ಸಾಯುವಷ್ಟು ಅಪಮಾನ (Faced Insult) ಆಗಿತ್ತು. ಅವರು ತುಂಬಾ ನಂಬಿದ್ದ ವ್ಯಕ್ತಿಗಳು ಒಟ್ಟಾಗಿ ಅವರ ಮೇಲೆ ಬಹಳ ದೊಡ್ಡ ಆರೋಪ ಹೊರಿಸಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಅವರ ಇಡೀ ಜೀವನದಲ್ಲಿ ಪೊಲೀಸ್ ಸ್ಟೇಷನ್ (Police station) ಮೆಟ್ಟಿಲು ಏರದಿದ್ದ ಅವರು ಈಗ ಅಲ್ಲಿಗೆ ಹೋಗಿ ವಿಚಾರಣೆ ಎದುರಿಸಬೇಕಾಗಿತ್ತು. ನನ್ನ ಯಾವ ತಪ್ಪೂ ಇಲ್ಲ ಎಂದವರು ಹೇಳಿದರು.

ಅವರ ನೋವು ಏನೆಂದರೆ ಅವರು ಯಾರನ್ನು ತುಂಬಾ ನಂಬಿದ್ದರೋ, ಯಾರು ಅವರಿಂದ ಹೆಚ್ಚು ಪ್ರಯೋಜನ ಪಡೆದಿದ್ದರೋ ಅವರು ಬೆನ್ನ ಹಿಂದೆ ಚೂರಿ ಹಾಕಿದ್ದಾರೆ. ನಂಬಿಕೆ ದ್ರೋಹ ಮಾಡಿದ್ದಾರೆ ಅನ್ನೋದು ಅವರ ಅಳಲು. ಅವರು ನನ್ನ ಮುಂದೆ ಕೂತು ಕಣ್ಣೀರು ಸುರಿಸಿ ಅವರ ಮನಸನ್ನು ಹಗುರ ಮಾಡಿಕೊಂಡರು. ನಾನು ಅವರನ್ನು ತಡೆಯಲಿಲ್ಲ. ಹಲವು ಬಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಯೋಚನೆ ಕೂಡ ಬಂದಿತ್ತು ಎಂದರು. ಅವರ ಮಾತು ಪೂರ್ತಿ ಮುಗಿಯುವತನಕ ನಾನು ಮಾತಾಡಲಿಲ್ಲ.

Raja Marga Column : ಅಪವಾದಗಳು ಎಂಬ ಅಗ್ನಿ ದಿವ್ಯಗಳು

ಇದು ಪ್ರತಿಯೊಬ್ಬರ ಬದುಕಿನಲ್ಲಿಯೂ ಬರುವ ಒಂದು ಮಾನಸಿಕ ಸ್ಥಿತಿ. ಅವರ ದುಃಖಕ್ಕೆ ಪ್ರಮುಖ ಕಾರಣ ಅಂದರೆ…

1. ಅವರು ತಪ್ಪು ವ್ಯಕ್ತಿಗಳನ್ನು ನಂಬಿದ್ದು ಮತ್ತು ಅವರನ್ನು ಭಾರಿ ಬೆಳೆಸಿದ್ದು.
2. ಪ್ರಾಕ್ಟಿಕಲ್ ಆಗಿ ಯೋಚನೆ ಮಾಡದೆ ಭಾವನಾತ್ಮಕ ಆಗಿ ಯೋಚನೆ ಮಾಡಿದ್ದು.
3. ತನ್ನ ಬಗ್ಗೆ ಒಳ್ಳೆಯ ಭಾವನೆ ಹೊಂದಿರುವ ವ್ಯಕ್ತಿಗಳನ್ನು ನಿರ್ಲಕ್ಷ್ಯ ಮಾಡಿದ್ದು.
4. ಇಂತಹ ಸೂಕ್ಷ್ಮ ವಿಷಯಗಳನ್ನು ತನ್ನ ಕುಟುಂಬದ ಜೊತೆಗೆ ಗುಟ್ಟು ಮಾಡಿದ್ದು. ಅವರ ನಿಜವಾದ ಸಮಸ್ಯೆಗಳು ಅವರ ಹೆಂಡತಿಗೂ ಗೊತ್ತಿರಲಿಲ್ಲ.
5. ತಾನು ತುಂಬಾ ಕ್ಲೀನ್ ಇಮೇಜ್ ವ್ಯಕ್ತಿ ಎಂದು ಗಾಢವಾಗಿ ನಂಬುತ್ತ ಬಂದದ್ದು. (ಅದು ತಪ್ಪಲ್ಲ)

6. ತನ್ನದೇ ಬಲೆಯಲ್ಲಿ ತಾನೇ ಸಿಲುಕಿ ಒದ್ದಾಡುವ ಜೇಡದ ಹಾಗೆ ಉಸಿರುಗಟ್ಟಿ ಹೋದದ್ದು.
7. ಸಮಸ್ಯೆಗಳಿಂದ ಹೊರಬರಲು ಒಂದಿಷ್ಟೂ ಪ್ರಯತ್ನ ಮಾಡದೆ ಆ ಸಮಸ್ಯೆಯೇ ದೊಡ್ಡದು ಎಂದು ಭಾವಿಸಿದ್ದು.
8. ಯಾವುದಾದರೂ ಒಬ್ಬ ಒಳ್ಳೆಯ ನ್ಯಾಯವಾದಿಯನ್ನು ಸಂಪರ್ಕ ಮಾಡಿ ಕಾನೂನು ರಕ್ಷಣೆ ಪಡೆಯದೆ ಹೋದದ್ದು.
9. ನನಗೆ ಹೇಳಿದ ಹಾಗೆ ಹತ್ತಾರು ಮಂದಿಗೆ ಅವರ ಸ್ಟೋರಿ ಹೇಳಿ ಕಣ್ಣೀರು ಹಾಕಿ ಸಿಂಪಥಿ ಪಡೆಯಲು ಪ್ರಯತ್ನ ಮಾಡಿದ್ದು.
10. ಪೊಲೀಸ್ ಸ್ಟೇಷನ್‌ಗೆ ಹೋಗುವುದು ಮತ್ತು ವಿಚಾರಣೆ ಎದುರಿಸುವುದು ಅಪಮಾನ ಎಂದು ತಪ್ಪು ಯೋಚನೆಯನ್ನು ಮಾಡಿದ್ದು.

ಕೆಲವರು ಇರೋದೇ ಹೀಗೆ!

ಅವರು ಸಮಸ್ಯೆಯ ಒಳಗೇ ಕೂತು ಪರಿಹಾರ ಹುಡುಕುತ್ತಾರೆ. ಯಾವುದೇ ಸಮಸ್ಯೆಗೆ ಪರಿಹಾರ ದೊರೆಯಬೇಕು ಅಂತಾದರೆ ಆ ಸಮಸ್ಯೆಯಿಂದ ಹೊರಗೆ ನಿಂತು ಪರಿಹಾರ ಹುಡುಕಬೇಕು. ತನ್ನ ಮೇಲೆ ನಂಬಿಕೆ ಇಟ್ಟು ಯಾರು ನಮ್ಮ ಜೊತೆಗೆ ನಿಲ್ಲುತ್ತಾರೋ ಅವರ ಬೆಂಬಲ ಪಡೆಯಬೇಕು. ತನಗೆ ನೈತಿಕ ಬೆಂಬಲ ಕೊಡುವ ವ್ಯಕ್ತಿಗಳ ಪಟ್ಟಿ ಮಾಡಿ ಅವರ ಜೊತೆಗೆ ಹೆಚ್ಚು ಮನಸು ಬಿಚ್ಚಿ ಮಾತಾಡಬೇಕು. ಮುಖ್ಯವಾಗಿ ತನ್ನ ಕುಟುಂಬದ ವಿಶ್ವಾಸವನ್ನು ಹೆಚ್ಚು ಉಪಯೋಗ ಮಾಡಬೇಕು. ಹೆಂಡತಿಯ ಜೊತೆಗೆ ಇಂತಹ ಸಂಗತಿ ಗುಟ್ಟು ಮಾಡಬಾರದು.

ಯಾವುದೇ ಸಮಸ್ಯೆಯ ಪರಿಹಾರಕ್ಕೆ ಹಲವು ಮಾರ್ಗಗಳು ಇರುತ್ತವೆ. ಅವುಗಳನ್ನು ಪಟ್ಟಿ ಮಾಡಿ ಅವುಗಳಲ್ಲಿ ಕಡಿಮೆ ರಿಸ್ಕ್ ಇರುವ ಮಾರ್ಗವನ್ನು ಮತ್ತು ಕ್ಷಿಪ್ರವಾಗಿ ಪರಿಹಾರವನ್ನು ಕೊಡುವ ಮಾರ್ಗವನ್ನು ಆರಿಸಿಕೊಂಡರೆ ಇಂತಹ ಸಾವಿರ ಸಮಸ್ಯೆ ಬಂದರೂ ಗೆಲ್ಲುವುದು ಖಚಿತ.

ಇದನ್ನೂ ಓದಿ : Raja Marga Column : ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಇಲ್ಲಿದೆ 10 ಸೂತ್ರ

ನಾನು ಅವರಿಗೆ ಹೇಳಿದ ಸಾಂತ್ವನದ ಮಾತುಗಳು

1. ಅಪವಾದಗಳು ರಾಮಾಯಣದಲ್ಲಿ ಶ್ರೀರಾಮನನ್ನು ಕೂಡ ಬಿಡಲಿಲ್ಲ. ಹರಿಶ್ಚಂದ್ರ ಕೂಡ ಅದಕ್ಕೆ ಹೊರತಲ್ಲ. ಈಶ್ವರ ದೇವರ ಕೈಗೆ ಬ್ರಹ್ಮ ಕಪಾಲ ಅಂಟಿಕೊಂಡು ಭಿಕ್ಷೆ ಬೇಡುವುದು ತಪ್ಪಲಿಲ್ಲ.
2. ಈ ಅಪವಾದಗಳು ನಮ್ಮನ್ನು ಟೆಸ್ಟ್ ಮಾಡಲು ಬರುತ್ತವೆ. ನಿಮ್ಮನ್ನು ಮುಳುಗಿಸಲು ಅಲ್ಲ. ವಿಲ್ ಪವರ್ ಸ್ಟ್ರಾಂಗ್ ಮಾಡಿಕೊಂಡರೆ ಗೆಲ್ಲುವುದು ಖಚಿತ.
3. ಖ್ಯಾತ ಹಾಸ್ಯ ಸಾಹಿತಿ ಬೀಚಿ ಹೇಳಿದ ಹಾಗೆ ಸಮಸ್ಯೆಗಳು ಅಂದರೆ ಸಿಟಿ ಬಸ್ಸುಗಳು ಹಾಗೆ. ಬಂದರೆ ಹಿಂದೆ ಹಿಂದೆ ಬರ್ತಾ ಇರುತ್ತವೆ. ಇಲ್ಲಾಂದರೆ ಬರೋದೇ ಇಲ್ಲ!
4. ಅಪವಾದಗಳು ತಾತ್ಕಾಲಿಕ. ಮೋಡ ಮುಸುಕಿದ ಸೂರ್ಯನ ಹಾಗೆ. ಆ ಮೋಡಗಳು ಕರಗಿ ಹೋಗಿ ಹೊರಬಂದ ಸೂರ್ಯ ಇನ್ನಷ್ಟು ಬೆಳಗುತ್ತಾನೆ.
5. ಜೀವನದ ಯಾವುದೇ ಘಟ್ಟದಲ್ಲಿಯೂ ನಮ್ಮನ್ನು ಪ್ರೀತಿಸುವವರ ಸಂಖ್ಯೆಯು ನಮ್ಮನ್ನು ದ್ವೇಷ ಮಾಡುವವರ ಸಂಖ್ಯೆಗಿಂತ ಹೆಚ್ಚಾಗಿರುತ್ತದೆ.

6. ಅಪವಾದಗಳನ್ನು ಗೆದ್ದುಬಂದ ನಂತರ ನಾವು ಮೊದಲಿಗಿಂತ ಹೆಚ್ಚು ಸ್ಟ್ರಾಂಗ್ ಆಗಿರುತ್ತೇವೆ.
7. ನಿಮ್ಮ ಆತ್ಮವಿಶ್ವಾಸ ಮತ್ತು ತಾಳ್ಮೆ ನಿಮ್ಮನ್ನು ಸದಾ ಗೆಲ್ಲಿಸುತ್ತದೆ. ದುಡುಕು ನಿರ್ಧಾರ ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ.
8. ಯಾರನ್ನು ನಂಬಬೇಕು, ಯಾರನ್ನು ಎಷ್ಟು ನಂಬಬೇಕು, ಯಾರನ್ನು ನಿಮ್ಮ ಭಾವನಾ ವಲಯದ ಒಳಗೆ ತೆಗೆದುಕೊಳ್ಳಬೇಕು ಎಂದು ನಿರ್ಧರಿಸುವವರು ನೀವೇ! ತಪ್ಪು ವ್ಯಕ್ತಿಗಳು ನಮಗೆ ಜೀವನ ಪಾಠ ಕಲಿಸುತ್ತಾರೆ.

9. ಕಾನೂನು ಯಾವಾಗಲೂ ಸಂತ್ರಸ್ತರಿಗೆ ರಕ್ಷಣೆ ಕೊಡುತ್ತದೆ ಮತ್ತು ಸತ್ಯದ ಪರವಾಗಿ ಇರುತ್ತದೆ. ಮಳೆ ಬಂದಾಗ ಮಳೆ ಬಂತಲ್ಲ ಎಂದು ದುಃಖ ಪಡುವುದಲ್ಲ. ಕೊಡೆ ಬಿಡಿಸಿ ಮುನ್ನಡೆಯಬೇಕು.

10. ಜಗತ್ತಿನ ಯಾವ ಪುರಾಣಗಳಲ್ಲಿಯೂ ಕೊನೆಗೆ ಗೆದ್ದದ್ದು ಒಳ್ಳೆಯತನ. ರಾಮಾಯಣದಲ್ಲಿ ಗೆದ್ದವನು ರಾಮ. ರಾವಣ ಅಲ್ಲ. ಮಹಾಭಾರತದಲ್ಲಿ ಗೆದ್ದವರು ಪಾಂಡವರು.ಕೌರವರು ಅಲ್ಲ.

ಭರತ ವಾಕ್ಯ

ನೀವು ನಾನು ಹೇಳಿದ ಅಂಶಗಳನ್ನು ಅಪ್ಲೈ ಮಾಡಿ ಗೆದ್ದು ಬನ್ನಿ ಎಂದು ಅವರನ್ನು ಬೀಳ್ಕೊಟ್ಟೆ. ಎರಡು ದಿನಗಳ ನಂತರ ಇವತ್ತು ಬೆಳಿಗ್ಗೆ ಅವರದೇ ಕಾಲ್ ಬಂತು. ಅವರ ಧ್ವನಿಯಲ್ಲಿ ಗೆದ್ದ ಖುಷಿ ಇತ್ತು. ನಾನು ಆ ಕೇಸನ್ನು ಗೆದ್ದೆ ಸರ್ ಎಂದರು. ಅವರಿಗೆ ಅಭಿನಂದನೆ ಹೇಳಿ ಫೋನ್ ಇಟ್ಟೆ.

Exit mobile version