Site icon Vistara News

Amritpal Sing Arrest: ಖಲಿಸ್ತಾನಿಗಳ ನಾಯಕ ಅಮೃತ್‌ಪಾಲ್‌ ಸಿಂಗ್‌ ಬಂಧನ

Amrutpal sing

#image_title

ಚಂಡೀಗಢ: ಖಲಿಸ್ತಾನಿಗಳ ನಾಯಕ, ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಅಮೃತ್​ಪಾಲ್​ ಸಿಂಗ್​ ನನ್ನು (Amritpal Sing Arrest ) ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ. ಕಳೆದ ಮಾರ್ಚ್‌ 18ರಿಂದ ತಲೆ ಮರೆಸಿಕೊಂಡಿದ್ದ ಅಮೃತ್‌ ಪಾಲ್‌ ಸಿಂಗ್‌ (Amritpal Sing) ಕೊನೆಗೂ ಪೊಲೀಸರಿಗೆ ಶರಣಾಗಿದ್ದಾನೆ. ಕಳೆದ ಐದು ವರ್ಷಗಳಿಂದಲೂ ಪಂಜಾಬ್‌ನಲ್ಲಿ ಸಕ್ರಿಯನಾಗಿದ್ದ ಅಮೃತ್‌ ಪಾಲ್‌ ಸಿಂಗ್‌, ಖಲಿಸ್ತಾನಿ-ಪಾಕಿಸ್ತಾನಿ ಏಜೆಂಟ್‌ ಎಂದು ಪರಿಗಣಿಸಿತ್ತು. ಬಂಧಿತ ಅಮೃತ್‌ಪಾಲ್‌ ಸಿಂಗ್‌ನನ್ನು ಅಸ್ಸಾಂನ ದಿಬ್ರುಗಢ್‌ನ ಜೈಲಿಗೆ ಕರೆದೊಯ್ಯಲಾಗಿದೆ. ಖಲಿಸ್ತಾನಿ ಪ್ರತ್ಯೇಕತಾವಾದಕ್ಕೆ ಕುಮ್ಮಕ್ಕು ನೀಡುತ್ತಿದ್ದ ಆತನ ವಿರುದ್ಧ ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ‌‌

ಯಾರೀತ ಅಮೃತ್‌ ಪಾಲ್‌ ಸಿಂಗ್?

ʼವಾರಿಸ್‌ ಪಂಜಾಬ್‌ ದೇʼ ಎಂಬ ಪ್ರತ್ಯೇಕತಾವಾದಿ ಸಂಘಟನೆಯ ನಾಯಕನಾಗಿದ್ದ ಅಮೃತ್‌ಪಾಲ್‌, ಆನಂದ್‌ಪುರ್‌ ಖಾಲ್ಸಾ ಫೋರ್ಸ್‌ (AKF) ಎಂಬ ಹೆಸರಿನ ತನ್ನದೇ ಸೈನ್ಯವನ್ನು ಕಟ್ಟಲು ಯತ್ನಿಸಿದ್ದ. ಇದು ಖಲಿಸ್ತಾನಿ ಟೈಗರ್‌ ಫೋರ್ಸ್‌ (KTF) ಎಂಬ ಈ ಹಿಂದಿನ ಉಗ್ರ ಸಂಘಟನೆಯ ರೀತಿಯಲ್ಲಿತ್ತು. ಜತೆಗೆ ಒಂದು ಮಾನವ ಬಾಂಬ್‌ ಸ್ಕ್ವಾಡ್‌ ಅನ್ನೂ ಸಿದ್ಧಪಡಿಸುತ್ತಿದ್ದ.

ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದ ಈತ ಹಾಗೂ ಇವನ 78 ಸಹಚರರ ಬಂಧನಕ್ಕೆ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದರು. ಇವನ ಸ್ಥಿತಿಗತಿಯ ಬಗ್ಗೆ ಪೊಲೀಸರು ಮಾಹಿತಿ ನೀಡಬೇಕು ಎಂದೂ ಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಲಾಗಿತ್ತು.

ಅಮೃತ್‌ಪಾಲ್‌ ಸಿಂಗ್‌ ಮಾದಕದ್ರವ್ಯ ವ್ಯಸನ ತಡೆ ಶಿಬಿರಗಳನ್ನು ಹಾಗೂ ಗುರುದ್ವಾರಗಳನ್ನು ತನ್ನ ಆಯುಧ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಆತ್ಮಹತ್ಯಾ ಬಾಂಬ್‌ ದಾಳಿಗೆ ಯುವಕರನ್ನು ಸಿದ್ಧಗೊಳಿಸುತ್ತಿದ್ದಾನೆ ಎಂದು ಮಾಹಿತಿಯನ್ನು ಬೇಹುಗಾರಿಕೆ ಸಂಸ್ಥೆಗಳು ನೀಡಿದ್ದವು. ಮಾದಕವ್ಯಸನದಿಂದ ಮುಕ್ತರಾಗುತ್ತಿದ್ದ ಯುವಕರನ್ನು ಈತ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದ ಎಂದು ಗೊತ್ತಾಗಿದೆ. ಇವರ ಬ್ರೈನ್‌ವಾಶ್‌ ಮಾಡಿ, ಹಿಂದಿನ ಪಂಜಾಬ್‌ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಅವರನ್ನು ಹತ್ಯೆ ಮಾಡಿದ ಆತ್ಮಹತ್ಯಾ ದಾಳಿಕೋರ ದಿಲಾವರ್‌ ಸಿಂಗ್‌ ಎಂಬಾತನ ಹಾದಿಯಲ್ಲಿ ನಡೆಯಲು ಪ್ರಚೋದಿಸುತ್ತಿದ್ದ.‌

ದುಬೈನಿಂದ ಕಳೆದ ವರ್ಷ ಪಂಜಾಬ್‌ಗೆ ಬಂದಿದ್ದ ಸಿಂಗ್:

ದುಬೈನಿಂದ ಕಳೆದ ವರ್ಷ ಹಿಂದಿರುಗಿದ್ದ ಅಮೃತ್‌ಪಾಲ್‌, ಪಾಕಿಸ್ತಾನದ ಐಎಸ್‌ಐ ಹಾಗೂ ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರ ಸಂಪರ್ಕದಲ್ಲಿದ್ದಾನೆ. ಪಂಜಾಬ್‌ನಲ್ಲಿ ಯುವಕರ ಮನಸ್ಸು ಕೆಡಿಸಿ ಅವರನ್ನು ಆತ್ಮಹತ್ಯಾ ದಾಳಿಕೋರರಾಗುವಂತೆ ಪ್ರಚೋದಿಸುತ್ತಿದ್ದ. ಇದಕ್ಕಾಗಿ ತಯಾರಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಯೂನಿಫಾರ್ಮ್‌ಗಳು ಹಾಗೂ ಜಾಕೆಟ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೇಲೆ AKF ಎಂಬ ಮಾರ್ಕ್‌ ಹಾಕಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾದ ಗತಿಯೇ ಆಗಲಿದೆ ಎಂದು ಎಚ್ಚರಿಸಿದ್ದ ಹಿನ್ನೆಲೆಯಲ್ಲಿ, ಗಂಭೀರ ತನಿಖೆ ಆರಂಭವಾಗಿತ್ತು. ಈತ ದುಬೈಯಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಐಎಸ್‌ಐ ಸಂಪರ್ಕಕ್ಕೆ ಬಂದಿದ್ದು, ಅಲ್ಲಿ ಭಾರತವಿರೋಧಿ ಕೃತ್ಯಗಳಿಗೆ ಅಗತ್ಯವಾದ ಪರಿಣತಿಯನ್ನು ಪಡೆದಿದ್ದ. ಇದಕ್ಕೆ ಐಎಸ್‌ಐ ಹಣಸಹಾಯ ಮಾಡುವ ಆಶ್ವಾಸನೆ ನೀಡಿತ್ತು.

ಪೊಲೀಸರಿಗೆ ಶರಣಾಗುವುದಿಲ್ಲ ಎಂದಿದ್ದ ಸಿಂಗ್:

ತಲೆ ಮರೆಸಿಕೊಂಡು ಓಡಾಡುತ್ತಿರುವ ಖಲಿಸ್ತಾನಿ ಪ್ರತ್ಯೇಕತಾ ನಾಯಕ ಅಮೃತ್ ಪಾಲ್ ಸಿಂಗ್ (Amritpal Singh), ಯುಟ್ಯೂಬ್‌ನಲ್ಲಿ ಲೈವ್‌ಗೆ (YouTube Live) ಬಂದು, ಯಾವುದೇ ಕಾರಣಕ್ಕೂ ಪೊಲೀಸರಿಗೆ ಶರಣಾಗುವುದಿಲ್ಲ ಎಂದು ಹೇಳಿದ್ದ. ಕೆಲವು ದಿನಗಳ ಹಿಂದೆ ಗುಪ್ತಚರ ಮಾಹಿತಿಗಳ ಪ್ರಕಾರ, ಆತ ಪೊಲೀಸರಿಗೆ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅದೇ ಕಾರಣಕ್ಕೆ ಆತ ಅಮೃತಸರ್ ಸೇರಿದಂತೆ ಕೆಲವು ಪ್ರದೇಶಗಳ ಗುರುದ್ವಾರಗಳ ಆಶ್ರಯ ಪಡೆಯಲಿದ್ದಾನೆಂದು ಗುಪ್ತಚರ ಸಂಸ್ಥೆಗಳು ಅಂದಾಜಿಸಿದ್ದವು. ಆ ನಂತರ, ವಿಡಿಯೋ ಬಿಡುಗಡೆ ಮಾಡಿದ್ದ ಅಮೃತ್ ಪಾಲ್ ಸಿಂಗ್, ಇದು ಸಿಖ್ಖರ ಮೇಲಿನ ದಬ್ಬಾಳಿಕೆ ಎಂದು ಆರೋಪಿಸಿದ್ದ.

30 ವರ್ಷದ ಪ್ರತ್ಯೇಕತಾವಾದಿ ಅಮೃತ್ ಪಾಲ್ ಸಿಂಗ್ ಸಿಖ್ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಹಾದಿಯಲ್ಲಿದ್ದಾನೆ. ಖಲಿಸ್ತಾನ್ ಪರ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಸದಸ್ಯರ ವಿರುದ್ಧ ಪೊಲೀಸ್ ಕಾರ್ಯಾಚರಣೆ ನಡೆಸಿದ ಮೂರು ವಾರಗಳ ಬಳಿಕ, ಆತನ ಸಹಚರರು ಅಮೃತಸರ ಬಳಿಯ ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಪೊಲೀಸರಿಗೆ ಶರಣಾಗಿ ತನಿಖೆಗೆ ಸಹಕರಿಸುವಂತೆ ಸಿಖ್ಖ ಧಾರ್ಮಿಕ ಉನ್ನತ ಸಂಸ್ಥೆಯಾದ ಅಕಾಲ್ ತಖ್ತ್ ಜಾಥೇದಾರ್ ಸೂಚಿಸಿತ್ತು. ಮತ್ತೊಂದೆಡೆ, ಪಂಜಾಬ್ ಮತ್ತು ಹರ್ಯಾಣ ಕೋರ್ಟ್, ಪೊಲೀಸರ ಕಾರ್ಯವೈಖರಿ ವಿರುದ್ಧ ಅಸಮಾಧಾನ ಸೂಚಿಸಿತ್ತು.

ವಿಡಿಯೊದಲ್ಲಿ ಅಮೃತ್‌ಪಾಲ್‌ ಸಿಂಗ್‌ ಹೇಳಿದ್ದೇನು?

“ಪಂಜಾಬ್‌ ಸರ್ಕಾರಕ್ಕೆ ನನ್ನ ಬಂಧನ ಮಾತ್ರ ಗುರಿಯಾಗಿಲ್ಲ. ಅವರು ಇಡೀ ಸಿಖ್‌ ಸಮುದಾಯದ ಮೇಲೆ ದಬ್ಬಾಳಿ ಮಾಡುತ್ತಿದ್ದಾರೆ ಎಂಬುದನ್ನು ಅರಿಯಬೇಕು. ಎಲ್ಲ ಸಿಖ್ಖರು ಇಂತಹ ಷಡ್ಯಂತ್ರಗಳ ವಿರುದ್ಧ ಧ್ವನಿ ಎತ್ತಬೇಕು” ಎಂದು ಅಮೃತ್ ಪಾಲ್ ಸಿಂಗ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಹೇಳಿದ್ದ.

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಕೂಡ ಅಮೃತ್‌ಪಾಲ್‌ ಸಿಂಗ್‌ ಅಸಮಾಧಾನ ಹೊರಹಾಕಿದ್ದ. “ಪಂಜಾಬ್‌ ನಾಗರಿಕರನ್ನು ಬಂಧಿಸುವ ಮೂಲಕ ರಾಜ್ಯಕ್ಕೆ ಪ್ರಧಾನಿಯವರು ದ್ರೋಹ ಮಾಡಿದ್ದಾರೆ. ನನ್ನ ಸಂಬಂಧಿಕರನ್ನು ಅಸ್ಸಾಂಗೆ ಕಳುಹಿಸಲಾಗಿದೆ. ಇದು ಅಕ್ಷಮ್ಯವಾಗಿದ್ದು, ಎಲ್ಲರನ್ನೂ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು” ಎಂದು ವಾರಿಸ್‌ ಪಂಜಾಬ್‌ ದೇ ಮುಖ್ಯಸ್ಥನೂ ಆದ ಅಮೃತ್‌ಪಾಲ್‌ ಸಿಂಗ್‌ ಹೇಳಿದ್ದಾನೆ.

ಪಾಕಿಸ್ತಾನದ ಐಎಸ್‌ಐ ಜತೆ ನಂಟು:

ಪಾಕಿಸ್ತಾನದ ಲಷ್ಕರೆ ತಯ್ಬಾ, ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ನಂಟು ಹೊಂದಿರುವ ಅಮೃತ್‌ಪಾಲ್‌ ಸಿಂಗ್‌ ಬಂಧನಕ್ಕೆ ರಾಜ್ಯಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಇಂಟರ್‌ನೆಟ್‌ ಸಂಪರ್ಕ ಕಡಿತಗೊಳಿಸಿ ಯೋಜನೆ ರೂಪಿಸಿದ್ದರು. ಅಮೃತ್‌ಪಾಲ್‌ ಸಿಂಗ್‌ ಶರಣಾಗುತ್ತಾನೆ ಎಂಬ ವದಂತಿಯೂ ಇತ್ತು.

Exit mobile version