Site icon Vistara News

Anantnag Encounter: ಕಾಶ್ಮೀರದಲ್ಲಿ ಉಗ್ರರಿಗಾಗಿ 48 ಗಂಟೆ ಸತತ ಶೋಧ; ಮತ್ತೊಬ್ಬ ಯೋಧ ನಾಪತ್ತೆ

Kulgam

Terrorist killed in fresh gunfight with security forces in Jammu Kashmir's Kulgam

ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ಉಗ್ರರಿಗಾಗಿ ನಡೆಯುತ್ತಿರುವ ಕಾರ್ಯಾಚರಣೆಯು 48 ಗಂಟೆಯಿಂದಲೂ ನಡೆಯುತ್ತಿದ್ದು, ಮೂರನೇ ದಿನಕ್ಕೂ ಕಾಲಿಟ್ಟಿದೆ. ಕಾಕೆರ್‌ನಾಗ್‌ ಪ್ರದೇಶದ ಅರಣ್ಯದಲ್ಲಿ ಯೋಧರು ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎನ್‌ಕೌಂಟರ್‌ (Anantnag Encounter) ವೇಳೆ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಇದರಿಂದಾಗಿ ಉಗ್ರರ ಬೇಟೆಗಾಗಿ ಭದ್ರತಾ ಸಿಬ್ಬಂದಿಯು ಬಿಡುವಿಲ್ಲದೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೊಬ್ಬ ಯೋಧ ನಾಪತ್ತೆಯಾಗಿದ್ದಾರೆ.

ಗರೋಲ್‌ ಅರಣ್ಯ ಪ್ರದೇಶದಲ್ಲಿ ಸೇನೆಯ ಒಬ್ಬ ಯೋಧ ನಾಪತ್ತೆಯಾಗಿದ್ದು, ಅವರ ಶೋಧವೂ ನಡೆಯುತ್ತಿದೆ. ಜಮ್ಮು-ಕಾಶ್ಮೀರ ಪೊಲೀಸರು, ಸೈನಿಕರು ಹಾಗೂ ವಿಶೇಷ ಪಡೆಯ ಸಿಬ್ಬಂದಿಯು ಜಂಟಿಯಾಗಿ ಹಗಲು-ರಾತ್ರಿ ಎನ್ನದೆ ಆಪರೇಷನ್‌ನಲ್ಲಿ ನಿರತರಾಗಿದ್ದಾರೆ. ಆದಾಗ್ಯೂ, ಗುರುವಾರ (ಸೆಪ್ಟೆಂಬರ್‌ 14) ಇಬ್ಬರು ಉಗ್ರರನ್ನು ಭದ್ರತಾ ಸಿಬ್ಬಂದಿಯು ಸುತ್ತುವರಿದಿದ್ದರಾದರೂ ಅವರನ್ನು ಎನ್‌ಕೌಂಟರ್‌ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಕಾರ್ಯಾಚರಣೆಯನ್ನು ಶುಕ್ರವಾರವೂ ಮುಂದುವರಿಸಿದ್ದಾರೆ.

ಐಇಡಿ ಬಳಸಿ ಸೇನೆ ತಿರುಗೇಟು

ಕಣಿವೆಯಲ್ಲಿ ಲಷ್ಕರೆ ತಯ್ಬಾ ಉಗ್ರರನ್ನು ಸದೆಬಡಿಯಲು ಕಾರ್ಯಾಚರಣೆ ಕೈಗೊಂಡಿರುವ ಸೇನೆಯು ಅತ್ಯಾಧುನಿಕ ಆಟೋಮ್ಯಾಟಿಕ್‌ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ. ಹಾಗೆಯೇ, ಸುಧಾರಿತ ಸ್ಫೋಟಕ ಸಾಧನಗಳನ್ನು (IED) ಬಳಸಿ ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡುತ್ತಿದ್ದಾರೆ. ಐಇಡಿಗಳನ್ನು ಸ್ಫೋಟಿಸುವ ವಿಡಿಯೊಗಳು ಲಭ್ಯವಾಗಿದ್ದು, ಇದರೊಂದಿಗೆ ತಕ್ಕ ತಿರುಗೇಟು ನೀಡುತ್ತಿರುವುದು ದೃಢವಾಗಿದೆ.

ಹುತಾತ್ಮರಿಗೆ ಅಂತಿಮ ನಮನ

ಅನಂತ್‌ನಾಗ್ ಜಿಲ್ಲೆಯಲ್ಲಿ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಸೇನೆಯ ಕರ್ನಲ್ (Colonel) ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನೌಕ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಹುಮಾಯೂನ್ ಭಟ್ ಅವರು ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ: Anantnag Encounter: ಉಗ್ರರ ಗುಂಡಿಗೆ ಎದೆಯೊಡ್ಡಿದವರ ಹಿಂದಿವೆ ಹೃದಯಸ್ಪರ್ಶಿ ಕತೆಗಳು

ಮೇಜರ್‌ ಆಶಿಶ್‌ಗೆ ಭಾವಪೂರ್ಣ ವಿದಾಯ

ಇವರ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಸಾವಿರಾರು ಜನ ಭಾವುಕರಾಗಿ ವಿದಾಯ ಹೇಳಿದ್ದಾರೆ. ಮೇಜರ್‌ ಆಶಿಶ್‌ ಧೋನೌಕ್‌ ಅವರ ಅಂತ್ಯಸಂಸ್ಕಾರವು ಹರ್ಯಾಣದ ಪಾಣಿಪತ್‌ನಲ್ಲಿ ನೆರವೇರಿದ್ದು, ಭಾರತ್‌ ಮಾತಾ ಕೀ ಜೈ ಸೇರಿ ಹಲವು ಘೋಷಣೆಗಳನ್ನು ಕೂಗಿ ವೀರ ಯೋಧನಿಗೆ ಗೌರವ ಸಲ್ಲಿಸಿದ್ದಾರೆ.

Exit mobile version