Site icon Vistara News

Bihar Politics | ಅಸ್ತಿತ್ವಕ್ಕೆ ಬಂದ ಮಹಾಘಟ್​ ಬಂಧನ್​ ಸರ್ಕಾರ; ನಾಳೆ ಮಧ್ಯಾಹ್ನ 2 ಗಂಟೆಗೆ ಪ್ರಮಾಣ

Bihar Politics

ಪಟನಾ: ಬಿಹಾರದಲ್ಲಿ ನಿರೀಕ್ಷೆಯಂತೆ ಜೆಡಿಯು ಮತ್ತು ಆರ್‌ಜೆಡಿ ನೇತೃತ್ವದ ಮಹಾಘಟ್‌ಬಂಧನ್‌ ಸರ್ಕಾರ (Bihar Politics) ಅಸ್ತಿತ್ವಕ್ಕೆ ಬಂದಿದ್ದು, ಬುಧವಾರ (ಆಗಸ್ಟ್​ 10) ಮಧ್ಯಾಹ್ನ ೨ ಗಂಟೆಗೆ ನೂತನ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.

ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದು ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವುದು ೮ನೇ ಬಾರಿಯಾಗಿದೆ. ಅವರೊಂದಿಗೆ ಉಪ ಮುಖ್ಯಮಂತ್ರಿಯಾಗಿ ಆರ್‌ಜೆಡಿಯ ನಾಯಕ ತೇಜಸ್ವಿ ಯಾದವ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..

ಮಂಗಳವಾರ ಸಂಜೆ 4ಗಂಟೆಗೆ ಬಿಹಾರ ರಾಜ್ಯಪಾಲ ಫಗು ಚೌಹಾಣ್​​ರನ್ನು ಭೇಟಿಯಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದ ನಿತೀಶ್​ ಕುಮಾರ್​, ಬಳಿಕ ಸುಮಾರು 6ಗಂಟೆ ಹೊತ್ತಿಗೆ ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್​ ಜತೆ ಸೇರಿ ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.

ರಾಜೀನಾಮೆಯನ್ನು ಅಂಗೀಕರಿಸಿದ್ದ ರಾಜ್ಯಪಾಲರು ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ನಿತೀಶ್‌ ಕುಮಾರ್‌ಗೆ ಸೂಚಿಸಿದ್ದರು. ಮುಂದುವರಿದ ಭಾಗವಾಗಿ ನೂತನ ಸರ್ಕಾರದ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ.

ಜೆಡಿಯು-ಆರ್​ಜೆಡಿ ಮೈತ್ರಿ ಸರ್ಕಾರಕ್ಕೆ ಕಾಂಗ್ರೆಸ್​, ಸಿಪಿಐ (ಎಂ), ಸಿಪಿಐ (ಎಂಎಲ್​) ಮತ್ತು ವಿಐಪಿ, ಎಚ್​ಎಎಂ ಪಕ್ಷಗಳು ತಮ್ಮ ಬೆಂಬಲ ಪತ್ರವನ್ನು ನೀಡಿವೆ. ನಿತೀಶ್​ ಕುಮಾರ್​ 160ಕ್ಕೂ ಹೆಚ್ಚು ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲಿದ್ದಾರೆ.

ಮಂಗಳವಾರ ಸಂಜೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್‌ ಗಾಂಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ನಿತೀಶ್‌ ಕುಮಾರ್‌ ಸರ್ಕಾರದ ಭಾಗವಾಗುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ| Bihar Politics | ಬಿಹಾರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಮಹಾ ಘಟ್​ ಬಂಧನ್​ 2.0

Exit mobile version