Site icon Vistara News

Encounter in UP: ಯೋಗಿನಾಡಲ್ಲಿ ಮತ್ತೋರ್ವ ಮೋಸ್ಟ್‌ ವಾಂಟೆಡ್‌ ಗ್ಯಾಂಗ್‌ಸ್ಟರ್‌ನ ಎನ್‌ಕೌಂಟರ್‌

Encounter in UP

ಜೌನ್‌ಪುರ: ಯೋಗಿ(Yogi adityanath)ನಾಡು ಉತ್ತರಪ್ರದೇಶ(Uttar Pradesh)ದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು, ಗ್ಯಾಂಗ್‌ಸ್ಟರ್‌(Gangster)ವೊಬ್ಬನನ್ನು ಎನ್‌ಕೌಂಟರ್‌(Encounter in UP) ಮಾಡಲಾಗಿದೆ. ಜೌನ್‌ಪುರ ಜಿಲ್ಲೆಯ ಬರ್ಲಾಪುರದಲ್ಲಿ ಪೊಲೀಸರು ಮತ್ತು ವಿಶೇಷ ಟಾಸ್ಕ್‌ ಫೋರ್ಸ್‌(STF) ಜಂಟಿಯಾಗಿ ಕೈಗೆತ್ತಿಕೊಂಡಿದ್ದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಿತ್‌ ಕುಮಾರ್‌ ಅಲಿಯಾಸ್‌ ಮೋನು ಛವನ್ನಿಯನ್ನು ಹೊಡೆದುರುಳಿಸಲಾಗಿದೆ. ಇನ್ನು ಈತನ ಪತ್ತೆಗೆ ಪೊಲೀಸರು ಬರೋಬ್ಬರಿ 1 ಲಕ್ಷ ರೂ ಬಹುಮಾನ ಘೋಷಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿದ್ದ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅಜಯ್‌ಪಾಲ್‌ ಶರ್ಮಾ ಮಾಹಿತಿ ನೀಡಿದ್ದು, ಗ್ಯಾಂಗ್‌ಸ್ಟರ್‌ನ ಬಂಧನಕ್ಕೆ ಪೊಲೀಸರು ರೇಡ್‌ ನಡೆಸಿದ್ದರು. ಸುಮಿತ್‌ ವಿರುದ್ಧ ಕೊಲೆ, ಅತ್ಯಾಚಾರ ಸೇರಿದಂತೆ ಬರೋಬ್ಬರಿ 24 ಕೇಸ್‌ಗಳಿವೆ. ಆತನ ವಿರುದ್ಧ ಘಾಜಿಪುರ, ಬಲ್ಲಿಯಾ, ಜೌನ್‌ಪುರ ಮತ್ತು ಬಿಹಾರದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಈತ ಶಾಹಪುರ ಗ್ರಾಮದ ಸಮೀಪ ಇರುವ ಪಿಲ್ಲಿ ನದಿ ಹತ್ತಿತ ಬೀಡು ಬಿಟ್ಟಿರುವ ಬಗ್ಗೆ ಮಾಹಿತಿ ದೊರೆತಿತ್ತು. ಅದರ ಆಧಾರದಲ್ಲಿ ರೇಡ್‌ ನಡೆಸಲಾಗಿತ್ತು ಎಂದಿದ್ದಾರೆ.

ಕಾರ್ಯಾಚರಣೆ ವೇಳೆ ಸುಮಿತ್‌ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದ. ರಕ್ಷಣೆಗಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ಸುಮಿತ್‌ಗೆ ಗಂಭೀರವಾಗಿ ಗಾಯಗಳಾಗಿದ್ದವು ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಇನ್ನು ಆತನ ಇಬ್ಬರು ಸಹಚರರು ಸ್ಥಳದಿಂದ ಎಸ್ಕೇಪ್‌ ಆಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗಿದೆ. ಘಟನಾ ಸ್ಥಳದಿಂದ ಎಕೆ-47 ಬಂದೂಕುಗಳು, ಪಿಸ್ತೂಲ್‌ ಮತ್ತು ಎಸ್‌ಯುವಿ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಒಂದು ತಿಂಗಳ ಹಿಂದೆಯಷ್ಟೇ ಮೊಸ್ಟ್‌ ವಾಟೆಂಡ್‌ ಗ್ಯಾಂಗ್‌ಸ್ಟರ್‌ನನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದರು. ಉತ್ತರಪ್ರದೇಶದ ಮುಜಾಫರ್‌ನಗರದಲ್ಲಿ ಉತ್ತರಪ್ರದೇಶ ಮತ್ತು ಬಿಹಾರದ ವಿಶೇಷ ಕಾರ್ಯಪಡೆಗಳು ಜಂಟೀ ಕಾರ್ಯಾಚರಣೆ ನಡೆಸಿ ನೀಲೇಶ್‌ ರೈ ಎಂಬಾತನನ್ನು ಹೊಡೆದುರುಳಿಸಿದ್ದವು. ಮುಜಾಫರ್‌ನಗರದ ರತನ್‌ಪುರಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.

ಇನ್ನು ನೀಲೇಶ್‌ ರೈ ಪತ್ತೆಗೆ ಉತ್ತರಪ್ರದೇಶ ಪೊಲೀಸರು 2.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಮೂಲತಃ ಈ ಬಿಹಾರಸ ಬೇಗಸರೈ ಜಿಲ್ಲೆಯವನಾಗಿದ್ದು, ಬರೋಬ್ಬರಿ 16 ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು. ಆತನ ವಿರುದ್ಧ ಕೊಲೆ, ಲೂಟಿ ಮತ್ತು ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಆತನ ಪತ್ತೆಗಾಗಿ ಪೊಲೀಸರು ಭಾರೀ ಬಹುಮಾನ ಘೋಷಿಸಿದ್ದರು.

ಇನ್ನು ಈತ ರತನ್‌ಪುರಿ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಬಿಹಾರ, ಉತ್ತರಪ್ರದೇಶ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಪೊಲೀಸರ ಗುಂಡೇಟು ಬಿದ್ದು ನೀಲೇಶ್‌ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ:Sudha Murty: ಕರ್ನಾಟಕ ಸೇರಿ ದೇಶದ ಪ್ರವಾಸೋದ್ಯಮಕ್ಕೆ ಒತ್ತು ನೀಡಿ; ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮೊದಲ ಭಾಷಣ!

Exit mobile version