Site icon Vistara News

ರಾಮಮಂದಿರಕ್ಕೆ ಹೋದವರು ಮುಸ್ಲಿಮರಾಗಿ ಬರುತ್ತಾರೆ ಎಂದ ಪಾಕ್‌ ಮಾಜಿ ಕ್ರಿಕೆಟಿಗ; ಬೆಂಡೆತ್ತಿದ ಜನ

Javed Miandad

Hindus visiting Bhavya Ram Mandir in Ayodhya will come out as Muslims: Javed Miandad Video goes viral

ನವದೆಹಲಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರದ ಗರ್ಭಗುಡಿಯಲ್ಲಿ 2024ರ ಜನವರಿ 22ರಂದು ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆಗಳೂ ನಡೆಯುತ್ತಿವೆ. ಇದರ ಬೆನ್ನಲ್ಲೇ, “ರಾಮಮಂದಿರಕ್ಕೆ ಹೋದವರು ಮುಸ್ಲಿಮರಾಗಿ ಹೊರಬರುತ್ತಾರೆ” ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್‌ ಮಿಯಾಂದಾದ್‌ (Javed Miandad) ಹೇಳಿರುವ ಹಳೆಯ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

“ಅಯೋಧ್ಯೆ ರಾಮಮಂದಿರಕ್ಕೆ ಹೋಗುವ ಹಿಂದುಗಳು ಮುಸ್ಲಿಮರಾಗಿ ಹೊರಬರುತ್ತಾರೆ. ಯಾವುದೇ ನೆಲದ ಮೂಲವು ಇಸ್ಲಾಂ ಆಗಿದ್ದರೆ, ಅದರ ಹೊಳಪು ಮರೆಯಾಗುವುದಿಲ್ಲ ಎಂಬುದು ನಮ್ಮ ನಂಬಿಕೆಯಾಗಿದೆ. ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ತಪ್ಪು ಮಾಡಿದ್ದಾರೆ. ಆದರೆ, ಅದೇ ಭೂಮಿಯಲ್ಲಿ ಮುಸ್ಲಿಮರು ಮತ್ತೆ ಎದ್ದು ಬರಲಿದ್ದಾರೆ ಎಂದು ಅಲ್ಲಾಹುವಿನಲ್ಲಿ ನಂಬಿಕೆ ಇಟ್ಟಿದ್ದೇವೆ” ಎಂಬುದಾಗಿ ಜಾವೇದ್‌ ಮಿಯಾಂದಾದ್‌ ಹೇಳಿದ್ದಾರೆ.

ವೈರಲ್‌ ಆಗಿರುವ ವಿಡಿಯೊ

ನರೇಂದ್ರ ಮೋದಿ ಅವರು 2020ರ ಆಗಸ್ಟ್‌ 5ರಂದು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮೂರು ದಿನದ ಬಳಿಕ ಜಾವೇದ್‌ ಮಿಯಾಂದಾದ್‌ ಹೀಗೆ ಹೇಳಿರುವ ವಿಡಿಯೊ ಪೋಸ್ಟ್‌ ಮಾಡಿದ್ದರು. ಆಗಲೂ ವಿಡಿಯೊ ವೈರಲ್‌ ಆಗಿತ್ತು. ಈಗಲೂ ವೈರಲ್‌ ಆಗುತ್ತಿದೆ. ಇನ್ನು ವಿಡಿಯೊ ವೈರಲ್‌ ಆಗುತ್ತಲೇ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆರ್‌ಎಸ್‌ಎಸ್‌ಗೆ ಕಾರ್ಯಕ್ರಮಗಳ ಆಯೋಜನೆ ಹೊಣೆ

ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ವೇಳೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಆರ್‌ಎಸ್‌ಎಸ್‌ ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ. “ರಾಮಮಂದಿರಕ್ಕೆ ಚಾಲನೆ ನೀಡುವ ದಿನ ಇಡೀ ದೇಶವೇ ರಾಮಮಯವಾಗಲಿದೆ. ದೇಶದ ಪ್ರತಿಯೊಂದು ದೇವಾಲಯಗಳಲ್ಲೂ ಸನಾತನ ಧರ್ಮದ ಅನುಯಾಯಿಗಳು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು” ಎಂದು ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಕರೆ ನೀಡಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರದ ‘ಕ್ರೆಡಿಟ್’‌ ರಾಜೀವ್‌ ಗಾಂಧಿಗೂ ನೀಡಿ; ಕಮಲ್‌ ನಾಥ್‌ ಆಗ್ರಹ!

ರಾಮಮಂದಿರ ವಿವಾದಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್‌ 9ರಂದು ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿ, ರಾಮಜನ್ಮಭೂಮಿಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. 2020ರ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version