Site icon Vistara News

Smriti Singh: ಹುತಾತ್ಮ ಯೋಧನ 1 ಕೋಟಿ ರೂಪಾಯಿಯಲ್ಲಿ ಪೋಷಕರಿಗೆ 50%, ಪತ್ನಿಗೆ 50%; ಕೊನೆಗೂ ಸಿಕ್ಕಿತು ನ್ಯಾಯ

Smriti Singh

Rs 1 Crore Army Insurance Fund Divided Between Captain Anshuman Singhs Parents And Wife Smriti Singh

ನವದೆಹಲಿ: ಕಾಶ್ಮೀರದಲ್ಲಿ ಕಳೆದ ವರ್ಷ (2023) ಹುತಾತ್ಮರಾಗಿದ್ದ ಕ್ಯಾಪ್ಟನ್‌ ಅಂಶುಮಾನ್‌ ಸಿಂಗ್‌(Captain Anshuman Singh) ಕುಟುಂಬದಲ್ಲಿ ಇದೀಗ ಒಡಕು ಮೂಡಿದೆ. ಇತ್ತೀಚೆಗಷ್ಟೇ ಯೋಧನ ಪತ್ನಿ ಸ್ಮೃತಿ ಸಿಂಗ್‌ (Smriti Singh) ಅವರು ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ (Keerthi Chakra) ಸ್ವೀಕರಿಸಿದ ಬಳಿಕ ಇದೀಗ ಅವರ ಪೋಷಕರು ಹೇಳಿಕೆ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹುತಾತ್ಮ ಯೋಧ ಕ್ಯಾಪ್ಟನ್ ಅನ್ಶುಮಾನ್ ಅವರ ಪೋಷಕರು ತಮ್ಮ ಹೇಳಿಕೆಯಲ್ಲಿ ತಮ್ಮ ಮಗ ಹುತಾತ್ಮನಾಗಿದ್ದಾನೆ ಆದರೆ ಸೊಸೆ ಎಲ್ಲವನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ, ಹುತಾತ್ಮ ಯೋಧನ ಕುಟುಂಬಸ್ಥರಿಗೆ ಸರ್ಕಾರ ನೀಡುವ ಒಂದು ಕೋಟಿ ರೂ. ವಿಮಾ ಮೊತ್ತವನ್ನು ಯೋಧನ ತಂದೆ-ತಾಯಿ ಹಾಗೂ ಸ್ಮೃತಿ ಸಿಂಗ್‌ ಮಧ್ಯೆ ಸಮನಾಗಿ ಹಂಚಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಸೇನೆಯ ಮೂಲಗಳ ಪ್ರಕಾರ, ಆರ್ಮಿ ಗ್ರೂಪ್‌ ಇನ್ಶುರೆನ್ಸ್‌ ಫಂಡ್‌ನ ಒಂದು ಕೋಟಿ ರೂಪಾಯಿಯ ಮೊತ್ತವನ್ನು ಹುತಾತ್ಮ ಯೋಧನ ಪೋಷಕರು ಹಾಗೂ ಸ್ಮೃತಿ ಸಿಂಗ್‌ ಮಧ್ಯೆ ಸಮನಾಗಿ ಹಂಚಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಪಿಂಚಣಿಯ ಮೊತ್ತವು ನೇರವಾಗಿ ಸ್ಮೃತಿ ಸಿಂಗ್‌ ಖಾತೆ ಹೋಗುತ್ತದೆ. ಅಲ್ಲಿ ಹಂಚಿಕೆ ಮಾಡಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು, ಉತ್ತರ ಪ್ರದೇಶ ಸರ್ಕಾರವು ಹುತಾತ್ಮ ಯೋಧನ ಕುಟುಂಬಸ್ಥರಿಗೆ 50 ಲಕ್ಷ ರೂ. ಘೋಷಿಸಿದ್ದು, ಅದರಲ್ಲಿ 35 ಲಕ್ಷ ರೂ. ಯೋಧನ ಪತ್ನಿಗೆ ಹಾಗೂ 15 ಲಕ್ಷ ರೂ. ಪೋಷಕರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸ್ಮೃತಿ ಸಿಂಗ್‌ (Smriti Singh) ಬಗ್ಗೆ ಅಹ್ಮದ್‌ ಕೆ. ಎಂಬಾತನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಮೆಂಟ್‌ ಮಾಡಿದ್ದು, ಆತನ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಫ್‌ಐಆರ್‌ ದಾಖಲಿಸಲಾಗಿದೆ. ಅಹ್ಮದ್‌ ಕೆ ಎಂಬಾತನ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಕಮೆಂಟ್‌ ಮಾಡಿದ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಅಶ್ಲೀಲ ಕಮೆಂಟ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗವು ದೂರು ನೀಡಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

2023ರ ಜುಲೈ 19ರಂದು ಸಿಯಾಚಿನ್‌ನಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಬೆಳಗಿನ ಜಾವ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಳನ್ನು ಇರಿಸುವ ನೆಲೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು. ಫೈಬರ್‌ ಗ್ಲಾಸ್‌ನ ಕೋಣೆಯಲ್ಲಿ ಸಿಲುಕಿದ್ದ ಹಲವು ಸೈನಿಕರನ್ನು ಕ್ಯಾಪ್ಟನ್‌ ಅನ್ಶುಮಾನ್ ಸಿಂಗ್‌ ಅವರು ರಕ್ಷಣೆ ಮಾಡಿದ್ದರು. ಆದರೆ, ರಕ್ಷಣೆ ಮಾಡಿದ ಬಳಿಕ ಅವರೇ ಅಗ್ನಿಯ ಕೆನ್ನಾಲಗೆಗೆ ಸಿಲುಕಿ ಹುತಾತ್ಮರಾಗಿದ್ದರು.

ಇದನ್ನೂ ಓದಿ: Smriti Singh: ಹುತಾತ್ಮ ಯೋಧನ ಪತ್ನಿ ಬಗ್ಗೆ ಅಶ್ಲೀಲ ಕಮೆಂಟ್;‌ ಅಹ್ಮದ್‌ ವಿರುದ್ಧ ಎಫ್‌ಐಆರ್

Exit mobile version