Site icon Vistara News

ಅಕ್ಷಯ್‌, ಅಜಯ್‌ ನಂತರ ಸರ್ಕಾರದತ್ತಲೇ ತಿರುಗಿದ ʼವಿಮಲ್‌ʼ ಬಾಣ

ಬೆಂಗಳೂರು: ಪಾನ್‌ ಮಸಾಲಾ, ಗುಟ್ಕಾ ಪದಾರ್ಥಗಳನ್ನು ಸಾರ್ವಜನಿಕರು ಸೇವಿಸಿವುದುದು ತಪ್ಪೊ, ಅದನ್ನು ಪ್ರಚಾರ ಮಾಡುವುದು ತಪ್ಪೊ ಎನ್ನುವುದನ್ನು ಮೀರಿ ಇದೀಗ ಇಡೀ ವಿಮಲ್‌ʼ ವಿವಾದ ಸರ್ಕಾರಗಳತ್ತ ತಿರುಗಿದೆ.

ಇತ್ತೀಚೆಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ವಿಮಲ್‌ ಸಂಸ್ಥೆಯ ಬ್ರಾಂಡ್‌ ಪ್ರಚಾರ ರಾಭಾಯಾರಿಯಾದ ಕಾರಣಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ವ್ಯಕ್ತ ಪಡಿಸಿದ್ದರು. ಅಭಿಮಾನಿಗಳ ಕೋಪಕ್ಕೆ ಸ್ಪಂದಿಸಿದ ಅಕ್ಷಯ್‌ ಕುಮಾರ್‌ ಎಲ್ಲರಲ್ಲೂ ಕ್ಷಮೆಯಾಚಿಸಿ ವಿಮಲ್‌ ಪ್ರಚಾರ ಮಡುವುದರಿಂದ ಹಿಂದೆ ಸರಿದರು. ಈ ಬೆನ್ನಲ್ಲೇ, ಸಾರ್ವಜನಿಕರು ವಿಮಲ್‌ನ ಮತ್ತೋರ್ವ ರಾಯಭಾರಿಯಾದ ಅಜಯ್‌ ದೇವಗನ್‌ಗೆ ಇದೇ ಪ್ರಶ್ನೆ ಮಾಡಿದ್ದಾರೆ. ಒಬ್ಬ ನಟ ತಂಬಾಕು ವಸ್ತುಗಳನ್ನು ಜಾಹಿರಾತಿನ ಮೂಲಕ ಪ್ರಚಾರ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

ಆದರೆ ಅಜಯ್‌ ದೇವಗನ್‌ ತಮ್ಮ ಚಿತ್ರ runaway 34 ಪ್ರಮೋಷನ್‌ ಸಂದರ್ಭದಲ್ಲಿ ಈ ಪ್ರಶ್ನೆಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ʼಒಂದು ಜಾಹಿರಾತಿನಲ್ಲಿ ಅಭಿನಯಿಸುವುದು ನನ್ನ ವೈಯ್ಯಕ್ತಿಕ ನಿರ್ಧಾರ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅದು ಯಾವ ಪ್ರಮಾಣದ ಹಾನಿ ಉಂಟುಮಾಡುತ್ತದೆ ಎಂದು ನಾನು ತಿಳಿಯುತ್ತೇನೆ. ಕೆಲವು ಹಾನಿಕಾರಕ, ಕೆಲವು ಅಲ್ಲ. ನಾನು ಏಲಕ್ಕಿಯ ಕುರಿತು ಜಾಹಿರಾತು ನೀಡಿದ್ದು. ಆದರೆ ನನಗನ್ನಿಸುವುದು ಯಾವುದು ಹಾನಿಕಾರವೋ ಅವುಗಳನ್ನು ಮಾರಬಾರದುʼ ಎಂದು ಬಾಲಿವುಡ್‌ ನಟ ಹಾಗೂ ವಿಮಲ್‌ನ ಬ್ರಾಂಡ್‌ ಪ್ರಚಾರ ರಾಯಭಾರಿ ಅಜಯ್‌ ದೇವಗನ್‌ ಹೇಳಿದ್ದಾರೆ. ಅಂದರೆ ಹಾನಕಾರಕ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿ ನೀಡಿರುವ, ಅದರಿಂದ ತೆರಿಗೆ ರೂಪದಲ್ಲಿ ಆದಾಯ ಪಡೆದುಕೊಳ್ಳುತ್ತಿರುವ ಸರ್ಕಾರಗಳನ್ನು ಪರೋಕ್ಷವಾಗಿ ಚುಚ್ಚಿದ್ದಾರೆ.

ನಟ ಅಜಯ್‌ ದೇವಗನ್‌ ಕೆಲವು ವರ್ಷಗಳಿಂದ ವಿಮಲ್‌ನ ಬ್ರಂಡ್‌ ಪ್ರಚಾರ ರಾಯಭಾರಿಯಾಗಿದ್ದರು. ಕಳೆದ ವರ್ಷದಿಂದ ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್ ಕೂಡ ಅಜಯ್‌ ಜತೆ ವಿಮಲ್‌ ರಾಯಭಾರಿಯಾಗಿದ್ದರು. ಅಜಯ್‌ ಹಾಗೂ ಶಾರುಖ್‌ ಖಾನ್‌ ಒಟ್ಟಿಗೆ ಜಾಹಿರಿತಿನಲ್ಲಿ ಕಾಣಿಸಿಕೊಂಡಿದ್ದರು.

ಈ ಬೆನ್ನಲ್ಲೇ ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ ಕೂಡ ಇದೇ ಧಾಟಿಯಲ್ಲಿ ಟ್ವೀಟ್‌ ಮಾಡಿದ್ದಾರೆ.
ʼಒಂದು ಸಿನಿಮಾದಲ್ಲಿ ಸಿಗರೇಟ್ ಸೇದೋದು ತಪ್ಪು ಕುಡಿಯೋದು ತಪ್ಪು, ಜೂಜಿಗೆ ಜಾಹಿರಾತು ನೀಡೋದು ತಪ್ಪು….. ಆದರೆ ಇವುಗಳಿಂದ ಬರೋ ತೆರಿಗೆ ಹಣಕ್ಕಾಗಿ ಇದಕ್ಕೆಲ್ಲಾ ಅನುಮತಿ ಕೊಟ್ಟಿರೋ ಸರ್ಕಾರ ಸರಿ. ಶ್… ಯಾರೂ ಮಾತನಾಡಬಾರದು ! ನಾಯಕ ಸಂಸ್ಕ್ರತಿಯ ರಾಜಕೀಯ ಗುಂಗಿನ ಸಮಾಜದಲ್ಲಿ…… ಯಾವತ್ತೂ ಅಪ್ಪ ಸರಿ… ಮಕ್ಕಳು ತಪ್ಪು !ʼ ಎಂದು ಸರ್ಕಾರದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಒಟ್ಟಾರೆಯಾಗಿ ಇಡೀ ವಿವಾದ ಎಲ್ಲೆಲ್ಲೊ ಸುತ್ತಿ ಬಳಸಿ ಸರ್ಕಾರದ ಬುಡಕ್ಕೆ ಬಂದು ಕುಳಿತಿದೆ. ಒಂದೆಡೆ ಮದ್ಯಪಾನ ಹಾನಿಕರ ಎನ್ನುವ ಸರ್ಕಾರ, ತನ್ನದೇ ಸಂಸ್ಥೆಯ ಮೂಲಕ ಮಾರಾಟ ಮಾಡುತ್ತದೆ. ಗುಟ್ಕಾ ಹಾನಿಕಾರಕ ಎನ್ನುವ ಸರ್ಕಾರವೇ ಅದರ ಉತ್ಪಾದನೆ ಹಾಗೂ ಮಾರಾಟಕ್ಕೆ ಪರವಾನಗಿ ನೀಡುತ್ತದೆ. ಇದು ದ್ವಿಮುಖ ನೀತಿ ಅಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸುವ ಹಂತ ತಲುಪಿದೆ.

ಹೆಚ್ಚಿನ ಓದಿಗಾಗಿ: ಹೆಚ್ಚೆಚ್ಚು ಸ್ತ್ರೀಯರನ್ನು ಕೊಲ್ಲುತ್ತಿದೆ ಹಾರ್ಟ್‌ಫೇಲ್, ಈಗಲೇ ಎಚ್ಚೆತ್ತುಕೊಳ್ಳಿ

Exit mobile version