Site icon Vistara News

ವಿಸ್ತಾರ Explainer: ರಾಹುಲ್‌ ಗಾಂಧಿ ಅನರ್ಹತೆ: ಏನಿದು? ಮುಂದೇನಾಗಲಿದೆ?

Rahul Gandhi Disqualified

ಕಾಂಗ್ರೆಸ್‌ ಮುಖಂಡ, ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ನಂತರ ತಮ್ಮ ಲೋಕಸಭಾ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಮುಂದೆ ಯಾವ ಸನ್ನಿವೇಶಗಳು ಉಂಟಾಗಬಹುದು? ಒಂದು ವಿಶ್ಲೇಷಣೆ ಇಲ್ಲಿದೆ.

ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಸೂರತ್‌ನ ಸ್ಥಳೀಯ ನ್ಯಾಯಾಲಯವು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ ನಂತರ ಸಂಸತ್ತಿನ ಸದಸ್ಯತ್ವವನ್ನು ಗುರುವಾರ ರದ್ದುಗೊಳಿಸಲಾಗಿದೆ. ಲೋಕಸಭೆಯ ಕಾರ್ಯಾಲಯ ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ “ಸಂವಿಧಾನದ 102 (1) (ಇ) ವಿಧಿಯ ನಿಬಂಧನೆಗಳ ಪ್ರಕಾರ, ಹಾಗೂ ಭಾರತ ಪ್ರಜಾಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8ರ ಪ್ರಕಾರ, 2023ರ ಮಾರ್ಚ್ 23ರಿಂದ, ಅವರ ಅಪರಾಧ ಸಾಬೀತಾದ ದಿನಾಂಕದಿಂದ ಲೋಕಸಭೆಯ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅನರ್ಹರಾಗಿದ್ದಾರೆ” ಎಂದಿದೆ.

ಏಕೆ ಈ ಅಧಿಸೂಚನೆ?

ಇದು ಲೋಕಸಭೆ ಕಾರ್ಯಾಲಯದ ಪ್ರಕ್ರಿಯೆಯ ಒಂದು ಭಾಗ. ಹಾಲಿ ಸಂಸದರು ಅಥವಾ ಶಾಸಕರು ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದರೆ ಅದನ್ನು ಸ್ಪೀಕರ್ ಅಥವಾ ಸಭಾಪತಿಯವರ ಹಾಗೂ ಆಯಾ ರಾಜ್ಯದ ಚುನಾವಣಾ ಆಯೋಗ ಮುಖ್ಯಸ್ಥರ ಗಮನಕ್ಕೆ ತರುವುದನ್ನು ಖಚಿತಪಡಿಸಿಕೊಳ್ಳುವಂತೆ ಆಯಾ ಇಲಾಖೆಗಳಿಗೆ ಅಕ್ಟೋಬರ್ 13, 2015ರಂದು, ಭಾರತೀಯ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಿಸಿತ್ತು. ಇದು ಶಿಕ್ಷೆಯ ಆದೇಶ ಬಂದು ಏಳು ದಿನಗಳಲ್ಲಿ ಆಗಬೇಕಿದೆ.

ಪ್ರಜಾಪ್ರತಿನಿಧಿ ಕಾಯಿದೆ- 1951ರ ಸೆಕ್ಷನ್ 8(3) ಹೀಗೆ ಹೇಳುತ್ತದೆ: “ಯಾವುದೇ ಅಪರಾಧದಲ್ಲಿ ತಪ್ಪಿತಸ್ಥರೆಂದು ನಿರ್ಣಯವಾಗಿ ಎರಡು ವರ್ಷಕ್ಕಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ. ಹಾಗೂ ಆತನ ಬಿಡುಗಡೆಯ ನಂತರದ ಮುಂದಿನ ಆರು ವರ್ಷಗಳ ಅವಧಿಯವರೆಗೂ ಅನರ್ಹತೆ ಮುಂದುವರಿಯುತ್ತದೆ.

ಇದರ ಪ್ರಕಾರ, ಅನರ್ಹತೆಯು ಉಂಟಾಗುವುದು ನ್ಯಾಯಾಲಯ ನೀಡಿರುವ ಶಿಕ್ಷೆಯಿಂದಲೇ ಹೊರತು ಲೋಕಸಭೆಯ ಅಧಿಸೂಚನೆಯಿಂದಲ್ಲ. ಹೀಗಾಗಿ ಶುಕ್ರವಾರ ಲೋಕಸಭೆಯಲ್ಲಿದ್ದ ರಾಹುಲ್‌ಗೆ ಈ ಸೂಚನೆ ನೀಡಿರುವುದು ಸದನವನ್ನು ಮುಂದೂಡುವ ಮುನ್ನದ ಒಂದು ಔಪಚಾರಿಕ ಸೂಚನೆ.

ಅನರ್ಹಗೊಂಡ ಶಾಸಕರ ಪ್ರಕರಣದಲ್ಲಿ ಸಂಬಂಧಿಸಿದ ವಿಧಾನಸಭೆಯಿಂದ ನೋಟಿಸ್ ನೀಡಲಾಗುತ್ತದೆ. ಉದಾಹರಣೆಗೆ, ಸಮಾಜವಾದಿ ಪಕ್ಷದ ಶಾಸಕ ಅಜಂ ಖಾನ್ ಪ್ರಕರಣದಲ್ಲಿ, ಉತ್ತರ ಪ್ರದೇಶ ವಿಧಾನಸಭೆಯ ಸೆಕ್ರೆಟರಿಯೇಟ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅರಿಗೆ ಅನರ್ಹತೆಯ ಸೂಚನೆಯನ್ನು ನೀಡಿತ್ತು.

ಈ ನಿಟ್ಟಿನಲ್ಲಿ ಸ್ಪೀಕರ್ ಅಧಿಕಾರ ಅಂತಿಮವೇ?

ಲೋಕ್ ಪ್ರಹರಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2018) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿದೆ. ಅದರ ಪ್ರಕಾರ, ಮೇಲಿನ ನ್ಯಾಯಾಲಯವು ಅಪರಾಧ ನಿರ್ಣಯಕ್ಕೆ ತಡೆ ನೀಡಿದರೆ, ಈ ಅನರ್ಹತೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ. “ಮೇಲ್ಮನವಿಯ ವಿಚಾರಣೆ ಬಾಕಿ ಇರುವಾಗ, ಶಿಕ್ಷೆಯನ್ನು ತಡೆಹಿಡಿಯಲಾಗುತ್ತದೆ. ಹಾಗಾಗಿ ಶಿಕ್ಷೆಯ ಪರಿಣಾಮವಾಗಿ ಜಾರಿಗೆ ಬರುವ ಅನರ್ಹತೆಯು ಜಾರಿಯಲ್ಲಿರಲು ಅಥವಾ ಉಳಿಯಲು ಸಾಧ್ಯವಿಲ್ಲ” ಎಂದು ತೀರ್ಪು ಹೇಳಿದೆ.

ಅಂದರೆ, ಕೋರ್ಟ್‌ ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಿದರೆ, ಸದನ ಸಚಿವಾಲಯದ ಅಧಿಸೂಚನೆಯು ರದ್ದಾಗುತ್ತದೆ.

ಅನರ್ಹತೆಗೆ ಕಾರಣವಾದ ಕಾನೂನುಗಳ್ಯಾವುದು?

ಸಂವಿಧಾನದ ಆರ್ಟಿಕಲ್ 102(1)(ಇ) ಮತ್ತು ಜನಪ್ರತಿನಿಧಿ ಕಾಯಿದೆಯ (ಆರ್‌ಪಿ ಕಾಯಿದೆ) ಸೆಕ್ಷನ್ 8 ಸಂಸದೀಯ ಸದಸ್ಯರ ಅನರ್ಹತೆಗೆ ಕಾರಣಗಳನ್ನು ನೀಡುತ್ತದೆ. ಸಂವಿಧಾನದ 102ನೇ ವಿಧಿಯ ಉಪ ಕಲಂ (ಇ) ಹೇಳುವಂತೆ ಸಂಸದರೊಬ್ಬರು “ಸಂಸತ್ ಮಾಡಿದ ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹರಾಗಿದ್ದರೆ” ಅವರು ಸದನದ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಈ ಪ್ರಕರಣದಲ್ಲಿರುವುದು ಆರ್‌ಪಿ ಕಾಯಿದೆ.

RP ಕಾಯಿದೆಯ ಸೆಕ್ಷನ್ 8 ಕೆಲವು ಅಪರಾಧಗಳಲ್ಲಿ ಶಾಸಕರು ಶಿಕ್ಷೆ ಪಡೆದರೆ ಅವರ ಅನರ್ಹತೆಯ ಬಗ್ಗೆ ತಿಳಿಸುತ್ತದೆ. “ರಾಜಕೀಯದ ಅಪರಾಧೀಕರಣವನ್ನು ತಡೆಗಟ್ಟುವುದು ಮತ್ತು ʼಕಳಂಕಿತ’ ಶಾಸಕರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಗುರಿಯನ್ನುʼ ಈ ಕಾಯಿದೆ ಹೊಂದಿದೆ.

ರಾಹುಲ್ ಕಳೆದುಕೊಳ್ಳುವುದೇನು?

ಲೋಕಸಭಾ ಸಂಸದರಾಗಿ ರಾಹುಲ್ ಅವರು ಲ್ಯುಟೆನ್ಸ್‌ ದೆಹಲಿಯಲ್ಲಿ ಮನೆಯನ್ನು ಹೊಂದಿದ್ದರು. ಅವರ ಅನರ್ಹತೆಯ ನಂತರ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳ ಪ್ರಕಾರ, ಅವರ 12 ತುಘಲಕ್ ಲೇನ್ ಮನೆಯನ್ನು ಖಾಲಿ ಮಾಡಬೇಕು. ಇದಕ್ಕೆ ಅವರಿಗೆ ಒಂದು ತಿಂಗಳ ಕಾಲಾವಕಾಶವಿದೆ. 2004ರಲ್ಲಿ ಅಮೇಠಿಯಿಂದ ಸಂಸದರಾಗಿ ಆಯ್ಕೆಯಾದ ಬಳಿಕ ರಾಹುಲ್‌ಗೆ ಮನೆ ಮಂಜೂರು ಮಾಡಲಾಗಿತ್ತು.

ಮುಂದಿನ ಕ್ರಮಕ್ಕಾಗಿ ಲೋಕಸಭಾ ಸಚಿವಾಲಯವು ಅನರ್ಹತೆಯ ಅಧಿಸೂಚನೆಯ ಪ್ರತಿಯನ್ನು ಎಸ್ಟೇಟ್ ನಿರ್ದೇಶನಾಲಯದ ಸಂಪರ್ಕ ಅಧಿಕಾರಿಗೆ ಕಳುಹಿಸಿದೆ. ಬಂಗಲೆಯು ಲೋಕಸಭೆಯ ವಸತಿ ಆಸ್ತಿಗಳಿಗೆ ಸೇರಿರುವುದರಿಂದ, ಇದನ್ನು ತೆರವು ಮಾಡುವ ಕ್ರಮವನ್ನು ಲೋಕಸಭೆ ಸಚಿವಾಲಯ ನಿರ್ವಹಿಸಬೇಕಾಗುತ್ತದೆ. ಸಂಸದರು ಅನುಭವಿಸುವ ಎಲ್ಲಾ ಇತರ ಸವಲತ್ತುಗಳನ್ನು ಸಹ ರಾಹುಲ್ ಕಳೆದುಕೊಳ್ಳುತ್ತಾರೆ.

ಈಗ ವಯನಾಡ್‌ ಕ್ಷೇತ್ರದ ಗತಿಯೇನು?

ಚುನಾವಣಾ ಆಯೋಗವು ರಾಹುಲ್‌ ಪ್ರತಿನಿಧಿಸುತ್ತಿದ್ದ ವಯನಾಡ್‌ ಸಂಸತ್‌ ಸ್ಥಾನಕ್ಕೆ ಉಪಚುನಾವಣೆಯನ್ನು ಘೋಷಿಸಬಹುದು. ಅಜಮ್ ಖಾನ್ ಅವರ ಪ್ರಕರಣದಲ್ಲಿ, ಖಾನ್ ಅವರ 37-ರಾಮ್‌ಪುರ ಸ್ಥಾನಕ್ಕೆ (ದೇಶದಾದ್ಯಂತ ನಾಲ್ಕು ಇತರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಉಪಚುನಾವಣೆಗಳ ಜೊತೆಗೆ) ಉಪಚುನಾವಣೆಯನ್ನು ಕೆಲವೇ ದಿನಗಳಲ್ಲಿ ಘೋಷಿಸಲಾಗಿತ್ತು.

ಇದನ್ನೂ ಓದಿ: Rahul Gandhi Disqualified: ‘ನಾನು ಎಲ್ಲದಕ್ಕೂ ಸಿದ್ಧ’, ಅನರ್ಹತೆ ಬಳಿಕ ರಾಹುಲ್‌ ಗಾಂಧಿ ಹೇಳಿದ್ದೇನು?

ಆದರೂ ಲಕ್ಷದ್ವೀಪ ಸಂಸದ ಪಿಪಿ ಮೊಹಮ್ಮದ್ ಫೈಸಲ್ ಅವರ ಇತ್ತೀಚಿನ ಪ್ರಕರಣದಲ್ಲಿ, ಸಂಸದರಿಗೆ ಶಿಕ್ಷೆಯಾದ ನಂತರ ಜನವರಿ 18ರಂದು ಉಪಚುನಾವಣೆ ಘೋಷಿಸಲಾಗಿತ್ತು. ಜನವರಿ 30ರಂದು ಕೇರಳ ಹೈಕೋರ್ಟ್ ಫೈಸಲ್ ಅವರ ಶಿಕ್ಷೆಯನ್ನು ರದ್ದುಗೊಳಿಸಿದ ಬಳಿಕ ಚುನಾವಣೆ ಆಯೋಗವು ಈ ಘೋಷಣೆಯನ್ನು ಹಿಂಪಡೆಯಬೇಕಾಯಿತು.

ಇಲ್ಲಿ ರಾಹುಲ್ ಗಾಂಧಿಗೆ ಯಾವ ಆಯ್ಕೆಗಳಿವೆ?

ಒಂದು ವೇಳೆ ಉನ್ನತ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಿದರೆ ಅಥವಾ ಅವರ ಪರವಾಗಿ ಮೇಲ್ಮನವಿಯನ್ನು ನಿರ್ಧರಿಸಿದರೆ ಅವರ ಅನರ್ಹತೆಯನ್ನು ರದ್ದುಗೊಳಿಸಬಹುದು. ಮೊದಲು ಅವರು ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಮಾಡಬೇಕಾಗುತ್ತದೆ. ಅಲ್ಲಿ ಆಗದಿದ್ದರೆ ಮುಂದೆ ಗುಜರಾತ್ ಹೈಕೋರ್ಟಿನ ಮುಂದೆ ಹೋಗಬೇಕಾಗುತ್ತದೆ.

ನ್ಯಾಯಾಲಯದಿಂದ ಅವರು ಪರಿಹಾರ ಪಡೆಯದಿದ್ದರೆ ಎಂಟು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಅಂದರೆ ಅವರ ಶಿಕ್ಷೆಯ ಎರಡು ವರ್ಷಗಳು, ಜೊತೆಗೆ RP ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನಂತರದ ಆರು ವರ್ಷಗಳು. ಒಟ್ಟು ಎಂಟು.

ಈಗಾಗಲೇ ಮೇಲ್ಮನವಿ ಸಲ್ಲಿಸಲು ಸಮಯ ಕೋರಿ ಅವರ ವಕೀಲ ಕಿರಿತ್ ಪನ್ವಾಲಾ ಶುಕ್ರವಾರ ಸೂರತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: Rahul Gandhi Disqualified: ರಾಹುಲ್‌ ಗಾಂಧಿ ಅನರ್ಹತೆ ಬೆನ್ನಲ್ಲೇ ಜನಪ್ರತಿನಿಧಿ ಕಾಯ್ದೆ ಮಾನ್ಯತೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

Exit mobile version