Site icon Vistara News

ವಿಸ್ತಾರ TOP 10 NEWS | ಆರಗ ಮನೆ ಮುತ್ತಿಗೆಯಿಂದ ಕಂಚಿಗೆ ಮುತ್ತಿಟ್ಟ ಕನ್ನಡಿಗನವರೆಗಿನ ಪ್ರಮುಖ ಸುದ್ದಿಗಳಿವು

Vistara Top 10 news 30072022

ಬೆಂಗಳೂರು: ಸತತ ಹಿಂದು ಕಾರ್ಯಕರ್ತರ ಹತ್ಯೆ ಹಾಗೂ ಅದಕ್ಕೆ ಸರ್ಕಾರ ಕ್ರಮ ಕೈಗೊಳ್ಳದರ ಕುರಿತು ಆಕ್ರೋಶ ಹೊರಹಾಕುತ್ತ ರಾಜೀನಾಮೆ ನೀಡುತ್ತಿದ್ದ ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರು ಗೃಹಸಚಿವ ಆರಗ ಜ್ಞಾನೇಂದ್ರ ಅವರ ಮನೆಗೇ ಮುತ್ತಿಗೆ ಹಾಕಿದರು. ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕನ್ನಡಿಗ ಗುರುರಾಜ ಪೂಜಾರಿ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದಾರೆ. ಮಾಜಿ ಕಾಂಗ್ರೆಸಿಗ ಬಾಬುರಾವ್‌ ಚಿಂಚನಸೂರು ಅವರಿಗೆ ಬಿಜೆಪಿ ಮೇಲ್ಮನೆ ಟಿಕೆಟ್‌ ಘೋಷಣೆ ಮಾಡಲಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ ; 30 ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸರ್ಕಾರಿ ನಿವಾಸಕ್ಕೆ ಮುತ್ತಿಗೆ ಪ್ರಕರಣದಲ್ಲಿ 30 ಎಬಿವಿಪಿ ಕಾರ್ಯಕರ್ತರ ವಿರುದ್ಧ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹಿಂದು ಕಾರ್ಯಕರ್ತರ ಸರಣಿ ಹತ್ಯೆಗಳನ್ನು ಖಂಡಿಸಿ ಶನಿವಾರ ಬೆಳಗ್ಗೆ ಜೆಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯ ಮಹಲ್‌ನ ಗೃಹ ಸಚಿವರ ಸರ್ಕಾರಿ ನಿವಾಸದ ಬಳಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸಚಿವರ ಮನೆಯ ಗೇಟ್‌ ತೆಗೆದು ನುಗ್ಗಲು ಯತ್ನಿಸಿದಾಗ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

2. CWG- 2022 | ಕನ್ನಡಿಗ ಗುರುರಾಜ ಪೂಜಾರಿಗೆ ಕಂಚು, ಭಾರತಕ್ಕೆ ಎರಡನೇ ಪದಕ
ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ಲಭಿಸಿದೆ. ಶನಿವಾರ ನಡೆದ ವೇಟ್‌ಲಿಫ್ಟಿಂಗ್‌ ಸ್ಪರ್ಧೆಯ ೬೧ ಕೆ.ಜಿ ವಿಭಾಗದಲ್ಲಿ ಕರ್ನಾಟಕದ ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದಿದ್ದಾರೆ. ಅವರು ಕಳೆದ ಬಾರಿಯ ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ೫೬ ಕೆ.ಜಿ ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು. ಇದರೊಂದಿಗೆ ಸತತ ಎರಡು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದು ಸಾಧನೆ ಮಾಡಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

3. CET Result | ಟಾಪ್‌ 9ರಲ್ಲಿ ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ ಮಾತ್ರ; ಉಡುಪಿಯ ಅಣ್ಣ-ತಮ್ಮ ಚಮತ್ಕಾರ
ಒಟ್ಟಾರೆ ಜಿಲ್ಲಾವಾರು ಫಲಿತಾಂಶದಲ್ಲಿ (CET Result) ಬೆಂಗಳೂರು ಕಳಪೆ ಪ್ರದರ್ಶನ ನೀಡಿದ್ದರೂ ಟಾಪ್‌ 9 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಬೆಂಗಳೂರು ಕಾಲೇಜುಗಳ ವಿದ್ಯಾರ್ಥಿಗಳೇ ಇದ್ದಾರೆ. ಇದರ ನಡುವೆ ಉಡುಪಿ, ದಕ್ಷಿಣ ಕನ್ನಡ ವಿದ್ಯಾರ್ಥಿಗಳು ಇದ್ದು, ಬೇರೆ ಯಾವ ಜಿಲ್ಲೆಯೂ ಇಲ್ಲ. ಮುಖ್ಯವಾಗಿ ಬೆಂಗಳೂರಿನ ಚೈತನ್ಯ, ನಾರಾಯಣ, ಮಹೇಶ್‌ ಪಿಯು ಕಾಲೇಜ್‌, ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ನಾರಾಯಣ ಪಬ್ಲಿಕ್‌ ಸ್ಕೂಲ್‌, ಶ್ರೀ ಕುಮಾರ್‌ ಸಂಸ್ಥೆಗಳಿವೆ. ಉಡುಪಿಯ ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌, ಮಂಗಳೂರಿನ ಎಕ್ಸ್‌ಪರ್ಟ್‌ ಸಂಸ್ಥೆ ವಿದ್ಯಾರ್ಥಿಗಳು ಟಾಪ್‌ 9ರಲ್ಲಿ ಸ್ಥಾನ ಪಡೆದಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
CET Result | ಜಿಲ್ಲಾವಾರು ಸಿಇಟಿ ಫಲಿತಾಂಶ, ಯಾವುದು ಫಸ್ಟ್‌, ಯಾವುದು ಲಾಸ್ಟ್?
CET Result | ಬೆಂಗಳೂರಿನ ವಿದ್ಯಾರ್ಥಿಗಳ ಮೇಲುಗೈ; ಬಾಗಲಕೋಟೆ
ಜಿಲ್ಲೆ ಪ್ರಥಮ

4. ಸಿದ್ದರಾಮೋತ್ಸವದಿಂದ ಕಾಂಗ್ರೆಸ್‌ ವಿಭಜನೆಯತ್ತ ಸಾಗುತ್ತಿದೆಯೇ?: ದೊರಕುತ್ತಿವೆ ಮುನ್ಸೂಚನೆಗಳು
ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ಆಯೋಜನೆಯಾಗಿರುವ ಅಮೃತಮಹೋತ್ಸವ ಕಾರ್ಯಕ್ರಮದಿಂದಾಗಿ ರಾಜ್ಯ ಕಾಂಗ್ರೆಸ್‌ ವಿಭಜನೆ ಆಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಸಿದ್ದರಾಮಯ್ಯ ಆಪ್ತರು ಆಯೋಜನೆ ಮಾಡಿರುವ ಕಾರ್ಯಕ್ರಮ ಈಗಾಗಲೆ ಸಿದ್ದರಾಮೋತ್ಸವ ಎಂದೇ ಪ್ರಸಿದ್ಧವಾಗಿದ್ದು, ರಾಜ್ಯದ ವಿವಿಧೆಡೆ ಕಾಂಗ್ರೆಸ್‌ ಕಾರ್ಯಕರ್ತರು ಪರಸ್ಪರರ ವಿರುದ್ಧ ಸಂಘರ್ಷಕ್ಕಿಳಿದಿದ್ದಾರೆ. (ವಿಶ್ಲೇಷಣಾ ವರದಿಯ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

5. ಫಾಜಿಲ್‌ ಮಂಗಳಪೇಟೆ ಮರ್ಡರ್‌: ಕೊಲೆಯಲ್ಲಿ ಭಾಗಿಯಾದ ಐವರು ಪೊಲೀಸ್‌ ವಶದಲ್ಲಿ?
ಸುರತ್ಕಲ್‌ನಲ್ಲಿ ನಡೆದ ಮೊಹಮ್ಮದ್‌ ಫಾಜಿಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಶುಕ್ರವಾರ ಸಂಜೆ ಇವರನ್ನು ವಶಕ್ಕೆ ಪಡೆಯಲಾಗಿದ್ದು, ಇವರೇ ಕೊಲೆಯಲ್ಲಿ ಭಾಗಿಯಾದ ಪ್ರಮುಖ ಹಂತಕರು ಎಂಬ ಮಾತು ಕೇಳಿಬರುತ್ತಿದೆ. ಸುರತ್ಕಲ್‌ನ ಮಂಗಳಪೇಟೆ ನಿವಾಸಿಯಾಗಿರುವ ಫಾಜಿಲ್‌ನನ್ನು ಜುಲೈ ೨೭ರಂದು ಬಟ್ಟೆ ಅಂಗಡಿಯೊಂದರ ಮುಂದೆ ನಿಂತಿದ್ದಾಗ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಪ್ರಸಕ್ತ ಪೊಲೀಸರ ವಶದಲ್ಲಿರುವ ಇವರೆಲ್ಲರೂ ಸುರತ್ಕಲ್‌ ಸುತ್ತಮುತ್ತಲಿನ ಪರಿಸರದವರೇ ಆಗಿದ್ದಾರೆ. ಒಂದೊಮ್ಮೆ ಇವರೇ ಕೊಲೆಗಾರರು ಎಂದು ಖಚಿತವಾದಲ್ಲಿ ಶನಿವಾರ ರಾತ್ರಿಯೊಳಗೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

6. ಒಂದೇ ದಿನದಲ್ಲಿ ಉಸ್ತುವಾರಿ ಸಚಿವರಿಬ್ಬರ ಅದಲು-ಬದಲು; ಮತ್ತೆ ಅದಲು-ಬದಲು!
ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್‌ ಅವರನ್ನು ವಿಜಯನಗರ ಜಿಲ್ಲೆ ಹಾಗೂ ಮುಜರಾಯಿ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರನ್ನು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿ, ಅರ್ಧ ದಿನ ಕಳೆಯುವಷ್ಟರಲ್ಲೇ ಹಳೇ ಆದೇಶವನ್ನು ರದ್ದುಪಡಿಸಿ, ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ. ರಾಜ್ಯ ಸರ್ಕಾರವು ಇತ್ತೀಚೆಗೆ ಇಂತಹ ಅನೇಕ ಆತುರದ ನಿರ್ಧಾರವನ್ನು ಪ್ರಕಟಿಸುತ್ತಾ ಬಂದಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

7. ಮಾಜಿ ಕಾಂಗ್ರೆಸಿಗ ಬಾಬುರಾವ್‌ ಚಿಂಚನಸೂರ್‌ಗೆ ಬಿಜೆಪಿ ಮೇಲ್ಮನೆ ಟಿಕೆಟ್‌
ಮಾಜಿ ಸಚಿವ ಹಾಗೂ ಮಾಜಿ ಕಾಂಗ್ರೆಸಿಗ ಬಾಬುರಾವ್‌ ಚಿಂಚನಸೂರ್‌ ಅವರಿಗೆ ಬಿಜೆಪಿ ವಿಧಾನ ಪರಿಷತ್‌ ಟಿಕೆಟ್‌ ಘೋಷಣೆ ಮಾಡಿದೆ. ವಿಧಾನಸಭೆಯಿಂದ ಆಯ್ಕೆಯಾಗುವ ಈ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶೀ ಅರುಣ್‌ ಸಿಂಗ್‌ ಘೋಷಣೆ ಮಾಡಿದ್ದಾರೆ. ಈ ಸ್ಥಾನದ ಅವಧಿ ಈಗಾಗಲೆ ನಾಲ್ಕು ವರ್ಷ ಪೂರ್ಣಗೊಂಡಿದ್ದು, ಇನ್ನೆರಡು ವರ್ಷ ಇದೆ. 2024ರವರೆಗೆ ಇರುವ ಸ್ಥಾನವನ್ನು ವಿಧಾನ ಸಭೆಯ ಸದಸ್ಯರ ಮತದಿಂದ ಭರ್ತಿ ಮಾಡಲಾಗುತ್ತದೆ. ಸದ್ಯ ಬಿಜೆಪಿ ಬಹುಮತ ಹೊಂದಿರುವುದರಿಂದ ಅದೇ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ. ಹೀಗಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಅಭ್ಯರ್ಥಿಯನ್ನು ಹಾಕುವುದಿಲ್ಲ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

8. 30 ವರ್ಷದಿಂದ ಮುಖ್ಯಮಂತ್ರಿ ಕೈಯಲ್ಲೂ ಆಗಲಿಲ್ಲ; ನಿರ್ಮಾಣವಾಯಿತು ಜನತಾ ಸೇತುವೆ
ಪ್ರತಿ ಮಳೆಗಾಲ ಬಂತೆಂದರೆ ಸಾಕು ಈ ಗ್ರಾಮದ ಜನರು ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದೆ “ನಮಗೊಂದು ಸೇತುವೆ” ಎಂದು ಮನವಿ ಪತ್ರ, ಅರ್ಜಿಗಳನ್ನು ಹಿಡಿದು ನಿಂತುಬಿಟ್ಟಿರುತ್ತಿದ್ದರು. ಇದು ನಿರಂತರ ೩೦ ವರ್ಷಗಳು ನಡೆದರೂ ಮನವಿ ಮನವಿಯಾಗಿಯೇ ಉಳಿಯಿತು. ಬೇಸತ್ತು ಚುನಾವಣೆಗಳನ್ನು ಬಹಿಷ್ಕರಿಸಿದರು. ಆದರೆ, ಮನಕರಗಲಿಲ್ಲ, ಸೇತುವೆ ಏಳಲಿಲ್ಲ. ಕೊನೆಗೆ ನಿರ್ಮಾಣವಾಗಿದ್ದೇ ಜನತಾ ಸೇತುವೆ. (ವಿಸ್ತಾರ ವಿಶೇಷ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ)

9. Multi specialty hospital | ಸಿಎಂಗೆ ವಾರದ ಗಡುವು, ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವೆಂದ ಉತ್ತರ ಕನ್ನಡಿಗರು
ಉತ್ತರ ಕನ್ನಡ ಜಿಲ್ಲೆಯಲ್ಲಿ ಏಮ್ಸ್ ಮಾದರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ (Multi specialty hospital) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನಾನಿರತ ಉತ್ತರ ಕನ್ನಡ ಜಿಲ್ಲೆಯ ಹೋರಾಟಗಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒಂದು ವಾರದ ಗಡುವು ನೀಡುವ ಮೂಲಕ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ (ಜುಲೈ ೩೦) ಬೆಳಗ್ಗೆ 10 ಗಂಟೆಯಿಂದ ಉ.ಕ.ಜಿಲ್ಲೆಯ ೫೦೦ಕ್ಕೂ ಹೆಚ್ಚು ಮಂದಿ ಪ್ರತಿಭಟಿಸುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದರು. ಸಾಮಾಜಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಕಿಡಿಕಾರಿದ್ದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

10. Monkey Pox | ಬೆಂಗಳೂರಿಗೂ ಕಾಲಿಟ್ಟ ಮಂಕಿ ಪಾಕ್ಸ್‌?: ಆರೋಗ್ಯ ಇಲಾಖೆ ಹೈ ಅಲರ್ಟ್‌
ಈಗಾಗಲೆ ಕೇರಳ, ದೇಶದ ರಾಜಧಾನಿ ನವದೆಹಲಿ, ಹಿಮಾಚಲ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್‌ ರಾಜಧಾನಿ ಬೆಂಗಳೂರಿಗೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಮಂಕಿ ಪಾಕ್ಸ್ ಲಕ್ಷಣಗಳು ಇರುವ ವ್ಯಕ್ತಿಯನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ. ಆಫ್ರಿಕಾ ಮೂಲದ 55 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣ ಲಕ್ಷಣಗಳು ಪತ್ತೆಯಾಗಿದ್ದು, ಕೂಡಲೇ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಶುಶ್ರೂಶೆ ಹಾಗೂ ನಿಗಾ ವಗಹಿಸಲಾಗುತ್ತಿದೆ. ವ್ಯಕ್ತಿಯ ರಕ್ತದ ಮಾದರಿಯನ್ನು ಪಡೆದು ಪುಣೆಯ ರಾಷ್ಟ್ರೀಯ ವೈರಾಲಜಿ ಇನ್ಸ್‌ಟಿಟ್ಯೂಟ್‌ಗೆ ರವಾನೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್‌ ತಿಳಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version