Site icon Vistara News

ವಿಸ್ತಾರ Explainer: ಬಿಬಿಸಿಯ ಗುಜರಾತ್ ದಂಗೆ ಸಾಕ್ಷ್ಯ ಚಿತ್ರ ನಿಷೇಧಕ್ಕೆ ಕೇಂದ್ರ ಬಳಸಿದ ಅಧಿಕಾರ ಯಾವುದು? ಕಾನೂನು ಏನು ಹೇಳುತ್ತದೆ?

Gujarat Assembly passes resolution against BBC For Documentary On Narendra Modi

ಬಿಬಿಸಿ ಡಾಕ್ಯುಮೆಂಟರಿ

ದೇಶದ ಹಿತಾಸಕ್ತಿ ವಿರುದ್ಧ ಕಂಟೆಂಟ್ ಹೊಂದಿರುವ ಯುಟ್ಯೂಬ್(YouTube), ಟ್ವಿಟರ್ (Twitter) ಖಾತೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂಬಂಥ ಸುದ್ದಿಗಳನ್ನು ಆಗಾಗ ಕೇಳಿರುತ್ತೀರಿ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸುಲಭವಾಗಿ ದಮನ ಮಾಡಲು ಆಗುವುದಿಲ್ಲ. ಹಾಗಾದರೆ, ಯಾವ ಅಧಿಕಾರಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಆನ್‌ಲೈನ್ ಕಂಟೆಂಟ್‌ಗಳ ಮೇಲೆ ನಿಷೇಧ ಹೇರುತ್ತದೆ ಎಂಬಂಥ ಪ್ರಶ್ನೆ ಸಹಜ. ಇದಕ್ಕೆ ಉತ್ತರ- ಕೇಂದ್ರ ಸರ್ಕಾರಕ್ಕೆ ತುರ್ತು ಪರಿಸ್ಥಿತಿಯ ಅಧಿಕಾರಗಳಿವೆ. ಈ ಅಧಿಕಾರಗಳನ್ನು ಬಳಸಿಕೊಂಡೇ ಅದು ನಿಷೇಧ ಹೇರುತ್ತದೆ. ಈ ಸಾಲಿಗೆ ಹೊಸ ಸೇರ್ಪಡೆ, 2002ರ ಗುಜರಾತ್ ದಂಗೆಗೆ ಸಂಬಂಧಿಸಿದಂತೆ ಬಿಬಿಸಿ (BBC) ರೂಪಿಸಿರುವ ಡಾಕ್ಯುಮೆಂಟರಿ(BBC Documentary on Modi). ಈ ವಿಷಯ ಕುರಿತಾದ ವಿಸ್ತಾರ Explainer.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಈ ಡಾಕ್ಯುಮೆಂಟರಿಯಲ್ಲಿ ಋಣಾತ್ಮಕವಾಗಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು, ಕಳೆದ ಶುಕ್ರವಾರ ಯುಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ಈ ಡಾಕ್ಯುಮೆಂಟರಿ ಮೇಲೆ ನಿಷೇಧ ಹೇರಿದೆ. ಈ ಕಾರ್ಯಕ್ಕೆ ಅದು ತನ್ನ ಎಮರ್ಜೆನ್ಸಿ ಅಧಿಕಾರಗಳನ್ನು ಬಳಸಿಕೊಂಡಿದೆ.

ಬಿಬಿಸಿ ಡಾಕ್ಯುಮೆಂಟರಿ

2002ರಲ್ಲಿ ಗೋದ್ರಾ ಹತ್ಯಾಕಾಂಡದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದೆ. ಹಲವು ವರ್ಷಗಳರೆಗೆ ತನಿಖೆ ನಡೆದು, ವಿಶೇಷ ತನಿಖಾ ಸಂಸ್ಥೆ ತನಿಖೆ ನಡೆಸಿ, ವರದಿ ನೀಡಿದ ಬಳಿಕ ಕ್ಲೀನ್‌ ಚಿಟ್‌ ನೀಡಲಾಗಿದೆ. ಆದರೂ, ಗೋದ್ರಾ ಹತ್ಯಾಕಾಂಡವನ್ನು ಇಟ್ಟುಕೊಂಡು ಬ್ರಿಟನ್‌ನ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (BBC) India: The Modi Question ಎಂಬ ಡಾಕ್ಯುಮೆಂಟರಿ ನಿರ್ಮಿಸಿದೆ. ಹಾಗೆಯೇ, ಇದು ವಿವಾದಕ್ಕೆ ಕಾರಣವಾಗಿದೆ.

ಏನಿದೆ ಡಾಕ್ಯುಮೆಂಟರಿಯಲ್ಲಿ?

ಭಾರತದಲ್ಲಿ ಡಾಕ್ಯುಮೆಂಟರಿ ಪ್ರಸಾರ ಆಗಿಲ್ಲ. ಬಿಬಿಸಿ ವೆಬ್‌ಸೈಟ್‌ಗೆ ಹೋದರೂ ಭಾರತದಲ್ಲಿ ಎಪಿಸೋಡ್‌ ಪ್ಲೇ ಆಗುವುದಿಲ್ಲ. ಹಾಗೆಯೇ, ಯುಟ್ಯೂಬ್‌ನಲ್ಲಿ ಎಪಿಸೋಡ್‌ಅನ್ನು ಡಿಲೀಟ್‌ ಮಾಡಲಾಗಿದೆ. ಹಾಗಾಗಿ, ಎಪಿಸೋಡ್‌ನಲ್ಲಿ ಏನಿದೆ ಎಂಬುದು ನಿಖರವಾಗಿ ಗೊತ್ತಾಗುವುದಿಲ್ಲ. ಆದರೆ, ಬಿಬಿಸಿ ವೆಬ್‌ಸೈಟ್‌ ಪ್ರಕಾರ, 2002ರ ಗೋದ್ರಾ ಹತ್ಯಾಕಾಂಡಕ್ಕೆ ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಅವರೇ ಕಾರಣ ಎಂದು ಒಕ್ಕಣೆ (Description) ನೀಡಲಾಗಿದೆ. ಹಾಗಾಗಿ ಇದು ವಿವಾದಕ್ಕೆ ಕಾರಣವಾಗಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದಲ್ಲಿ ಹಿಂದುಗಳ ಹಾಗೂ ಮುಸ್ಲಿಮರ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಮೋದಿ ಪ್ರಧಾನಿಯಾದ ಬಳಿಕ ಮುಸ್ಲಿಮರನ್ನು ಭಿನ್ನವಾಗಿ ಕಾಣಲಾಗುತ್ತಿದೆ. ಈ ಡಾಕ್ಯುಮೆಂಟರಿಯು ಭಾರತದಲ್ಲಿ ನಡೆದ ಹಿಂದು-ಮುಸ್ಲಿಂ ತಾರತಮ್ಯ, ಸಂಘರ್ಷದ ತನಿಖೆಯಾಗಿದೆ. ನರೇಂದ್ರ ಮೋದಿ ಅವರು ರಾಜಕೀಯಕ್ಕೆ ಕಾಲಿಟ್ಟ ಮೊದಲ ಹೆಜ್ಜೆಯ ಕುರಿತು ಕೂಡ ಉಲ್ಲೇಖಿಸಲಾಗಿದೆ ಎಂದು ಬಿಬಿಸಿ ವೆಬ್‌ಸೈಟ್‌ ತಿಳಿಸಿದೆ.

ನರೇಂದ್ರ ಮೋದಿ ಅವರು ಹಿಂದು ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ್ದು, ಇವರ ಏಳಿಗೆ ಬಿಜೆಪಿಯಲ್ಲಾಗಿದೆ. ಆದರೆ, ಇವರು ಗುಜರಾತ್‌ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಲೇ 2002ರ ಹತ್ಯಾಕಾಂಡ ನಡೆಯಿತು. ಇದಕ್ಕೆ ಮೋದಿ ಅವರೇ ಕಾರಣ ಎಂಬುದು ಈಗಲೂ ವಿವಾದಕ್ಕೀಡು ಮಾಡಿದೆ” ಎಂದು ಡಾಕ್ಯುಮೆಂಟರಿಯಲ್ಲಿ ಏನಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಯಾವ ಅಧಿಕಾರ ಬಳಸಿಕೊಂಡಿದೆ ಸರ್ಕಾರ?

2021ರಲ್ಲಿ ಕೇಂದ್ರ ಸರ್ಕಾರವು ಇನ್ಫಾರ್ಮೇಶನ್ ಟೆಕ್ನಾಲಜಿ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಮೊದಲು ಈ ನಿಯಮಗಳನ್ನು ಇನ್ಫಾರ್ಮೇಶನ್ ಟೆಕ್ನಾಲಜಿ(ಅಂತರ್ ಮಾಧ್ಯಮ ಮಾರ್ಗದರ್ಶಿ ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ರೂಲ್ಸ್ ಎಂದು ಕರೆಯಲಾಗುತ್ತಿತ್ತು.

ಈ ಐಟಿ ರೂಲ್ಸ್‌ಗಳ ಪೈಕಿ ರೂಲ್ ನಂಬ 16 ಕೇಂದ್ರ ಸರ್ಕಾರ ವಿಶೇಷ ಅಧಿಕಾರವನ್ನು ಒದಗಿಸುತ್ತದೆ. ಕೇಂದ್ರ ಸರ್ಕಾರಕ್ಕೆ ತುರ್ತು ಎಂದು ಎನಿಸಿದರೆ, ಅಂಥ ಮಾಹಿತಿಯನ್ನು ನಿರ್ಬಂಧಿಸಬಹುದು. ಆ ಎಲ್ಲ ಅಧಿಕಾರವನ್ನು ಈ ನಿಯಮವು ಒದಗಿಸುತ್ತದೆ. ಒಂದು ವೇಳೆ, ಭಾರತದ ಸಾರ್ವಭೌಮತೆ, ಭದ್ರತೆ, ದೇಶಗಳೊಂದಿಗಿನ ಸ್ನೇಹ ಸಂಬಂಧಗಳ ಹಿತಾಸಕ್ತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಿದ್ದರೆ ಅಂಥ ಕಂಟೆಂಟ್ ಅನ್ನು ತಕ್ಷಣವೇ ತೆಗೆದು ಹಾಕಲು ಈ ನಿಯಮವು ಸರ್ಕಾರ ಅಧಿಕಾರ ನೀಡುತ್ತದೆ.

ಪಬ್ಲಿಷರ್ ಅಥವಾ ಮಧ್ಯವರ್ತಿ ಸಂಸ್ಥೆಗಳಿಗೆ ತಿಳಿಸಬೇಕಿಲ್ಲ

ಕೆಲವೊಮ್ಮೆ ಕಂಟೆಂಟ್‌ ರೂಪಿಸಿದ ಪಬ್ಲಿಷರ್ ಅಥವಾ ಅದಕ್ಕೆ ಅವುಗಳ ಪ್ರಸಾರಕ್ಕೆ ಅವಕಾಶ ಕಲ್ಪಿಸುವ ಸಂಸ್ಥೆಗಳ ವಿವರಣೆಯನ್ನೂ ಪಡೆಯದೇ ಅಂಥ ಕಂಟೆಂಟ್ ಅನ್ನು ನಿರ್ಬಂಧಿಸುವ ಅಧಿಕಾರವಿದೆ. ಇನ್ಫಾರ್ಮೇಷನ್ ಟೆಕ್ನಾಲಜಿಯ ಕಾಯಿದೆಯ 69ಎ ಸೆಕ್ಷನ್‌ನ (1) ಸಬ್ ಸೆಕ್ಷನ್ ಅನುಸಾರ ಕಂಟೆಂಟ್ ನಿರ್ಬಂಧಕ್ಕೆ ಯೋಗ್ಯವಾಗಿದ್ದರೆ, ಯಾವುದೇ ಮಾಹಿತಿ ನೀಡಿದೆ ಅದನ್ನು ನಿರ್ಬಂಧಿಸಬಹುದು. ಈ ನಿರ್ಬಂಧವನ್ನು ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಮಾಡಲಾಗುತ್ತದೆ.

ದೇಶದ ಭದ್ರತೆ ಹಿನ್ನೆಲೆಯಲ್ಲಿ….

ಅದೇ ರೀತಿ, ಯಾವುದೇ ಕಂಟೆಂಟ್ ದೇಶದ ಭದ್ರತೆಗೆ ಸವಾಲು ಹಾಕುವಂತಿದ್ದರೆ, ಐಟಿ ಕಾಯ್ದೆಯ ರೂಲ್ 16ರ ಸಬ್ ಸೆಕ್ಷನ್ ಅನ್ವಯ ನಿರ್ಬಂಧಿಸಬಹುದು. ಅಂದರೆ, ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಕ್ಷಣೆ, ಭದ್ರತೆ, ಇತರರೊಂದಿಗೆ ಸ್ನೇಹ ಸಂಬಂಧಗಳ ಹಿತಾಸಕ್ತಿಯಲ್ಲಿ ವಿಷಯವನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರವು ಆದೇಶಿಸಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಭಾರತದ ಜಿ 20 ನಾಯಕತ್ವಕ್ಕೆ ಕಳಂಕ ಹಚ್ಚಲು ಅಂತಾರಾಷ್ಟ್ರೀಯ ಸಂಚು?

ಮನವಿ ಸಲ್ಲಿಸಬೇಕು…

ಯಾವುದೇ ಮಾಹಿತಿ ಪ್ರಸರಣವನ್ನು ತಡೆಯುವುಕ್ಕಾಗಿ ನಿಷೇಧ ಮಾಡಿದ ಬಳಿಕ, ಅದನ್ನು ಮುಂದುವರಿಸಲು, ಆದೇಶ ಕೈಗೊಂಡ 48 ಗಂಟೆಯೊಳಗೆ ಸಂಬಂಧಿಸಿದ ಅಧಿಕೃತ ಅಧಿಕಾರಿಯು ಪರಿಶೀಲನಾ ಸಮಿತಿಯ ಮುಂದೆ ಹಾಜರಾಗಿ, ತನ್ನ ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಆದರೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ವಿನಂತಿಯನ್ನು ಯಾವ ಮಾನದಂಡಗಳ ಮೇಲೆ ಪರಿಶೀಲನೆ ನಡೆಸುತ್ತಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಇಂಟರ್ನೆಟ್ ಫ್ರೀಡಂ ಫೌಂಡೇಷನ್ ಈ ವಿಷಯದಲ್ಲಿ ತನ್ನದೇ ಆದ ಬೇಡಿಕೆಯನ್ನು ಇಟ್ಟಿದೆ. ಏನೆಂದರೆ, ಯಾವು ಕಂಟೆಂಟ್ ನಿರ್ಬಂಧಿಸಿದ ಬಳಿಕ ಅದನ್ನು ಯಾಕೆ ನಿರ್ಬಂಧಿಸಲಾಯಿತು ಎಂಬ ಮಾಹಿತಿಯನ್ನು ಪರಿಶೀಲನಾ ಸಭೆ ಸಾರ್ವಜನಿಕಗೊಳಿಸಬೇಕು.

BBC Documentary On Modi

ಬ್ಯಾನ್ ಮಧ್ಯೆಯೂ ಹಂಚಿಕೊಂಡರು

ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಟಿಎಂಸಿ ಸಂಸದರಾದ ಮಹುವಾ ಮೊಯಿತ್ರಾ ಹಾಗೂ ಡೆರೆಕ್‌ ಒಬ್ರಾಯನ್‌ ಸೇರಿ ಹಲವು ನಾಯಕರು ಬಿಬಿಸಿ ಡಾಕ್ಯುಮೆಂಟರಿಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿದ್ದಾರೆ. ಅದರಲ್ಲೂ, ಸಂಸದೆ ಮಹುವಾ ಮೊಯಿತ್ರಾ ಅವರಂತೂ ಡಾಕ್ಯುಮೆಂಟರಿಯ ಲಿಂಕ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಆದರೆ, ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Exit mobile version