ವಿಸ್ತಾರ Explainer: ಬಿಬಿಸಿಯ ಗುಜರಾತ್ ದಂಗೆ ಸಾಕ್ಷ್ಯ ಚಿತ್ರ ನಿಷೇಧಕ್ಕೆ ಕೇಂದ್ರ ಬಳಸಿದ ಅಧಿಕಾರ ಯಾವುದು? ಕಾನೂನು ಏನು ಹೇಳುತ್ತದೆ? Vistara News
Connect with us

EXPLAINER

ವಿಸ್ತಾರ Explainer: ಬಿಬಿಸಿಯ ಗುಜರಾತ್ ದಂಗೆ ಸಾಕ್ಷ್ಯ ಚಿತ್ರ ನಿಷೇಧಕ್ಕೆ ಕೇಂದ್ರ ಬಳಸಿದ ಅಧಿಕಾರ ಯಾವುದು? ಕಾನೂನು ಏನು ಹೇಳುತ್ತದೆ?

ಗುಜರಾತ್‌ ದಂಗೆಗೆ ಸಂಬಂಧಿಸಿದಂತೆ ಬಿಬಿಸಿ ತಯಾರಿಸಿದ ಸಾಕ್ಷ್ಯ ಚಿತ್ರ (BBC Documentary On Modi) ಆನ್‌ಲೈನ್‌ ಪ್ರಸರಣ ಮಾಡದಂತೆ ಕೇಂದ್ರ ಸರ್ಕಾರವು ನಿಷೇಧ ಹೇರಿದೆ. ಇದಕ್ಕೆ ಅದು ತುರ್ತು ಪರಿಸ್ಥಿತಿಯ ಅಧಿಕಾರಗಳನ್ನು ಬಳಸಿಕೊಂಡಿದೆ. ಏನಿದು ತುರ್ತು ಪರಿಸ್ಥಿತಿ ಅಧಿಕಾರ, ಐಟಿ ಕಾನೂನು ಏನು ಹೇಳುತ್ತದೆ? ಈ ಕುರಿತ ವಿಸ್ತಾರ Expaliner.

VISTARANEWS.COM


on

Gujarat Assembly passes resolution against BBC For Documentary On Narendra Modi
Koo

ದೇಶದ ಹಿತಾಸಕ್ತಿ ವಿರುದ್ಧ ಕಂಟೆಂಟ್ ಹೊಂದಿರುವ ಯುಟ್ಯೂಬ್(YouTube), ಟ್ವಿಟರ್ (Twitter) ಖಾತೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂಬಂಥ ಸುದ್ದಿಗಳನ್ನು ಆಗಾಗ ಕೇಳಿರುತ್ತೀರಿ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸುಲಭವಾಗಿ ದಮನ ಮಾಡಲು ಆಗುವುದಿಲ್ಲ. ಹಾಗಾದರೆ, ಯಾವ ಅಧಿಕಾರಗಳನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಆನ್‌ಲೈನ್ ಕಂಟೆಂಟ್‌ಗಳ ಮೇಲೆ ನಿಷೇಧ ಹೇರುತ್ತದೆ ಎಂಬಂಥ ಪ್ರಶ್ನೆ ಸಹಜ. ಇದಕ್ಕೆ ಉತ್ತರ- ಕೇಂದ್ರ ಸರ್ಕಾರಕ್ಕೆ ತುರ್ತು ಪರಿಸ್ಥಿತಿಯ ಅಧಿಕಾರಗಳಿವೆ. ಈ ಅಧಿಕಾರಗಳನ್ನು ಬಳಸಿಕೊಂಡೇ ಅದು ನಿಷೇಧ ಹೇರುತ್ತದೆ. ಈ ಸಾಲಿಗೆ ಹೊಸ ಸೇರ್ಪಡೆ, 2002ರ ಗುಜರಾತ್ ದಂಗೆಗೆ ಸಂಬಂಧಿಸಿದಂತೆ ಬಿಬಿಸಿ (BBC) ರೂಪಿಸಿರುವ ಡಾಕ್ಯುಮೆಂಟರಿ(BBC Documentary on Modi). ಈ ವಿಷಯ ಕುರಿತಾದ ವಿಸ್ತಾರ Explainer.

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಈ ಡಾಕ್ಯುಮೆಂಟರಿಯಲ್ಲಿ ಋಣಾತ್ಮಕವಾಗಿ ಬಿಂಬಿಸಲಾಗಿದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು, ಕಳೆದ ಶುಕ್ರವಾರ ಯುಟ್ಯೂಬ್ ಮತ್ತು ಟ್ವಿಟರ್‌ನಲ್ಲಿ ಈ ಡಾಕ್ಯುಮೆಂಟರಿ ಮೇಲೆ ನಿಷೇಧ ಹೇರಿದೆ. ಈ ಕಾರ್ಯಕ್ಕೆ ಅದು ತನ್ನ ಎಮರ್ಜೆನ್ಸಿ ಅಧಿಕಾರಗಳನ್ನು ಬಳಸಿಕೊಂಡಿದೆ.

ಬಿಬಿಸಿ ಡಾಕ್ಯುಮೆಂಟರಿ

2002ರಲ್ಲಿ ಗೋದ್ರಾ ಹತ್ಯಾಕಾಂಡದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದೆ. ಹಲವು ವರ್ಷಗಳರೆಗೆ ತನಿಖೆ ನಡೆದು, ವಿಶೇಷ ತನಿಖಾ ಸಂಸ್ಥೆ ತನಿಖೆ ನಡೆಸಿ, ವರದಿ ನೀಡಿದ ಬಳಿಕ ಕ್ಲೀನ್‌ ಚಿಟ್‌ ನೀಡಲಾಗಿದೆ. ಆದರೂ, ಗೋದ್ರಾ ಹತ್ಯಾಕಾಂಡವನ್ನು ಇಟ್ಟುಕೊಂಡು ಬ್ರಿಟನ್‌ನ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (BBC) India: The Modi Question ಎಂಬ ಡಾಕ್ಯುಮೆಂಟರಿ ನಿರ್ಮಿಸಿದೆ. ಹಾಗೆಯೇ, ಇದು ವಿವಾದಕ್ಕೆ ಕಾರಣವಾಗಿದೆ.

ಏನಿದೆ ಡಾಕ್ಯುಮೆಂಟರಿಯಲ್ಲಿ?

ಭಾರತದಲ್ಲಿ ಡಾಕ್ಯುಮೆಂಟರಿ ಪ್ರಸಾರ ಆಗಿಲ್ಲ. ಬಿಬಿಸಿ ವೆಬ್‌ಸೈಟ್‌ಗೆ ಹೋದರೂ ಭಾರತದಲ್ಲಿ ಎಪಿಸೋಡ್‌ ಪ್ಲೇ ಆಗುವುದಿಲ್ಲ. ಹಾಗೆಯೇ, ಯುಟ್ಯೂಬ್‌ನಲ್ಲಿ ಎಪಿಸೋಡ್‌ಅನ್ನು ಡಿಲೀಟ್‌ ಮಾಡಲಾಗಿದೆ. ಹಾಗಾಗಿ, ಎಪಿಸೋಡ್‌ನಲ್ಲಿ ಏನಿದೆ ಎಂಬುದು ನಿಖರವಾಗಿ ಗೊತ್ತಾಗುವುದಿಲ್ಲ. ಆದರೆ, ಬಿಬಿಸಿ ವೆಬ್‌ಸೈಟ್‌ ಪ್ರಕಾರ, 2002ರ ಗೋದ್ರಾ ಹತ್ಯಾಕಾಂಡಕ್ಕೆ ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಅವರೇ ಕಾರಣ ಎಂದು ಒಕ್ಕಣೆ (Description) ನೀಡಲಾಗಿದೆ. ಹಾಗಾಗಿ ಇದು ವಿವಾದಕ್ಕೆ ಕಾರಣವಾಗಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದಲ್ಲಿ ಹಿಂದುಗಳ ಹಾಗೂ ಮುಸ್ಲಿಮರ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಮೋದಿ ಪ್ರಧಾನಿಯಾದ ಬಳಿಕ ಮುಸ್ಲಿಮರನ್ನು ಭಿನ್ನವಾಗಿ ಕಾಣಲಾಗುತ್ತಿದೆ. ಈ ಡಾಕ್ಯುಮೆಂಟರಿಯು ಭಾರತದಲ್ಲಿ ನಡೆದ ಹಿಂದು-ಮುಸ್ಲಿಂ ತಾರತಮ್ಯ, ಸಂಘರ್ಷದ ತನಿಖೆಯಾಗಿದೆ. ನರೇಂದ್ರ ಮೋದಿ ಅವರು ರಾಜಕೀಯಕ್ಕೆ ಕಾಲಿಟ್ಟ ಮೊದಲ ಹೆಜ್ಜೆಯ ಕುರಿತು ಕೂಡ ಉಲ್ಲೇಖಿಸಲಾಗಿದೆ ಎಂದು ಬಿಬಿಸಿ ವೆಬ್‌ಸೈಟ್‌ ತಿಳಿಸಿದೆ.

ನರೇಂದ್ರ ಮೋದಿ ಅವರು ಹಿಂದು ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದ್ದು, ಇವರ ಏಳಿಗೆ ಬಿಜೆಪಿಯಲ್ಲಾಗಿದೆ. ಆದರೆ, ಇವರು ಗುಜರಾತ್‌ ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಲೇ 2002ರ ಹತ್ಯಾಕಾಂಡ ನಡೆಯಿತು. ಇದಕ್ಕೆ ಮೋದಿ ಅವರೇ ಕಾರಣ ಎಂಬುದು ಈಗಲೂ ವಿವಾದಕ್ಕೀಡು ಮಾಡಿದೆ” ಎಂದು ಡಾಕ್ಯುಮೆಂಟರಿಯಲ್ಲಿ ಏನಿದೆ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

BBC Documentary On Modi

ಯಾವ ಅಧಿಕಾರ ಬಳಸಿಕೊಂಡಿದೆ ಸರ್ಕಾರ?

2021ರಲ್ಲಿ ಕೇಂದ್ರ ಸರ್ಕಾರವು ಇನ್ಫಾರ್ಮೇಶನ್ ಟೆಕ್ನಾಲಜಿ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಮೊದಲು ಈ ನಿಯಮಗಳನ್ನು ಇನ್ಫಾರ್ಮೇಶನ್ ಟೆಕ್ನಾಲಜಿ(ಅಂತರ್ ಮಾಧ್ಯಮ ಮಾರ್ಗದರ್ಶಿ ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ರೂಲ್ಸ್ ಎಂದು ಕರೆಯಲಾಗುತ್ತಿತ್ತು.

ಈ ಐಟಿ ರೂಲ್ಸ್‌ಗಳ ಪೈಕಿ ರೂಲ್ ನಂಬ 16 ಕೇಂದ್ರ ಸರ್ಕಾರ ವಿಶೇಷ ಅಧಿಕಾರವನ್ನು ಒದಗಿಸುತ್ತದೆ. ಕೇಂದ್ರ ಸರ್ಕಾರಕ್ಕೆ ತುರ್ತು ಎಂದು ಎನಿಸಿದರೆ, ಅಂಥ ಮಾಹಿತಿಯನ್ನು ನಿರ್ಬಂಧಿಸಬಹುದು. ಆ ಎಲ್ಲ ಅಧಿಕಾರವನ್ನು ಈ ನಿಯಮವು ಒದಗಿಸುತ್ತದೆ. ಒಂದು ವೇಳೆ, ಭಾರತದ ಸಾರ್ವಭೌಮತೆ, ಭದ್ರತೆ, ದೇಶಗಳೊಂದಿಗಿನ ಸ್ನೇಹ ಸಂಬಂಧಗಳ ಹಿತಾಸಕ್ತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಿದ್ದರೆ ಅಂಥ ಕಂಟೆಂಟ್ ಅನ್ನು ತಕ್ಷಣವೇ ತೆಗೆದು ಹಾಕಲು ಈ ನಿಯಮವು ಸರ್ಕಾರ ಅಧಿಕಾರ ನೀಡುತ್ತದೆ.

ಪಬ್ಲಿಷರ್ ಅಥವಾ ಮಧ್ಯವರ್ತಿ ಸಂಸ್ಥೆಗಳಿಗೆ ತಿಳಿಸಬೇಕಿಲ್ಲ

ಕೆಲವೊಮ್ಮೆ ಕಂಟೆಂಟ್‌ ರೂಪಿಸಿದ ಪಬ್ಲಿಷರ್ ಅಥವಾ ಅದಕ್ಕೆ ಅವುಗಳ ಪ್ರಸಾರಕ್ಕೆ ಅವಕಾಶ ಕಲ್ಪಿಸುವ ಸಂಸ್ಥೆಗಳ ವಿವರಣೆಯನ್ನೂ ಪಡೆಯದೇ ಅಂಥ ಕಂಟೆಂಟ್ ಅನ್ನು ನಿರ್ಬಂಧಿಸುವ ಅಧಿಕಾರವಿದೆ. ಇನ್ಫಾರ್ಮೇಷನ್ ಟೆಕ್ನಾಲಜಿಯ ಕಾಯಿದೆಯ 69ಎ ಸೆಕ್ಷನ್‌ನ (1) ಸಬ್ ಸೆಕ್ಷನ್ ಅನುಸಾರ ಕಂಟೆಂಟ್ ನಿರ್ಬಂಧಕ್ಕೆ ಯೋಗ್ಯವಾಗಿದ್ದರೆ, ಯಾವುದೇ ಮಾಹಿತಿ ನೀಡಿದೆ ಅದನ್ನು ನಿರ್ಬಂಧಿಸಬಹುದು. ಈ ನಿರ್ಬಂಧವನ್ನು ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಮಾಡಲಾಗುತ್ತದೆ.

ದೇಶದ ಭದ್ರತೆ ಹಿನ್ನೆಲೆಯಲ್ಲಿ….

ಅದೇ ರೀತಿ, ಯಾವುದೇ ಕಂಟೆಂಟ್ ದೇಶದ ಭದ್ರತೆಗೆ ಸವಾಲು ಹಾಕುವಂತಿದ್ದರೆ, ಐಟಿ ಕಾಯ್ದೆಯ ರೂಲ್ 16ರ ಸಬ್ ಸೆಕ್ಷನ್ ಅನ್ವಯ ನಿರ್ಬಂಧಿಸಬಹುದು. ಅಂದರೆ, ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಕ್ಷಣೆ, ಭದ್ರತೆ, ಇತರರೊಂದಿಗೆ ಸ್ನೇಹ ಸಂಬಂಧಗಳ ಹಿತಾಸಕ್ತಿಯಲ್ಲಿ ವಿಷಯವನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರವು ಆದೇಶಿಸಬಹುದು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಭಾರತದ ಜಿ 20 ನಾಯಕತ್ವಕ್ಕೆ ಕಳಂಕ ಹಚ್ಚಲು ಅಂತಾರಾಷ್ಟ್ರೀಯ ಸಂಚು?

ಮನವಿ ಸಲ್ಲಿಸಬೇಕು…

ಯಾವುದೇ ಮಾಹಿತಿ ಪ್ರಸರಣವನ್ನು ತಡೆಯುವುಕ್ಕಾಗಿ ನಿಷೇಧ ಮಾಡಿದ ಬಳಿಕ, ಅದನ್ನು ಮುಂದುವರಿಸಲು, ಆದೇಶ ಕೈಗೊಂಡ 48 ಗಂಟೆಯೊಳಗೆ ಸಂಬಂಧಿಸಿದ ಅಧಿಕೃತ ಅಧಿಕಾರಿಯು ಪರಿಶೀಲನಾ ಸಮಿತಿಯ ಮುಂದೆ ಹಾಜರಾಗಿ, ತನ್ನ ಮನವಿಯನ್ನು ಸಲ್ಲಿಸಬೇಕಾಗುತ್ತದೆ. ಆದರೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ವಿನಂತಿಯನ್ನು ಯಾವ ಮಾನದಂಡಗಳ ಮೇಲೆ ಪರಿಶೀಲನೆ ನಡೆಸುತ್ತಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಇಂಟರ್ನೆಟ್ ಫ್ರೀಡಂ ಫೌಂಡೇಷನ್ ಈ ವಿಷಯದಲ್ಲಿ ತನ್ನದೇ ಆದ ಬೇಡಿಕೆಯನ್ನು ಇಟ್ಟಿದೆ. ಏನೆಂದರೆ, ಯಾವು ಕಂಟೆಂಟ್ ನಿರ್ಬಂಧಿಸಿದ ಬಳಿಕ ಅದನ್ನು ಯಾಕೆ ನಿರ್ಬಂಧಿಸಲಾಯಿತು ಎಂಬ ಮಾಹಿತಿಯನ್ನು ಪರಿಶೀಲನಾ ಸಭೆ ಸಾರ್ವಜನಿಕಗೊಳಿಸಬೇಕು.

BBC Documentary On Modi
BBC Documentary On Modi

ಬ್ಯಾನ್ ಮಧ್ಯೆಯೂ ಹಂಚಿಕೊಂಡರು

ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಟಿಎಂಸಿ ಸಂಸದರಾದ ಮಹುವಾ ಮೊಯಿತ್ರಾ ಹಾಗೂ ಡೆರೆಕ್‌ ಒಬ್ರಾಯನ್‌ ಸೇರಿ ಹಲವು ನಾಯಕರು ಬಿಬಿಸಿ ಡಾಕ್ಯುಮೆಂಟರಿಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿರುವುದನ್ನು ವಿರೋಧಿಸಿದ್ದಾರೆ. ಅದರಲ್ಲೂ, ಸಂಸದೆ ಮಹುವಾ ಮೊಯಿತ್ರಾ ಅವರಂತೂ ಡಾಕ್ಯುಮೆಂಟರಿಯ ಲಿಂಕ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಆದರೆ, ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

EXPLAINER

ವಿಸ್ತಾರ Explainer: ಯಾರು ಈ ಖಲಿಸ್ತಾನಿ, ಪ್ರತ್ಯೇಕತಾವಾದಿ ನಾಯಕ ಅಮೃತ್​ಪಾಲ್​ ಸಿಂಗ್‌?

ಕ್ಲೀನ್‌ ಶೇವ್‌ ಮಾಡಿಕೊಂಡಿರುತ್ತಿದ್ದ ಅಮೃತ್‌ಪಾಲ್‌ ಉದ್ದ ಗಡ್ಡ ಬಿಟ್ಟು ಖಲಿಸ್ತಾನ್‌ ಚಳವಳಿಯ ಮುಖವಾಣಿಯಾದ ಬೆಳವಣಿಗೆ ಬಲು ಶೀಘ್ರವಾಗಿ ನಡೆದಿದೆ. ಆತ ಭಿಂದ್ರಾನ್‌ವಾಲೆಯಂತೆಯೇ ದಿರಿಸು ಧರಿಸಿಕೊಳ್ಳುತ್ತಾನೆ. ಕೆಲವರು ಅವನನ್ನು ಈಗಾಗಲೇ ʼಎರಡನೇ ಭಿಂದ್ರಾನ್‌ವಾಲೆʼ ಎಂದು ಕರೆಯಲಾರಂಭಿಸಿದ್ದಾರೆ.

VISTARANEWS.COM


on

Edited by

Amritpal
Koo

ಖಲಿಸ್ತಾನಿಗಳ ನಾಯಕ, ಬೋಧಕ, ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತ್​ ಪಾಲ್​ ಸಿಂಗ್​ನನ್ನು ಪಂಜಾಬ್​ ಪೊಲೀಸರು ಬೆನ್ನಟ್ಟಿದ್ದಾರೆ. ಈತನನ್ನು ನಾಕೋದರ್​​ನ ಬಳಿ ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿತ್ತಾದರೂ, ಆ ಬಳಿಕ ಆತ ಪರಾರಿಯಾದ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಸಖತ್​ ಸದ್ದು ಮಾಡುತ್ತಿದ್ದ, ರಕ್ಷಣಾ ವ್ಯವಸ್ಥೆಗೆ ಬೆದರಿಕೆಯೊಡ್ಡಿದ್ದ ಈ ಅಮೃತ್​ ಪಾಲ್​ ಸಿಂಗ್ ಯಾರು? ಅವನ ಹಿನ್ನೆಲೆ ಏನು..ಇಲ್ಲಿದೆ ವಿಸ್ತೃತ ಮಾಹಿತಿ.

ಫೆಬ್ರವರಿಯಲ್ಲಿ ಅಮೃತಸರದ ಬಳಿಯ ಅಜ್ನಾಲಾದಲ್ಲಿ ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿ ನಡೆದಿತ್ತು. ಪೊಲೀಸ್‌ ಠಾಣೆಗಳ ಮೇಲೆ ಗುಂಪು ದಾಳಿ ಭಾರತದಲ್ಲಿ ಹೊಸತಲ್ಲ. ಆದರೆ ಈ ಸಲ ಖಲಿಸ್ತಾನ್‌ ಪ್ರತಿಪಾದಕ ಅಮೃತ್‌ಪಾಲ್‌ ಸಿಂಗ್‌ ನೇತೃತ್ವದಲ್ಲಿ ದಾಳಿ ಈಗ ಹೊಸ ಆತಂಕಕ್ಕೆ ಕಾರಣವಾಗಿತ್ತು. ಅಲ್ಲಿಂದಲೂ ಆತನ ವಿರುದ್ಧದ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿತ್ತು.

ಈ ದಾಳಿಗೇನು ಕಾರಣ?
ಅಮೃತ್‌ಪಾಲ್‌ ಸಿಂಗ್‌ನ ಸಹಚರ ಲವ್‌ಪ್ರೀತ್‌ ಸಿಂಗ್‌ ತೂಫಾನ್‌ ಎಂಬಾತನನ್ನು ಪೊಲೀಸರು ಬಂಧಿಸಿ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಅಮೃತ್‌ಪಾಲ್‌ ಸಿಂಗ್‌ನನ್ನು ಕಟುವಾಗಿ ಟೀಕಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಅಪಹರಿಸಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ ಎಂಬುದು ಲವ್‌ಪ್ರೀತ್‌ನ ಮೇಲಿದ್ದ ದೂರು. ಇದರಿಂದ ಕೆರಳಿದ ಅಮೃತ್‌ಪಾಲ್‌ ಮತ್ತು ಆತನ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ದೊಣ್ಣೆ ಕತ್ತಿಗಳನ್ನು ಹಿಡಿದುಕೊಂಡು ಅಜ್ನಾಲಾ ಪೊಲೀಸ್‌ ಠಾಣೆಗೆ ನುಗ್ಗಿದರು. ಇದರಿಂದ ಬೆದರಿದ ಪೊಲೀಸರು ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡಿದ್ದೂ ಅಲ್ಲದೇ, ಆತ ನಿರ್ದೋಷಿ ಎಂದು ಸಾಬೀತುಪಡಿಸುವ ಸಾಕ್ಷ್ಯಗಳು ದೊರೆತಿವೆ ಎಂದು ತಾವೇ ಘೋಷಿಸಿಯೂ ಬಿಟ್ಟರು. ಇದೀಗ ಅಮೃತ್‌ಪಾಲ್‌ ವಿಜಯದ ನಗು ನಗುತ್ತಿದ್ದಾನೆ. ಇದರಿಂದ ಅಭಿಮಾನಿಗಳ ಕಣ್ಣಿನಲ್ಲಿ ಆತನ ತೂಕ ಇನ್ನಷ್ಟು ಹೆಚ್ಚಿದೆ. ಸಮಾಜಘಾತುಕ ಶಕ್ತಿಯ ಮುಂದೆ ಪೊಲೀಸರು ಮಂಡಿಯೂರಿದ ಈ ಘಟನೆ ದೇಶದ ಚಿತ್ತ ಇತ್ತ ಹರಿಯುವಂತೆ ಮಾಡಿದೆ.

ಯಾರಿವನು ಅಮೃತ್‌ಪಾಲ್?‌
ಅಮೃತಸರದ ಜಲ್ಲುಪುರ್‌ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್‌, 12ನೇ ತರಗತಿವರೆಗೆ ಓದಿದ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಆರು ತಿಂಗಳ ಹಿಂದೆ- ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್‌ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್‌ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ.

ಅಮೃತ್‌ಪಾಲ್‌ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್‌ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ.

ಕಳೆದ ಸೆಪ್ಟೆಂಬರ್‌ 25ರಂದು ಆನಂದ್‌ಪುರ ಸಾಹಿಬ್‌ನಲ್ಲಿ ನಡೆದ ಸಿಖ್‌ ಧರ್ಮದ ಸಾಂಪ್ರದಾಯಿಕ ಬ್ಯಾಪ್ಟಿಸಂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಮೃತ್‌ಪಾಲ್‌, ʼಅಮೃತಧಾರಿ ಸಿಖ್‌ʼ ಎನಿಸಿದ. ಈ ಕಾರ್ಯಕ್ರಮಕ್ಕೆ ಹರಿದುಬಂದ ಜನಸಾಗರ ನೋಡಿ ಪಂಜಾಬ್‌ ಅವಾಕ್ಕಾಯಿತು. ಇದಾದ ನಾಲ್ಕು ದಿನಗಳ ನಂತರ ಸೆ.29ರಂದು ಮಹತ್ವದ ಹೊಣೆ ಹೊರುವವರು ಈಡೇರಿಸುವ ಪೇಟ ಧರಿಸುವ ʼದಸ್ತರ್‌ ಬಂದಿʼ ಕಾರ್ಯಕ್ರಮ ನಡೆಯಿತು. ಇದಕ್ಕೂ ದಾಖಲೆ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಇದು ನಡೆದುದು ರೋಡೆ ಗ್ರಾಮದಲ್ಲಿ. ಅದು ಖಲಿಸ್ತಾನ್‌ ಚಳವಳಿಯ ರಾಕ್ಷಸ ಭಯೋತ್ಪಾದಕನಾಗಿದ್ದ ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆಯ ಜನ್ಮಸ್ಥಳ.

ಕ್ಲೀನ್‌ ಶೇವ್‌ ಮಾಡಿಕೊಂಡಿರುತ್ತಿದ್ದ ಅಮೃತ್‌ಪಾಲ್‌ ಉದ್ದ ಗಡ್ಡ ಬಿಟ್ಟು ಖಲಿಸ್ತಾನ್‌ ಚಳವಳಿಯ ಮುಖವಾಣಿಯಾದ ಬೆಳವಣಿಗೆ ಬಲು ಶೀಘ್ರವಾಗಿ ನಡೆದಿದೆ. ಆತ ಭಿಂದ್ರಾನ್‌ವಾಲೆಯಂತೆಯೇ ದಿರಿಸು ಧರಿಸಿಕೊಳ್ಳುತ್ತಾನೆ. ಕೆಲವರು ಅವನನ್ನು ಈಗಾಗಲೇ ʼಎರಡನೇ ಭಿಂದ್ರಾನ್‌ವಾಲೆʼ ಎಂದು ಕರೆಯಲಾರಂಭಿಸಿದ್ದಾರೆ. ದುಬೈಯಿಂದ ಮರಳುತ್ತಿದ್ದಾಗ ತನ್ನನ್ನು ಸಣ್ಣದೊಂದು ತನಿಖೆಗೊಳಪಡಿಸಿದ್ದ ತನಿಖಾ ಸಂಸ್ಥೆಗಳ ಕ್ರಮದ ಬಗ್ಗೆ ಅವನು ಹಿಂದೆಯೇ ಕಿಡಿಕಾರಿದ್ದ. ಸಿಖ್‌ ಯುವಕನೊಬ್ಬ ತನ್ನ ತಾಯ್ನಾಡಿಗೆ ಹಿಂದಿರುಗುತ್ತಿರುವುದನ್ನು ಪ್ರಶ್ನೆ ಮಾಡುವದುಉ ಗುಲಾಮಿ ಮನಸ್ಥಿತಿ ಎಂದು ಜರೆದಿದ್ದ.

bhindranvale

ಖಲಿಸ್ತಾನ ಪರ ನಿಲುವು
ಹಲವು ಸಮಯದಿಂದ ಆತ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದಾನೆ. ಹಿಂದು ರಾಷ್ಟ್ರ ವಾದ ಸರಿ ಎಂದಾದರೆ ಖಲಿಸ್ತಾನ್‌ ಯಾಕೆ ತಪ್ಪು ಎಂದು ಪ್ರಶ್ನಿಸುತ್ತಾನೆ. ಇವನು ಪಾರಂಪರಿಕ ಧಾರ್ಮಿಕ ತರಬೇತಿ ಪಡೆದು ಮುಖ್ಯಸ್ಥನಾಗಿಲ್ಲ. ರಾಜಕೀಯ ವಿಚಾರದಿಂದ ಆರಂಭಿಸಿ ಮತೀಯ ಗುರು ಎನಿಸಿಕೊಂಡವನು. ಧಾರ್ಮಿಕ ವಿಷಯಗಳನ್ನು ಉಲ್ಲೇಖಿಸುವಾಗ ಈತನ ತಿಳಿವಳಿಕೆಯ ಪೊಳ್ಳುತನ ಎದ್ದು ಕಾಣಿಸುತ್ತದೆ. ಆದರೂ ಈತನ ಕಠೋರ ರಾಜಕೀಯ ನಿಲುವುಗಳಿಂದಾಗಿ ಅಭಿಮಾನಿಗಳು ಈತನನ್ನು ಸುತ್ತುವರಿಯುತ್ತಾರೆ.

2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್‌ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. ಹೀಗಾಗಿ ದೀಪ್‌ ಸಿಧುವಿನ ಬೆಂಬಲಿಗರು ಈಗ ಈತನ ಕಡೆಗೆ ಸೇರಿಕೊಂಡಿದ್ದಾರೆ. ಆದರೆ ಕಳೆದ ಒಂದು ದಶಕದಿಂದ ಸಿಕ್ಖರ ಒಂದು ವರ್ಗದಲ್ಲಿ ಉಲ್ಬಣಿಸುತ್ತಿರುವ ವ್ಯಗ್ರತೆ ಈತನನ್ನು ಸೇರಿಕೊಳ್ಳುವಲ್ಲಿ ವ್ಯಕ್ತವಾಗುತ್ತಿದೆ. 2015ರ ಬೆಹ್ಬಲ್‌ ಕಾಲನ್‌ ಪೊಲೀಸ್‌ ಫೈರಿಂಗ್‌, ಬರ್ಗಾರಿ ಧರ್ಮನಿಂದನೆ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ ಎಂಬ ಸಿಟ್ಟಿದೆ. ಪಂಜಾಬಿನ ಸ್ಥಳೀಯ ಚಾನೆಲೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಮೃತ್‌ಪಾಲ್‌ ಈ ಘಟನೆಗಳನ್ನು ಉಲ್ಲೇಖಿಸಿದ್ದಾನೆ. ಕ್ರೈಸ್ತ ಮಿಷನರಿಗಳ ಮೇಲೆ ಕಿಡಿ ಕಾರುತ್ತಾನೆ. ಇದೂ ಆತನ ಜನಪ್ರಿಯತೆಗೆ ಕಾರಣ. ಪಂಜಾಬ್‌ ಮೇಲ್ನೋಟಕ್ಕೆ ಶಾಂತವಾಗಿದ್ದರೂ 80-90ರ ದಶಕದ ಗಾಯಗಳು ಹಾಗೆಯೇ ಇವೆ.

ಖಾಲಿತನ ತಂದಿಟ್ಟ ನಾಯಕತ್ವ
ಸಿಖ್‌ ರಾಜಕೀಯದಲ್ಲೂ ಅಮೃತ್‌ಪಾಲ್‌ ಅಂಥವರ ಸೃಷ್ಟಿಗೆ ಕಾರಣವಾಗಬಹುದಾದ ಒಂದು ನಿರ್ವಾತವಿದೆ. ಸಿಖ್‌ ರಾಜಕಾರಣಕ್ಕೆ ಇನ್ನೊಂದು ಹೆಸರಾಗಿದ್ದ ಶಿರೋಮಣಿ ಅಕಾಲಿ ದಳ ನಿಧಾನವಾಗಿ ತನ್ನ ನೆಲೆಯನ್ನು ಕಳೆದುಕೊಂಡಿದೆ. ಅಕಾಲಿ ದಳದ ಆಡಳಿತದ ಅಡಿಯಲ್ಲಿಯೇ ಸಂಭವಿಸಿದ ಹಲವಾರು ಘಟನೆಗಳಲ್ಲಿ ತಮಗೆ ನ್ಯಾಯ ದೊರಕಿಲ್ಲ ಎಂಬ ಆಕ್ರೋಶ ಸಿಕ್ಖರಲ್ಲಿದೆ. ಕಳೆದ ವರ್ಷದ ರಾಜ್ಯ ಚುನಾವಣೆಯಲ್ಲಿ ಅಕಾಲಿ ದಳ ಕೇವಲ ಮೂರು ಸ್ಥಾನಕ್ಕೆ ಇಳಿದಿದೆ. ಸಿಖ್ಖರ ಶ್ರೇಷ್ಠ ಧಾರ್ಮಿಕ ಹುದ್ದೆಯಾದ ಅಖಾಲ್‌ ತಖ್ತ್‌ನ ಜತೇದಾರ್‌ ಹಾಗೂ ಗುರುದ್ವಾರ ಸಮಿತಿಗಳು ಕೂಡ ಸಿಕ್ಖರ ಮೇಲಿನ ತಮ್ಮ ಹಿಡಿತ ಕಳೆದುಕೊಳ್ಳುತ್ತಿವೆ. ಮಾಜಿ ಜತೇದಾರ್‌ ಗುರ್‌ಬಚನ್‌ ಸಿಂಗ್‌ ಅವರನ್ನು, ಡೇರಾ ಸಚ್ಚಾ ಸೌಧಾದ ಗುರ್ಮೀತ್‌ ರಾಮ್‌ ರಹೀಮ್‌ನನ್ನು ಮನ್ನಿಸಿದ್ದಕ್ಕಾಗಿ ಖಂಡಿಸಸಲಾಗಿತ್ತು. 70ರ ದಶಕದಲ್ಲಿ ಇಂಥದೇ ಬೆಳವಣಿಗೆಗಳು ಭೀಂದ್ರಾನ್‌ವಾಲೆಯ ಹುಟ್ಟಿಗೆ ಕಾರಣವಾಗಿದ್ದವು. 1978ರಲ್ಲಿ ಬಾದಲ್‌ ಸರ್ಕಾರ ಇದ್ದಾಗ ನಿರಂಕಾರಿಗಳ ಜತೆಗಿನ ಸಂಘರ್ಷದಲ್ಲಿ 13 ಸಿಕ್ಖರು ಬಲಿಯಾದ ಘಟನೆ ಸಿಕ್ಖರನ್ನು ಹತಾಶಗೊಳಿಸಿತ್ತು. ಇಂದೂ ಅಂಥದೇ ಹತಾಶೆ ಅಮೃತ್‌ಪಾಲ್‌ನ ಬೆಳವಣಿಗೆಗೆ ಮುನ್ನುಡಿ ಹಾಡುತ್ತಿದೆ.

khalistan

ಇಂದು ಅಮೃತ್‌ಪಾಲ್‌ನಲ್ಲಿ ಆಯುಧ ಧರಿಸಿದ ಆತನ ಬೆಂಬಲಿಗರು ಸದಾ ಕಾಯುತ್ತಿರುತ್ತಾರೆ. ಆತನ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಶೇರ್‌ ಆಗುತ್ತವೆ, ಜನಪ್ರಿಯವಾಗುತ್ತವೆ. ಇವನ ಮಾತುಗಳು ಪಂಜಾಬಿ ಚಾನೆಲ್‌ಗಳ ಟಿಆರ್‌ಪಿ ಹೆಚ್ಚಿಸುತ್ತವೆ. ಈತನನ್ನು ಹಿಡಿತದಲ್ಲಿಡಲು ಪಂಜಾಬಿನ ಪೊಲೀಸರಿಗಾಗಲೀ ಸರ್ಕಾರದ ಬಳಿಯಾಗಲೀ ಯಾವುದೇ ಯೋಜನೆ ಇದ್ದಂತಿಲ್ಲ. ಸದ್ಯಕ್ಕೆ ಇವನು ಏನಾದರೂ ಕಾಲು ಜಾರಿ ತಪ್ಪು ಮಾಡಿದರೆ ಹಿಡಿಯುವುದಷ್ಟೇ ಇವರಿಗೆ ಸಾಧ್ಯವಾಗಲಿದೆ.

ಇದನ್ನೂ ಓದಿ: Pak New Plan | ಲಾಹೋರ್ ಗುರುದ್ವಾರಗಳಲ್ಲಿ ಖಲಿಸ್ತಾನ್ ಉಗ್ರರು, ಭಾರತೀಯ ಭಕ್ತರಿಗೆ ಬ್ರೈನ್ ವಾಷ್?

Continue Reading

EXPLAINER

ವಿಸ್ತಾರ Explainer: ಮರಳಿ ಸುದ್ದಿಯಲ್ಲಿರುವ ಲೋಕಾಯುಕ್ತ; ಎಷ್ಟಿದೆ ಇದರ ಅಧಿಕಾರ, ಆಳ ಮತ್ತು ಅಗಲ?

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಲಂಚ ಪ್ರಕರಣ ಲೋಕಾಯುಕ್ತದ ಸಾಮರ್ಥ್ಯವನ್ನು ಮತ್ತೆ ಮುನ್ನಲೆಗೆ ತಂದು ನಿಲ್ಲಿಸಿದೆ. ಲೋಕಾಯುಕ್ತದ ವ್ಯಾಪ್ತಿ, ಅಧಿಕಾರ ಎಷ್ಟು? ಯಾರು ಇದನ್ನು ಕಟ್ಟಿದರು, ಯಾರು ನಾಶ ಮಾಡಲು ಯತ್ನಿಸಿದರು? ಇಲ್ಲಿದೆ ಒಂದು ನೋಟ.

VISTARANEWS.COM


on

Edited by

lokayukta
Koo

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಯ ಮೇಲಿನ ಲೋಕಾಯುಕ್ತ ದಾಳಿ (Lokayukta Raid) , ಅಲ್ಲಿ ಸಿಕ್ಕಿದ ಎಂಟು ಕೋಟಿ ರೂಪಾಯಿ ಅಕ್ರಮ ಹಣಕಾಸು ಪ್ರಕರಣ ಇದೀಗ ಲೋಕಾಯುಕ್ತದ ಮುಂದೆ ವಿಚಾರಣೆಯ ಪ್ರಕ್ರಿಯೆಯಲ್ಲಿದೆ. ಚುನಾವಣೆಗೆ ಮುನ್ನ ನಡೆದ ಈ ಘಟನೆ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕವನ್ನು ಕಂಗೆಡಿಸಿದೆ ಕೂಡ.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಕೆಎಸ್‌ಡಿಎಲ್‌ನ ಅಧ್ಯಕ್ಷರೂ ಆಗಿದ್ದರು. ಅವರ ಪುತ್ರ ಪ್ರಶಾಂತ್‌ ಮಾಡಾಳು ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಯ ಹಣಕಾಸು ಸಲಹೆಗಾರರಾಗಿದ್ದರು. ಇದೀಗ, ತಮಗೆ ಬೇಕಾದವರಿಗೆ ಟೆಂಡರ್‌ ನೀಡಲು ದೊಡ್ಡ ಮೊತ್ತದ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ.

ಇದಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ʼʼಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಶಿಥಿಲಗೊಳಿಸಿದ್ದ ಲೋಕಾಯುಕ್ತವನ್ನು ನಮ್ಮ ಪಕ್ಷವೇ ಮರಳಿ ತಂದಿದೆ. ಕಾಂಗ್ರೆಸ್‌ನ ಅವಧಿಯಲ್ಲಿ ಎಷ್ಟೋ ಭ್ರಷ್ಟಾಚಾರ ಪ್ರಕರಣಗಳು ಹಾಗೆಯೇ ಮುಚ್ಚಿಹೋಗಿದ್ದವುʼʼ ಎಂದು ಆರೋಪಿಸಿದ್ದಾರೆ. ʼʼಲೋಕಾಯುಕ್ತ ಸ್ವಾಯತ್ತ ಸಂಸ್ಥೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆʼʼ ಎಂದಿದ್ದಾರೆ.

Madalu prashant money

ಲೋಕಾಯುಕ್ತ ಎಷ್ಟು ಸ್ವಾಯತ್ತ?

ಹೌದೆ? ಲೋಕಾಯುಕ್ತ ಅಷ್ಟೊಂದು ಸ್ವಾಯತ್ತವೇ? ಲೋಕಾಯುಕ್ತ ಎಂದರೇನು?

ಕೇಂದ್ರದ ಲೋಕಪಾಲ್‌ನ ಸಮಾನಾಂತರ ಸಂಸ್ಥೆಗಳು ರಾಜ್ಯದ ಲೋಕಾಯುಕ್ತಗಳು. ಲೋಕಪಾಲ್‌ ಮತ್ತು ಲೋಕಾಯುಕ್ತ ಕಾಯಿದೆ- 2013 ಹೇಳುವಂತೆ ʼʼಪ್ರತಿ ರಾಜ್ಯವೂ ಆಯಾ ರಾಜ್ಯದಲ್ಲಿ ಅಲ್ಲಿನ ಶಾಸನಸಭೆಯಲ್ಲಿ ರೂಪಿಸಲಾದ ಕಾಯಿದೆಯಡಿ ಕಾರ್ಯಾಚರಿಸುವ ಸಂಸ್ಥೆಯನ್ನು ಈ ಕಾಯಿದೆ ಬಂದ ಒಂದು ವರ್ಷದ ಒಳಗಾಗಿ ಸ್ಥಾಪಿಸಬೇಕು. ಅದು ಅಲ್ಲಿನ ಸಾರ್ವಜನಿಕ ಆಡಳಿತಗಾರರ ಮೇಲೆ ಬರುವ ಭ್ರಷ್ಟಾಚಾರದ ದೂರುಗಳನ್ನು ತನಿಖೆಗೊಳಪಡಿಸಬೇಕು.ʼʼ

ಇದನ್ನು ಲೋಕಪಾಲ್‌ ಹೇಳಿದ್ದು 2013ರಲ್ಲಿ. ಪ್ರತಿ ರಾಜ್ಯದಲ್ಲೂ ಲೋಕಾಯುಕ್ತವನ್ನು ಕಡ್ಡಾಯಗೊಳಿಸುವುದು ಅದರ ಗುರಿಯಾಗಿತ್ತು. ಆದರೆ ಆಗಿನ ಪ್ರತಿಪಕ್ಷಗಳು, ಬಿಜೆಪಿಯೂ ಸೇರಿದಂತೆ, ಇದು ಒಕ್ಕೂಟ ವ್ಯವಸ್ಥೆಯ ಚೈತನ್ಯಕ್ಕೆ ವಿರುದ್ಧ ಎಂದು ಗಲಾಟೆ ಎಬ್ಬಿಸಿದವು. ಹೀಗಾಗಿ, ಆಗ ರಚನೆಯಾದ ಕಾಯಿದೆಯು, ಲೋಕಾಯುಕ್ತ ರಚನೆಯ ಹೊಣೆಯನ್ನು ಆಯಾ ರಾಜ್ಯಗಳಿಗೆ ಬಿಟ್ಟುಬಿಟ್ಟಿತು.

ಕೇಂದ್ರದ ಲೋಕಪಾಲ್‌ ಕಾಯಿದೆ 2014ರ ಜನವರಿ ಒಂದರಂದು ರಾಷ್ಟ್ರಪತಿಗಳ ಅಂಕಿತ ಪಡೆದು ಜನವರಿ 16ರಂದು ಜಾರಿಗೆ ಬಂತು. ಈ ಕಾಯಿದೆ ಅಣ್ಣಾ ಹಜಾರೆಯಂಥವರು ಮಾಡಿದ ಲೋಕಪಾಲ್‌ ಚಳವಳಿ ಮುಂತಾದ ಹಲವಾರು ಹೋರಾಟಗಳ ಫಲವಾಗಿತ್ತು.

ಈ ಕಾಯಿದೆಯಿಂದಾಗಿ ಆಗಿದ್ದು ಎಂದರೆ ಲೋಕಪಾಲ್‌ ಸೃಷ್ಟಿ. ಇದರ ಅಧ್ಯಕ್ಷರು ದೇಶದ ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶ, ಅಥವಾ ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರುವ ಉನ್ನತ ಹುದ್ದೆಯ ವ್ಯಕ್ತಿಯಾಗಿರಬೇಕು. ಇದು 8 ಸದಸ್ಯರನ್ನು ಹೊಂದಿರಬೇಕು. ಇವರು ನ್ಯಾಯಾಂಗದವರಾಗಿರಬೇಕು. ಇದರಲ್ಲಿ 50% ಸದಸ್ಯರು ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ವರ್ಗ ಮತ್ತು ಮಹಿಳೆಯರಾಗಿರಬೇಕು. ಆದರೆ ಸದ್ಯಕ್ಕೆ ಕೇಂದ್ರದ ಲೋಕಾಯುಕ್ತ ಸಕ್ರಿಯವಾಗಿಲ್ಲ. ನಾಮಕಾವಸ್ಥೆ ಎಂಬಂತಿದೆ.

ಕರ್ನಾಟಕದ ಮಾದರಿ

ಈ ಕಾಯಿದೆ ಜಾರಿಗೆ ಬಂದಾಗ ಆಗಲೇ ಹಲವು ರಾಜ್ಯಗಳಲ್ಲಿ ಲೋಕಾಯುಕ್ತವಿತ್ತು ಮತ್ತು ಚುರುಕಾಗಿಯೇ ಅವು ಕಾರ್ಯ ನಿರ್ವಹಿಸುತ್ತಿದ್ದವು. ಮಧ್ಯಪ್ರದೇಶ ಹಾಗೂ ಕರ್ನಾಟಕಗಳಲ್ಲಿತ್ತು. ಲೋಕಪಾಲ್‌ ಕಾಯಿದೆ ಹಾಗೂ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶದ ಬಳಿಕ ಇಂದು ಎಲ್ಲ ರಾಜ್ಯಗಳಲ್ಲೂ ಲೋಕಾಯುಕ್ತ ಸೃಷ್ಟಿಯಾಗಿದೆ. ಆದರೆ ಚುರುಕಾಗಿರುವುದು ಕೆಲವೇ ಕಡೆ ಮಾತ್ರ.

venkatachala
ನ್ಯಾಎನ್‌ ವೆಂಕಟಾಚಲ

ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ, ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ವಿಧೇಯಕವನ್ನು ವಿಧಾನಸಭೆಯಲ್ಲಿ (1983) ಮಂಡಿಸಲಾಯಿತು. ಅದು ಅವರ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ-1984 ಜಾರಿಗೆ ಬಂದದ್ದು 1986, ಜನವರಿ 15ರಂದು. ಸಾರ್ವಜನಿಕ ಆಡಳಿತದ ಗುಣಮಟ್ಟವನ್ನು ಉತ್ತಮಗೊಳಿಸುವುದು, ಆಡಳಿತಗಾರರ ಭ್ರಷ್ಟಾಚಾರ ಪತ್ತೆ ಹಚ್ಚುವುದು ಮತ್ತು ತನಿಖೆಗೊಳಪಡಿಸುವುದು ಇದರ ಗುರಿ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಶಿಸ್ತಿಗೆ ಶಿಕ್ಷೆ ಕೂಡ ಇದರ ವ್ಯಾಪ್ತಿ. 1908ರ ಕೋಡ್‌ ಆಫ್‌ ಸಿವಿಲ್‌ ಪ್ರೊಸೀಜರ್‌ ಪ್ರಕಾರ ಸರ್ಚ್‌ ವಾರಂಟ್‌ ಹೊರಡಿಸುವ, ವಿಚಾರಣೆ ನಡೆಸುವ, ಸಿವಿಲ್‌ ಕೋರ್ಟ್‌ಗಳ ಅಧಿಕಾರ ಲೋಕಾಯುಕ್ತಕ್ಕೂ ದತ್ತವಾಗಿದೆ.

N Santhosh hegde
ನ್ಯಾ ಸಂತೋಷ್‌ ಹೆಗ್ಡೆ

ಕರ್ನಾಟಕದ ಮೊದಲ ಲೋಕಾಯುಕ್ತರಾದವರು ಏ.ಡಿ. ಕೋಶಲ್. ಅವರು ಜನವರಿ 1986ರಿಂದ 1991ರವರೆಗೆ ಅಧಿಕಾರದಲ್ಲಿದ್ದರು. ಬಳಿಕ ರವೀಂದ್ರನಾಥ ಪೈ, ಅಬ್ದುಲ್ ಹಕೀಮ್ ಅವರು ಅಧಿಕಾರಕ್ಕೆ ಬಂದರು. ಕರ್ನಾಟಕದಲ್ಲಿ ಲೋಕಾಯುಕ್ತರಾಗಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ಮಾಜಿ ನ್ಯಾಯಮೂರ್ತಿಗಳಾದ ಎನ್.‌ ವೆಂಕಟಾಚಲ(2001-2006), ಸಂತೋಷ್‌ ಹೆಗ್ಡೆ (2006-2011) ಭ್ರಷ್ಟರಲ್ಲಿ ಇನ್ನಿಲ್ಲದ ನಡುಕ ಹುಟ್ಟಿಸಿದರು. ಅವರ ಆಗಮನವಾದರೆ ಸಾಕು, ಸರ್ಕಾರಿ ಅಧಿಕಾರಿಗಳು ಗಡಗಡ ನಡುಗುತ್ತಿದ್ದರು. ಇವರು ದಾಳಿ ನಡೆಸಿದ ವೇಳೆ ಬೆದರಿ ಮೂರ್ಛೆ ಹೋದ ಅಧಿಕಾರಿಗಳೂ ಇದ್ದರು. ಹಲವರು ರಾಜಕಾರಣಿಗಳಿಗೂ ಲೋಕಾಯುಕ್ತ ತನಿಖೆಯ ಬಿಸಿ ಮುಟ್ಟಿತು. ಲೋಕಾಯುಕ್ತದ ಪರಿಣಾಮಕಾರಿ ಕಾರ್ಯತಂತ್ರ, ಹೆಚ್ಚುತ್ತಿದ್ದ ಲೋಕಪಾಲ ಚಳವಳಿಯ ಬಿಸಿ ರಾಜಕಾರಣಿಗಳಿಗೂ ಮುಟ್ಟಿತು. ಬಳಿಕ ಶಿವರಾಜ್ ಪಾಟೀಲ್, ವೈ.ಭಾಸ್ಕರ್ ರಾವ್, ಪಿ. ವಿಶ್ವನಾಥ ಶೆಟ್ಟಿ, ನ್ಯಾ. ಬಿ ಎಸ್ ಪಾಟೀಲ್ ಅಧಿಕಾರ ನಿರ್ವಹಿಸಿದ್ದಾರೆ.

ಎಸಿಬಿ ರಚನೆ

ಇದರಿಂದೆಲ್ಲ ಬೆದರಿದ ರಾಜಕಾರಣಿಗಳು ಲೋಕಾಯುಕ್ತವನ್ನು ಶಿಥಿಲಗೊಳಿಸುವ ತಂತ್ರದ ಮೊರೆ ಹೋದರು. ಅಂಥ ಒಂದು ಪ್ರಯತ್ನವೆಂದರೆ 2016ರ ಮಾರ್ಚ್‌ 14ರಂದು ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ಸೃಷ್ಟಿಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ). ಭ್ರಷ್ಟಾಚಾರ ತಡೆ ಕಾಯಿದೆ-1988ರ ಬಹುತೇಕ ಎಲ್ಲಾ ಅಧಿಕಾರಗಳನ್ನು ಲೋಕಾಯುಕ್ತದಿಂದ ಎಸಿಬಿಗೆ ಸರ್ಕಾರ ವರ್ಗಾಯಿಸಿತು.

ಎಸಿಬಿ ರಚನೆಗೂ ಮುನ್ನ ಲೋಕಾಯುಕ್ತ ತನಗೆ ಬಂದ ದೂರುಗಳ ತನಿಖೆಯನ್ನು ತನ್ನದೇ ಪೊಲೀಸ್ ವಿಭಾಗದಿಂದ ಮಾಡುತ್ತಿತ್ತು. ಸಂಸ್ಥೆಗೆ 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಪ್ರಕಾರ ಈ ಅಧಿಕಾರ ಇತ್ತು. ಆದರೆ ಈ ಬಳಿಕ ಸಂಸ್ಥೆಗೆ ತನಿಖೆ ನಡೆಸುವ ಅಧಿಕಾರ ಇಲ್ಲವಾಯ್ತು. ಅದು ಕೇವಲ ದೂರುಗಳನ್ನು ಮಾತ್ರ ಸ್ವೀಕರಿಸಿ ಎಸಿಬಿಗೆ ತನಿಖೆ ನಡೆಸಲು ಸೂಚಿಸಬೇಕಾಯಿತು. ಇದು ಲೋಕಾಯುಕ್ತದ ಶಕ್ತಿಗುಂದಿಸಿತು. ಆದರೆ ಇತ್ತೀಚೆಗೆ ಹೈ ಕೋರ್ಟ್‌ ತೀರ್ಪಿನಿಂದಾಗಿ ಮತ್ತೆ ಲೋಕಾಯುಕ್ತಕ್ಕೆ ಕಳೆದುಹೋಗಿದ್ದ ಸ್ಥಾನಮಾನ ಮತ್ತೆ ಪ್ರಾಪ್ತವಾಗಿದೆ. 2022ರಲ್ಲಿ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ (ಚಿದಾನಂದ ಅರಸ್‌ V/S ಕರ್ನಾಟಕ ರಾಜ್ಯ ಸರ್ಕಾರ) ಒಂದು ತೀರ್ಪು ನೀಡಿ, ಏಸಿಬಿಯನ್ನು ರದ್ದುಗೊಳಿಸಿ, ಲೋಕಾಯುಕ್ತದ ಅಧಿಕಾರಗಳನ್ನು ಮರುಸ್ಥಾಪಿಸಿತು.

ಲೋಕಾಯುಕ್ತ ತನಿಖೆಯ ವ್ಯಾಪ್ತಿ ಎಷ್ಟು?

ಹತ್ತು ವರ್ಷಗಳ ಅವಧಿಗೆ ಹೈಕೋರ್ಟ್‌ನ ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿದ ಯಾವುದೇ ವ್ಯಕ್ತಿಯನ್ನು ಲೋಕಾಯುಕ್ತ ಮತ್ತು ಐದು ವರ್ಷ ಉಪ ಲೋಕಾಯುಕ್ತನನ್ನಾಗಿ ನೇಮಿಸಬಹುದು. ಲೋಕಾಯುಕ್ತವು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ಸಂಸ್ಥೆ. ಕರ್ನಾಟಕ ರಾಜ್ಯಪಾಲರು, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ನೇಮಕ ಮಾಡಲಾಗುತ್ತದೆ. ಇವರು ಐದು ವರ್ಷಗಳ ಅಧಿಕಾರ ಹೊಂದಿರುತ್ತಾರೆ. ಇವರ ಅವಧಿಯನ್ನು ಅಗತ್ಯ ಬಿದ್ದರೆ ವಿಸ್ತರಿಸಬಹುದು.

ಇದನ್ನೂ ಓದಿ: Lokayukta raid : ಕೊನೆಗೂ ಲೋಕಾಯುಕ್ತ ಮುಂದೆ ಹಾಜರಾದ ಶಾಸಕ ಮಾಡಾಳ್‌; ಮೂರು ತಾಸು ವಿಚಾರಣೆ, ಪ್ರಶ್ನೆಗಳ ಸುರಿಮಳೆ

CM agrees to 17 salary increase Formation of committee to decide cancellation of NPS

ಲೋಕಾಯುಕ್ತವು ಮುಖ್ಯಮಂತ್ರಿ, ಯಾವುದೇ ಸಚಿವ ಅಥವಾ ಕಾರ್ಯದರ್ಶಿ, ರಾಜ್ಯ ಶಾಸಕಾಂಗದ ಸದಸ್ಯ ಅಥವಾ ಯಾವುದೇ ಇತರ ಸಾರ್ವಜನಿಕ ಸೇವಕ (ಅಧಿಕಾರಿ) ಕೈಗೊಂಡ ಕ್ರಮಗಳ ಕುಂದುಕೊರತೆಯ ಬಗ್ಗೆ ಅಥವಾ ಅವರ ಮೇಲೆ ಬಂದ ಭ್ರಷ್ಟಾಚಾರದ ಆರೋಪವನ್ನು ತನಿಖೆ ಮಾಡಬಲ್ಲ ಅಧಿಕಾರವನ್ನು ಹೊಂದಿದೆ. 1988ರಲ್ಲಿ ಮಾಡಲಾದ ತಿದ್ದುಪಡಿಯ ಪ್ರಕಾರ, ಆರೋಪಿ ಮಾಡಿದ ಕೃತ್ಯದ ದೂರು ಆರು ತಿಂಗಳ ನಂತರ ಬಂದರೆ, ಅದನ್ನು ಸ್ವೀಕರಿಸಬೇಕಿಲ್ಲ. ಭ್ರಷ್ಟಾಚಾರದ ಕೇಸ್‌ಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬಹುದು. ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದ್ದಾರೆ. ಭ್ರಷ್ಟಾಚಾರ ಅಥವಾ ದುರಾಡಳಿತದ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಶಿಫಾರಸು ಮಾಡಬಹುದು. ಅಗತ್ಯವಿದ್ದರೆ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಉಲ್ಲೇಖಿಸುವ ಅಧಿಕಾರವನ್ನು ಹೊಂದಿದೆ. ಇದು ನೇರವಾಗಿ ರಾಜ್ಯ ಶಾಸಕಾಂಗಕ್ಕೆ ವರದಿ ಮಾಡಿಕೊಳ್ಳುತ್ತದೆ. ಯಾವುದೇ ಕಾರ್ಯಕಾರಿ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಆದರೆ ಇವರು ಶಿಕ್ಷೆ ಘೋಷಿಸುವ ಅಧಿಕಾರವನ್ನು ಹೊಂದಿಲ್ಲ.

ಈ ಹಿಂದೆ ಹಲವು ಹೈ ಪ್ರೊಫೈಲ್‌ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತ ಕೈಗೆತ್ತಿಕೊಂಡು ತನಿಖೆ ನಡೆಸಿ ನ್ಯಾಯ ಒದಗಿಸಿದೆ. ಅಕ್ರಮ ಗಣಿಗಾರಿಕೆ ಕುರಿತ ತನಿಕೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅಧಿಕಾರ ಕಳೆದುಕೊಂಡದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಮಾಜಿ ಸಚಿವರು ಭಾಗಿಯಾಗಿದ್ದ ಭೂ ಹಗರಣ, ವಸತಿ ಹಗರಣ, ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಅಧಿಕಾರಿಗಳ ಬಂಧನವಾಗಿದೆ. 2015ರಲ್ಲಿ ಅಂದಿನ ಲೋಕಾಯುಕ್ತರ ವಿರುದ್ಧವೇ ಅಧಿಕಾರಿಗಳಿಗೆ ಅನುಕೂಲಕರ ಹುದ್ದೆ ನೀಡಲು ಲಂಚ ಪಡೆದ ಆರೋಪ ಬಂದು, ಅವರ ರಾಜೀನಾಮೆಗೂ ಮೂಲವಾಯಿತು.

ಇದನ್ನೂ ಓದಿ: Lokayukta raid : ಮಾಡಾಳು ವಿರೂಪಾಕ್ಷಪ್ಪ ಮಧ್ಯಂತರ ಜಾಮೀನು ರದ್ದು ಕೋರಿ ಸು.ಕೋರ್ಟ್‌ಗೆ ಲೋಕಾಯುಕ್ತ ಮೊರೆ

Continue Reading

EXPLAINER

OPS vs NPS :‌ ಎನ್‌ಪಿಎಸ್‌ vs ಒಪಿಎಸ್‌, ಅಂತಿಮವಾಗಿ ಯಾವುದು ಬೆಸ್ಟ್

ಕರ್ನಾಟಕ ಸೇರಿದಂತೆ ನಾನಾ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಘಟನೆಗಳು ಹಳೆಯ ಪಿಂಚಣಿ ಪದ್ಧತೆ ಅಥವಾ ಒಪಿಎಸ್‌ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿವೆ. ಹಾಗಾದರೆ ಎನ್‌ಪಿಎಸ್‌ ಮತ್ತು ಒಪಿಎಸ್‌ ಯಾವುದು ಉತ್ತಮ? ಅಂತಿಮವಾಗಿ ಜನತೆ ತಮ್ಮ ಆರ್ಥಿಕ ಭದ್ರತೆಗೆ ( OPS vs NPS) ಏನು ಮಾಡಬೇಕು? ಇಲ್ಲಿದೆ ವಿವರ.

VISTARANEWS.COM


on

Edited by

cash
Koo

OPS VS NPS ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಸರ್ಕಾರಿ ನೌಕರರ ಸಂಘಟನೆಗಳು ಇತ್ತೀಚೆಗೆ ಒಪಿಎಸ್‌ , ಓಲ್ಡ್‌ ಪೆನ್ಷನ್‌ ಸ್ಕೀಮ್‌ ಅಥವಾ ಹಳೆಯ ಪಿಂಚಣಿ ಪದ್ಧತಿಯನ್ನು (Old penstion scheme) ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿವೆ. ದಿನ ಕಳೆದಂತೆ ಇದು ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜಕೀಯದ ಬಣ್ಣವೂ ಇದಕ್ಕಿದೆ. ಹಿಮಾಚಲಪ್ರದೇಶ, ಜಾರ್ಖಂಡ್‌, ಪಂಜಾಬ್‌, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಗೆ ಮರಳಿವೆ. ‌( New pension scheme ) ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲೂ ಒಪಿಎಸ್‌ಗೆ ಕೂಗು ಕೇಳಿ ಬರುತ್ತಿದೆ. ಸರ್ಕಾರದ ಮಟ್ಟದಲ್ಲಿ ಸಮಾಲೋಚನೆ ನಡೆಯುತ್ತಿದೆ. ಮತ್ತೊಂದು ಕಡೆ ಆರ್‌ಬಿಐ ಕೂಡ ಒಪಿಎಸ್‌ ಜಾರಿಗೆ ತರುವುದರಿಂದ ರಾಜ್ಯಗಳ ಆರ್ಥಿಕತೆಗೆ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂದು ಎಚ್ಚರಿಸಿದೆ. ಹಾಗಾದರೆ ಏನಿದು ಒಪಿಎಸ್‌ ವರ್ಸಸ್‌ ಎನ್‌ಪಿಎಸ್‌ ವಿವಾದ? ಸರ್ಕಾರಿ ನೌಕರರ ಸಂಘಟನೆಗಳು ಏಕೆ ಒಪಿಎಸ್‌ಗೆ ಒತ್ತಾಯಿಸುತ್ತಿವೆ. ಈ ವಿವಾದ ಹುಟ್ಟಿದ್ದು ಹೇಗೆ?

ಭಾರತದಲ್ಲಿ ಹೆಚ್ಚುತ್ತಿರುವ ಹಿರಿಯ ನಾಗರಿಕರ ಸಂಖ್ಯೆ:

ಭಾರತದಲ್ಲಿ 1961ರಿಂದೀಚೆಗೆ ಹಿರಿಯ ನಾಗರಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. 2011ರ ಜನಗಣತಿಯ ಪ್ರಕಾರ ದೇಶದಲ್ಲಿ 60 ವರ್ಷ ದಾಟಿದವರ ಸಂಖ್ಯೆ ಆಗ 10 ಕೋಟಿ ಇತ್ತು. ವಿಶ್ವಸಂಸ್ಥೆಯ ವರದಿಯ ಪ್ರಕಾರ 2026ಕ್ಕೆ ಹಿರಿಯ ನಾಗರಿಕರ ಸಂಖ್ಯೆ 17 ಕೋಟಿಗೆ ಏರಿಕೆಯಾಗಲಿದೆ. ಹಿರಿಯರ ಸಂಖ್ಯೆ ಭವಿಷ್ಯದ ದಿನಗಳಲ್ಲಿ ಹೀಗೆ ಏರಿಕೆಯಾಗುತ್ತಾ ಹೋಗಲಿದೆ. ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಪಂಜಾಬ್‌ನಲ್ಲಿ ಜನಸಂಖ್ಯೆಯ 16%ರಿಂದ 20% ತನಕ ಹಿರಿಯ ನಾಗರಿಕರು ಇದ್ದಾರೆ. ಆದ್ದರಿಂದ ನಿವೃತ್ತರಿಗೆ ಸಾಮಾಜಿಕ ಭದ್ರತೆ ನಿರ್ಣಾಯಕ.

ಏನಿದು ಒಪಿಎಸ್?‌

ಭಾರತ ಅತ್ಯಂತ ಸಂಕೀರ್ಣವಾಗಿರುವ ಪಿಂಚಣಿ ವ್ಯವಸ್ಥೆಯನ್ನು ಹೊಂದಿದೆ. ಮುಖ್ಯವಾಗಿ ಹಿರಿಯ ನಾಗರಿಕರಿಗೆ, ಬಡವರಿಗೆ ಪಿಂಚಣಿ ನೀಡುವ ಗ್ರಾಮೀಣಾಭಿವೃದ್ಧಿ ಸಚಿವಾಲಯದ ನ್ಯಾಶನಲ್‌ ಸೋಶಿಯಲ್‌ ಅಸಿಸ್ಟೆನ್ಸ್‌ ಪ್ರೋಗ್ರಾಮ್‌ (NSAP̧) OSP ಮತ್ತು ಎನ್‌ಪಿಎಸ್‌ ಹಾಗೂ ಇಪಿಎಫ್‌ಒ ಅಡಿಯಲ್ಲಿನ ಪಿಂಚಣಿ ಯೋಜನೆ. ಹೀಗಿದ್ದರೂ, ಈ ಎಲ್ಲ ಪಿಂಚಣಿ ಯೋಜನೆಗಳ ಸುತ್ತಮುತ್ತ ವಿವಾದಗಳು, ಸಾಧ್ಯಾಸಾಧ್ಯತೆಯ ಪ್ರಶ್ನೆಗಳು ಮತ್ತು ಹೋರಾಟಗಳು ನಡೆಯುತ್ತಿವೆ. ಸದ್ಯಕ್ಕೆ ಒಪಿಎಸ್‌ ಅತ್ಯಂತ ವಿವಾದದಲ್ಲಿದೆ.

ಓಪಿಸ್‌ನಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಮೊದಲೇ ನಿರ್ಧರಿಸಿದ ಲೆಕ್ಕಾಚಾರದ ಅಡಿಯಲ್ಲಿ ಡಿಫೈನ್ಡ್‌ ಪಿಂಚಣಿ ಸಿಗುತ್ತದೆ. ನಿವೃತ್ತಿಗೆ ಮುನ್ನ ಕೊನೆಯ ತಿಂಗಳಿನ ವೇತನದ 50% ಮೊತ್ತದಷ್ಟು ಪಿಂಚಣಿಯನ್ನು ಪಡೆಯುತ್ತಾರೆ. ಉದಾಹರಣೆಗೆ ನಿವೃತ್ತಿಯ ಕೊನೆಯ ತಿಂಗಳು 1 ಲಕ್ಷ ರೂ. ವೇತನ ಇದ್ದರೆ ಮಾಸಿಕ 50,000 ರೂ. ಪಿಂಚಣಿ ಸಿಗುತ್ತದೆ. ವರ್ಷಕ್ಕೆ ಎರಡಿ ಸಲ ಡಿಎ ಪರಿಷ್ಕರಣೆಯಾದಾಗ ಅದರ ಪ್ರಯೋಜನವೂ ಸಿಗುತ್ತದೆ. ಆದರೆ ಈ ವೆಚ್ಚದ ಬಹುಪಾಲು ವೆಚ್ಚವನ್ನು ಆಯಾ ಸರ್ಕಾರಗಳೇ ಭರಿಸಬೇಕಾಗುತ್ತದೆ. ಇಲ್ಲೂ ಜನರಲ್‌ ಪ್ರಾವಿಡೆಂಟ್‌ ಫಂಡ್‌ (GPF) ಖಾತೆ ಕೂಡ ಇರುತ್ತದೆ. ಇದರಲ್ಲಿ ಸರ್ಕಾರಿ ಉದ್ಯೋಗಿಗಳೂ ವೇತನದಲ್ಲಿ ಭವಿಷ್ಯನಿಧಿ ಅಥವಾ ಪ್ರಾವಿಡೆಂಡ್‌ ಫಂಡ್‌ಗೆ ತಮ್ಮ ಪಾಲು ನೀಡುತ್ತಾರೆ. ನಿವೃತ್ತಿಯಾಗುವಾಗ ಉದ್ಯೋಗಿಗೆ ಎಲ್ಲವೂ ಸೇರಿ ನೀಡುತ್ತಾರೆ.

ಒಪಿಎಸ್‌ ರದ್ದಾಗಿದ್ದು ಯಾವಾಗ? ಅದು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆಯೇ?

2004ರಲ್ಲಿ ಒಪಿಎಸ್‌ ಅನ್ನು ಅಂದಿನ ಎನ್‌ಡಿಎ ಸರ್ಕಾರ ತೆರವುಗೊಳಿಸಿತು. ಈಗಿನ ನ್ಯಾಶನಲ್‌ ಪೆನ್ಷನ್‌ ಸ್ಕೀಮ್‌ ಅಥವಾ ಎನ್‌ಪಿಎಸ್‌ಗೆ ಬದಲಾಯಿತು. ಆದರೆ ಎನ್‌ಪಿಎಸ್‌ ಮಾದರಿಯ ಯೋಜನೆ ಬೇಕು ಎಂಬ ಪರಿಕಲ್ಪನೆ 1998ರಲ್ಲಿ ಆಗಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿರುವ ವರದಿಯಲ್ಲಿ ಪ್ರಸ್ತಾಪವಾಗಿತ್ತು.

ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಒಪಿಎಸ್‌ ಹೊರೆ ಎಷ್ಟು?

ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿಯ (CMIE) ಅಂಕಿ ಅಂಶಗಳ ಪ್ರಕಾರ, ಪಿಂಚಣಿ ಸಲುವಾಗಿ ರಾಜ್ಯ ಸರ್ಕಾರಗಳ ವೆಚ್ಚ ಪ್ರತಿ ವರ್ಷ ಏರಿಕೆಯಾಗುತ್ತಿದೆ. ಆರಂಭದಲ್ಲಿ ರಾಜ್ಯದ ಆದಾಯದ 10% ಇದ್ದ ವೆಚ್ಚ 2020-21ರ ವೇಳೆಗೆ 25% ಕ್ಕೆ ಏರಿಕೆಯಾಗಿದೆ.

ಹಿಮಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ ಒಪಿಎಸ್‌ಗೆ ಮರಳಿವೆ. ಎಸ್‌ಬಿಐ ಎಕೋರಾಪ್‌ ವರದಿಯ ಪ್ರಕಾರ ಇದರಿಂದಾಗಿ ಈ ರಾಜ್ಯಗಳಿಗೆ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಖರ್ಚಾಗಲಿದೆ. ಎಲ್ಲ ರಾಜ್ಯಗಳೂ ಒಪಿಎಸ್‌ಗೆ ಹಿಂತಿರುಗಿದರೆ ಸರ್ಕಾರಗಳ ಬೊಕ್ಕಸಕ್ಕೆ 31 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಇದನ್ನು ಭರಿಸುವುದು ಹೇಗೆ ಎಂಬುದು ಈಗಿನ ಪ್ರಶ್ನೆಯಾಗಿದೆ. ಎರಡನೆಯದಾಗಿ 20 ವರ್ಷ ಉದ್ಯೋಗದಲ್ಲಿ ಇದ್ದವರಿಗೆ ಮಾತ್ರ ಒಪಿಎಸ್‌ ಸಿಗುತ್ತದೆ.

ಸರ್ಕಾರ ಪಿಂಚಣಿಯನ್ನು ಹೇಗೆ ಪಾವತಿಸುತ್ತದೆ?

ಸರ್ಕಾರಗಳು ಪಿಂಚಣಿಗೋಸ್ಕರ ನಿರ್ದಿಷ್ಟ ನಿಧಿಯನ್ನು ಹೊಂದಿಲ್ಲ. ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆಯ ಹಣದಿಂದಲೇ ನೀಡುತ್ತವೆ. ಸುಮಾರು 77 ಲಕ್ಷ ಪಿಂಚಣಿದಾರರು ಹಾಗೂ ಹಾಲಿ ಕರ್ತವ್ಯದಲ್ಲಿರುವ ಉದ್ಯೋಗಿಗಳ ಸಂಖ್ಯೆ 50 ಲಕ್ಷ ಇದೆ. ಭಾರತದಲ್ಲಿ ಸುಮಾರು 31 ಕೋಟಿ ಉದ್ಯೋಗದಲ್ಲಿದ್ದಾರೆ. ಇವರಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಇರುವವರು ಕಡಿಮೆ. ಬಹುತೇಕ ಮಂದಿ ಖಾಸಗಿ ವಲಯದಲ್ಲಿ ಹಾಗೂ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟು 31 ಕೋಟಿ ದುಡಿಯುವ ವರ್ಗದಲ್ಲಿ ಕೇವಲ 11% ಮಂದಿ ಮಾತ್ರ ಅಂದರೆ 3.4 ಕೋಟಿಗೆ ಮಾತ್ರ ವೃದ್ಧಾಪ್ಯದಲ್ಲಿ ಪಿಂಚಣಿ ಆದಾಯ ಸಿಗುತ್ತಿದೆ.

ಏನಿದು ಎನ್‌ಪಿಎಸ್?

ಕೇಂದ್ರ ಸರ್ಕಾರ 2003ರಲ್ಲಿ ಪರಿಚಯಿಸಿದ ಎನ್‌ಪಿಎಸ್‌ ಅನ್ನು 2004ರ ಜನವರಿ 1ರ ಬಳಿಕ ಎಲ್ಲ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸಲಾಗಿದೆ. ಪೆನ್ಷನ್‌ ಫಂಡ್‌ ರೆಗ್ಯುಲೇಟರಿ ಆಂಡ್‌ ಡೆವಲಪ್‌ಮೆಂಟ್‌ ಅಥಾರಿಟಿ ಇದನ್ನು ವಿನ್ಯಾಸಗೊಳಿಸಿದೆ. 2009ರಲ್ಲಿ ಎಲ್ಲ ನಾಗರಿಕರಿಗೂ ಇದನ್ನು ವಿಸ್ತರಿಸಲಾಯಿತು. ಖಾಸಗಿ ವಲಯದ ಉದ್ಯೋಗಿಗಳೂ, ಸ್ವ ಉದ್ಯೋಗಿಗಳೂ ಇದರಲ್ಲಿ ಹೂಡಿಕೆ ಮಾಡಬಹುದು. ಸರ್ಕಾರ ಉದ್ಯೋಗಿಗಳಾದರೆ ಮೂಲವೇತನದ 10% ಅನ್ನು ಉದ್ಯೋಗಿ ತನ್ನ ವೇತನದಲ್ಲಿ ನೀಡಬೇಕು. ಸರ್ಕಾರ ಇದಕ್ಕೆ 14% ಸೇರಿಸುತ್ತದೆ. ಇದು ಮಾರುಕಟ್ಟೆ ಆಧರಿತವಾಗಿದ್ದು, ನಿರ್ದಿಷ್ಟ ಪಾಲನ್ನು ಷೇರು, ಬಾಂಡ್‌ ಸೇರಿದಂತೆ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಎಸ್‌ಬಿಐ, ಎಲ್‌ಐಸಿ ಮತ್ತು ಯುಟಿಐ ಮತ್ತು ಇತರ ಸಂಸ್ಥೆಗಳು ಇದರ ಫಂಡ್‌ ಮ್ಯಾನೇಜರ್‌ಗಳಾಗಿವೆ.

ಎನ್‌ಪಿಎಸ್‌ನಲ್ಲಿ ಟೈರ್‌ 1 ಮತ್ತು ಟೈರ್‌ 2 ಎಂಬ ಎರಡು ಆಯ್ಜೆಗಳಿದೆ. ಟೈರ್‌ 1 ಪ್ರೈಮರಿ ಖಾತೆಯಾಗಿದ್ದು, ಹೂಡಿಕೆಯ ಖಾತೆಯಾಗಿದೆ. ಟೈರ್‌ 1 ಖಾತೆಯಲ್ಲಿ ವರ್ಷಕ್ಕೆ ಕನಿಷ್ಠ 1000 ರೂ. ಹೂಡಿಕೆ ಅಗತ್ಯ. ವಾರ್ಷಿಕ 1.5 ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಟೈರ್-‌2 ಖಾತೆಯಲ್ಲಿ ಹೂಡಿಕೆಗೆ ಮಿತಿ ಇಲ್ಲ. ಇದು ಮ್ಯೂಚುವಲ್‌ ಫಂಡ್‌ನಂತೆ ಕಾರ್ಯನಿರ್ವಹಿಸುತ್ತದೆ.

ಸರ್ಕಾರಿ ಉದ್ಯೋಗಿಗಳು ಒಪಿಎಸ್‌ ಬೇಕು ಎಂದು ಒತ್ತಾಯಿಸುತ್ತಿರುವುದೇಕೆ?

ಒಪಿಎಸ್‌ನಂತೆ ಎನ್‌ಪಿಎಸ್‌ನಲ್ಲಿ ಪಿಂಚಣಿ ಹಣ ಎಷ್ಟು ಬರುತ್ತದೆ ಎಂದು ಖಾತರಿಯಲ್ಲಿ ಹೇಳಲು ಸಾಧ್ಯ ಇಲ್ಲ. ಏಕೆಂದರೆ ಇದು ಮಾರುಕಟ್ಟೆ ಆಧಾರಿತ. ಹೀಗಾಗಿ ಅಪಾಯಕಾರಿ ಎನ್ನುತ್ತಾರೆ. ಎನ್‌ಪಿಎಸ್‌ನಲ್ಲಿ ಉದ್ಯೋಗಿಗಳು ತಮ್ಮ ಮೂಲವೇತನದ 10% ಪಾಲನ್ನು ನೀಡಬೇಕಾಗುತ್ತದೆ. ಒಪಿಎಸ್‌ನಲ್ಲಿ ಉದ್ಯೋಗಿಗಳು ಪಿಂಚಣಿಗೆ ಏನನ್ನೂ ಕೊಡಬೇಕಿಲ್ಲ.

ಒಪಿಎಸ್‌ಗೆ ತೆರಳುವುದರಿಂದ ಸದ್ಯಕ್ಕೆ ರಾಜ್ಯಗಳಿಗೆ ಲಾಭ ಇದೆಯೇ?

ಇದೆ. ಎನ್‌ಪಿಎಸ್‌ 2004ರಿಂದ ಜಾರಿಗೆ ಬಂದಿದೆ. ಆಗ ಉದ್ಯೋಗಿಯೊಬ್ಬನ ವಯಸ್ಸು 30 ವರ್ಷ ಎಂದರೆ ಆತ ನಿವೃತ್ತಿಯಾಗುವುದು 2034ರಲ್ಲಿ. ಅಲ್ಲಿಯವರೆಗೆ ಒಪಿಎಸ್‌ ಅಡಿಯಲ್ಲಿ ಸರ್ಕಾರಕ್ಕೆ ಯಾವುದೇ ವೆಚ್ಚ ಇರುವುದಿಲ್ಲ. ಆದರೆ ಎನ್‌ಪಿಎಸ್‌ ಅಡಿಯಲ್ಲಿ ಪ್ರತಿ ವರ್ಷ ತನ್ನ ಪಾಲಿನ ದೇಣಿಗೆಯನ್ನು ಸರ್ಕಾರ ನೀಡಬೇಕಾಗುತ್ತದೆ. ಆದರೆ ಒಪಿಎಸ್‌ ಅಡಿಗೆ ಸೇರಿದರೆ 2034ರ ಬಳಿಕ ಸರ್ಕಾರದ ಪಿಂಚಣಿ ವೆಚ್ಚ ಗಣನೀಯ ಏರಿಕೆಯಾಗಲಿದೆ.

ಎನ್‌ಪಿಎಸ್‌ vs ಒಪಿಎಸ್‌ ವಿವಾದಕ್ಕೆ ರಾಜಕೀಯ ಆಯಾಮ ಇದೆಯೇ?

ಸರ್ಕಾರಿ ಉದ್ಯೋಗಿಗಳು ದೊಡ್ಡ ಮತ ಬ್ಯಾಂಕ್‌ ಆಗಿರುವುದರಿಂದ ರಾಜಕೀಯ ಪಕ್ಷಗಳು ಕಡೆಗಣಿಸುವಂತಿಲ್ಲ. ಅವರ ವಿವಾದಗಳು ಚುನಾವಣೆಯ ವಿಷಯವಾಗುತ್ತವೆ. ಹೀಗಾಗಿ ಒಪಿಎಸ್‌ ಹಿಂತೆಗೆತ ದೊಡ್ಡ ರಾಜಕೀಯ ವಿಷಯವಾಗಿದೆ. ಹಿಮಾಚಲ ಪ್ರದೇಶ, ಗುಜರಾತ್‌ ಚುನಾವಣೆ ವೇಳೆ ಕಾಂಗ್ರೆಸ್‌ ಒಪಿಎಸ್‌ ಜಾರಿಗೊಳಿಸುವ ಭರವಸೆ ನೀಡಿತ್ತು.

ಒಪಿಎಸ್‌ ಬಗ್ಗೆ ಆರ್‌ಬಿಐ ಏನೆನ್ನುತ್ತದೆ? ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಿಲುವು ಏನು?

ಕೆಲವು ರಾಜ್ಯಗಳು ಒಪಿಎಸ್‌ಗೆ ಹಿಂತಿರುವುತ್ತಿರುವುದಕ್ಕೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಇದರಿಂದಾಗಿ ಆರೋಗ್ಯ, ಶಿಕ್ಷಣ, ಹಸಿರು ಇಂಧನ ಅಭಿವೃದ್ಧಿಗೆ ಸರ್ಕಾರದ ಹೂಡಿಕೆ ಕಡಿಮೆಯಾಗಬಹುದು. ಪಿಂಚಣಿಗೋಸ್ಕರ ಹೆಚ್ಚು ಹಣವನ್ನು ಸರ್ಕಾರವೇ ವ್ಯಯಿಸುವುದು ದೀರ್ಘಕಾಲೀನವಾಗಿ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ. ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಸೇರಿದಂತೆ ಆರ್ಥಿಕ ತಜ್ಞರೂ ಒಪಿಎಸ್‌ ಅನ್ನು ವಿರೋಧಿಸಿದ್ದಾರೆ.

ಕೇಂದ್ರ ಸರ್ಕಾರ ಈಗ ಎನ್‌ಪಿಎಸ್‌ ವ್ಯಾಪ್ತಿಯಲ್ಲಿರುವ ಉದ್ಯೋಗಿಗಳು ಒಪಿಎಸ್‌ಗೆ ಮರಳಲು 2023ರ ಆಗಸ್ಟ್‌ 31 ತನಕ ಒಂದು ಸಲದ ಅವಕಾಶ ನೀಡಿದೆ. ಒಪಿಎಸ್‌ನಲ್ಲಿ ಇದ್ದು, ತಡವಾಗಿ ಸೇವೆಗೆ ಸೇರಿದವರಿಗೆ ಹಾಗೂ 2004ರಿಂದ ಎನ್‌ಪಿಎಸ್‌ಗೆ ಬಂದವರಿಗೆ ಇದು ಅನ್ವಯವಾಗಲಿದೆ. ಏಕೆಂದರೆ ತಡವಾಗಿ ಉದ್ಯೋಗಕ್ಕೆ ಸೇರಿದವರಿಗೆ ಎನ್‌ಪಿಎಸ್‌ನಲ್ಲಿ ಬರಬಹುದಾದ ಪಿಂಚಣಿಯೂ ಕಡಿಮೆಯಾಗಿರುತ್ತದೆ. ಹಣಕಾಸು ತಜ್ಞರ ವಿಶ್ಲೇಷಣೆ ಪ್ರಕಾರ ದೀರ್ಘಾವಧಿಗೆ ಹೂಡಿದರೆ ಎನ್‌ಪಿಎಸ್‌ ಉಳಿದೆಲ್ಲ ಪಿಂಚಣಿಗಿಂತ ಹೆಚ್ಚು ಆದಾಯವನ್ನು ನೀಡಬಲ್ಲುದು.

ಒಪಿಎಸ್‌ vs ಎನ್‌ಪಿಎಸ್‌ ಗೊಂದಲ ಇರುವುದರಿಂದ ಸಾರ್ವಜನಿಕರು, ಉದ್ಯೋಗಿಗಳು ಏನು ಮಾಡಬಹುದು?

ಒಪಿಎಸ್‌ ಬರಲಿ ಅಥವಾ ಬರದಿರಲಿ, ಅವರವರ ನಿವೃತ್ತಿ ಕಾಲದ ಹಣಕಾಸು ಭದ್ರತೆಯ ಜವಾಬ್ದಾರಿಯನ್ನು ಅವರವರೇ ವಹಿಸಿಕೊಳ್ಳುವುದು ಸೂಕ್ತ. ಈ ನಿಟ್ಟಿನಲ್ಲಿ ಎನ್‌ಪಿಎಸ್‌, ಅಟಲ್‌ ಪೆನ್ಷನ್‌ ಸ್ಕೀಮ್‌, ಮ್ಯೂಚುಯಲ್‌ ಫಂಡ್‌, ಷೇರು, ಬಾಂಡ್‌, ಚಿನ್ನ, ರಿಯಾಲ್ಟಿ ಹೀಗೆ ವೈವಿಧ್ಯಮ ಹೂಡಿಕೆಯ ಸಾಧನಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ವಿಧಾನವಾಗಿದೆ. ಯಾವುದೇ ಒಂದು ಪಿಂಚಣಿ ಮಾತ್ರ ಈಗಿನ ಹಣದುಬ್ಬರ ಮತ್ತು ಖರ್ಚುವೆಚ್ಚಗಳ ಏರಿಕೆಯ ದಿನಗಳಲ್ಲಿ ಸಾಕು ಎನ್ನಿಸದಿರುವುದು ಇದಕ್ಕೆ ಕಾರಣ. ಸರ್ಕಾರಗಳ ನೀತಿಗಳು ನಾನಾ ಕಾರಣಗಳಿಂದ ಬದಲಾಗಬಹುದು. ಬಹುಶಃ ಒಪಿಎಸ್‌ ಸುಧಾರಿತ ರೂಪದಲ್ಲಿ ಜಾರಿಗೆ ಬರಬಹುದು, ಅಥವಾ ಎನ್‌ಪಿಎಸ್‌ ಅನ್ನು ಮತ್ತಷ್ಟು ಆಕರ್ಷಕಗೊಳಿಸಬಹುದು. ಆದರೆ ಈ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಹೀಗಾಗಿ ಜನ ಸಾಮಾನ್ಯರು, ಮಧ್ಯಮ ವರ್ಗದ ಜನತೆ ಕಾಯುತ್ತಾ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಲಭ್ಯವಿರುವ ವಿಧಾನಗಳಲ್ಲಿಯೇ ಇಳಿ ವಯಸ್ಸಿನ ಅಗತ್ಯದ ಹಣಕಾಸು ಭದ್ರತೆ ಮತ್ತು ಸ್ವಾವಲಂಬನೆಯನ್ನು ಅವರವರೇ ಮಾಡಿಕೊಳ್ಳುವುದು ನಿರ್ಣಾಯಕವಾಗುತ್ತದೆ.

Continue Reading

EXPLAINER

ವಿಸ್ತಾರ Explainer: ಆಸ್ಕರ್‌ ಪಡೆದ The Elephant Whisperers: ಕಾಡು, ಆನೆ, ಮಾನವರ ಬಾಂಧವ್ಯದ ದೃಶ್ಯಕಾವ್ಯ

VISTARANEWS.COM


on

Edited by

elephant whisperers
Koo

ʼದಿ ಎಲಿಫೆಂಟ್‌ ವ್ಹಿಸ್ಪರರ್‌ʼ ಡಾಕ್ಯುಮೆಂಟರಿಯ ಕರ್ಮಕ್ಷೇತ್ರ ಮುದುಮಲೈ ರಕ್ಷಿತಾರಣ್ಯ. ಕರ್ನಾಟಕ, ಕೇರಳ ಮತ್ತು ತಮಿಳುನಾಡು- ಮೂರೂ ರಾಜ್ಯಗಳ ಗಡಿಭಾಗಗಳು ಸೇರುವ ಈ ಸಂರಕ್ಷಿತ ದಟ್ಟ ಕಾಡಿನಲ್ಲಿ ಆನೆಗಳು ಹೆಚ್ಚು. ಒಂದು ಕಡೆ ನಾಗರಹೊಳೆ, ಬಂಡಿಪುರ ರಾಷ್ಟ್ರೀಯ ಅರಣ್ಯಗಳು, ಇನ್ನೊಂದು ಕಡೆ ಸೈಲೆಂಟ್‌ ವ್ಯಾಲಿ ನ್ಯಾಷನಲ್‌ ಪಾರ್ಕ್‌ ಮತ್ತು ಮುಕುರ್ತಿ ಕಾಡು, ಮಗದೊಂದು ಕಡೆ ವಯನಾಡ್‌ ವನ್ಯಜೀವಿ ಧಾಮಗಳಿಂದ ಆವೃತವಾದ ಈ ಕಾಡಿನ 3300 ಚದರ ಕಿಲೋಮೀಟರ್‌ ವ್ಯಾಪ್ತಿಯಲ್ಲಿ 51ಕ್ಕೂ ಅಧಿಕ ಪ್ರಾಣಿ ಪ್ರಭೇದಗಳೂ ನೂರಾರು ಪಕ್ಷಿ ಜಾತಿಗಳೂ ಇವೆ. ಇದು 80ಕ್ಕೂ ಹೆಚ್ಚು ಹುಲಿಗಳಿಗೂ ನೆಲೆಯಾಗಿದೆ.

ದಟ್ಟ ಕಾಡು, ಕುರುಚಲು ಕಾಡು, ಹುಲ್ಲುಗಾವಲು ಮತ್ತು ನೀರಿನ ಆಶ್ರಯಗಳೆಲ್ಲ ಸೇರಿದ ಈ ಕಾಡು ಆನೆಗಳಿಗೆ ಆಶ್ರಯತಾಣ. ಹಲವು ಕ್ಯಾಂಪ್‌ಗಳು ಕೂಡ ಇವೆ. ಅಂಥದೊಂದು ʼತಪ್ಪಕಾಡು ಆನೆ ಕ್ಯಾಂಪ್‌ʼ. ಇದರ ಹತ್ತಿರದ ಪುಟ್ಟ ಗುಡಿಸಲಿನಲ್ಲಿ ಈ ಸಾಕ್ಷ್ಯಚಿತ್ರದ ನಾಯಕ- ನಾಯಕಿಯರಾದ ಬೆಳ್ಳಿ ಮತ್ತು ಬೊಮ್ಮ ಇರುತ್ತಾರೆ. ಇವರು ಸ್ಥಳೀಯ ಕಟ್ಟುನಾಯಕನ್‌ ಬುಡಕಟ್ಟಿಗೆ ಸೇರಿದವರು. ಅವರ ಪ್ರಾಯ ಈಗಾಗಲೇ ಐವತ್ತು ದಾಟಿದೆ. ಅರಣ್ಯ ಇಲಾಖೆ ಇವರಿಗೆ ಪುಟ್ಟ, ಅನಾಥ ಆನೆ ಮರಿಗಳನ್ನು ಸಾಕಿ ದೊಡ್ಡದು ಮಾಡುವ ಹೊಣೆಯನ್ನು ವಹಿಸಿದೆ. ಈ ದಂಪತಿಗಾದರೋ ರಘು ಎಂಬ ಹೆಸರಿನ ಆನೆ ಮರಿಯೇ ಎಲ್ಲಾ. ಅದನ್ನು ನಿತ್ಯ ಮೀಯಿಸುವುದು, ಅನ್ನ- ಬೆಲ್ಲ ತಿನ್ನಿಸುವುದು, ವಾಕಿಂಗ್‌ ಮಾಡಿಸುವುದು ಎಲ್ಲಾ ಇವರೇ. ಆ ಮರಿಯಾದರೋ ಇವರ ಜೊತೆ ಎಷ್ಟು ಬೆರೆತಿದೆಯೆಂದರೆ ಎಲ್ಲ ಮಾತುಗಳನ್ನೂ ಅರ್ಥ ಮಾಡಿಕೊಳ್ಳುತ್ತದೆ. ಅದರ ಗಾಯಗಳನ್ನು ನಿವಾರಿಸಿ, ಉಣ್ಣಿಸಿ, ಮುದ್ದಿಸಿ ಬೆಳೆಸುವ ದಂಪತಿಗೆ ಅದು ಜೀವದ ಜೀವ.

ಈ ಕಾಡಿನಲ್ಲಿ ಅಪಾಯಗಳೂ ಇವೆ. ಹುಲಿಗಳು, ಚಿರತೆಗಳಿವೆ, ಹಾವುಗಳಿವೆ. ಆದರೆ ಯಾವುದೂ ಇವರ ಆತ್ಮೀಯ ಬಂಧವನ್ನು ಸಡಿಸಲಿಸಲಾರದು. ಬೆಳಗಾಗುತ್ತದೆ, ರಾತ್ರಿಯಾಗುತ್ತದೆ. ರಾತ್ರಿ ದಂಪತಿ ಸೌದೆ ಬೆಂಕಿಯ ಮುಂದೆ ಕುಳಿತು ಮಾತಾಡುತ್ತಿದ್ದರೆ ಒಳಗಿನಿಂದ ಪುಟ್ಟ ಆನೆ ಮರಿ ಸೊಂಡಿಲು ತೂರಿಸಿ ಇವರ ಜತೆ ಚಿನ್ನಾಟವಾಡಲು ಬಯಸುತ್ತದೆ. ತಣ್ಣೀರಿನಲ್ಲಿ ಮೀಯಿಸುವಾಗ ದಂಪತಿಗಳನ್ನೂ ತೋಯ್ದು ತೊಪ್ಪಡಿಯಾಗಿಸುವ ರಘುವಿನ ಆಟ.

ರಘು ಸ್ವಲ್ಪ ದೊಡ್ಡವನಾದ ಬಳಿಕ ಇಂಥ ಟೀನೇಜ್‌ ಆನೆಮರಿಗಳನ್ನು ನೋಡಿಕೊಳ್ಳುವ ಬೇರೊಂದು ಕಡೆಗೆ ರಘುವನ್ನು ಶಿಫ್ಟ್‌ ಮಾಡಲಾಗುತ್ತದೆ. ಆಗ ಬೆಳ್ಳಿ- ಬೊಮ್ಮ ದಂಪತಿ ಅನುಭವಿಸುವ ಮೂಕವೇದನೆ! ಆ ಕಾಡಿನ ನಡುವೆ ಸದ್ದಿಲ್ಲದೇ ಬೆಸೆದ ಭಾವಬಂಧವೊಂದು ಹಾಗೆಲ್ಲಾ ಕಡಿದುಹೋಗದು. ಈಗ ರಘುವಿನ ಜಾಗದಲ್ಲಿ ಅಮ್ಮು ಎಂಬ ಹೆಸರಿನ ಅಷ್ಟೇ ಮುದ್ದಾದ ಮತ್ತೂ ಪುಟ್ಟ ಮರಿಯೊಂದು ಬಂದಿದೆ. ಬೆಳ್ಳಿ- ಬೊಮ್ಮರ ಬದುಕಿನ ಚಕ್ರ ಮತ್ತೆ ಮೊದಲಿನಿಂದ ತಿರುಗಲಾರಂಭವಾಗುತ್ತದೆ.

ಕಾಡಿನ ಜೀವನಚಕ್ರ- ಸಣ್ಣಪುಟ್ಟ ಭಾವನಾತ್ಮಕ ತೊರೆಗಳ ಹರಿವು ಹೊಂದಿರುವ ಈ ನಲುವತ್ತು ನಿಮಿಷಗಳ ಸಾಕ್ಷ್ಯಚಿತ್ರ ʼದಿ ಎಲಿಫೆಂಟ್‌ ವ್ಹಿಸ್ಪರರ್ಸ್ಸ್‌ʼ ಅರ್ಹವಾಗಿಯೇ ಆಸ್ಕರ್‌ ಪ್ರಶಸ್ತಿ ಗೆದ್ದಿದೆ. ಈ ಆನೆ ಕ್ಯಾಂಪ್‌ಗಳು ಕರ್ನಾಟಕದ ಗಡಿ ಭಾಗದಲ್ಲಿಯೇ ಇರುವುದರಿಂದ ಇಲ್ಲಿನ ಮಾವುತರು, ಕಾವಾಡಿಗಳು ಕನ್ನಡವನ್ನೂ ಮಾತಾಡುತ್ತಾರೆ. ಹೀಗಾಗಿ ಸಾಕ್ಷ್ಯಚಿತ್ರದ ಅಲ್ಲಲ್ಲಿ ಕನ್ನಡ ಇಣುಕಿದೆ. ಉಳಿದಂತೆ ಕಾವಾಡಿ- ಮಾವುತರಿಗೇ ವಿಶಿಷ್ಟವಾದ ತಮಿಳು ಪ್ರಾಧಾನ್ಯದ ಮಿಶ್ರ ಭಾಷೆಯೊಂದರಲ್ಲಿ ಮಾತನಾಡುತ್ತಾರೆ.

ʼʼನಮ್ಮ ಹಾಗೂ ಪ್ರಾಕೃತಿಕ ಜಗತ್ತಿನ ನಡುವೆ ಇರುವ ಪವಿತ್ರ ಬಂಧ, ಸಹಬಾಳ್ವೆಗಾಗಿ ನಾವು ಸ್ಥಳೀಯ ಸಮುದಾಯಗಳೊಂದಿಗೆ ಹಂಚಿಕೊಳ್ಳಬೇಕಾದ ಗೌರವ ಮತ್ತು ಸಹಾನುಭೂತಿಯ ಪರವಾಗಿ ಮಾತನಾಡಲೋಸುಗ ನಾನಿಲ್ಲಿ ಇಂದು ನಿಂತಿದ್ದೇನೆʼʼ ಎಂದು ಈ ಚಿತ್ರವನ್ನು ನಿರ್ದೇಶಿಸಿದ ಕಾರ್ತಿಕಿ ಗೊನ್ಸಾಲ್ವಿಸ್‌ ಆಸ್ಕರ್‌ ವೇದಿಕೆಯ ಮುಂದೆ ಹೇಳಿದ್ದಾರೆ. ಇದು ನಿಜ ಎನ್ನಿಸುವಂತೆ ಈ ಚಿತ್ರ ಪ್ರಕೃತಿಯ ನಡುವೆಯೇ ಅಲ್ಲಿನ ಪ್ರಾಣಿಗಳ ನಡುವೆ ಬದುಕಿರುವ ಬೆಳ್ಳಿ-ಬೊಮ್ಮರಂಥವರ ಹಾಡು ಪಾಡುಗಳ ಜತೆಗೇ ನಾವು ಅದನ್ನು ಪ್ರೀತಿಯಿಂದ ನೋಡಬೇಕಾದ‌, ಗೌರವಿಸಬೇಕಾದ ರೀತಿಯ ಬಗ್ಗೆ ಒಂದು ಘನವಾದ ನಿರೂಪಣೆಯಲ್ಲಿ ಕಟ್ಟಿಕೊಡುತ್ತದೆ.

ನಲುವತ್ತು ನಿಮಿಷಗಳ ಈ ಡಾಕ್ಯುಮೆಂಟರಿಯ ತುಂಬ ಹಸಿರು, ನೀರು, ಆನೆ, ಪುಟ್ಟ ಮಾತುಗಳು, ಆನೆಗಳು, ಮಾವುತರು ತುಂಬಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ನೀವು ನೋಡಬಹುದಾಗಿರುವ ಈ ಡಾಕ್ಯುಮೆಂಟರಿ ಈಗ ಮುದುಮಲೈ ರಕ್ಷಿತಾರಣ್ಯದ ಬಗ್ಗೆಯೂ ಆಸಕ್ತರ ಗಮನ ಸೆಳೆದಿದೆ. ಕರ್ನಾಟಕಕ್ಕೆ ಹತ್ತಿರವಾಗಿರುವ ಈ ತಾಣಕ್ಕೆ ನೀವು ಭೇಟಿ ನೀಡಬಹುದಾದ ಸಮಯ ಎಂದರೆ ಮಾರ್ಚ್‌ನಿಂದ ಜೂನ್‌ ಹಾಗೂ ಸೆಪ್ಟೆಂಬರ್‌ನಿಂದ ಅಕ್ಟೋಬರ್.‌

ಇದನ್ನೂ ಓದಿ: Oscars 2023: ಕನ್ನಡಿಗರ ಲಹರಿ ಸಂಸ್ಥೆ ಬಳಿ ಇದೆ ʻನಾಟು ನಾಟುʼ ಹಾಡಿನ ಹಕ್ಕು!

ಮನುಷ್ಯರಂತೆಯೇ ಪ್ರಾಣಿಗಳಿಗೂ ಭಾವನಾತ್ಮಕ ಬಾಂಧವ್ಯ ಅಗತ್ಯ ಎಂಬುದನ್ನು ಈ ಡಾಕ್ಯುಮೆಂಟರಿ ಹೆಚ್ಚಿನ ಅಬ್ಬರವಿಲ್ಲದೇ ಕಟ್ಟಿಕೊಡುತ್ತದೆ. ಬೆಳ್ಳಿಯ ಬಳಿ ಬಂದು ರಘು ಆಕೆಯ ಮಡಿಲಿನಲ್ಲಿ ತಲೆಯಿಟ್ಟು ಮಲಗಲು ಯತ್ನಿಸುವುದು, ರಘುವಿನ ಅಗಲಿಕೆಯಿಂದ ನೊಂದ ಬೆಳ್ಳಿಯ ಕಣ್ಣೀರನ್ನು ಅಮ್ಮು ಒರೆಸುವುದು ಮುಂತಾದ ದೃಶ್ಯಗಳು ಸಹಜವಾಗಿಯೇ ಚಿತ್ರಿತವಾಗಿ ಡಾಕ್ಯುಮೆಂಟರಿಗೆ ಬೇರೆಯದೇ ಮಟ್ಟದ ಸೌಂದರ್ಯವನ್ನು ನೀಡಿವೆ. ಇವು ಕಾರ್ತಿಕಿಗೆ ಕೂಡ ಫೇವರಿಟ್‌ ಸೀನುಗಳಂತೆ.

ಯಾರು ಈ ಕಾರ್ತಿಕಿ?

elephant whisperers

ಕಾರ್ತಿಕಿ ಗೊನ್ಸಾಲ್ವೆಸ್ ಅವರು ʼಸೋನಿ ಆರ್ಟಿಸನ್‌ʼ ಅಂದರೆ ಸೋನಿ ಆಲ್ಫಾ ಸರಣಿಯ ಸೋನಿ ಇಮೇಜಿಂಗ್ ರಾಯಭಾರಿಯಾಗಿ ಭಾರತದಲ್ಲಿ ಆಯ್ಕೆಯಾದ ಮೊದಲ ಮಹಿಳೆಯರಲ್ಲಿ ಒಬ್ಬರು. ಇವರು ಫೋಟೋ ಜರ್ನಲಿಸ್ಟ್‌, ಡಾಕ್ಯುಮೆಂಟರಿಗಳ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ ಕೂಡ. ಭಾರತದ ಊಟಿ ಮತ್ತು ಮುಂಬಯಿಯಲ್ಲಿ ವಾಸ. ಪರಿಸರ, ಪ್ರಕೃತಿ, ವನ್ಯಜೀವಿಗಳ ವೈವಿಧ್ಯತೆ ಮತ್ತು ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಾರೆ. ಸ್ಥಳೀಯ ಸಂಸ್ಕೃತಿಗಳು, ಸಮುದಾಯಗಳ ಅಧ್ಯಯನ, ದಾಖಲೀಕರಣ ಇವರ ಇನ್ನೊಂದು ಆಸಕ್ತಿ.

ಅವರು ಪ್ರಸ್ತುತ ಮೂರು ದೀರ್ಘಾವಧಿಯ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ: ಪಶ್ಚಿಮ ಘಟ್ಟಗಳ ಎತ್ತರದ ಪರ್ವತಗಳಲ್ಲಿ ವಾಸಿಸುವ ಕಾಡು ಬೆಕ್ಕುಗಳ ಜೀವನ ದಾಖಲೀಕರಣ. ಇತ್ತೀಚೆಗೆ ಮಧ್ಯ ಭಾರತದ ಹಳ್ಳಿಯೊಂದರಲ್ಲಿ ಆದಿವಾಸಿ ಮತ್ತು ಬಿಯೆಲ್ ಸಮುದಾಯಗಳ ಸ್ಥಳೀಯ ಸಾಂಪ್ರದಾಯಿಕ ಕಲಾವಿದರ ಜೀವನ, ಕಥೆಗಳು ಮತ್ತು ಕಲೆಯನ್ನು ದಾಖಲಿಸಿಕೊಂಡಿದ್ದಾರೆ. ಗ್ರೇಟರ್ ಹಿಮಾಲಯದ ಭಾರತ-ಚೀನೀ ಗಡಿಯ ಶೀತ ಎತ್ತರದ ಮರುಭೂಮಿಗಳಲ್ಲಿನ ಜೀವನವನ್ನು ದಾಖಲಿಸುವ ಕಾರ್ಯವನ್ನೂ ಅವರು ಮಾಡಿದ್ದಾರೆ.

ʼದಿ ಎಲಿಫೆಂಟ್‌ ವ್ಹಿಸ್ಪರೆರ್‌ʼ ಚಿತ್ರವನ್ನು ಸಿಖ್ಯಾ ಪ್ರೊಡಕ್ಷನ್ಸ್‌ ನಿರ್ಮಿಸಿದೆ. ಗುನೀತ್‌ ಮೋಂಗಾ ನಿರ್ಮಾಣದಲ್ಲಿ ಸಹಕರಿಸಿದ್ದಾರೆ. 2022ರ ನವೆಂಬರ್‌ 9ರಂದು DOC NYC ಫಿಲಂ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್‌ ಆಯಿತು. ಅಲ್ಲಿಂದ ನೆಟ್‌ಫ್ಲಿಕ್ಸ್‌ ಒಟಿಟಿಗೆ ಬಂತು. ಅಮೆರಿಕದ ಪ್ರತಿಷ್ಠಿತ ಫಿಲಂ ಫೆಸ್ಟಿವಲ್‌ಗಳಲ್ಲೂ ಕಾಣಿಸಿಕೊಂಡಿದೆ.

ಇದನ್ನೂ ಓದಿ: Oscars 2023: ‘ನಾನಿನ್ನೂ ನಡುಗುತ್ತಿದ್ದೇನೆ‘; ಆಸ್ಕರ್​ ಗೆದ್ದ ಬಳಿಕದ ಉದ್ವೇಗ ವ್ಯಕ್ತಪಡಿಸಿದ ದಿ ಎಲಿಫೆಂಟ್​ ವಿಸ್ಪರರ್ಸ್ ನಿರ್ಮಾಪಕಿ

Continue Reading
Advertisement
Jio True 5G service launched in 41 cities including KGF's robertsonpet
ಕರ್ನಾಟಕ2 mins ago

ಕೆಜಿಎಫ್‌ನ ರಾಬರ್ಟಸನ್ ಪೇಟೆ ಸೇರಿ 41 ನಗರಗಳಲ್ಲಿ Jio True 5G ಸೇವೆ ಶುರು

Had Kohli not appealed, he would not have applied for the post of head coach
ಕ್ರಿಕೆಟ್16 mins ago

Team India : ಕೊಹ್ಲಿ ಮನವಿ ಮಾಡದೇ ಹೋಗಿದ್ದರೆ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸುತ್ತಿರಲಿಲ್ಲ​

Man Dips Leafy Vegetables In Chemical Solution, Here is a video
ದೇಶ24 mins ago

Viral Video: ನೀವು ತಿನ್ನುವ ‘ತಾಜಾ’ ತರಕಾರಿ ರಾಸಾಯನಿಕಯುಕ್ತ, ಹೇಗೆ ಅಂತೀರಾ? ಇಲ್ಲಿದೆ ವಿಡಿಯೊ

ಸಿನಿಮಾ29 mins ago

Rashmika Mandanna: ದ್ವೇಷಿಸುವವರನ್ನು ಹೇಗೆ ಎದುರಿಸಬೇಕೆಂದು ಪಾಠ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

inflation
ವಾಣಿಜ್ಯ31 mins ago

Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ

Delhi team won the toss against UP and chose fielding
ಕ್ರಿಕೆಟ್33 mins ago

WPL 2023 : ಯುಪಿ ವಿರುದ್ಧ ಟಾಸ್​ ಗೆದ್ದ ಡೆಲ್ಲಿ ತಂಡದಿಂದ ಫೀಲ್ಡಿಂಗ್ ಆಯ್ಕೆ

savadatti accident
ಕರ್ನಾಟಕ37 mins ago

Road accident : ಸವದತ್ತಿ ಪಟ್ಟಣದಲ್ಲಿ ಲಾರಿ ಬ್ರೇಕ್‌ ಫೇಲ್‌ ಆಗಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರು ಮೃತ್ಯು

HP Pavilion Aero 13 Laptop Launched and Check details
ಗ್ಯಾಜೆಟ್ಸ್39 mins ago

HP Pavilion Aero 13 ಲ್ಯಾಪ್‌ಟಾಪ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ? ಬೆಲೆ ಎಷ್ಟು?

ಕರ್ನಾಟಕ41 mins ago

Basavaraj Bommai: ವಿಜಯಪುರದಲ್ಲಿ 4.64 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿ; ಬೊಮ್ಮಾಯಿ

congress says cm basavraj bommai will not get chance to contest inkarnataka election
ಕರ್ನಾಟಕ52 mins ago

Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್‌ ಸಿಗುವುದು ಡೌಟು ಎಂದ ಕಾಂಗ್ರೆಸ್‌

7th Pay Commission
ನೌಕರರ ಕಾರ್ನರ್5 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ2 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Govt employees ssociation
ಕರ್ನಾಟಕ1 month ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ1 month ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Paid leave for govt employees involved in the strike
ನೌಕರರ ಕಾರ್ನರ್3 weeks ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ3 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

Teacher Transfer
ನೌಕರರ ಕಾರ್ನರ್5 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

7th Pay Commission
ಕರ್ನಾಟಕ4 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Land Surveyor Recruitment
ಉದ್ಯೋಗ1 month ago

Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ2 hours ago

Halal Ban: ಯುಗಾದಿಗೆ ಹಲಾಲ್‌ ಕಟ್‌ ಬಹಿಷ್ಕರಿಸಿ, ಜಟ್ಕಾ ಮಾಂಸ ಖರೀದಿ; ಮತ್ತೆ ಬೀದಿಗಿಳಿದ ಹಿಂದು ಕಾರ್ಯಕರ್ತರು

Did Dinesh Gundu Rao distribute damaged sarees in Gandhinagar for Ugadi festival?
ಕರ್ನಾಟಕ7 hours ago

Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್‌ ಗುಂಡೂರಾವ್‌? ಸೀರೆ ನೀಡಿ ಮಹಿಳೆಯರ ಕಿಡಿ

ಕರ್ನಾಟಕ8 hours ago

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

BMTC bus window shattered as police refused to allow auto drivers rally
ಕರ್ನಾಟಕ1 day ago

Auto Strike In Bengaluru: ಆಟೋ ಚಾಲಕರ ರ‍್ಯಾಲಿಗೆ ಅವಕಾಶ ನೀಡದ ಖಾಕಿ ಪಡೆ; ಬಿಎಂಟಿಸಿ ಬಸ್ ಗಾಜು ಒಡೆದು ಆಕ್ರೋಶ

Drivers oppose Rapido bike taxi in bengaluru Extra BMTC buses ply on road, auto stopped plying
ಕರ್ನಾಟಕ1 day ago

Auto Strike: ರ‍್ಯಾಪಿಡೋ ಬೈಕ್‌ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್‌, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್‌

someone cant tell the truth that Tipu used to charge high taxes on Hindus says Hariprakash konemane
ಕರ್ನಾಟಕ2 days ago

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Auto services to be stopped from Sunday midnight, Drivers protest against whiteboard bike taxi
ಕರ್ನಾಟಕ2 days ago

Bengaluru Auto Bandh: ಬೈಕ್‌ ಟ್ಯಾಕ್ಸಿಗೆ ವಿರೋಧ; ಭಾನುವಾರ ಮಧ್ಯರಾತ್ರಿಯಿಂದಲೇ ಆಟೋ ಸಂಚಾರ ಸ್ಥಗಿತ

Organizing our Power Run Marathon in the name of puneeth rajkumar
ಕರ್ನಾಟಕ2 days ago

Puneeth Rajkumar: ಅಪ್ಪು ಹೆಸರಲ್ಲಿ ನಮ್ಮ ಪವರ್ ರನ್ ಮ್ಯಾರಥಾನ್; ಅಶ್ವಿನಿ ಪುನೀತ್‌ ಚಾಲನೆ

Due to heavy rains, motorists struggle on Bengaluru-Mysuru dashapatha
ಕರ್ನಾಟಕ3 days ago

Karnataka Rain: ಸರಾಗವಾಗಿ ಹರಿಯದ ಮಳೆ ನೀರು, ಕೈಕೊಟ್ಟ ವಾಹನ; ಬೆಂಗಳೂರು-ಮೈಸೂರು ದಶಪಥದಲ್ಲಿ ದಿಕ್ಕೆಟ್ಟ ಪ್ರಯಾಣಿಕರು!

ಕರ್ನಾಟಕ6 days ago

Karnataka Election 2023: ಧ್ರುವನಾರಾಯಣ ಪುತ್ರ ದರ್ಶನ್‌ಗಾಗಿ ನಂಜನಗೂಡು ಟಿಕೆಟ್ ತ್ಯಾಗ ಮಾಡಿದ ಎಚ್.ಸಿ. ಮಹದೇವಪ್ಪ

ಟ್ರೆಂಡಿಂಗ್‌

error: Content is protected !!