Site icon Vistara News

ಲೋಕಸಭೆ ಎಲೆಕ್ಷನ್‌ನಲ್ಲಿ ಹೆಚ್ಚು ಸೀಟ್ ಗೆಲ್ಲಿ, ಇಲ್ಲದಿದ್ದರೆ ಬಿಜೆಪಿಯಿಂದ ಸರ್ಕಾರಕ್ಕೆ ಕಂಟಕ; ಖರ್ಗೆ ಎಚ್ಚರಿಕೆ

Win more seats in Karnataka the Lok Sabha elections Says Mallikarjun Kharge

ನವದೆಹಲಿ: ಲೋಕಸಭೆ ಚುನಾವಣೆಗೆ (Lok Sabha Election) ಕಾಂಗ್ರೆಸ್ ಪಕ್ಷವು (Congress Party) ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ಗುರುವಾರ ಪಕ್ಷದ ದಿಲ್ಲಿಯ ಕೇಂದ್ರ ಕಚೇರಿಯಲ್ಲಿ ಕರ್ನಾಟಕ(Karnataka), ತೆಲಂಗಾಣ(Telangana), ಆಂಧ್ರ ಪ್ರದೇಶ (Andhra Pradesh) ನಾಯಕರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjun Kharge) ಅವರು ಮಾತುಕತೆ ನಡೆಸಿದರು. ಸಭೆಯಲ್ಲಿ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಮೇಲೆ ಹೆಚ್ಚಿನ ನಿರೀಕ್ಷೆ ಇರುವುದಾಗಿ ಹೇಳಿದ್ದಾರೆ. ಕರ್ನಾಟಕದ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುವ ಹೊಣೆಗಾರಿಕೆಯನ್ನು ಸಚಿವರ ಹೆಗಲಿಗೆ ಹಾಕಿದ್ದಾರೆ. ಅಲ್ಲದೇ, ಡಿಸಿಎಂ (DCM Post) ಬಗ್ಗೆ ಬಹಿರಂಗ ಹೇಳಿಕೆ ನೀಡಿದಂತೆ ತಾಕೀತು ಮಾಡಿದ್ದಾರೆಂದು ತಿಳಿದು ಬಂದಿದೆ. ಖರ್ಗೆ ಅವರು ದಕ್ಷಿಣ ಭಾರತದ (South India) ರಾಜ್ಯಗಳ ಎಲ್ಲ ನಾಯಕರ ಜತೆಗೂ ಮಾತುಕತೆ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಗೆಲ್ಲಲು ಸಚಿವರು ಶ್ರಮ ಹಾಕುವುದು ಅತ್ಯಗತ್ಯ. ಇಲ್ಲದಿದ್ದರೆ ಸಚಿವರಾಗಿ ಏನು ಪ್ರಯೋಜನ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾರ ಉಳಿಯಬೇಕು ಅಂದರೆ ಲೋಕಸಭೆಯನ್ನು ಚುನಾವಣೆಯನ್ನು ಗೆಲ್ಲಲೇಬೇಕು. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲೂ ಸರ್ಕಾರ ಅಸ್ಥಿರಗೊಳ್ಳಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷವು ದಕ್ಷಿಣ ಭಾರತದಲ್ಲಿ ಕನಿಷ್ಠ 60-70 ಸೀಟ್ ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ. ನಮ್ಮ ರಾಜ್ಯದಲ್ಲಿಯೂ ಸಹ ಆದಷ್ಟು ಸೀಟ್ ಗಳನ್ನ ಗಳಿಸುವಲ್ಲಿ ಯಶಸ್ವಿಯಾಗಬೇಕು. ಕರ್ನಾಟಕದಲ್ಲಿ ಗೆಲ್ಲದಿದ್ದರೆ ಎಐಸಿಸಿ ಅಧ್ಯಕ್ಷರ ರಾಜ್ಯದಲ್ಲಿಯೇ ಆಗಿಲ್ಲ ಅನ್ನೋ ಮಾತು ಬರುತ್ತೆ. ನಮಗೆ ದಕ್ಷಿಣ ಭಾರತ ಬಹಳ ಮುಖ್ಯ. ಕನಿಷ್ಠ ನಮ್ಮ ಟಾರ್ಗೆಟ್ 70 ಇಟ್ಟುಕೊಳ್ಳಲೇಬೇಕು. ನೀವು ಈಗ ಶ್ರಮ ಹಾಕದೆ ವ್ಯರ್ಥ ಮಾಡಿದಿರಿ ಎಂದರೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ಖರ್ಗೆ ಅವರು ಹೇಳಿದ್ದಾರೆ.

ಸಚಿವರಿಗೆ ಹೆಚ್ಚಿನ ಕ್ಯಾಪಾಸಿಟಿ ಇರಬೇಕು, ಗೆದ್ದು ಗೆಲ್ಲಿಸುಕೊಂಡು ಬರುವ ತಾಕತ್ತು ಇರಬೇಕು. ನೀವು ಹೆಚ್ಚು ಕ್ಷೇತ್ರಗಳನ್ನ ಗೆದ್ದಿಲ್ಲ ಅಂದ್ರೆ, ಸಚಿವರಾಗಿ ಉಳಿಯಲು ನಿಮಗೆ ಯಾವ ನೈತಿಕತೆ ಇರುತ್ತೆ? ನಿಮ್ಮ ಜಿಲ್ಲೆಯನ್ನು ಸೋತ ನೀವೂ ಯಾವ ನೈತಿಕತೆ ಮೇಲೆ ಸಚಿವ ಸ್ಥಾನದಲ್ಲಿ ಮುಂದುವರಿಯುತ್ತೀರಿ. ಎಲೆಕ್ಷನ್ ಅನ್ನು ಗಂಭೀರವಾಗಿ ಪರಿಗಣಿಸಿ, ಕೆಲಸ ಶುರು ಮಾಡಿ. ಈಗಿನಿಂದ ಕೆಲಸ ಪ್ರಾರಂಭ ಮಾಡಿದ್ರೆ ಸಕ್ಸಸ್ ಕಾಣಬಹುದು. ನೀವು ಸ್ವಲ್ಪ ನೆಗ್ಲೆಟ್ ಮಾಡಿದ್ರೂ ಸಹ ನಮಗೆ ಲಾಸ್ ಆಗಲಿದೆ ಎಂದು ಕಾಂಗ್ರೆಸ್ ಹೈ ಕಮಾಂಡ್ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಡಿಸಿಎಂ ವಿಚಾರ ಪ್ರಸ್ತಾಪ ಬೇಡ

ಇದೇ ವೇಳೆ, ಕರ್ನಾಟಕದಲ್ಲಿ ಡಿಸಿಎಂ ಪದೇ ಪದೇ ಪ್ರಸ್ತಾಪಿಸುತ್ತಿರುವ ಬಗ್ಗೆಯೂ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಡಿಸಿಎಂ ವಿಚಾರ ಯಾಕೆ ಪದೇ ಪದೇ ಬಹಿರಂಗವಾಗಿ ಪ್ರಸ್ತಾಪ ಮಾಡ್ತಾ ಇದ್ದೀರಾ? ಡಿಸಿಎಂ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡುವುದು ಒಳ್ಳೆಯದಲ್ಲ. ಸಚಿವರು ಯಾಕೆ ಬಹಿರಂಗವಾಗಿ ಡಿಸಿಎಂ ಬಗ್ಗೆ ಹೇಳಿಕೆಗಳನ್ನ ನೀಡುತ್ತಿದ್ದೀರಾ? ಬಹಿರಂಗವಾಗಿ ಚರ್ಚೆ ಮಾಡಿದರೆ ಏನಾದ್ರೂ ಲಾಭ ಆಗುತ್ತಾ ಎಂದು ಪ್ರಶ್ನಿಸಿದ ಖರ್ಗೆ ಅವರು ಡಿಸಿಎಂ ಬಗ್ಗೆ ಬಹಿರಂಗ ಚರ್ಚೆ ಮಾಡದಂತೆ ಸಚಿವರಿಗೆ ಸೂಚಿಸಿದರು.

ಈ ಸುದ್ದಿಯನ್ನೂ ಓದಿ: Lok Sabha Election: ಲೋಕಸಭೆ ಎಲೆಕ್ಷನ್ ಮೋದಿ v/s ಖರ್ಗೆ! ಕುತೂಹಲ ಕೆರಳಿಸಿದ ‘ಇಂಡಿಯಾ’ ನಡೆ

Exit mobile version