Site icon Vistara News

Janatha Darshan : QR ಕೋಡ್‌ ಬಳಸಿ ಸಿಎಂಗೆ ದೂರು ನೀಡಿ ಎಂದ ಸಿಎಂ ಕಾರ್ಯಾಲಯ; ಈ ಸೇವೆ ಇಲ್ಲವೆಂದ 1902!

CM Siddaramaiah Janatha Darshan QR Code

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಜನತಾ ದರ್ಶನವನ್ನು (Janatha Darshan) ಸೋಮವಾರ (ನ. 27) ಪ್ರಾರಂಭ ಮಾಡಿದ್ದಾರೆ. ಇಲ್ಲಿ ದೂರು ಸಲ್ಲಿಸಲು ಕಷ್ಟಪಟ್ಟು ಬರಬೇಕಿಲ್ಲ. ಮನೆಯಲ್ಲಿಯೇ ಕುಳಿತು ದೂರು ನೀಡಬಹುದಾಗಿದೆ. ಇದಕ್ಕಾಗಿ ಕ್ಯೂಆರ್‌ ಕೋಡ್‌ (QR Code) ಬಳಸಿದರೆ ಸಾಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಾಲಯವು ಪ್ರಕಟಣೆ ಮೂಲಕ ವಿಷಯ ತಿಳಿಸಿತ್ತು. ಆದರೆ, ಈ ಬಗ್ಗೆ ವಿಸ್ತಾರ ನ್ಯೂಸ್‌ ರಿಯಾಲಿಟಿ ಚೆಕ್‌ (Vistara News Reality Check) ಮಾಡಿದಾಗ ಈ ಸೇವೆಯನ್ನು ಸದ್ಯಕ್ಕೆ ನೀಡಲಾಗಿಲ್ಲ ಎಂದು ಸಹಾಯವಾಣಿ (Helpline Number) 1902 ಸಿಬ್ಬಂದಿ ಹೇಳಿದ್ದಾರೆ. ಸಿಎಂಗೆ ಜನತಾ ದರ್ಶನದಲ್ಲಿ ದೂರು ನೀಡಬೇಕಾದರೆ ಸಿಎಂ ಗೃಹ ಕಚೇರಿಗೇ ಹೋಗಬೇಕು. ಇಲ್ಲವಾದಲ್ಲಿ ತಮ್ಮ ಬಳಿಯೇ ದೂರು ಹೇಳಿದರೆ ಸಿಎಂ ಜನತಾ ದರ್ಶನ ಕೆಟಗರಿ ದಾಖಲು ಮಾಡಿಕೊಳ್ಳಲಾಗುವುದು ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೆ, ಕ್ಯೂಆರ್‌ ಕೋಡ್‌ ಬಳಸಿ ದೂರು ನೀಡುವ ಸೌಲಭ್ಯವನ್ನು ಮಾತ್ರ ಕಲ್ಪಿಸಲಾಗಿಲ್ಲ.

ಮನೆಯಲ್ಲೇ ಕುಳಿತು ಕುಂದುಕೊರತೆ/ಅಹವಾಲು ದಾಖಲಿಸಲು ಅನುವಾಗುವಂತೆ ಪ್ರತ್ಯೇಕ ಕ್ಯೂಆರ್‌ ಕೋಡ್‌ (QR Code) ಸೃಜಿಸಲಾಗಿದೆ. ಇದನ್ನು ಸ್ಕಾನ್‌ ಮಾಡಿ ಕುಂದುಕೊರತೆ/ಅಹವಾಲುಗಳನ್ನು ಸಲ್ಲಿಸಬಹುದು. ಇದನ್ನು ಮಾನ್ಯ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಯೇ ಸ್ವೀಕೃತವಾದ ಅಹವಾಲೆಂದು ಪರಿಗಣಿಸಲಾಗುತ್ತದೆ ಎಂದು ಸಿಎಂ ಕಾರ್ಯಾಲಯದಿಂದ ಪ್ರಕಟಣೆಯೊಂದು ಹೊರಬಿದ್ದಿತ್ತು.

ಈ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ ಸಹಾಯವಾಣೀ 1902ಗೆ ಸಂಪರ್ಕಿಸಿ, ಕ್ಯೂಆರ್‌ ಕೋಡ್‌ ಎಲ್ಲಿ ಲಭ್ಯವಾಗುತ್ತದೆ ಎಂದು ಪ್ರಶ್ನೆ ಮಾಡಿದೆ. ಆಗ ಅಲ್ಲಿನ ಸಿಬ್ಬಂದಿ ಆ ರೀತಿಯ ಸೇವೆ ಪ್ರಾರಂಭವಾಗಿಲ್ಲ. ಸಿಎಂಗೆ ಜನತಾ ದರ್ಶನದ ಅಡಿ ದೂರು ನೀಡಬೇಕಿದ್ದರೆ ಸ್ವತಃ ಅಲ್ಲಿಗೇ ಹೋಗಿ ನೀಡಬೇಕು. ಒಂದು ವೇಳೆ ಅಲ್ಲಿಗೆ ಹೋಗಿ ದೂರು ನೀಡಲು ಸಾಧ್ಯವಾಗದೇ ಇದ್ದು, ಅನಿವಾರ್ಯ ಇದ್ದಲ್ಲಿ ತಮಗೇ ಸಮಸ್ಯೆಗಳನ್ನು ತಿಳಿಸಿದಲ್ಲಿ ದೂರನ್ನು ಸ್ವೀಕಾರ ಮಾಡಲಾಗುವುದು. ಇದಕ್ಕಾಗಿ ಇನ್ನೂ ಯಾವುದೇ ಕ್ಯೂ ಆರ್‌ ಕೋಡ್‌ ಅನ್ನು ಇದಕ್ಕಾಗಿ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

1902ಗೆ ಕರೆ ಮಾಡಿ ದೂರು ದಾಖಲಿಸಿ

1902 ಸಹಾಯವಾಣಿಯನ್ನು ರಾಜ್ಯ ಸರ್ಕಾರ ಈಗಾಗಲೇ ತೆರೆದಿದೆ. ಜನತಾ ದರ್ಶನಕ್ಕೆ ದೂರದ ಊರಿನಿಂದ ಹೋಗಲು ಆಗದವರು, ತೀವ್ರ ಸಮಸ್ಯೆ ಎದುರಿಸುತ್ತಿರುವವರು ಯಾರಾದರೂ ಇದ್ದರೆ ಸಿಎಂ ಗಮನಕ್ಕೆ ತರುವ ಸಂಬಂಧ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಅಲ್ಲಿ ನಿಮ್ಮ ಸಮಸ್ಯೆಗಳನ್ನು ಹೇಳಬೇಕು. ಅವರು ನಿಮ್ಮ ಅಹವಾಲುಗಳನ್ನು ಆಧರಿಸಿ ಅದನ್ನು ಜನತಾ ದರ್ಶನ ಕೆಟಗರಿ ಅಡಿ ದೂರು ದಾಖಲು ಮಾಡಿಕೊಳ್ಳುತ್ತಾರೆ.

ಹೀಗೆ ದೂರು ದಾಖಲು ಮಾಡುವಾಗ ನಿಮ್ಮ ಸಮಸ್ಯೆ, ವಿಳಾಸ, ಮೊಬೈಲ್‌ ಸಂಖ್ಯೆಯನ್ನು ಪಡೆದು ಅದರಲ್ಲಿ ನಮೂದು ಮಾಡಲಾಗುತ್ತದೆ. ಈ ದೂರು ಸಿಎಂ ಜನತಾ ದರ್ಶನ ಕೆಟಗರಿ ಮೂಲಕ ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡಲಾಗುತ್ತದೆ. ಆದರೆ, ಮುಂದಿನ ಹಂತದ ಬಗ್ಗೆ ಸ್ಪಷ್ಟತೆಯನ್ನು ನೀಡಲಾಗಿಲ್ಲ.

ಮುಂದಿನ ಕ್ರಮ ಏನು?

ಒಂದು ವೇಳೆ 1092 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಾದರೆ ನಿಮಗೊಂದು ಐಡಿ ಸಂಖ್ಯೆಯನ್ನು ನೀಡಲಾಗುತ್ತದೆ. ನೀವು ದಾಖಲು ಮಾಡಲಾದ ದೂರು ಸಿಎಂ ಕಾರ್ಯಾಲಯಕ್ಕೆ ಹೋಗುತ್ತದೆ. ಅಲ್ಲಿಂದ ಮುಂದಿನ ಪ್ರಕ್ರಿಯೆ ಏನು? ನಿಮ್ಮ ದೂರಿನ ಸ್ಥಿತಿ-ಗತಿ ಏನಾಯಿತು ಎಂಬ ಬಗ್ಗೆ ತಿಳಿಯಬೇಕು ಎಂದಿದ್ದರೆ, ಜನಸ್ಪಂದನ ಪೋರ್ಟಲ್‌ ಅಥವಾ ಜನಸ್ಪಂದನ ಪಿಜಿಆರ್‌ಎಸ್‌ ಪೋರ್ಟಲ್‌ಗೆ ಭೇಟಿ ನೀಡಿ ಅಲ್ಲಿ ಸಿಪಿಗ್ರಾಮ್ಸ್‌ ಕುಂದುಕೊರತೆ ಸ್ಥಿತಿಯನ್ನು ಪರಿಶೀಲಿಸಿ” ಆಯ್ಕೆ ಮೇಲೆ ಕ್ಲಿಕ್‌ ಮಾಡಬೇಕು. ಬಳಿಕ ನಿಮ್ಮ ಸಿಪಿಗ್ರಾಮ್ಸ್‌ ಗ್ರೀವಿಯನ್ಸ್‌ ನಂಬರ್‌ (CPGRAMS Grievance Number) ಅಥವಾ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ನಮೂದು ಮಾಡಿದರೆ ಅಲ್ಲಿ ಅಹವಾಲು ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸುತ್ತದೆ. ಇಲ್ಲವೇ ನೇರವಾಗಿ 1902 ಸಂಖ್ಯೆಗೆ ಕರೆ ಮಾಡಿದರೆ ನಿಮಗೆ ಅಲ್ಲಿನ ಸಿಬ್ಬಂದಿ ಸಹ ಅಹವಾಲಿನ ಸ್ಟೇಟಸ್‌ ಬಗ್ಗೆ ತಿಳಿಸಿಕೊಡಲಿದ್ದಾರೆ.

ಪ್ರಕ್ರಿಯೆ ಹೇಗಿರಲಿದೆ?

ಸಾರ್ವಜನಿಕರಿಂದ ಮುದ್ದಾಂ/ಆನ್‌ಲೈನ್‌ನಲ್ಲಿ ಸ್ವೀಕೃತವಾಗುವ ಕುಂದುಕೊರತೆ/ಅಹವಾಲುಗಳನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ದಾಖಲಿಸಿ, ಸ್ವೀಕೃತಿಯನ್ನು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸ್ವೀಕೃತಿ ಸಂಖ್ಯೆ ಬಳಸಿ ತಮ್ಮ ಕುಂದುಕೊರತೆ/ಅಹವಾಲಿನ ಸ್ಥಿತಿಗತಿಯನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ಅಥವಾ 1902 ಸಂಖ್ಯೆಗೆ ಕರೆಮಾಡಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: Gruha Lakshmi : ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ಲವೇ? ಹಾಗಾದರೆ ದೂರು ಕೊಡೋಕೆ ರೆಡಿ ಆಗಿ!

ಎಪಿಐ ಮೂಲಕ ನಿರ್ವಹಣೆ

ಸ್ವೀಕರಿಸಲಾದ ಕುಂದುಕೊರತೆ/ಅಹವಾಲುಗಳನ್ನು ವಿಷಯದ ಆಧಾರದಲ್ಲಿ ಸಂಬಂಧಿಸಿದ ಇಲಾಖೆಗಳ/ಅಧೀನ ಸಂಸ್ಥೆಗಳ ಅಧಿಕಾರಿಗಳ ಲಾಗಿನ್‌ಗಳಿಗೆ ತಕ್ಷಣ ರವಾನಿಸಲಾಗುತ್ತದೆ. ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸ್ವೀಕೃತವಾದ ಕುಂದುಕೊರತೆ/ಅಹವಾಲುಗಳನ್ನು ಸ್ವಯಂಚಾಲಿತವಾಗಿ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಇ-ಆಫೀಸ್‌ ಲಾಗಿನ್‌ಗೆ ಕಳುಹಿಸುವ ವ್ಯವಸ್ಥೆ ಅಳವಡಿಸಲಾಗಿದೆ. ಇ-ಆಫೀಸ್‌ನಲ್ಲಿ ಸದರಿ ಕಡತದ ಪ್ರತಿ ಹಂತದ ಚಲನೆಯನ್ನು API ಮೂಲಕ ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಗೆ ಒದಗಿಸಲಾಗುತ್ತದೆ. ಸ್ವೀಕೃತವಾದ ಅಹವಾಲುಗಳ ಪ್ರಗತಿ ಪರಿಶೀಲಿಸಲು ಪ್ರತ್ಯೇಕ ಡ್ಯಾಶ್‌ಬೋರ್ಡ್‌ ಅಭಿವೃದ್ಧಿಪಡಿಸಲಾಗಿದೆ. ಈ ಡ್ಯಾಶ್‌ಬೋರ್ಡ್‌ನಲ್ಲಿ ಇಲಾಖಾ/ಜಿಲ್ಲಾವಾರು ಸ್ವೀಕೃತವಾದ ಕುಂದುಕೊರತೆ ಮತ್ತು ಅಹವಾಲುಗಳ ಸಂಖ್ಯೆ, ವಿಲೇ ಮಾಡಲಾದ ಮತ್ತು ಬಾಕಿ ಉಳಿದಿರುವ ಕುಂದುಕೊರತೆ ಮತ್ತು ಅಹವಾಲುಗಳ ವಿವರ ಲಭ್ಯವಿದೆ.

Exit mobile version