Site icon Vistara News

Cauvery water dispute : ಕಾವೇರಿ ಸಂಬಂಧ ಯಾವುದೇ ಕಾರಣಕ್ಕೂ ಮೋದಿಯನ್ನು ಭೇಟಿಯಾಗಲ್ಲವೆಂದ ಎಚ್.ಡಿ. ದೇವೇಗೌಡ

HD Devegowda in New Delhi

ನವ ದೆಹಲಿ: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ನಾನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರನ್ನು ಯಾವುದೇ ಕಾರಣಕ್ಕೂ ಭೇಟಿ ಮಾಡುವುದಿಲ್ಲ. ಅವರೊಂದಿಗೆ ಈ ವಿಚಾರವನ್ನು ಚರ್ಚೆ ಮಾಡಲು ನಾನು ಹೋದರೆ ಅದಕ್ಕೆ ಬೇರೆ ರೀತಿಯಾದ ರಾಜಕೀಯ ಬಣ್ಣ ಕಟ್ಟುತ್ತಾರೆ ಎಂದು ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ (Former Prime Minister HD Deve Gowda) ಹೇಳಿದ್ದಾರೆ.

ನವ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರೆ ಬಿಜೆಪಿ – ಜೆಡಿಎಸ್‌ ಮೈತ್ರಿ (BJP JDS alliance), ಸೀಟು ಹಂಚಿಕೆ ಬಗ್ಗೆ ಚರ್ಚೆ ಎಂದೆಲ್ಲ ಸುದ್ದಿ ಹಬ್ಬುತ್ತದೆ. ಅದಕ್ಕಾಗಿ ನಾನು ಮೋದಿ ಅವರನ್ನು ಭೇಟಿ ಮಾಡಲಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Cauvery water dispute : ತಮಿಳುನಾಡಿಗೆ ಕೂಡಲೇ ನೀರು ನಿಲ್ಲಿಸಿ: ಬಸವರಾಜ ಬೊಮ್ಮಾಯಿ ಗುಡುಗು

ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯ ದುರಂತ

5 ಸಾವಿರ ಕ್ಯೂಸೆಕ್ ನೀರು ಹರಿಸುವ ಸಂಬಂಧ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ – Cauvery Water Management Authority – CWMA) ಆದೇಶ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಇವತ್ತಿನ ಸಿಡಬ್ಲ್ಯೂಎಂಎ ಆದೇಶವು ನಮ್ಮ ರಾಜ್ಯಕ್ಕೆ ಬಿದ್ದ ಮಹತ್ತರವಾದ ಪೆಟ್ಟು. ಬೆಂಗಳೂರಿಗೆ ಕುಡಿಯುವ ನೀರು (Drinking water for Bengaluru) ಬೇಕು. ಮುಂದೇನು ಆಗುತ್ತದೆ ಎಂಬುದು ಗೊತ್ತಿಲ್ಲ. ನಮ್ಮ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಣಯ ದುರಂತ.‌ ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಂಡರೋ ಗೊತ್ತಿಲ್ಲ. ನಾವು ಎಲ್ಲೋ ಒಂದು ಕಡೆ ಎಡವಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Cauvery water dispute : ಮತ್ತೆ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್‌ ನೀರು ಬಿಡಲು CWMA ಆದೇಶ!

ನಮ್ಮ ರಾಜಕಾರಣಿಗಳಲ್ಲಿ ಒಗ್ಗಟ್ಟು ಇಲ್ಲ

ನಮ್ಮ ರಾಜ್ಯದಲ್ಲಿ ಆಗುವ ಅನ್ಯಾಯಕ್ಕೆ ಮೊದಲು ಧರಣಿ ಮಾಡಿದ್ದೆ. ಧರಣಿ ಕುಳಿತು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ. ಇವತ್ತು ಸದನದಲ್ಲಿ ಕಾವೇರಿ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ಕರ್ನಾಟಕ, ತಮಿಳುನಾಡಿಗೆ ಸಂಬಂಧ ಇಲ್ಲದ ಅಧಿಕಾರಿಗಳನ್ನು ಗ್ರೌಂಡ್‌ಗೆ ಕಳುಹಿಸಬೇಕು. ವಾಸ್ತವಿಕ ವರದಿಯನ್ನು ಅಧಿಕಾರಿಗಳ ತಂಡ ಸಲ್ಲಿಸಬೇಕು. ಇದಕ್ಕೆ ನಾವು ಒಪ್ಪಿಕೊಳ್ಳುತ್ತೇವೆ, ಆದರೆ ತಮಿಳುನಾಡಿನವರು ಒಪ್ಪಿಕೊಳ್ಳುತ್ತಿಲ್ಲ. ತಮಿಳುನಾಡಿನ ರಾಜಕಾರಣಿಗಳಲ್ಲಿ ಒಗ್ಗಟ್ಟು ಇದೆ. ನಮ್ಮ ರಾಜಕಾರಣಿಗಳಲ್ಲಿ ಒಗ್ಗಟ್ಟು ಇಲ್ಲ. ತಮಿಳುನಾಡು ಈ ವಿಚಾರದಲ್ಲಿ ಒಗ್ಗಟ್ಟಾಗಿ ಇದೆ. ಆದರೆ ನಮ್ಮ ರಾಜ್ಯದಲ್ಲಿ ಹಾಗೆ ಇಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಇದನ್ನೂ ಓದಿ: Rain News : ಬೆಂಗಳೂರಿನಲ್ಲಿ ಅರ್ಧ ಗಂಟೆಗೂ ಹೆಚ್ಚು ಸುರಿದ ಭಾರಿ ಮಳೆ; ಟ್ರಾಫಿಕ್‌ ಜಾಮ್!

ಈಗ ಮೈತ್ರಿ ಬಗ್ಗೆ ಯಾವುದೇ ಚರ್ಚೆ ಇಲ್ಲ

ಬಿಜೆಪಿ – ಜೆಡಿಎಸ್ ಮೈತ್ರಿ ಮೈತ್ರಿ ವಿಚಾರದ ಬಗ್ಗೆ ಮಾತನಾಡಿದ ಎಚ್.ಡಿ. ದೇವೇಗೌಡ ಅವರು, ನಾನು ಯಾವತ್ತೂ ಪ್ರತ್ಯೇಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವುದಿಲ್ಲ. ನಮ್ಮನ್ನು ಇಂಡಿಯಾ ಸಭೆಗೆ ಕರೆಯುವುದೇ ಬೇಡ ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಹೇಳಿದ್ದಾರೆ. ಇನ್ನು ಬಿಜೆಪಿ ಮೈತ್ರಿ ವಿಚಾರವಾಗಿ ನಾನು ಯಾರನ್ನೂ ಭೇಟಿಯಾಗಲ್ಲ. ಚರ್ಚೆಗೆ ಬಂದಾಗ ಮಾತನಾಡುತ್ತೇವೆ. ಈಗ ಎಲ್ಲಿದ್ದೇವೆಯೋ ಅಲ್ಲಿಯೇ ಇರುತ್ತೇವೆ. ಈಗ ಮೈತ್ರಿ ಬಗ್ಗೆ ಯಾವುದೇ ಚರ್ಚೆ ಇಲ್ಲ. ಕುಮಾರಸ್ವಾಮಿ ಬರುವ ವಿಚಾರ ಸಹ ನನಗೆ ಗೊತ್ತಿಲ್ಲ. ಯಾವ ಮೈತ್ರಿ ಬಗ್ಗೆಯೂ ಸಹ ನಾನು ಚರ್ಚೆ ಮಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

Exit mobile version