Site icon Vistara News

HD Kumaraswamy : ಮುಸ್ಲಿಮರು ನನ್ನನ್ನೇ ಕೋರ್ಟ್‌ ಮಾರ್ಷಲ್‌ ಮಾಡಿದ್ರು..: ಬಿಜೆಪಿ ಜತೆ ಕೈಜೋಡಿಸಿದ ಕಾರಣ ಬಿಚ್ಚಿಟ್ಟ HDK

HD Kumaraswamy Muslims

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ (Congress Government) ಬಂದ ನಂತರ ಒಂದು ವರ್ಗವನ್ನು ಓಲೈಸುತ್ತಿರುವುದರ ಫಲವೇ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ (Pakistan zindabad) ಎಂದು ಕೂಗುವ ಉದ್ಧಟತನಕ್ಕೆ ಕಾರಣ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ವ್ಯಾಖ್ಯಾನಿಸಿದ್ದಾರೆ. ಕೇಂದ್ರದಿಂದ ಅನುದಾನ ಬಂದಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ದೇಶವನ್ನೇ ವಿಭಜನೆ ಮಾಡಬೇಕು ಎಂದು ಹೇಳಿದ್ದ ಸಂಸದರೊಬ್ಬರನ್ನು ಹೊಂದಿರುವ ಕಾಂಗ್ರೆಸ್‌ ಪಾರ್ಟಿ (Congress Party) ಇಂಥವರಿಗೆ ಬೆಂಬಲ ಕೊಡುತ್ತಿದೆ ಎಂದು ಆಪಾದಿಸಿದರು.

ಇದೇ ವೇಳೆ ಅವರು ತಾನೇಕೆ ಬಿಜೆಪಿ ಜತೆ ಕೈಜೋಡಿಸಿದೆ ಎಂಬುದನ್ನೂ ವಿಸ್ತಾರ ನ್ಯೂಸ್‌ ಜತೆ ಮಾತನಾಡುತ್ತಾ ತೆರೆದಿಟ್ಟರು. ಮುಸ್ಲಿಂ ಧರ್ಮದ ಧರ್ಮ ಗುರುಗಳು, ಬುದ್ಧಿಜೀವಿಗಳು ನನ್ನನ್ನೇ ಕೋರ್ಟ್‌ ಮಾರ್ಷಲ್‌ ಮಾಡಲು ಮುಂದಾದರು. ಆಗ ಇವರ ಜತೆ ಸೇರಿ ತಪ್ಪು ಮಾಡಿದೆ ಎಂಬುದರ ಅರಿವಾಗಿ ಹೊರಬಂದೆ, ಬೇರೆ ನಿಲುವು ತೆಗೆದುಕೊಂಡೆ ಎಂದು ವಿವರಿಸಿದರು.

ಇದನ್ನೂ ಓದಿ: Sedition Case: ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಎಂದ ದೇಶದ್ರೋಹಿಗಳನ್ನು ಬಿಡಲ್ಲ: ಡಾ. ಜಿ. ಪರಮೇಶ್ವರ್‌

ಮಾನ ಮರ್ಯಾದೆ ಇದ್ದರೆ ಇಷ್ಟು ಹೊತ್ತಿಗೆ ಬಂಧಿಸಬೇಕಿತ್ತು

ನಮ್ಮ ಸಂವಿಧಾನ ಅಪಾಯದಲ್ಲಿದೆ. ಅದರ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದು ಸರ್ಕಾರದ ಕೋಟ್ಯಂತರ ವೆಚ್ಚದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇದ್ದರೆ ಯಾವುದೇ ಕಾರಣ ಕೊಡದೆ ಇಷ್ಟು ಹೊತ್ತಿಗೆ ಬಂಧನ ಮಾಡಬೇಕಾಗಿತ್ತು ಎಂದು ಹೇಳಿದರು.

ಸ್ಥಳದಲ್ಲಿ ಪೊಲೀಸರು ಇಲ್ಲವೇ? ವಿಧಾನಸೌಧದಲ್ಲಿ ಪೊಲೀಸ್‌ ಠಾಣೆ ಇಲ್ವೇ? ಇಂಥ ದೇಶದ್ರೋಹಿಗಳನ್ನು ವಿಧಾನಸೌಧದ ಒಳಗೆ ಬಿಟ್ಟವರಾರು? ಈ ಸರ್ಕಾರಕ್ಕೆ ನಿಜಕ್ಕೂ ಸಂವಿಧಾನದ ಬಗ್ಗೆ ಕಾಳಜಿ ಇದ್ದರೆ ಈ ದೇಶದ್ರೋಹಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದರು ಕುಮಾರಸ್ವಾಮಿ.

ಮುಸ್ಲಿಮರ ವಿಕೃತ ಮನೋಸ್ಥಿತಿಗೆ ಕಾಂಗ್ರೆಸ್‌ ಪೋಷಣೆ : ಕುಮಾರಸ್ವಾಮಿ ಆರೋಪ

ಈ ದೇಶದಲ್ಲಿ ಮುಸ್ಲಿಮರ ನಡವಳಿಕೆ ಮತ್ತು ವಿಕೃತ ಮನೋಸ್ಥಿತಿಯನ್ನು ಪೋಷಿಸುವ ಜನರು ಕರ್ನಾಟಕದಲ್ಲಿ, ಸರ್ಕಾರದಲ್ಲಿದೆ. ಇತ್ತೀಚೆಗೆ ನಾನು ಬದಲಾಗಿದ್ದೇನೆ, ಜಾತ್ಯತೀತ ಎಂಬ ಹಣೆಪಟ್ಟಿ ಕಳಚಿದ್ದೇನೆ ಎಂದು ಇವರು ಹೇಳುತ್ತಿದ್ದಾರಲ್ಲಾ.. ಇದಕ್ಕೆಲ್ಲ ಇಂಥ ಘಟನೆಗಳೇ ಕಾರಣ. ಇವರು ನನ್ನನ್ನು ಕೋರ್ಟ್‌ ಮಾರ್ಷಲ್‌ಗೆ ಒಳಪಡಿಸಲು ನೋಡಿದ್ದಾರೆ ಎಂಬ ಗಮನ ಸೆಳೆಯುವ ಅಂಶವನ್ನು ಅವರು ಹೇಳಿದರು.

ನನ್ನನ್ನೇ ಕೋರ್ಟ್‌ ಮಾರ್ಷಲ್‌ ಮಾಡಿದರು, ಹಾಗಾಗಿ ಅವರ ಸಂಗ ಬಿಟ್ಟೆ ಎಂದ HDK

ಕಳೆದ ಚುನಾವಣೆಯ ಸಂದರ್ಭದಲ್ಲಿ ಈ ಧರ್ಮದ ಧಾರ್ಮಿಕ ಗುರುಗಳು, ಬುದ್ಧಿಜೀವಿಗಳು ಅಂದುಕೊಂಡವರೆಲ್ಲ ಸೇರಿ ನನ್ನನ್ನು ಎರಡು ಬಾರಿ ಕೋರ್ಟ್‌ ಮಾರ್ಷಲ್‌ಗೆ ಒಳಪಡಿಸಿದ್ದಾರೆ. ಇದೆಲ್ಲವನ್ನೂ ಅನುಭವಿಸಿದ ನಾನು ಇವರ ನಡುವೆ ಇದ್ದು ನಾನೇ ದಾರಿ ತಪ್ಪಿದ್ದೇನೆ ಎಂದು ಅರ್ಥ ಮಾಡಿಕೊಂಡೆ. ಇಂಥವರಿಂದ ದೂರ ಸರಿಯಬೇಕು ಎಂಬ ಕಾರಣಕ್ಕಾಗಿಯೇ ನಾನು ಬಿಜೆಪಿ ಜತೆ ಕೈ ಜೋಡಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.

ಇವರೆಲ್ಲ ಸೇರಿ ದೇಶವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವುದು ನನಗೆ ಪರ್ಸನಲಿ ಅನುಭವ ಆಗಿದೆ. ಅವರಿಗೆ ಈ ದೇಶದ ಮೇಲೆ ನಂಬಿಕೆ ಇಲ್ಲ. ಅವರು ನಮ್ಮನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳಬೇಕು ಎಂಬ ಮನೋಸ್ಥಿತಿಯಲ್ಲಿದ್ದಾರೆ.

ಯಾಕೆ ಈ ಮನಸ್ಥಿತಿ: ಕುಮಾರಸ್ವಾಮಿ ಹೇಳುವುದೇನು?

ಈಗ ದೇಶದ ಬಗ್ಗೆ ಜಗತ್ತಿನಲ್ಲೇ ಒಂದು ಒಳ್ಳೆಯ ಅಭಿಪ್ರಾಯವಿದೆ. ಆದರೆ, ಇದನ್ನು ನೋಡಿ ಒಂದು ವರ್ಗದಲ್ಲಿ ಅಸೂಯೆ ಇದೆ. ಹೀಗಾಗಿ ಅವರು ದೇಶದ ಹೆಸರು ಹಾಳುವ ಮಾಡುವ ಪ್ರಯತ್ನ ಮಾಡುತ್ತಾರೆ. ಅವರ ಅಸೂಯೆಯನ್ನು ಕೆಲವು ರಾಜಕೀಯ ಪಕ್ಷಗಳು ಪೋಷಿಸುತ್ತಿವೆ. ಏನು ಅವರು ಕಳೆದ 77 ವರ್ಷಗಳಲ್ಲಿ ಈ ದೇಶದಲ್ಲಿ ಬದುಕಿಲ್ಲವೇ? ಈ ದೇಶ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲವೇ? ಎಲ್ಲವನ್ನೂ ಕೊಟ್ಟ ಮೇಲೂ ದ್ವೇಷದ ಮನೋಭಾವವನ್ನು ಹೊಂದಿರುವುದಕ್ಕೆ ಕಾರಣ ಏನು? ನಿಜವೆಂದರೆ ಕೆಲವು ಶಕ್ತಿಗಳು ಅವರಲ್ಲಿ ವಿಷದ ಬೀಜ ಬಿತ್ತಿದ್ದಾರೆ. ಅದನ್ನೇ ಬೆಳೆಸಿದ್ದಾರೆ.

ನಿಜವೆಂದರೆ ಆ ವರ್ಗಕ್ಕೆ ದೇಶದ ಮೇಲೆ ನಂಬಿಕೆ ಇಲ್ಲ. ಅವರಲ್ಲಿ ಕೆಲವರು ಒಳ್ಳೆಯವರು ಇದ್ದಾರೆ. ಆದರೆ, ಅವರನ್ನೂ ಸಂಶಯದಿಂದ ಕಾಣುತ್ತಾರೆ. ಕಾಂಗ್ರೆಸ್‌ ಅಂಥವರಿಗೆ ಕುಮ್ಮಕ್ಕು ನೀಡಿ ಬೆಳೆಸಿ ತನ್ನ ಬೇಳೆಯನ್ನು ಬೆಳೆಸಿಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

Exit mobile version