Site icon Vistara News

Parliament Session: ಸಂಸತ್‌ನಲ್ಲಿ ಇಂದು ಹಣಕಾಸು ಪ್ರಸ್ತಾವನೆಗಳ ಮಸೂದೆ ಮಂಡನೆ; ಕ್ಷಣ ಕ್ಷಣದ ಮಾಹಿತಿಗೆ ಅಧಿವೇಶನದ Live ಇಲ್ಲಿ ನೋಡಿ

Parliament Session

ನವದೆಹಲಿ: ಸಂಸತ್‌ನಲ್ಲಿ ನಡೆಯುತ್ತಿರುವ ಬಜೆಟ್‌ ಅಧಿವೇಶನ (Parliament Session)ದಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು 2024-25ನೇ ಸಾಲಿನ ಹಣಕಾಸು ಪ್ರಸ್ತಾವನೆಗಳ ಮಸೂದೆ ಮಂಡಿಸಲಿದ್ದಾರೆ. ಇದರ ಜತೆಗೆ ಬಾಂಗ್ಲಾದೇಶದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಸೇರಿದಂತೆ ಹಲವು ವಿಚಾರಗಳ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೇಂದ್ರ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಇದೆ.

ಅಧಿವೇಶನ ಆರಂಭಕ್ಕೂ ಮುನ್ನ ಸಂಯುಕ್ತ ಕಿಸಾನ್‌ ಮೋರ್ಚಾ (Sanyukt Kisan Morcha) ಸಂಘಟನೆಯ ಸದಸ್ಯರು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಂಯುಕ್ತ ಕಿಸಾನ್‌ ಮೋರ್ಚಾದ ನಾಯಕರು ರಾಹುಲ್‌ ಗಾಂಧಿ ಬಳಿ ಸಮಾಲೋಚನೆ ನಡೆಸಲಿದ್ದಾರೆ. ಇದನ್ನು ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಂದ ಸುಮಾರು 140 ಲಕ್ಷ ಕೋಟಿ ರೂ.ಗಳ ವೆಚ್ಚದ ಬೇಡಿಕೆಗಳಿಗೆ ಲೋಕಸಭೆ ಸೋಮವಾರ ಅನುಮೋದನೆ ನೀಡಿದ್ದು, ಇದು 2024-25ರ ಬಜೆಟ್‌ನ ಶಾಸಕಾಂಗ ಪ್ರಕ್ರಿಯೆಯಲ್ಲಿ ಮಹತ್ವದ ಮೈಲಿಗಲ್ಲು ಎನಿಸಿಕೊಂಡಿದೆ.

ಕಳೆದ ವಾರ ಬಜೆಟ್ ಬಗ್ಗೆ ಚರ್ಚಿಸಿದ್ದ ಲೋಕಸಭೆ ಅನುದಾನ ಮತ್ತು ಧನವಿನಿಯೋಗ (ಸಂಖ್ಯೆ 2) ಮಸೂದೆ 2024ರ ಬೇಡಿಕೆಗಳನ್ನು ಅಂಗೀಕರಿಸಿದೆ. ಈ ಮಸೂದೆಯು 2024-25ರ ಹಣಕಾಸು ವರ್ಷಕ್ಕೆ ಭಾರತದ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಹಿಂಪಡೆಯಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ರೈಲ್ವೆ, ಶಿಕ್ಷಣ, ಆರೋಗ್ಯ ಮತ್ತು ಮೀನುಗಾರಿಕೆ ಎಂಬ ನಾಲ್ಕು ಸಚಿವಾಲಯಗಳಿಗೆ ಅನುದಾನದ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಈ ಅನುಮೋದನೆ ಲಭಿಸಿದೆ.

ಪ್ರತಿಭಟನೆಗೆ ಸಿದ್ಧತೆ

ಈ ಮಧ್ಯೆ ಆರೋಗ್ಯ ವಿಮಾ ಪಾಲಿಸಿಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಪಕ್ಷಗಳು ಇಂದು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಲಿವೆ. ಸೋಮವಾರ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಡೆರೆಕ್ ಒ’ಬ್ರಿಯಾನ್ ಈ ವಿಷಯವನ್ನು ಪ್ರಸ್ತಾವಿಸಿದ್ದರು. ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಒಬ್ರಿಯಾನ್, ಬಿಜೆಪಿ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರವನ್ನು ಉಲ್ಲೇಖಿಸಿದ್ದರು.

ಇದನ್ನೂ ಓದಿ: Bangladesh Protest: ಬಾಂಗ್ಲಾದೇಶ ಹಿಂಸಾಚಾರ ಕುರಿತು ಮೋದಿ ಮಹತ್ವದ ಸಭೆ; ಚರ್ಚಿಸಿದ ವಿಷಯಗಳೇನು?

ಸರ್ವಪಕ್ಷ ಸಭೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಮುನ್ನ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಯನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ತಾಳಿದ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿ ಶೇಕ್‌ ಹಸೀನಾ ರಾಜೀನಾಮೆ ನೀಡಿ ಪ್ರಾಣಭಯದಿಂದ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಈ ಘಟನೆಯ ಬಳಿಕ ಭಾರತದ ಮೇಲೆ ಇದು ಬೀರುವ ಪರಿಣಾಮದ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಈ ಸಭೆ ಕರೆದಿದೆ.

Exit mobile version