Site icon Vistara News

ರಾಜ್ಯಸಭೆ ಚುನಾವಣೆ: ರಾಜಸ್ಥಾನದಲ್ಲಿ ಮೂರು ಸ್ಥಾನ ಕೈಗೆ, ಒಂದು ಕಮಲ

rajya sabha

ಜೈಪುರ: ರಾಜಸ್ಥಾನದ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಶುಕ್ರವಾರ ಆಡಳಿತಾರೂಢ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿಗಳಾದ ರಣದೀಪ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಚಿವ ಘನಶ್ಯಾಮ್ ತಿವಾರಿ ಅವರು 43 ಮತಗಳನ್ನು ಪಡೆದು ಗೆದ್ದಿದ್ದಾರೆ. ಆದರೆ ಬಿಜೆಪಿ ಬೆಂಬಲಿತ ಇನ್ನೊಬ್ಬ ಸ್ವತಂತ್ರ ಅಭ್ಯರ್ಥಿ, ಮಾಧ್ಯಮ ದೊರೆ ಸುಭಾಷ್ ಚಂದ್ರ ಅವರು ಸೋತಿದ್ದಾರೆ.

ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ನಿಯಮ ಉಲ್ಲಂಘನೆ

ಗುರುವಾರ ಮುಂಜಾನೆ, ಮಹಾರಾಷ್ಟ್ರದಲ್ಲಿ ಆಡಳಿತ ಒಕ್ಕೂಟ MVAಯ ಮೂವರು ಶಾಸಕರು ಮತ್ತು ಹರಿಯಾಣದಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ನ ಇಬ್ಬರು ಶಾಸಕರು ರಾಜ್ಯಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಬಹಿರಂಗವಾಗಿ ಮತಪತ್ರಗಳನ್ನು ಪ್ರದರ್ಶಿಸುವ ಮೂಲಕ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಮತಗಳನ್ನು ರದ್ದುಗೊಳಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ, ಗಜೇಂದ್ರ ಸಿಂಗ್ ಶೇಖಾವತ್, ಜಿತೇಂದ್ರ ಸಿಂಗ್ ಮತ್ತು ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಬಿಜೆಪಿ ನಿಯೋಗವು ಮತದಾನ ಪ್ರಕ್ರಿಯೆ ಮುಗಿದ ನಂತರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಮತ್ತು ಅವರ ಮತಗಳನ್ನು ರದ್ದುಗೊಳಿಸುವಂತೆ ಕೋರಿತು. 2017ರಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ಚುನಾವಣೆಯ ಸಂದರ್ಭದಲ್ಲಿ ತನ್ನ ಪಕ್ಷದ ಚುನಾವಣಾ ಏಜೆಂಟ್ ಹೊರತುಪಡಿಸಿ ಬೇರೆಯವರಿಗೆ ಮತಪತ್ರವನ್ನು ತೋರಿಸುವುದನ್ನು ಆಯೋಗ ಪ್ರತಿಬಂಧಿಸಿತ್ತು. ಇದನ್ನು ಮನವಿ ಪತ್ರದಲ್ಲಿ ಬಿಜೆಪಿ ಉಲ್ಲೇಖಿಸಿದೆ. ಅಂಥ ಮತವನ್ನು ಪೆಟ್ಟಿಗೆಯಲ್ಲಿ ಹಾಕಲಾಗಿದ್ದರೂ ಅದನ್ನು ರದ್ದುಗೊಳಿಸುವ ನಿಯಮಕ್ಕೆ ಚುನಾವಣಾಧಿಕಾರಿಯು ಬದ್ಧನಾಗಿರುತ್ತಾನೆ. ಅದರ ವಿಚಾರಣೆ ಮುಗಿಯುವವರೆಗೆ ಮತಗಳ ಎಣಿಕೆಯನ್ನು ನಿಲ್ಲಿಸಬೇಕು ಎಂದು ಪಕ್ಷವು ಚುನಾವಣಾ ಆಯೋಗಕ್ಕೆ ವಿನಂತಿಸಿದೆ ಎಂದು ನಖ್ವಿ ಹೇಳಿದರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ | ಜೈರಾಮ್‌, ನಿರ್ಮಲಾ ಜಗ್ಗೇಶ್‌ ʼಮೊದಲ ಪ್ರಾಶಸ್ತ್ಯʼದ ಗೆಲುವು

Exit mobile version