Site icon Vistara News

Sedition Case: ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಎಂದ ದೇಶದ್ರೋಹಿಗಳನ್ನು ಬಿಡಲ್ಲ: ಡಾ. ಜಿ. ಪರಮೇಶ್ವರ್‌

Sedition case who say Pakistan Zindabad will not be spared says Dr G Parameshwara

ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ನೂತನ ಸದಸ್ಯ ನಾಸಿರ್ ಹುಸೇನ್ (Nasir Hussain) ಬೆಂಬಲಿಗರು ವಿಧಾನಸೌಧದೊಳಗೇ ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಜೈಕಾರ ಕೂಗಿದ್ದಾರೆ. ದೇಶದ್ರೋಹದ (Sedition Case) ಕೆಲಸ ಮಾಡಿ ಉದ್ಧಟತನ ಮೆರೆದಿದ್ದಾರೆ. ಇದಕ್ಕೆ ರಾಜ್ಯಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Dr G Parameshwara) ಪ್ರತಿಕ್ರಿಯೆ ನೀಡಿದ್ದು, ಇಂಥ ಘೋಷಣೆಯನ್ನು ಯಾರೂ ಸಹ ಕೂಗಬಾರದು. ನಮ್ಮ ನೆಲದಲ್ಲಿ ಹುಟ್ಟಿ ಈ ರೀತಿ ಮಾತನಾಡಬಾರದು. ಇದು ಯಾರೇ ಮಾಡಿದರೂ ತಪ್ಪು. ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ನಾನು ಈ ಸಂಬಂಧ ಪೊಲೀಸರಿಗೆ ನಿರ್ದೇಶನವನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಾ. ಜಿ. ಪರಮೇಶ್ವರ್‌, ಇದು ಅಕ್ಷಮ್ಯ ಅಪರಾಧವಾಗಿದೆ. ಈ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಆದೇಶ ನೀಡಿದ್ದೇನೆ. ಈ ಬಗ್ಗೆ ಎಫ್‌ಐಆರ್‌ ದಾಖಲು ಮಾಡಲು ಹೇಳಿದ್ದೇನೆ. ಈಗ ಪೊಲೀಸರು ವಿಡಿಯೊವನ್ನು ಗಮನಿಸುತ್ತಿದ್ದು, ಘೋಷಣೆ ಕೂಗಿದ್ದು ಯಾರು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಗೊತ್ತಾದ ತಕ್ಷಣ ಬಂಧನ ಮಾಡಲಾಗುವುದು ಎಂದು ಹೇಳಿದರು.

ಇಂಥ ಘಟನೆಗಳು ಮರುಕಳಿಸಬಾರದು. ನಾವು ಯಾರ ರಕ್ಷಣೆಯನ್ನು ಮಾಡಲ್ಲ. ಇದರಲ್ಲಿ ಯಾವುದೇ ಮುಲಾಜಿಲ್ಲ. ಆರೋಪಿ ಯಾರು ಎಂದು ಗೊತ್ತಾದ ತಕ್ಷಣವೇ ಬಂಧನ ಮಾಡಲಾಗುತ್ತದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಡಾ. ಜಿ. ಪರಮೇಶ್ವರ್‌ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿತ್ತು. ಗೆಲುವು ಸಾಧಿಸಿದ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಶತ್ರು ರಾಷ್ಟ್ರ ಪಾಕಿಸ್ತಾನ ಪರ ಜೈಕಾರ ಕೂಗಿ ಉದ್ಧಟತನ ಮೆರೆದಿದ್ದಾರೆ. ನಮ್ಮ ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್‌ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇಂಥದ್ದೊಂದು ಪಾಪಿ ಕೃತ್ಯ, ಅಕ್ಷಮ್ಯ ಅಪರಾಧವನ್ನು ವಿಧಾನಸೌಧದೊಳಗೆ ಮಾಡಿರುವುದು ಮತ್ತೊಂದು ದುರಂತವಾಗಿದೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆಯಾಯಿತು. ಆಗ ನೂತನ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನು ಕಾಂಗ್ರೆಸ್‌ ಬೆಂಬಲಿಗರು ಎತ್ತಿ ಖುಷಿಪಟ್ಟಿದ್ದಾರೆ. ಹಾರವನ್ನು ಹಾಕಿ ಸಂಭ್ರಮಿಸಿದ್ದಾರೆ. ಇದೇ ವೇಳೆ, ಕೆಲವು ಪಾಪಿಗಳು “ಪಾಕಿಸ್ತಾನ್‌ ಜಿಂದಾಬಾದ್‌” ಎಂದು ಘೋಷಣೆ ಕೂಗಿದ್ದಾರೆ.

ವಿಧಾನಸೌಧದೊಳಗೆ ಸಂಭ್ರಮಾಚರಣೆ ವೇಳೆ ಘೋಷಣೆ ಕೂಗಿದ ಕಾಂಗ್ರೆಸ್‌ ಬೆಂಬಲಿಗರು

ಇದು ಅತ್ಯಂತ ನಾಚಿಕೆಗೇಡಿನ ಸಂಗತಿ

ಈ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.‌ ರವಿಕುಮಾರ್‌ ಪ್ರತಿಕ್ರಿಯೆ ನೀಡಿ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇದಕ್ಕೆ ಸುಮೋಟೋ ಕೇಸ್‌ ಅನ್ನು ದಾಖಲು ಮಾಡಬೇಕು. ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಬೇಕು. ಇದು ದೇಶದ್ರೋಹದ ಕೆಲಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ಈ ಕೂಡಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಕೂಡಲೇ ಈ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಬೇಕು. ಇದು ಅಕ್ಷಮ್ಯವಾಗಿದೆ. ಈ ಸರ್ಕಾರ ಏನು ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದು ರವಿಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ: Rajya sabha Election: ಎಸ್‌.ಟಿ. ಸೋಮಶೇಖರ್‌ ಅಡ್ಡಮತ; ಬಿಜೆಪಿಯಿಂದ ಏನು ಕ್ರಮ? ಶಾಸಕತ್ವ ಉಳಿಯುತ್ತಾ?

ಕಾಂಗ್ರೆಸ್‌ನ ಗೆಲುವು ದೇಶದ್ರೋಹಿಗಳ ಗೆಲುವಾ?

ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಇದು ಪಾಕಿಸ್ತಾನ ಚುನಾವಣೆಯಾ? ಭಾರತದ ಚುನಾವಣೆಯಾ? ಇದು ಕಾಂಗ್ರೆಸ್‌ನ ಮಾನಸಿಕತನವನ್ನು ತೋರಿಸುತ್ತದೆ. ಕಾಂಗ್ರೆಸ್‌ ಗೆಲುವು ಸಾಧಿಸಿದ ಮೇಲೆ ಇಂಥ ವಿಧ್ವಂಸಕ ಕೃತ್ಯ ಎಸಗುವವರಿಗೆ ಬಲ ಸಿಕ್ಕಂತೆ ಆಗಿದೆ. ಇವರೇನು ಪಾಕಿಸ್ತಾನದ ಏಜೆಂಟರಾ? ಇದರ ವಿರುದ್ಧ ಈ ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು. ಈ ದೇಶದ ಅನ್ನ ತಿಂದು, ಸೌಲಭ್ಯವನ್ನು ಪಡೆದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರಲ್ಲವೇ? ಇವರು ಹೊಟ್ಟೆಗೆ ಏನನ್ನು ತಿನ್ನುತ್ತಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

Exit mobile version