Site icon Vistara News

ವಿಸ್ತಾರ ಸಂಪಾದಕೀಯ I ರಾಜಕೀಯ ಮುಖಂಡರಿಗೆ ನಾಲಿಗೆಯ ಮೇಲೆ ಹಿಡಿತ ಇರಲಿ

fight

ಚುನಾವಣೆ ಹತ್ತಿರ ಬರುತ್ತಿರುವಂತೆ ಜನಪ್ರತಿನಿಧಿಗಳ ನಾಲಿಗೆ ನಿಂದನೆಯಲ್ಲಿ ಪರಿಣತವಾದ ಗರಗಸವಾಗುತ್ತಾ ಹೋಗುತ್ತಿದೆ. ಇವರ ನಾಲಿಗೆ ನಿಂದಿಸಲ್ಪಟ್ಟವರ ಚಾರಿತ್ರ್ಯವನ್ನು ಹೀಗಳೆಯುವುದು ಮಾತ್ರವಲ್ಲ, ಆಡಿದವರ ಯೋಗ್ಯತೆಯನ್ನೂ ಜನರ ಮುಂದೆ ಬೆತ್ತಲಾಗಿಸುತ್ತದೆ ಎಂಬುದು ಮಾತ್ರ ಇವರಿಗೆ ಅರ್ಥವೇ ಆಗುವುದಿಲ್ಲ. ಇದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಇತ್ತೀಚೆಗೆ ಕಾಂಗ್ರೆಸ್‌ನ ಮುಖಂಡ ಬಿ.ಕೆ. ಹರಿಪ್ರಸಾದ್‌ ಅವರು, ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋದ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಬಿ.ಸಿ. ಪಾಟೀಲ್‌ ಅವರು, ಹಿಂಬಾಗಿಲಿನಿಂದ ಬಂದು ಎಂಎಲ್‌ಸಿ ಆದವರನ್ನು ಪಿಂಪ್‌ ಇದ್ದಂತೆ ಎಂದಿದ್ದರು. ಈ ಮಾತಿನ ಯುದ್ಧ ಮುಂದುವರಿದಿದೆ. ಇವ್ಯಾವುದೂ ಒಳ್ಳೆಯ ಅಭಿರುಚಿಯ ಮಾತುಗಳಲ್ಲ. ರಾಜ್ಯದಲ್ಲಿ ಮಾತ್ರವೇ ಅಲ್ಲ, ರಾಷ್ಟ್ರ ಮಟ್ಟದಲ್ಲೂ ಎದುರಾಳಿಯ ಕೀಳು ನಿಂದನೆ, ಅವಾಚ್ಯ ಪದಗಳ ಬಳಕೆ ಎದ್ದು ಕಾಣಿಸುತ್ತಿದೆ. ಮಧ್ಯಪ್ರದೇಶದ ಕಾಂಗ್ರೆಸ್‌ ಮುಖಂಡನೊಬ್ಬ, ಸಂವಿಧಾನವನ್ನು ಉಳಿಸಲು ನರೇಂದ್ರ ಮೋದಿಯವರನ್ನು ಕೊಲ್ಲುವ ಅಗತ್ಯವಿದೆ ಎಂದು ಹೇಳಿದ್ದ. ಇದಂತೂ ತೀರಾತೀರಾ ಅಪರಾಧವೇ ಸರಿ. ಇಂಥ ಮಾತುಗಳಿಗೆ ಶಿಕ್ಷೆಯಾಗಬೇಕು. ಪರೋಕ್ಷವಾದ ಹೀನ ರೀತಿಯ ನಿಂದನೆಗಳೂ ಶಿಕ್ಷಾರ್ಹವೇ.

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಡುವೆ ವಾಕ್ಸಮರ ಜೋರಾಗುವುದು ಸಹಜ. ಆದರೆ ಅದು ಮಿತಿಯನ್ನು ಮೀರಿ ತೀರ ಅಶ್ಲೀಲವಾಗಿ ಬೈದಾಡಿಕೊಳ್ಳುತ್ತಿರುವುದು ವಿಷಾದಕರ. ವಾಗ್ದಾಳಿಗಳು ಸಭ್ಯತೆಯ ಎಲ್ಲೆ ಮೀರದಂತಿರಬೇಕು, ಆರೋಗ್ಯಕರವಾಗಿರಬೇಕು. ವಾಚಾಮಗೋಚರವಾಗಿ ಬೈದಾಡಿಕೊಳ್ಳುವುದು ರಾಜಕೀಯ ಪಕ್ಷಗಳ ಮುಖಂಡರಿಗೆ ಖಂಡಿತ ಶೋಭೆ ತರದು. ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಮುಂದೆ ಬಂದ ಕೇರಳದ ಇಂಥ ಒಂದು ಪ್ರಕರಣದಲ್ಲಿ, ರಾಜಕಾರಣಿಗಳು ಹಾಗೂ ಉನ್ನತ ಸ್ಥಾನದಲ್ಲಿರುವವರು ಅನ್ಯರ ಬಗ್ಗೆ ಮಾನಹಾನಿಕರವಾದ ಮಾತುಗಳನ್ನು ಆಡಬಾರದು ಎಂದು ನಿರ್ದೇಶಿಸಿತ್ತು. ಈ ಕುರಿತು ಕೇರಳದ ಮಾಜಿ ಸಚಿವ ಎಂ.ಎನ್‌ ಮಾಣಿ ಎಂಬುವರಿಗೆ ಛೀಮಾರಿಯನ್ನೂ ಹಾಕಿತ್ತು. ಇದು ಕೋರ್ಟ್‌ ಹೇಳದೆಯೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕಾದ ಮಾತು.

ಇಲ್ಲವಾದರೆ ಏನಾಗುತ್ತದೆ? ಇದಕ್ಕೊಂದು ಉದಾಹರಣೆ ಕೊಡಬಹುದು. 2007ರಲ್ಲಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ʼಸಾವಿನ ವ್ಯಾಪಾರಿʼ ಎಂದು ಕರೆದಿದ್ದರು. 2017ರಲ್ಲಿ ಮಣಿಶಂಕರ ಅಯ್ಯರ್‌ ಅವರು ಮೋದಿಯವರನ್ನು ʼನೀಚʼ ಎಂದು ಕರೆದಿದ್ದರು. ಇತ್ತೀಚೆಗೆ ಗುಜರಾತ್‌ ಚುನಾವಣೆ ಸಂದರ್ಭ ಮೋದಿಯವರಿಗೆ ಮಲ್ಲಿಕಾರ್ಜುನ ಖರ್ಗೆಯವರು ʼರಾವಣʼ ಎಂದಿದ್ದರು. ಆದರೆ ಇಂಥ ಹೇಳಿಕೆಗಳೆಲ್ಲ ಹೇಳಿದವರಿಗೇ ತಿರುಮಂತ್ರವಾಗಿ, ನಿಂದನೆಗೆ ಒಳಗಾದವರು ಭಾರಿ ಬಹುಮತದಿಂದ ಗೆದ್ದಿದ್ದರು. ಮತದಾರರ ಮನಶ್ಶಾಸ್ತ್ರ ಅರ್ಥ ಮಾಡಿಕೊಳ್ಳುವ ಜನನಾಯಕರು ಇಂಥ ಬೈಗುಳಗಳನ್ನು ತಮ್ಮ ಎದುರಾಳಿಗೆ ಬಳಸಲಾರರು. ಇದು ಅವರನ್ನೇ ಇಕ್ಕಟ್ಟಿಗೆ ಸಿಲುಕಿಸುವುದಲ್ಲದೆ, ಅವರ ಚಾರಿತ್ರ್ಯವನ್ನೂ ಹರಾಜಿಗಿಡುತ್ತದೆ.

ಹಾಗಿದ್ದರೆ ಉತ್ತಮ ಜನನಾಯಕನ ಮಾತು ಹೇಗಿರಬೇಕು? ಇದಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಒಂದು ನಿದರ್ಶನವಿದೆ. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರಿಗೆ ಹಲವಾರು ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ನೀಡಿ ಎಂದು ಕೋರುವ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ಸಿದ್ಧಪಡಿಸಿತ್ತು. ಅದರಲ್ಲಿ ʼಇಂದಿರಾ ಜವಾಬ್‌ ದೋʼ ಎಂದಿತ್ತು. ವಾಜಪೇಯಿಯವರು ಅದನ್ನು ನೋಡಿ ʼಇಂದಿರಾಜೀ, ಜವಾಬ್‌ ದೀಜಿಯೇʼ ಎಂದು ತಿದ್ದಿದ್ದರು. ಎದುರಾಳಿಯನ್ನು ಎದುರಿಸುವುದರಲ್ಲೂ ಇಂಥ ಘನತೆ ಇರಬೇಕು. ಚುನಾವಣೆ ಸಂದರ್ಭದಲ್ಲಿ ಎಂಥ ಮಾತುಕತೆ, ವಾಗ್ವಾದ ನಡೆಯಬೇಕು? ಪ್ರಗತಿ, ಭ್ರಷ್ಟಾಚಾರ, ಸಾಧನೆ, ವೈಫಲ್ಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ಆಗಬೇಕು. ಆಡಳಿತ ಪಕ್ಷ ಸರಿಯಾಗಿ ಕೆಲಸ ಮಾಡಿದೆಯೇ ಇಲ್ಲವೇ ಎಂದು ಪ್ರತಿಪಕ್ಷ ವಿಮರ್ಶಿಸಬೇಕು. ತಾನು ಮಾಡಿರುವ ಕೆಲಸಗಳಿಗೆ ಆಡಳಿತ ಪಕ್ಷ ಕನ್ನಡಿ ಹಿಡಿಯಬೇಕು, ಪ್ರತಿಪಕ್ಷದ ವೈಫಲ್ಯಗಳನ್ನು ಸಾಣೆಗೆ ಹಿಡಿಯಬೇಕು. ಎದುರಾಳಿಯ ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ಮುನ್ನೆಲೆಗೆ ತರುವ ಅಗತ್ಯವೇ ಇಲ್ಲ. ಆಗ ಮಾತ್ರ ವಾಗ್ವಾದಗಳು ಅರ್ಥಪೂರ್ಣವಾಗುತ್ತವೆ. ಹಿಡಿತ ಮೀರಿದ ನಾಲಿಗೆಗೆ ಜನ ವಿಶಿಷ್ಟವಾದ ಬೇರೆ ಹೋಲಿಕೆ ಬಳಸುತ್ತಾರೆ. ಅದಾಗದಂತೆ ಜನಪ್ರತಿನಿಧಿ ಎಚ್ಚರ ವಹಿಸಬೇಕಾಗುತ್ತದೆ.

ಸಂಪಾದಕೀಯ | ವಿಸ್ತಾರ ಸಂಪಾದಕೀಯ | ಭಾರತ ವಿರುದ್ಧದ ಸೋಲಿನ ಪಾಠ, ದುಷ್ಟ ಪಾಕ್‌ಗೆ ಇನ್ನಾದರೂ ಬುದ್ಧಿ ಬರಲಿ

Exit mobile version