Site icon Vistara News

Year-ender | 2022ರಲ್ಲಿ ಭಾರತ ಕ್ರಿಕೆಟ್​ ಕ್ಷೇತ್ರದ ಏಳು ಬೀಳಿನ ಹಾದಿ ಹೀಗಿತ್ತು

ಬೆಂಗಳೂರು : ಭಾರತದ ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್​ಗೆ ಅಗಣಿತ ಅಭಿಮಾನಿಗಳಿದ್ದಾರೆ. ಹೀಗಾಗಿ ಅದು ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಆಟ. ಕ್ರಿಕೆಟ್​ ಭಾರತೀಯರ ಜೀವಾಳ ಹಾಗೂ ಅದರಲ್ಲೇ ನೋವು, ನಲಿವುಗಳನ್ನು ಕಾಣುವವರಿದ್ದಾರೆ. ಹೀಗಾಗಿ ಪ್ರತಿ ಬಾರಿಯೂ ಕ್ರಿಕೆಟ್​ನಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸುತ್ತಿರುತ್ತೇವೆ. ಅಂತೆಯೇ ಭಾರತ ಕ್ರಿಕೆಟ್ ಕಾರಿಡಾರ್​ನಲ್ಲಿ 2022ರಲ್ಲಿ (Year-ender) ಹಲವು ಏಳು, ಬೀಳುಗಳು ಸಂಭವಿಸಿವೆ. ಅದರ ಸಂಕ್ಷಿಪ್ತ ನೋಟ ಇಲ್ಲಿದೆ.

19ರ ವಯೋಮಿತಿಯ ವಿಶ್ವ ಕಪ್​

ವರ್ಷಾರಂಭದಲ್ಲಿ ನಡೆದ 19 ವರ್ಷದೊಳಗಿನವರ ಕ್ರಿಕೆಟ್​ ವಿಶ್ವ ಕಪ್​ನಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಕೋಚಿಂಗ್​ ಸಿಬ್ಬಂದಿ ಸೇರಿದಂತೆ ಭಾರತ ಬಳಗದ 11 ಮಂದಿ ಕೊರೊನಾ ಸೋಂಕಿಗೆ ಒಳಗಾದ ಹೊರತಾಗಿಯೂ ಯಶ್​ ಧುಲ್​ ನಾಯಕತ್ವದ ಭಾರತ ತಂಡ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲದೇ ವಿಶ್ವ ಕಿರೀಟ ತನ್ನದಾಗಿಸಿಕೊಂಡಿತ್ತು. ಇದೇ ವೇಳೆ 19ರ ವಯೋಮಿತಿಯ ತಂಡದ ಪ್ರಾಬಲ್ಯ ಮುಂದುವರಿಯಿತಲ್ಲದೆ, ಕಳೆದ 32 ಪಂದ್ಯಗಳಲ್ಲಿ ಕೇವಲ ನಾಲ್ಕು ಪಂದ್ಯಗಳನ್ನು ಸೋತ ಸಾಧನೆಯನ್ನೂ ಮಾಡಿದೆ.

ಟಿ20 ವಿಶ್ವ ಕಪ್​ನಲ್ಲಿ ನಿರಾಸೆ

ರೋಹಿತ್​ ಶರ್ಮ ನೇತೃತ್ವದ ಭಾರತ ತಂಡ ಟಿ20 ವಿಶ್ವ ಕಪ್​ ಗೆಲ್ಲುವ ಯೋಜನೆಯೊಂದಿಗೆ ಆಸ್ಟ್ರೇಲಿಯಾಗೆ ತೆರಳಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ವಿರೋಚಿತ ಜಯ ದಾಖಲಿಸಿದ ಹೊರತಾಗಿಯೂ ದಕ್ಷಿಣ ಆಫ್ರಿಕಾ ವಿರುದ್ಧ ಗುಂಪು ಹಂತದ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲು ಎದರಾಯಿತು. ಆದರೆ, ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ 10 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿದಾಗ ಭಾರತೀಯರ ಹೃದಯವೇ ಒಡೆದು ಹೋಯಿತು. ಜತೆಗೆ ಒಂದು ದಶಕದ ಐಸಿಸಿ ಟ್ರೋಫಿಯ ಬರ ಮುಂದುವರಿಯಿತು.

ವಿರಾಟ್​ ಕೊಹ್ಲಿಯ ಸಿಕ್ಸರ್​

ಭಾರತ ತಂಡ ವಿಶ್ವ ಕಪ್​ ಗೆಲ್ಲದ ಹೊರತಾಗಿಯೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಬಾರಿಸಿದ ಸಿಕ್ಸರ್​ ಸ್ಮರಣೀಯ ಎನಿಸಿಕೊಂಡಿತು. ಹ್ಯಾರಿಸ್​ ರವೂಫ್​ ಅವರ ಎಸೆತಕ್ಕೆ ವಿರಾಟ್​ ಕೊಹ್ಲಿ ಬಾರಿಸಿದ ಸಿಕ್ಸರ್​ ಕ್ರಿಕೆಟ್​ ಇತಿಹಾಸದ ಅಪರೂಪದ ಹೊಡೆತ ಎಂದೇ ಖ್ಯಾತಿ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಅಜೇಯವಾಗಿ ಬಾರಿಸಿರುವ 82 ರನ್​ ಅವರ ವೃತ್ತಿ ಕ್ರಿಕೆಟ್​ನ ಶ್ರೇಷ್ಠ ಇನಿಂಗ್ಸ್​ಗಳಲ್ಲೊಂದು.

ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ವನಿತೆಯರಿಗೆ ಸೋಲು

ಹರ್ಮನ್​ ಪ್ರೀತ್​ ಕೌರ್​ ನೇತೃತ್ವದ ಭಾರತ ಮಹಿಳೆಯರ ಕ್ರಿಕೆಟ್​ ತಂಡಕ್ಕೆ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶವಿತ್ತು. ಆಸ್ಟ್ರೇಲಿಯಾ ತಂಡದ ವಿರುದ್ಧದ ಫೈನಲ್​ನಲ್ಲಿ ಭಾರತ ತಂಡಕ್ಕೆ ಕೊನೇ 27 ಎಸೆತಗಳಲ್ಲಿ 41 ರನ್​ ಬೇಕಾಗಿತ್ತು. ಆದರೆ, ಆಲ್​ಔಟ್​ ಆದ ಭಾರತ ತಂಡ ಬಂಗಾರ ಗೆಲ್ಲುವ ಅವಕಾಶ ನಷ್ಟ ಮಾಡಿಕೊಂಡಿತು.

ಏಷ್ಯಾ ಕಪ್​ನಲ್ಲಿ ರೋಹಿತ್ ಬಳಗಕ್ಕೆ ಬೇಸರ

ಶ್ರೀಲಂಕಾದ ಆತಿಥ್ಯದಲ್ಲಿ ಈ ಬಾರಿ ಯುಎಇನಲ್ಲಿ ಏಷ್ಯಾ ಕಪ್​ ನಡೆದಿತ್ತು. ಪಾಕಿಸ್ತಾನ ವಿರುದ್ಧ ಹಾಗೂ ಶ್ರೀಲಂಕಾ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದಲೇ ಹೊರ ಬಿತ್ತು. ಇಲ್ಲಿಯೂ ಟೀಮ್ ಇಂಡಿಯಾದ ಅಭಿಮಾನಿಗಳಿಗೆ ಬೇಸರ ಮೂಡಿತು.

ದೀಪ್ತಿ ಶರ್ಮಾ ಮಂಕಡಿಂಗ್​ ವಿವಾದ

ಇಂಗ್ಲೆಂಡ್ ಪ್ರವಾಸ ಹೋಗಿದ್ದ ಭಾರತ ಮಹಿಳೆಯರ ತಂಡ ಏಕ ದಿನ ಸರಣಿಯನ್ನು ಗೆದ್ದುಕೊಂಡಿದೆ. ಆದಾಗ್ಯೂ ಸರಣಿಯ ಕೊನೇ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಆಟಗಾರ್ತಿ ಚಾರ್ಲಿ ಡೀನ್​ ಅವರನ್ನು ಭಾರತದ ಅಲ್​ರೌಂಡರ್​ ದೀಪ್ತಿ ಶರ್ಮ ಮಂಕಡಿಂಗ್ ಮಾಡಿದ್ದರು. ಇದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಯಿತು. ಕ್ರೀಡಾ ಸ್ಫೂರ್ತಿಯ ಕುರಿತು ಜಾಗತಿಕ ಕ್ರಿಕೆಟ್​ ಕ್ಷೇತ್ರದಲ್ಲಿ ದೊಡ್ಡ ಚರ್ಚೆಯೇ ನಡೆಯಿತು.

ಸೂರ್ಯಕುಮಾರ್ ಅಬ್ಬರ

ತಡವಾಗಿ ಭಾರತ ತಂಡದಲ್ಲಿ ಅವಕಾಶ ಪಡೆದಿರುವ ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್​ ಯಾದವ್ ಟಿ20 ಕ್ರಿಕೆಟ್​ನಲ್ಲಿ ನಂಬರ್​ ಒನ್​ ಸ್ಥಾನ ಪಡೆದುಕೊಂಡರು. ಒಟ್ಟು 32 ಪಂದ್ಯಗಳಲ್ಲಿ ಆಡಿರುವ ಅವರು 1214 ರನ್​ ಬಾರಿಸಿದ್ದು, ಅದರಲ್ಲಿ ಎರಡು ಶತಕಗಳು ಸೇರಿಕೊಂಡಿವೆ. ಗರಿಷ್ಠ ರನ್​ 117. 10 ಅರ್ಧ ಶತಕ, 5 ಬಾರಿ 30 ಪ್ಲಸ್​ ರನ್​ ಬಾರಿಸಿದ ಅವರು 185.6 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದಾರೆ.

ಮಿಥಾಲಿ ರಾಜ್​, ಜೂಲನ್​ ಗೋಸ್ವಾಮಿ ವಿದಾಯ

ಭಾರತ ಮಹಿಳೆಯರ ಕ್ರಿಕೆಟ್​ ತಂಡದ ದಿಗ್ಗಜರೆನಿಸಿಕೊಂಡಿರುವ ಮಿಥಾಲಿ ರಾಜ್​ ಹಾಗೂ ಜೂಲನ್ ಗೋಸ್ವಾಮಿ ಅವರು 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದರು. ಇವರಿಬ್ಬರು ಎರಡು ದಶಕಗಳ ಕಾಲ ಭಾರತ ತಂಡದ ಕಾಯಂ ಸದಸ್ಯರಾಗಿದ್ದರು ಹಾಗೂ ಯುವ ಕ್ರಿಕೆಟಿಗರಿಗೆ ಆದರ್ಶವಾಗಿದ್ದರು ಕೂಡ.

ಜಸ್​ಪ್ರಿತ್​ ಬುಮ್ರಾ ವಿಶ್ವ ದಾಖಲೆ

ಇಂಗ್ಲೆಂಡ್​ನ ಎಜ್​ಬಾಸ್ಟನ್​ನಲ್ಲಿ ನಡೆದ ಟೆಸ್ಟ್​​ ಸರಣಿಯ ಪಂದ್ಯದಲ್ಲಿ ವೇಗಿ ಜಸ್​ಪ್ರಿತ್​ ಬುಮ್ರಾ ತಂಡದ ನಾಯಕತ್ವ ವಹಿಸಿದ್ದರು. ಭಾರತದ ಬ್ಯಾಟಿಂಗ್ ಇನಿಂಗ್ಸ್​ನಲ್ಲಿ ಎದುರಾಳಿ ತಂಡದ ಬೌಲರ್​ ಸ್ಟುವರ್ಟ್​ ಬ್ರಾಡ್ ಅವರ ಒಂದೇ ಓವರ್​ನಲ್ಲಿ 35 ರನ್​ ಬಾರಿಸಿದ್ದರು. ಇದರಲ್ಲಿ ವೈಡ್​ ಮತ್ತು ನೋ ಬಾಲ್​ ಸೇರಿಕೊಂಡಿದ್ದರೂ, ಟೆಸ್ಟ್​ ಕ್ರಿಕೆಟ್​ನ ಓವರ್​ ಒಂದರಲ್ಲಿ ದಾಖಲಾಗಿರುವ ಗರಿಷ್ಠ ರನ್​ ಎನಿಸಿಕೊಂಡಿದೆ.

ಇದನ್ನೂ ಓದಿ | Team India | ಟಿ20 ತಂಡದಿಂದ ಕೆ ಎಲ್​ ರಾಹುಲ್​ ಔಟ್?​; ಗಾಯದಿಂದ ಸುಧಾರಿಸದ ರೋಹಿತ್​ ಶರ್ಮ

Exit mobile version