Site icon Vistara News

IPL 2023: ಯಾರಿಗೆ ಒಲಿಯಲಿದೆ ಐಪಿಎಲ್​ ಕಿರೀಟ; ಚೆನ್ನೈ-ಗುಜರಾತ್​ ನಡುವೆ ಫೈನಲ್​ ಕಾದಾಟ

ms dhoni and hardik pandya

ಅಹಮದಾಬಾದ್​: ಕಳೆದ ವರ್ಷ ಪಾತಾಳಕ್ಕೆ ಕುಸಿದಿದ್ದ ಚೆನ್ನೈ ಈ ಬಾರಿ ಫೀನಿಕ್ಸ್‌ ನಂತೆ ಮೇಲೆದ್ದು ನಿಂತು ತನ್ನ ಸಾಮರ್ಥ್ಯ ಏನೆಂಬುದನ್ನು ನಿರೂಪಿಸಿದೆ. ಇನ್ನೊಂದೆಡೆ ಸತತ ಎರಡನೇ ಬಾರಿಗೆ ಗುಜರಾತ್​ ಫೈನಲ್​ ಪ್ರವೇಶಿಸಿದೆ. ಉಭಯ ತಂಡಗಳ ಈ ಪ್ರಶಸ್ತಿ ಸಮರ ಭಾನುವಾರ ಅಹಮದಾಬಾದ್​ನಲ್ಲಿ ಏರ್ಪಟ್ಟಿದೆ. ಗುಜರಾತ್​ಗೆ ತವರಿನ ಲಾಭ ಒಂದೆಡೆಯಾದರೆ, ಚೆನ್ನೈಗೆ ಧೋನಿ ಅವರ ಮಾಸ್ಟರ್​ ಪ್ಲ್ಯಾನ್​ ನೆರೆವಾಗುವ ಸಾಧ್ಯತೆ ಇದೆ. ಹೀಗಾಗಿ ಇದು ಹೈವೋಲ್ಟೆಜ್ ಕದನ ಎಂದು ನಿರೀಕ್ಷೆ ಮಾಡಬಹುದು.

ಗಿಲ್​ ಪ್ರಚಂಡ ಫಾರ್ಮ್​

ಯುವ ಆಟಗಾರ ಶುಭಮನ್​ ಗಿಲ್ ಅವರು ಪ್ರತಿ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್​ ಪ್ರತಾಪವನ್ನು ತೋರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸದ್ಯ ಅವರು ಆಡಿದ 16 ಪಂದ್ಯಗಳಲ್ಲಿ ಮೂರು ಶತಕ ಒಳಗೊಂಡಂತೆ 851 ರನ್​ ಬಾರಿಸಿ ಆರೆಂಜ್​ ಕ್ಯಾಪ್​ ಹೋಲ್ಡರ್​ ಆಗಿದ್ದಾರೆ. ಅದರಲ್ಲೂ ಕಳೆದ ಮುಂಬೈ ವಿರುದ್ಧದ ಕ್ವಾಲಿಫೈಯರ್​ ಪಂದ್ಯದಲ್ಲಿ ಅವರು ತೋರಿದ ಪ್ರದರ್ಶನಕ್ಕೆ ಕ್ರಿಕೆಟ್​ ದಿಗ್ಗಜರು ಕೂಡ ಸಲಾಂ ಹೊಡೆದಿದ್ದರು. ಇದೀಗ ಮಹತ್ವದ ಪಂದ್ಯದಲ್ಲಿಯೂ ಅವರ ಮೇಲೆ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ.

​ಗಿಲ್​ ಅವರ ಹೊರತಾಗಿಯೂ ಗುಜರಾತ್​ ಪಾಳಯದಲ್ಲಿ ಮತ್ತಷ್ಟು ಬ್ಯಾಟರ್​ಗಳು ತಂಡದ ಸಂಕಷ್ಟದಲ್ಲಿ ಸಿಡಿದು ನಿಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ನಾಯಕ ಪಾಂಡ್ಯ, ರಶೀದ್​ ಖಾನ್​, ಡೇವಿಡ್​ ಮಿಲ್ಲರ್​ ಅವರು ಯಾವುದೇ ಹಂತದಲ್ಲಿಯೂ ಸ್ಫೋಟಕ ಬ್ಯಾಟಿಂಗ್​ ಮೂಲಕ ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಹೀಗಾಗಿ ಗುಜರಾತ್​ ಬ್ಯಾಟಿಂಗ್​ ಬಲಿಷ್ಠವಾಗಿದೆ. ಬೌಲಿಂಗ್​ನಲ್ಲಿ ಹಿರಿಯ ವೇಗಿ ಮೋಹಿತ್​ ಶರ್ಮ ಅವರಂತು ತಮ್ಮ ಬೌಲಿಂಗ್​ ಮೋಡಿಯ ಮೂಲಕ ಎದುರಾಳಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಸಮರ್ಥರಿದ್ದಾರೆ. ಇದಕ್ಕೆ ಕಳೆದ ಪಂದ್ಯವೇ ಉತ್ತಮ ಸಾಕ್ಷಿ. 2.2 ಓವರ್​ ಮಾಡಿದ ಅವರು ಕೇವಲ 10 ರನ್​ ನೀಡಿ ಪ್ರಮುಖ 5 ವಿಕೆಟ್​ ಉಡಾಯಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ ಅವರು ಫೈನಲ್​ ಪಂದ್ಯದಲ್ಲಿಯೂ ಅವಕಾಶ ಸಿಕ್ಕರೆ ಇದಕ್ಕಿಂತಲೂ ಶ್ರೇಷ್ಠಮಟ್ಟದ ಬೌಲಿಂಗ್​ ತೋರ್ಪಡಿಸುವುದಾಗಿ ವಿಶ್ವಾಸದ ಮಾತುಗಳನ್ನು ಆಡಿದ್ದರು. ಉಳಿದಂತೆ ಪರ್ಪಲ್​ ಕ್ಯಾಪ್​ಧಾರಿ ಮೊಹಮ್ಮದ್​ ಶಮಿ, ರಶೀದ್​ ಖಾನ್​ ಕೂಡ ಉತ್ತಮ ಲಯದಲ್ಲಿದ್ದಾರೆ.

ಇದನ್ನೂ ಓದಿ IPL 2023: ಚೆನ್ನೈ,ಗುಜರಾತ್​ ಫೈನಲ್​ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿಯ ಸಂಪೂರ್ಣ ಮಾಹಿತಿ

ಚೆನ್ನೈಗೆ ಅನುಭವದ ಬಲ

ಹೆಚ್ಚಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮಹೇಂದ್ರ ಸಿಂಗ್​ ಧೋನಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಡೆವೋನ್​ ಕಾನ್ವೆ ಮತ್ತು ಮೊಯಿನ್​ ಅಲಿ ಅವರ ಅನುಭವದ ಜತೆಗೆ ಯುವ ಆಟಗಾರರ ಹುಮ್ಮಸ್ಸು ಹೊಂದಿರುವ ಚೆನ್ನೈ ತಂಡವು ಬಲಿಷ್ಠವಾಗಿದೆ. ಇದೆಲ್ಲದರ ಹೊರತಾಗಿಯೂ ಕೂಲ್​ ಕ್ಯಾಪ್ಟನ್​ ಅವರ ಮಾಸ್ಟರ್​ ಮೈಂಡ್​ ಕೂಡ ಇಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಬಾರಿ ಮಂಡಿ ನೋವನ್ನು ಲೆಕ್ಕಿಸದೇ ಅವರು ಬ್ಯಾಡೆಂಜ್​ ಕಟ್ಟಿಕೊಂಡು ಆಡುತ್ತಿರುವುದನ್ನು ನೋಡಿದರೆ ತಂಡಕ್ಕೆ ಕಪ್​ ಗೆಲ್ಲಿಸುವ ಪಣತೊಟ್ಟಿರುವುದು ಪಕ್ಕಾ ಎಂಬಂತಿದೆ.

ಗಿಲ್​ ಅವರಂತೆ ಚೆನ್ನೈ ತಂಡದಲ್ಲಿ ಋತುರಾಜ್​ ಗಾಯಕ್ವಾಡ್​ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಅವರು ಶತಕ ಬಾರಿಸದಿದ್ದರೂ ಹಕವು ಅರ್ಧಶತಕಗಳನ್ನು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಇವರಲ್ಲದೆ ಆಲ್​ ರೌಂಡರ್​ ಶಿವಂ ದುಬೆ ಅವರು ಅತ್ಯಂತ ಅಪಾಯಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದೊಮ್ಮೆ ಇವರು ಈ ಪಂದ್ಯದಲ್ಲಿ ಕ್ರೀಸ್​ ಕಚ್ಚಿನಿಂತರೆ ಎದುರಾಳಿ ಬೌಲರ್​ಗಳು ದಂಡಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಯುವರಾಜ್​ ಸಿಂಗ್​ ಅವರ ಶೈಲಿಯಲ್ಲಿ ಬ್ಯಾಟ್​ ಬೀಸುವ ಇವರು ಸಿಕ್ಸರ್​ಗಳ ಮಳೆಯನ್ನೇ ಸುರಿಸುವುದು ಖಂಡಿತ.

Exit mobile version