Site icon Vistara News

Viral Video: ಯೋಗಿ ಆದಿತ್ಯನಾಥ್‌ ಕಾಲಿಗೆ ಎರಗಿದ ರಾಜಾ ಭಯ್ಯಾ; ಉತ್ತರ ಪ್ರದೇಶ ರಾಜಕೀಯದಲ್ಲಿ ಹೊಸ ಅಧ್ಯಾಯ ಎಂದ ನೆಟ್ಟಿಗರು

Viral Video

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯ ಮಳೆಗಾಲದ ಅಧಿವೇಶನ ಜುಲೈ 29ರಂದು ಆರಂಭವಾಗಿದೆ. ಈ ವೇಳೆ ಅಚ್ಚರಿಯ ಘಟನೆಯೊಂದು ಎದುರಾಗಿದೆ. ಉತ್ತರ ಪ್ರದೇಶದ ಪ್ರಭಾವಿ ರಾಜಕಾರಣಿ, ಜನಸತ್ತಾ ದಳದ ಅಧ್ಯಕ್ಷ ಮತ್ತು ಕುಂದ ಕ್ಷೇತ್ರದ ಶಾಸಕ ರಾಜಾ ಭಯ್ಯಾ (Raja Bhaiya) ಎಂದೇ ಖ್ಯಾತರಾದ ರಘುರಾಜ್‌ ಪ್ರತಾಪ್‌ ಸಿಂಗ್‌ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಅವರ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ವಿಡಿಯೊದಲ್ಲಿ ಏನಿದೆ?

ಮಳೆಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಸೋಮವಾರ ಸಿಎಂ ಯೋಗಿ ಆದಿತ್ಯನಾಥ್‌ ಅವರು ನಿಗದಿತ ಸಮಯಕ್ಕಿಂತ ಐದು ನಿಮಿಷ ಮುಂಚಿತವಾಗಿ ವಿಧಾನಸಭೆಗೆ ಆಗಮಿಸಿದರು. ಅವರು ತಮ್ಮ ಆಸನದಲ್ಲಿ ಕುಳಿತುಕೊಳ್ಳುವ ಮೊದಲು ಸದನದಲ್ಲಿ ಹಾಜರಿದ್ದ ಶಾಸಕರನ್ನು ಭೇಟಿ ಮಾಡಿ ಮಾತನಾಡಿಸತೊಡಗಿದರು. ಈ ವೇಳೆ ಬಿಜೆಪಿ ಶಾಸಕರು, ನಾಯಕರು ಸಿಎಂ ಯೋಗಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕುಂದ ಶಾಸಕ ರಾಜಾ ಭೈಯಾ ಕೂಡ ಸಿಎಂ ಯೋಗಿ ಅವರನ್ನು ಭೇಟಿಯಾಗಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಯೋಗಿ ಆದಿತ್ಯನಾಥ್‌ ಕೂಡ ನಗು ನಗುತ್ತಾ ಆರ್ಶಿರ್ವಾದ ಮಾಡಿದ್ದಾರೆ. ರಾಜಾ ಭೈಯಾ ಅವರು ಯೋಗಿ ಅವರ ಪಾದಗಳನ್ನು ಮುಟ್ಟುವ ಕ್ಷಣವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಜತೆಗೆ ರಾಜಕೀಯವಾಗಿಯೂ ಕೆವೊಂದು ಚರ್ಚೆ ಹುಟ್ಟು ಹಾಕಿದೆ.

ಯಾರು ಈ ರಾಜಾ ಭೈಯಾ?

ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಕುಶ್ವಾಹ ಸಮುದಾಯದ ಪ್ರಭಾವಿ ನಾಯಕ ರಘುರಾಜ್ ಪ್ರತಾಪ್ ಸಿಂಗ್ ಆಲಿಯಾಸ್‌ ರಾಜಾ ಭೈಯಾ ಅನೇಕ ದಶಕಗಳಿಂದ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮ್ಮ ರಾಜಕೀಯ ಜೀವನವನ್ನು ಸಮಾಜವಾದಿ ಪಕ್ಷ (Samajwadi Party)ದೊಂದಿಗೆ ಪ್ರಾರಂಭಿಸಿದರು. ನಂತರ ಅವರು ತಮ್ಮದೇ ಆದ ತಂಡವನ್ನು ರಚಿಸಿ ಪ್ರಬಲ ನಾಯಕರಾಗಿ ಬೆಳೆದರು. ಅವರು ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾತ್ರವಲ್ಲ ರಾಜ್ಯ ಸಚಿವರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಕುಶ್ವಾಹ ಪ್ರಭಾವಿ ಸಮುದಾಯ

ಕುಶ್ವಾಹ ಸಮುದಾಯ ಉತ್ತರ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಬಹಳ ಮಹತ್ವ ಹೊಂದಿರುವ ಕುಶ್ವಾಹ ಸಮುದಾಯದ ಜನಪ್ರಿಯ ನಾಯಕ ಈ ರಾಜಾ ಭಯ್ಯಾ. ಇದರ ಜತೆಗೆ ಅವರು ವಿವಾದದ ಮೂಲಕವೂ ಅನೇಕ ಬಾರಿ ಸುದ್ದಿಯಾಗಿದ್ದಾರೆ. ಕೊಲೆ ಯತ್ನ ಮತ್ತು ಅಪಹರಣದಂತಹ ಗಂಭೀರ ಆರೋಪಗಳನ್ನೂ ಅವರು ಎದುರಿಸುತ್ತಿದ್ದಾರೆ. ಇಷ್ಟಾಗಿಯೂ ಅವರು ತಮ್ಮ ಬುದ್ಧಿವಂತ ರಾಜಕೀಯ ತಂತ್ರಗಳಿಗೆ, ಚಾಣಾಕ್ಷ ನಡೆಗಳಿಗೆ ಜನಪ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ರಾಜಕೀಯ ನಿಲುವನ್ನೂ ಬದಲಾಯಿಸುತ್ತಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಇದೀಗ ಅವರು ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸಲಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ

Exit mobile version