Site icon Vistara News

ವಿಸ್ತಾರ ಸಂಪಾದಕೀಯ: ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾದರೆ ಸಾಲದು, ಶಿಕ್ಷೆಯೂ ಆಗಲಿ

Corruption

#image_title

ಲೋಕಾಯುಕ್ತ ಅಧಿಕಾರಿಗಳು ರಾಜ್ಯಾದ್ಯಂತ ಸೋಮವಾರ ಹಲವು ಸರ್ಕಾರಿ ನೌಕರರ ಮನೆ, ಕಚೇರಿಗಳ ಮೇಲೆ ದಾಳಿ (lokayukta raid) ನಡೆಸಿದ್ದು, ಹಲವು ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಕೋಟಿಗಟ್ಟಲೆ ಹಣ, ಕೆಜಿಗಟ್ಟಲೆ ಚಿನ್ನ ಪತ್ತೆಯಾಗಿದೆ. ಬಿಬಿಎಂಪಿ ಅಧಿಕಾರಿಗಳು, ತಹಸೀಲ್ದಾರರು, ನಿವೃತ್ತ ಡಿಸಿಎಫ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮತ್ತಿತರ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಸರ್ಕಾರಿ ಅಧಿಕಾರಿಗಳ ಭ್ರಷ್ಟ ಲೋಕ ಈ ಮೂಲಕ ಮತ್ತೊಮ್ಮೆ ಬಯಲಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ದಿನೇದಿನೆ ಭ್ರಷ್ಟಾಚಾರ ಮಿತಿ ಮೀರುತ್ತಿರುವುದಕ್ಕೆ ಇದು ಸಾಕ್ಷಿ. ಈಗ ದಾಳಿ ನಡೆದಿರುವುದು ಮತ್ತು ಬೆಳಕಿಗೆ ಬಂದಿರುವುದು ಭ್ರಷ್ಟ ಲೋಕದ ಅಣುವಿನಷ್ಟು ಮಾತ್ರವೇ ಇರಬಹುದು. ಇನ್ನಷ್ಟು ದಾಳಿಗಳು ನಡೆಯಬೇಕು; ಸಿಕ್ಕಿಬಿದ್ದ ಭ್ರಷ್ಟರಿಗೆ ಶಿಕ್ಷೆಯೂ ಆಗಬೇಕು.

ಕಳೆದುಕೊಂಡಿದ್ದ ತನ್ನ ಅಧಿಕಾರವನ್ನು ಮರಳಿ ಪಡೆದುಕೊಂಡ ಬಳಿಕ ಲೋಕಾಯುಕ್ತ ಸಾಕಷ್ಟು ಚುರುಕಾಗಿದೆ ಎನ್ನಲು ಈ ದಾಳಿಗಳು ಸಾಕ್ಷಿಗಳಾಗಿವೆ. ಹಿಂದಿನ ಸರ್ಕಾರದ ಕಾಲದಲ್ಲಿ ಲೋಕಾಯುಕ್ತದ ಬಲಗುಂದಿಸಿ ಎಸಿಬಿಯನ್ನು ರಚಿಸಲಾಗಿತ್ತು. ನಂತರ ನಡೆದ ನ್ಯಾಯಾಂಗ ಪ್ರಕರಣದಲ್ಲಿ ಕೋರ್ಟ್‌ ಲೋಕಾಯುಕ್ತದ ಅಧಿಕಾರವನ್ನು ಮರಳಿ ಸ್ಥಾಪಿಸಿದ್ದು, ಜನಪ್ರತಿನಿಧಿಗಳ ಜಂಘಾಬಲ ಉಡುಗಿಸಿದಂತಾಗಿರುವುದು ನಿಜ. ಇದಕ್ಕೆ ಸಾಕ್ಷಿ ಎಂಬಂತೆ ಆಡಳಿತ ಪಕ್ಷದ ಶಾಸಕರೊಬ್ಬರ ಮನೆಯಲ್ಲಿ ದೊಡ್ಡ ಮೊತ್ತದ ಹಣ ಸಿಕ್ಕಿದ್ದು ಮತ್ತು ಸರ್ಕಾರಕ್ಕೆ ಮುಜುಗರ ತಂದಿಟ್ಟಿರುವುದು ಇತ್ತೀಚೆಗಿನ ಸಂಗತಿ. ಒಂಬುಡ್ಸ್‌ಮನ್‌ಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ, ಭ್ರಷ್ಟಾಚಾರದ ಬಗ್ಗೆ ದೂರು ನೀಡುವವರು, ಮಾಹಿತಿ ಕೊಡುವವರು ಕೂಡ ಚುರುಕಾಗುತ್ತಾರೆ. ಶಿಕ್ಷೆಯೂ ಖಾತ್ರಿಯಾಗುವುದಾದರೆ, ಯಾರದೇ ಭಯವಿಲ್ಲದೆ ಮಾಹಿತಿ ಕೊಡುತ್ತಾರೆ.

ಕೈತುಂಬ ಸಂಬಳ ಇತ್ಯಾದಿ ಸಕಲ ಸೌಲಭ್ಯವನ್ನು ಸರ್ಕಾರ ನೀಡಿದಾಗಲೂ ಈ ಅಧಿಕಾರಿಗಳು ಜನಸಾಮಾನ್ಯರ ಲಂಚದ ಹಣಕ್ಕೆ ಕೈ ಚಾಚಿ ಹಣ, ಆಸ್ತಿಪಾಸ್ತಿ ಕೂಡಿ ಹಾಕುತ್ತಿರುವುದು ನಾಚಿಕೆಗೇಡು. ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವುದು ಈಗ ವ್ಯಂಗ್ಯದ ಸಂಗತಿಯಾಗಿಬಿಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಸಣ್ಣಪುಟ್ಟ ಕೆಲಸಕ್ಕೂ, ಮರಣ ಪ್ರಮಾಣ ಪತ್ರ ಪಡೆಯಲೂ ಪರದಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಮಗುವಿನ ಮುಖ ತೋರಿಸಲೂ ಹಣ ಕೀಳುವುದು, ಹಣ ಕೊಡದಿದ್ದರೆ ಹೆಣ ಕೂಡ ಕೊಡದಿರುವುದು ಸಾಮಾನ್ಯವಾಗಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಂಬುದು ಒಂದು ವಿಚಾರವೇ ಅಲ್ಲ ಎಂಬಂತೆ ಜನ ಹೊಂದಿಕೊಳ್ಳತೊಡಗಿರುವುದು ಅಸಹಾಯಕತೆಯಿಂದಲೇ ಹೊರತು, ಮನಸ್ಫೂರ್ತಿಯಿಂದ ಅಲ್ಲ. ಈ ಭ್ರಷ್ಟ ವ್ಯವಸ್ಥೆ ಕೊನೆಗೊಳ್ಳುವುದು ಯಾವಾಗ?

ಲೋಕಾಯುಕ್ತ ದಾಳಿಗಳನ್ನೇನೋ ನಡೆಸುತ್ತದೆ. ಆದರೆ ಶಿಕ್ಷೆಯ ಪ್ರಮಾಣ ಅದೇ ಪ್ರಮಾಣದಲ್ಲಿ ಆಗುವುದಿಲ್ಲ. ಬಲೆಗೆ ಬಿದ್ದು ಸಸ್ಪೆಂಡ್ ಆದ ಅಧಿಕಾರಿಗಳು ಕೆಲವೇ ತಿಂಗಳಲ್ಲಿ ಮತ್ತೆ ನೇಮಕವಾಗಿ ಪ್ರಮೋಷನ್ ಪಡೆದು ಮೆರೆಯುತ್ತಾರೆ. ಲೋಕಾಯುಕ್ತವು ಮುಖ್ಯಮಂತ್ರಿ, ಯಾವುದೇ ಸಚಿವ ಅಥವಾ ಕಾರ್ಯದರ್ಶಿ, ರಾಜ್ಯ ಶಾಸಕಾಂಗದ ಸದಸ್ಯ ಅಥವಾ ಯಾವುದೇ ಇತರ ಸಾರ್ವಜನಿಕ ಸೇವಕರ ಮೇಲಿನ ಭ್ರಷ್ಟಾಚಾರದ ಆರೋಪವನ್ನು ತನಿಖೆ ಮಾಡಬಲ್ಲ ಅಧಿಕಾರವನ್ನು ಹೊಂದಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಅಂಥವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಬಹುದು. ಅಗತ್ಯವಿದ್ದರೆ ಪ್ರಕರಣಗಳನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಉಲ್ಲೇಖಿಸಬಹುದು. ಆದರೆ ಇವರು ಶಿಕ್ಷೆ ಘೋಷಿಸುವ ಅಧಿಕಾರವನ್ನು ಹೊಂದಿಲ್ಲ. ಶಿಕ್ಷೆಯಾಗದೇ ಹೋದರೆ ದಾಳಿಗಳನ್ನು ನಡೆಸಿಯೂ ಪ್ರಯೋಜನವಿಲ್ಲ.

ಇದನ್ನೂ ಓದಿ :ವಿಸ್ತಾರ ಸಂಪಾದಕೀಯ: ಕೊನೆಗೂ ಖಲಿಸ್ತಾನಿ ನಾಯಕನ ಬಂಧನ, ಸಿಖ್ ಪ್ರತ್ಯೇಕತಾವಾದಿಗಳನ್ನು ಮಟ್ಟ ಹಾಕಿ

ಹೀಗಾಗಿ ಲೋಕಾಯುಕ್ತ ಸಂಸ್ಥೆ ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ದಾಳಿ ಮಾಡಿದರೆ ಸಾಲದು. ನಿರಂತರವಾಗಿ ದಾಳಿ ನಡೆಸಿ ಲಂಚಕೋರ ಅಧಿಕಾರಿಗಳನ್ನು ಬಲೆಗೆ ಹಾಕಬೇಕು. ದೃಢವಾದ ಸಾಕ್ಷಿಗಳನ್ನು ಕಲೆಹಾಕಿ, ಪ್ರಕರಣದ ಬೆನ್ನುಹತ್ತಿ ಶಿಕ್ಷೆ ಕೊಡಿಸುವುದು ಲೋಕಾಯುಕ್ತಕ್ಕೆ ಸಾಧ್ಯವಾಗಬೇಕು. ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ಆದರೆ, ಸರ್ಕಾರಿ ವ್ಯವಸ್ಥೆ ಮುಂದೆ ಅಂಥ ಭ್ರಷ್ಟಾಚಾರ ನಡೆಸಲು ಅಂಜುತ್ತದೆ. ಜನಸಾಮಾನ್ಯರು ಕೂಡ ಭ್ರಷ್ಟತೆಯನ್ನು ಪ್ರಶ್ನಿಸಲು, ದೂರು ಕೊಡಲು ಮುಂದೆ ಬರುತ್ತಾರೆ. ಹೀಗಾದರೆ ಬದಲಾವಣೆ ಸಾಧ್ಯವಿದೆ.

Exit mobile version