Site icon Vistara News

Assembly Session: ಇಂದಿನಿಂದ ವಿಧಾನ ಮಂಡಲ ಅಧಿವೇಶನ, ರಂಗೇರಲಿರುವ ಕೈ- ಕಮಲ ಕದನ; ಚಕಮಕಿಗೆ ಅಸ್ತ್ರ- ಪ್ರತ್ಯಸ್ತ್ರಗಳು ಸಜ್ಜು

assembly session

ಬೆಂಗಳೂರು: ವಿಧಾನ ಮಂಡಲದ ಉಭಯ ಸದನಗಳ ಕಲಾಪ (Assembly Session) ಸೋಮವಾರ (ಜುಲೈ 15) ಆರಂಭವಾಗಲಿದ್ದು, ಒಂಬತ್ತು ದಿನ ನಡೆಯಲಿದೆ. ಆಡಳಿತ ಪಕ್ಷದ ವಿರುದ್ಧ ಸಮರ ಸಾರಲು ಪ್ರತಿಪಕ್ಷಗಳು ಸಜ್ಜಾಗಿವೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಮುಡಾ ಹಗರಣ (MUDA Scam), ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Corporation Scam), ಬೆಲೆ ಏರಿಕೆ (Price Hike) ಸೇರಿದಂತೆ ವಿವಿಧ ವಿಚಾರಗಳನ್ನು ಪ್ರಸ್ತಾವಿಸಿ ಸರ್ಕಾರದ ವಿರುದ್ಧ ಮುಗಿಬೀಳಲಿದೆ. ಸಿದ್ದರಾಮಯ್ಯ (CM Siddaramaiah) ಸರ್ಕಾರ ಕೂಡ ನಿನ್ನೆ ಅಧಿಕಾರಿಗಳ ಸಭೆ ನಡೆಸಿ ಪ್ರತ್ಯುತ್ತರ ನೀಡಲು ಸೂಕ್ತ ಸಿದ್ಧತೆ ಮಾಡಿಕೊಂಡಿದೆ.

ಅಧಿಕಾರಿಗಳ ಸಭೆ

ಅಧಿವೇಶನಕ್ಕೆ ಪೂರ್ವಭಾವಿಯಾಗಿ ನಿನ್ನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ವಿಧಾನ ಮಂಡಲ ಅಧಿವೇಶನ ಚರ್ಚೆಗೆ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿರುವಂತೆ, ಅಧಿವೇಶನದಲ್ಲಿ ಖುದ್ದು ಹಾಜರಿದ್ದು ಸಚಿವರಿಗೆ ತಮ್ಮ ಇಲಾಖೆಗಳ ವಿಷಯಗಳ ಕುರಿತ ಮಾಹಿತಿ ಒದಗಿಸಬೇಕು ಎಂದು ಸಿಎಂ ನಿರ್ದೇಶನ ನೀಡಿದರು.

ಸಿಎಂ ನಿನ್ನೆ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ವಿವಿಧ ಇಲಾಖೆಗಳಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇರುವ ವಿಷಯಗಳ ಕುರಿತು ಇಲಾಖಾ ಕಾರ್ಯದರ್ಶಿಗಳಿಂದ ಮುಖ್ಯಮಂತ್ರಿಗಳು ಸವಿಸ್ತಾರವಾಗಿ ಸಿಎಂ ಮಾಹಿತಿ ಪಡೆದರು. ಚರ್ಚೆಯ ಸಾಧ್ಯತೆ ಇರುವ ವಿಷಯಗಳ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲು ಸಹ ಸೂಚನೆ ನೀಡಿದರು. ಎಲ್ಲ ಕಾರ್ಯದರ್ಶಿಗಳೂ, ಇಲಾಖಾ ಮುಖ್ಯಸ್ಥರು ಅಧಿವೇಶನದಲ್ಲಿ ಹಾಜರಿರಬೇಕು, ಸಚಿವರಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು. ಆಯಾ ಇಲಾಖಾ ಸಚಿವರು ಚರ್ಚೆಯ ವಿಷಯಗಳಿಗೆ ಉತ್ತರಿಸಬೇಕು, ಅಗತ್ಯವಿದ್ದರೆ ನಾನು ಮಧ್ಯಪ್ರವೇಶಿಸುತ್ತೇನೆ ಎಂದು ತಿಳಿಸಿದರು. ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯೆಲ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಮರ ಸಾರಲು ಸಜ್ಜಾಗಿರುವ ಮೈತ್ರಿಕೂಟ

ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿರುವ ಬಿಜೆಪಿ, ಜೆಡಿಎಸ್‌ಗಳು ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣಗಳನ್ನೇ ಪ್ರಮುಖ ಅಸ್ತ್ರವಾಗಿ ಹಿಡಿದು ಸಿಎಂ ಅವರನ್ನು ಟಾರ್ಗೆಟ್ ಮಾಡಲಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಹಗರಣ ಸರ್ಕಾರಕ್ಕೆ ದೊಡ್ಡ ಮಟ್ಟದ ಮುಜುಗರ ತಂದಿದೆ. ಇದು ಈ ಬಾರಿಯ ಸರ್ಕಾರದ ಮೊದಲ ಬಹು ಕೋಟಿ ಹಗರಣ. ಪ್ರಕರಣ ಸಂಬಂಧ ಮಾಜಿ ಸಚಿವ ನಾಗೇಂದ್ರ ಬಂಧನ ಆಗಿದ್ದು, ಇನ್ನೂ ಹಲವರ ಬಂಧನ ಮಾಡುವ ಸಾಧ್ಯತೆ ಇದೆ. ನಿಗಮದ ಅಧ್ಯಕ್ಷ, ಶಾಸಕ ದದ್ದಲ್ ರಾಜೀನಾಮೆ ನೀಡದಿರುವ ಬಗ್ಗೆ ಪ್ರತಿಪಕ್ಷ ಧ್ವನಿ ಎತ್ತಲಿದೆ.

ಇನ್ನು ಮುಡಾ ಹಗರಣ ನಾಲ್ಕುವರೆ, ಐದು ಸಾವಿರ ಕೋಟಿ ರೂಪಾಯಿಗಳ ಹಗರಣ. ಇಲ್ಲಿ ಸ್ವತಃ ಸಿಎಂ ಕುಟುಂಬದ ಮೇಲೆ ಭ್ರಷ್ಟಾಚಾರ ಆರೋಪವಿದೆ. ನಿಯಮ ಬಾಹಿರವಾಗಿ 14 ಬದಲಿ ನಿವೇಶನ ಪಡೆದಿರುವ, ಇತರೆ ರಾಜಕಾರಣಿಗಳ ವಿರುದ್ಧವೂ ಅಕ್ರಮ ಸೈಟ್ ಪಡೆದಿರುವ ಆರೋಪ ಇದೆ.

ಇನ್ನು SCP-TSP ಹಗರಣದಲ್ಲಿ ಸರ್ಕಾರದ ಗ್ಯಾರಂಟಿಗೆ ದಲಿತರ ಹಣ ಬಳಕೆ ಮಾಡಿದ ಆರೋಪವಿದೆ. ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ SC, STಗಳಿಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಶಕ್ತಿ ಯೋಜನೆಗೆ ಮೊದಲು 11 ಸಾವಿರ ಕೋಟಿ ಹಣ ದುರ್ಬಳಕೆ, ಎರಡನೇ ಬಾರಿ ಶಕ್ತಿ ಯೋಜನೆಗೆ 14 ಸಾವಿರ ಕೋಟಿ ಹಣ ಬಳಕೆ ಮಾಡಲಾಗಿದೆ ಎನ್ನಲಾಗಿದೆ.

ಎರಡು ಸಾವಿರ ಕೋಟಿ‌ ರೂಪಾಯಿ ಮೊತ್ತದ ಅಪೆಕ್ಸ್ ಬ್ಯಾಂಕ್ ಹಗರಣದಲ್ಲಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಹಾಲಿ ಸಚಿವ ರಾಜಣ್ಣ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಬಂದಿದೆ. ನಿಯಮಬಾಹಿರವಾಗಿ ಸಾಲ ನೀಡಿರುವ ಆರೋಪ, ಬ್ಯಾಂಕ್‌ನಲ್ಲಿ ಠೇವಣಿದಾರ ಅಲ್ಲದವರಿಗೆ, ಸಕ್ಕರೆ ಕಾರ್ಖಾನೆ, ಇತರೆ ಸಂಸ್ಥೆಗಳಿಗೆ ಸಾಲ ನೀಡಿರುವ ಆರೋಪವಿದ್ದು, ಸಚಿವ ಕೆ.ಎನ್ ರಾಜಣ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಸಂಭವ ಇದೆ.

ಸರ್ಕಾರದ ಪ್ರತ್ಯುತ್ತರವೇನು?

ಮುಡಾ ಕೇಸ್ ಪ್ರತಿಯಾಗಿ ಸೂಡಾ ಅಕ್ರಮ ಪ್ರಸ್ತಾಪ ಮಾಡಲು ಕಾಂಗ್ರೆಸ್‌ ಪ್ಲಾನ್ ಮಾಡಿಕೊಂಡಿದೆ. ಶಿವಮೊಗ್ಗ ಪ್ರಾಧಿಕಾರದಲ್ಲೂ ಸೈಟ್ ಹಂಚಿಕೆ ಗೋಲ್ ಮಾಲ್ ನಡೆದಿದ್ದು, ಬಿಜೆಪಿ ನಾಯಕರು ಹಾಗೂ ಅವರ ಕುಟುಂಬಸ್ಥರು ಶಾಮೀಲು ಆಗಿರುವ ಬಗ್ಗೆ ಮಾಹಿತಿಯಿದೆ ಎಂದು ಮಾಹಿತಿ ಸಂಗ್ರಹಿಸಲಾಗಿದ್ದು, ಈ‌ ಕುರಿತು ಸದನದಲ್ಲಿ ದಾಖಲೆ ಬಿಡುಗಡೆ ಮಾಡಲು ಚಿಂತಿಸಲಾಗಿದೆ.

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಕಾಲದಲ್ಲಿ ಮುಡಾ ಸೈಟ್ ಹಂಚಿಕೆ ಅಕ್ರಮ ಆಗಿದೆ. 48 ನಿವೇಶನ ಹಂಚಿಕೆಯ ವೇಳೆಯಲ್ಲಿ ಮಾಜಿ ಸಿಎಂ ಹೆಚ್ಡಿಕೆಗೂ 60 ಸಾವಿರ ಅಡಿ ನಿವೇಶನ ನೀಡಲಾಗಿದೆ‌. ಈ ಪ್ರಕರಣವನ್ನ ಸ್ವತಃ ಯಡಿಯೂರಪ್ಪ ಅವರೇ ಪರಿಷತ್ ನಲ್ಲಿ ಪ್ರಸ್ತಾಪ ಮಾಡಿದ್ದರು. ಜೊತೆಗೆ ಅಂದಿನ ಸಭಾಪತಿಗೆ ದಾಖಲೆ ಸಹ ನೀಡಿದ್ದರು ಎಂದು ಪ್ರಸ್ತಾಪ ಮಾಡಲು ಕೈ ಪಡೆ ತಯಾರಿ ನಡೆಸಿದೆ.

ವಾಲ್ಮೀಕಿ ‌ನಿಗಮದ ಅಕ್ರಮದ ಪ್ರತಿಯಾಗಿ ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ ಪ್ರಸ್ತಾಪ ಮಾಡಲಾಗುತ್ತಿದೆ. ಬಿಜೆಪಿ ಕಾಲದಲ್ಲಿ ಟ್ರಕ್ ಟರ್ಮಿನಲ್ ‌ನಿಗಮದಲ್ಲಿ‌ 200 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಪೂರಕವಾಗಿ ವೀರಯ್ಯ ಬಂಧನವಾಗಿದೆ. ವೀರಯ್ಯ ಬಂಧನ ಪ್ರಸ್ತಾಪ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ಕೊಡುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ. ಜೊತೆಗೆ ಈ ಹಗರಣದಲ್ಲಿ ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಶ್ರೀರಾಮಲು ಹೆಸರು ಉಲ್ಲೇಖ ಮಾಡುವ ಸಾಧ್ಯತೆಯಿದೆ.

ಇತರ ಆರೋಪಗಳು

ಇನ್ನು ಸರ್ಕಾರದಲ್ಲಿ ನಿರಂತರ ವರ್ಗಾವಣೆ ಮಾಡ್ತಿರುವ ಆರೋಪಗಳಿದ್ದು, ಪದೇ ಪದೆ ವರ್ಗಾವಣೆ ಮಾಡ್ತಿರುವ ಆರೋಪವಿದೆ. ಸ್ವಪಕ್ಷೀಯರೇ ಇದರ ವಿರುದ್ಧ ಧ್ವನಿ ಎತ್ತಿರೋದು ಸರ್ಕಾರಕ್ಕೆ ಮುಜುಗರ ತಂದಿದೆ. ಹೈನುಗಾರಿಕೆ ಮಾಡುವ ರೈತರಿಗೆ ಕಳೆದ ವರ್ಷದಿಂದ ಬೆಂಬಲ ಬೆಲೆ ತಲುಪಿಲ್ಲ. ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರಿಂದ ಹಣ ಪಡೆಯುತ್ತಿರುವ ಸರ್ಕಾರ ರೈತರಿಗೆ ಕಳೆದ ವರ್ಷದಿಂದ ಒಂದು ಸಾವಿರ ಕೋಟಿ ಪ್ರೋತ್ಸಾಹ ದನ ಬಾಕಿ ಉಳಿಸಿಕೊಂಡಿದೆ. ಗ್ಯಾರಂಟಿ ಯೋಜನೆ ಸರಿದೂಗಿಸಲು ಹಲವು ರೀತಿ ದರ ಏರಿಕೆ ಮಾಡಿದೆ. ಪೆಟ್ರೋಲ್, ಡೀಸೆಲ್ ಸೆಸ್ ದರ ಹೆಚ್ಚಳ, ಪ್ರಾಪರ್ಟಿ, ಗೈಡ್ ಲೈನ್ಸ್ ವ್ಯಾಲ್ಯು, ಅಬಕಾರಿ ಸುಂಕ ಹೆಚ್ಚಳ, ಇದರಿಂದ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರ ಆಕ್ರೋಶವನ್ನು ಪ್ರತಿಪಕ್ಷಗಳು ಪ್ರಸ್ತಾವಿಸಲಿವೆ.

ಇದನ್ನೂ ಓದಿ: MUDA Scam: ಮುಡಾ ಕೇಸ್ ತನಿಖೆಗೆ ಏಕಸದಸ್ಯ ಆಯೋಗ ರಚಿಸಿದ ರಾಜ್ಯ ಸರ್ಕಾರ; ಅಧಿವೇಶನಕ್ಕೂ ಮುನ್ನವೇ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನ

Exit mobile version