Site icon Vistara News

Navaratri 2022 | ಶರನ್ನವರಾತ್ರಿ, ಶ್ರೀನಿವಾಸದೇವರ ನವರಾತ್ರಿ; ಏನಿದು ಆಚರಣೆ?

Navaratri 2022

ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಆಶ್ವಯುಜ ಮಾಸದ ನಿಯಾಮಕನು ಯಜ್ಞಾ-ಪದ್ಮನಾಭ. ಆಶ್ವಯುಜ ಅಥವಾ ಆಶ್ವಿಜಮಾಸದ ಶುಕ್ಲಪ್ರತಿಪತ್ ನಿಂದ ನವಮೀಯ ವರೆಗೂ ನವರಾತ್ರಿ (Navaratri 2022) ಉತ್ಸವವಿರುತ್ತದೆ. ಈ ನವರಾತ್ರಿಯ ಒಂದೋಂದು ದಿನವು ಒಂದೋಂದು ವಿಶೇಷ ಆಚರಣೆಗಳಿಂದ ಕೂಡಿದೆ. ಈ ಒಂಬತ್ತು ದಿನಗಳಲ್ಲಿ ವಿಶೇಷ ದೀಪಾರಾಧನೆ, ಘಟ್ಟಸ್ಥಾಪನೆ, ಶ್ರೀಶ್ರೀನಿವಾಸನ ಪೂಜೆ, ಶ್ರೀವೇದವ್ಯಾಸ ಹಾಗು ಸರಸ್ವತಿಪೂಜೆ, ದುರ್ಗಾಪೂಜೆ, ವೆಂಕಟೇಶಮಾಹಾತ್ಮ್ಯೆ ಪಾರಾಯಣ ಹಾಗೂ ಶ್ರವಣ, ನಿತ್ಯದಲ್ಲಿಯೂ ಸಚ್ಛಾಸ್ತ್ರದ ಪಾರಾಯಣ, ಬ್ರಾಹ್ಮಣಸುವಾಸಿನಿಯರಿಗೆ ಭೋಜನಾದಿಗಳನ್ನು ಮಾಡಿಸುವುದು ಹೀಗೆ ನವರಾತ್ರೋತ್ಸವದಲ್ಲಿ ಅನೇಕ ಪೂಜೆ ಆಚೆರಣೆಗಳನ್ನು ವಿಧಿಸಿದ್ದಾರೆ.

ನವದಿನಗಳು ಎಂದು ಕರೆಯುವ ಬದಲು “ನವರಾತ್ರಿ” (Navaratri 2022) ಎಂದೇ ಕರೆಯುವದಕ್ಕೆ ವಿಶೇಷಕಾರಣವಿದೆ. ಆಶ್ವಯುಜಮಾಸದ ಶರತ್ ಋತುವಿನ ಈ ವಿಶೇಷದಿನಗಳಲ್ಲಿ ರಾತ್ರಿಯ ಸ್ವಚ್ಛವಾತಾವರಣ ಹಾಗೂ ಚಂದ್ರಮನ ಚಂದ್ರಿಕೆಯು ವಿಶೇಷತೆಯನ್ನು ಪಡೆದಿದೆ.

ಈ ದಿನಗಳಲ್ಲಿ ದುಷ್ಟರ ನಾಶವನ್ನು ಮಾಡುವ ದುರ್ಗೆಯಪೂಜೆ ಇರುತ್ತದೆ. ಹಗಲಿಗಿಂತಲೂ ರಾತ್ರಿಯಲ್ಲಿ ದುಷ್ಟರಬಾಧೆ ಬಹಳ. ಅನ್ಯಾಯ ಅನಾಚಾರಗಳು ರಾತ್ರಿಯಲ್ಲಿಯೇ ಅಧಿಕವಾಗಿರುತ್ತವೆ. ಆದ್ದರಿಂದ ಇಂತಹ ಅನಾಚಾರಿಗಳಾದ ರಾಕ್ಷಸರಿಗೆ ನಕ್ತಂಚರರೆಂದೇ ಹೆಸರು. ರಾಕ್ಷಸರಿಗೆ ಬಲವು ರಾತ್ರಿಯಲ್ಲಿಯೇ ಅಧಿಕವಾಗುತ್ತದೆ. ಆದ್ದರಿಂದಲೇ ಇಂತಹ ನಕ್ತಂಚರರಾದ ರಾಕ್ಷಸರ ಸಂಹರಿಸುವ ದುರ್ಗೆಯ ಆರಾಧನೆ. ಆದ್ದರಿಂದ ಇದು ನವರಾತ್ರಿ.

ಶ್ರೀನಿವಾಸದೇವರ ನವರಾತ್ರಿ

ಯಾವ ಸಂಪ್ರದಾಯಗಳಲ್ಲಿ ಶ್ರೀನಿವಾಸದೇವರು ಕುಲದೈವರಾಗಿರುವರೋ ಅವರ ಮನೆಗಳಲ್ಲಿ ವೇಂಕಟೇಶದೇವರ ನವರಾತ್ರಿ ಇರುತ್ತದೆ. ನಿತ್ಯದಲ್ಲಿಯೂ ಶ್ರೀದೇವಿ ಭೂದೇವಿಸಹಿತ ಶ್ರೀವೇಂಕಟೇಶದೇವರ ಪೂಜೆ ನಡೆಯುತ್ತದೆ. ನಿತ್ಯದಲ್ಲಿಯೂ ಬೇಳೆ ಹೂರಣದಿಂದ ವೇಂಕಟೇಶದೇವರಿಗೆ ಆರತಿ ನೈವೇದ್ಯಗಳು ನಿರಂತರ ಒಂಬತ್ತು ದಿನಗಳ ವರೆಗೂ ನಡೆಯುತ್ತದೆ. ಸಾಯಂಕಾಲದಲ್ಲಿಯೂ ಸಹ ಹಣ್ಣು ತೆಂಗಿನಕಾಯಿ ಇತ್ಯಾದಿಗಳನ್ನು ನಿವೇದಿಸಿ ಮಂಗಳಾರತಿ ನೀರಾಜನಾದಿಗಳನ್ನು ಮಾಡಬೇಕು.

ಶ್ರೀನಿವಾಸನ ನವರಾತ್ರಿ ಇದ್ದವರ ಸಂಪ್ರದಾಯಗಳಲ್ಲಿ ಮನೆಯ ಹಿರಿಯ ಪುರುಷರು ಅಥವಾ ಉಪನೀತ ಬಾಲಕರು ಒಂಬತ್ತುದಿನವೂ ಬಿಡದೇ ಬ್ರಾಹ್ಮಣರ ಮನೆಗಳಿಗೆ ಗೋಪಾಳಕ್ಕೆ ಹೋಗುತ್ತಾರೆ. ಹೀಗೆ ಗೋಪಾಳದಿಂದ ಬಂದ ಅಕ್ಕಿ ಬೇಳೆ ಬೆಲ್ಲ ಮುಂತಾದವುಗಳನ್ನು ಬಳಸಿ ದೇವರಿಗೆ ನಿವೇದಿಸುವುದು ವಿಶೇಷ ಪದ್ಧತಿ. ಪ್ರತಿಪತ್ ತಿಥಿಯಿಂದ ದಶಮೀವರೆಗೂ ಪ್ರತಿನಿತ್ಯ ಸಾಯಂಕಾಲ ಶ್ರೀವೆಂಕಟೇಶಕಲ್ಯಾಣ ಶ್ರವಣ ಹಾಗೂ ಪಾರಾಯಣವನ್ನು ಮಾಡಬೇಕು. ಈ ಸಮಯದಲ್ಲಿ ಶ್ರೀಲಕ್ಷ್ಮೀಹೃದಯ ಮತ್ತು ಶ್ರೀನಾರಾಯಣಹೃದಯದ ಸಂಪುಟೀಕರಣವಾಗಿ ಪಾರಾಯಣ ಮಾಡುವುದು ಬಹಳ ವಿಶೇಷ.

ಶ್ರೀವೆಂಕಟೇಶಕಲ್ಯಾಣ ಶ್ರವಣ

ಆಶ್ವಯುಜ ಮಾಸದ ಪಾಡ್ಯದಿಂದ ಆರಂಭಿಸಿ ದಶಮಿತಿಥಿಯ ವರೆಗೂ ಶ್ರೀವೆಂಕಟೇಶಕಲ್ಯಾಣದ ವಿಶೇಷ ಶ್ರವಣವನ್ನು ಮಾಡಬೇಕು. ವೈಶಾಖಶುದ್ಧ ಪ್ರತಿಪತ್ ನಿಂದ ದಶಮೀವರೆಗೂ ಸಹ ವೆಂಕಟೇಶಕಲ್ಯಾಣ ಪಾರಾಯಣ ಹಾಗೂ ಪ್ರವಚನಗಳು ನಡೆಯುತ್ತವೆ. ಏಕೆಂದರೆ, ವೈಶಾಖಶುದ್ಧ ದಶಮೀದಿನದಂದೇ ಶ್ರೀನಿವಾಸನು ಶ್ರೀಪದ್ಮಾವತಿಯನ್ನು ವಿವಾಹವಾದನು. ವಿವಾಹದ ನಂತರದಲ್ಲಿ ನೂತನ ದಂಪತಿಗಳು ಆರು ತಿಂಗಳ ವರೆಗೂ ಬೆಟ್ಟವನ್ನು ಹತ್ತಲಿಲ್ಲ. ವೈಶಾಖದಿಂದ ಆಶ್ವಯುಜ ಮಾಸದ ವರೆಗೂ ಅಲ್ಲಲ್ಲಿ ವಿಹರಿಸಿ ನಂತರ ಆಶ್ವಯುಜದಲ್ಲಿ ಬೆಟ್ಟವನ್ನು ಹತ್ತುತ್ತಾರೆ.

ಹೀಗೆ ವಿವಾಹದ ಆರುತಿಂಗಳ ನಂತರ ಬೆಟ್ಟಕ್ಕೆ ಆಗಮಿಸಿದ ಶ್ರೀನಿವಾಸ ಪದ್ಮಾವತಿಯರನ್ನು ಬ್ರಹ್ಮದೇವರು ರಥದಲ್ಲಿ ಕುಳ್ಳಿರಿಸಿ ಮೆರವಣಿಗೆಯಿಂದ ಸ್ವಾಗತಿಸಿದರು. ಇದೇ ”ಬ್ರಹ್ಮೋತ್ಸವ” ಅಥವಾ ”ಬ್ರಹ್ಮರಥೋತ್ಸವ” ಎಂದು ಪ್ರಸಿದ್ಧವಾಗಿದೆ. ಆದ್ದರಿಂದ ಈ ಆಶ್ವಿಜ ಶುದ್ಧ ಪ್ರತಿಪತ್ ತಿಥಿಯಿಂದ ದಶಮೀತಿಥಿಯವರೆಗೆ ಶ್ರೀನಿವಾಸ ಕಲ್ಯಾಣ ಪಾರಾಯಣ ಹಾಗು ಪ್ರವಚನಗಳನ್ನು ಮಾಡುವುದು ವಿಶೇಷವಾಗಿ ಕಲ್ಯಾಣಪ್ರದವಾಗಿದೆ. ಹೀಗೆ ವೈಶಾಖಮಾಸ ಹಾಗೂ ಆಶ್ವಿಜಮಾಸಗಳಲ್ಲಿ ಪ್ರತಿವರುಷವು ಎರಡು ಬಾರಿ ಶ್ರೀವೇಂಕಟೇಶಕಲ್ಯಾಣದ ಶ್ರವಣ ಮಾಡಬೇಕು.

ಶರನ್ನವರಾತ್ರಿ

ಆಶ್ವಿಜಮಾಸದ ಈ ನವರಾತ್ರೋತ್ಸವ ಶರದ್ ಋತುವಿನಲ್ಲಿಯೇ ಆಚರಿಸುವದರಿಂದ ಶರನ್ನವರಾತ್ರಿ ಎಂದು ಕರೆಯುತ್ತಾರೆ. ಈ ಒಂಬತ್ತು ದಿನಗಳಲ್ಲಿ ದೇವಿಯ ಪೂಜೆ ಬಹಳ ಮಹತ್ತ್ವವನ್ನು ಪಡೆದಿದೆ. ಶರತ್ ಋತುವು ಸ್ವಚ್ಛವಾದ ಆಕಾಶದಲ್ಲಿ ಬೆಳಗುವ ಚಂದ್ರ-ನಕ್ಷತ್ರಗಳಿಂದ ಕೂಡಿರುತ್ತದೆ. ಆಹ್ಲಾದಕರವಾದ ಆಕಾಶವು ಹೇಗೆ ಪ್ರಸನ್ನತೆಯಿಂದ ಕೂಡಿರುತ್ತದೆಯೋ, ಮನಸ್ಸೂ ಸಹ ಪ್ರಸನ್ನತೆಯಿಂದ ಕೂಡಿರುತ್ತದೆ. ಆದ್ದರಿಂದ ಪೂಜೆ ಉಪಾಸನೆ ಪಾರಾಯಣಾದಿಗಳಿಗೆ ಈ ಕಾಲವು ಅತ್ಯಂತ ಪ್ರಶಸ್ತವಾಗಿದೆ.

ಕೆಲವು ಬಾರಿ ತಿಥಿಯು ವೃದ್ಧಿಯಾದಾಗ ಅಥವಾ ಹ್ರಾಸವಾದಾಗ ಒಂಬತ್ತುರಾತ್ರಿಗಳು ಲಭಿಸುವುದಿಲ್ಲ. ಆದರೂ ಸಹ ಅದು ”ನವರಾತ್ರಿ” ಎಂದೇ ಪರಿಗಣಿತವಾಗಿದೆ. ಹೀಗೆ ಈ ಶರದೃತುವಿನಲ್ಲಿ ದೇವಿಯ ಪೂಜೆಯನ್ನು ಮಾಡಿದವನಿಗೆ ಎಲ್ಲ ಶೋಕಗಳು ಕಷ್ಟಗಳು ಪರಿಹಾರವಾಗುತ್ತವೆ. ದೇವಿಯು ಶತೃವಿನ ಬಾಧೆಯನ್ನು ನಿವಾರಿಸಿ ಅಭಯವನ್ನು ನೀಡುತ್ತಾಳೆ.

ನವರಾತ್ರಿಯ ನವದುರ್ಗಾ ಪೂಜೆ

ನವರಾತ್ರಿಯಲ್ಲಿ ಭಗವಂತನ ವಿಶೇಷಸನ್ನಿಧಾನವನ್ನು ಹೊಂದಿದ ದುರ್ಗಾದೇವಿಯ ಪೂಜೆಯನ್ನು ಮಾಡಲಾಗುತ್ತದೆ. ದುರ್ಗಾದೇವಿಯನ್ನು ಮೊದಲ ಮೂರು ದಿನಗಳಲ್ಲಿ ”ಮಹಾಕಾಳಿ” ಎಂದು ದೇವಿಯನ್ನು ಪೂಜಿಸುವುದು. ಮಧ್ಯದ ಮೂರುದಿನಗಳಲ್ಲಿ ಮಹಿಷಾಸುರನನ್ನು ಸಂಹರಿಸಿದ ದುರ್ಗೆಯನ್ನು ”ಮಹಾಲಕ್ಷ್ಮೀ” ಎಂಬ ಅನುಸಂಧಾನದಿಂದ ಪೂಜಿಸಬೇಕು. ಕೊನೆಯ ಮೂರುದಿನಗಳಲ್ಲಿ ಬ್ರಹ್ಮಜ್ಞಾನಪ್ರಚೋದಕಳಾದ, ಜ್ಞಾನಪ್ರಚಾರದ ಕಾರ್ಯವನ್ನು ಮಾಡುವ ಮತ್ತು ಮಾಡಿಸುವ ”ಸರಸ್ವತೀದೇವಿ”ಯನ್ನು ಪೂಜಿಸುವುದು.

ದುರ್ಗಾದೇವಿಯು ಮಧು-ಕೈಟಭರನ್ನು, ಮಹಿಷಾಸುರ, ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ ಇವರನ್ನೆಲ್ಲ ಅನೇಕ ರೂಪಗಳಿಂದ ಸಂಹರಿಸಿದ್ದಾಳೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮಧು-ಕೈಟಭರು ಭಗವಂತನ ಕಿವಿಯ ಕಿಟ್ಟದಿಂದ ಜನಿಸಿದರೆಂದು ಪುರಾಣಗಳು ತಿಳಿಸಿವೆ. ಭಗವಂತನ ಸಚ್ಚಿದಾನಂದಾತ್ಮಕ ದೇಹದಲ್ಲಿ ಬೇಡದ ಪದಾರ್ಥ ಅಥವಾ ಅಶುದ್ಧವಸ್ತುವಿಗೆ ಸ್ಥಾನವೇ ಇಲ್ಲ.

ಆದರೂ ಇದೆಲ್ಲ ಭಗವಂತನ ಲೀಲೆಯ ಭಾಗವಷ್ಟೇ. ಭಗವಂತನ ಸಂಕಲ್ಪದಂತೆ ದುರ್ಗಾದೇವಿಯು ಮಧು-ಕೈಟಭರನ್ನು ಸಂಹರಿಸಿದಳು. ಅಜ್ಞಾನವೆಂಬ ಕಲ್ಮಷದಿಂದ ಸಂಶಯ ಮತ್ತು ವಿಪರೀತಜ್ಞಾನವು ಹುಟ್ಟಿದಂತೆ ಈ ಮಧು-ಕೈಟಭರ ಜನನದ ಸಂಕೇತ. ದುರ್ಗಾದೇವಿಯು ಮಧು-ಕೈಟಭರನ್ನು ಸಂಹರಿಸಿದಂತೆ ಎಲ್ಲರ ಅಜ್ಞಾನಗಳ ನಾಶವನ್ನು ಮಾಡಲಿ ಎಂದು ಪ್ರಾರ್ಥಿಸಿ ದುರ್ಗೆಯ ಈ ರೂಪದ ಪೂಜೆ.

ಸಂಹಾರದ ಸಂಕೇತ

ಶುಂಭ-ನಿಶುಂಭರು ಕಾಮ-ಕ್ರೋಧಗಳ ಸಂಕೇತರು. ದುರ್ಗಾದೇವಿಯು ಶುಂಭ-ನಿಶುಂಭರನ್ನು ಸಂಹರಿಸಿದಂತೆ ನಮ್ಮ ದೇಹದಲ್ಲಿರುವ ಕಾಮ-ಕ್ರೋಧಗಳನ್ನು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ದುರ್ಗೆಯ ಈ ಪೂಜೆಯನ್ನು ಮಾಡಬೇಕು.

ಈ ಶುಂಭ-ನಿಶುಂಭರ ಶಿಷ್ಯರೇ ಚಂಡ-ಮುಂಡರು. ಕಾಮ-ಕ್ರೋಧಗಳನ್ನು ಅನುಸರಿಸಿ ಮದ-ಮಾತ್ಸ್ಯರ್ಯಗಳಿದ್ದಂತೆ ಈ ಚಂಡ-ಮುಂಡರು. ಇಂತಹ ಅಸುರರನ್ನು ಸಂಹರಿಸಿದ ದೇವಿಯು ನಮ್ಮಲ್ಲಿರುವ ಮದ-ಮಾತ್ಸ್ಯರ್ಯಗಳನ್ನು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ದೇವಿಯ ಈ ಪೂಜೆಯನ್ನು ಮಾಡಬೇಕು.

ಶುಂಭ-ನಿಶುಂಭರ ಮತ್ತೊಬ್ಬ ಅಸುರ ಶಿಷ್ಯ ರಕ್ತಬೀಜಾಸುರ. ಅವನಿಗೆ ಬ್ರಹ್ಮದೇವರು ಕೊಟ್ಟ ಒಂದು ವರವಿತ್ತು. ಒಂದು ಹನಿ ರಕ್ತವೂ ಅವನ ದೇಹದಿಂದ ಭೂಮಿಯ ಮೇಲೆ ಬಿದ್ದರೆ ಮತ್ತೊಬ್ಬ ರಕ್ತಬೀಜಾಸುರನ ಜನ್ಮವಾಗುತ್ತದೆ ಎಂದು. ಆದ್ದರಿಂದಲೇ ಅವನು ರಕ್ತಬೀಜಾಸುರ. ಕಾಮ-ಕ್ರೋಧಗಳು ಹೇಗೆ ಲೋಭಕ್ಕೆ ಜನ್ಮನೀಡುತ್ತವೋ, ಅಂತಹ ಲೋಭವು ಮತ್ತೆ ಮತ್ತೆ ಹುಟ್ಟತ್ತಲೇ ಹೋಗುತ್ತದೆಯೇ ಹೊರತು ಕೊನೆಕೊಳ್ಳುವುದೇ ಇಲ್ಲ. ಇಂತಹ ಲೋಭಸ್ವರೂಪಿಯಾದ ರಕ್ತಬೀಜಾಸುರನನ್ನು ದುರ್ಗಾದೇವಿಯು ಕಾಳಿಯ ರೂಪದಿಂದ ಸಂಹರಿಸಿದಳು. ಮನುಷ್ಯನ ಸಾಂಸಾರಿಕಲೋಭವನ್ನು ದೇವಿಯು ನಿತ್ಯದಲ್ಲಿ ಸಂಹರಸಲಿ ಎಂದು ಪ್ರಾರ್ಥಿಸಿ ದೇವಿಯ ಈ ಪೂಜೆಯನ್ನು ಮಾಡಬೇಕು.

ಮಹಿಷಾಸುರನೆಂಬ ಒಬ್ಬ ಅಸುರ. ಮಹಿಷಾಸುರ ಎಂದರೆ ಎಮ್ಮೆಯ ರೂಪದಲ್ಲಿರುವ ರಾಕ್ಷಸ. ಮಹಿಷಾಸುರನು ಇಂದ್ರಾದಿಗಳಿಗೆ ಅತಿಯಾದ ತೊಂದರೆ ಕೋಟ್ಟಾಗ ಭಗವಂತನ ಆಜ್ಞೆಯಂತೆ ದುರ್ಗಾದೇವಿಯು ಸಿಂಹವಾಹಿನಿಯಾಗಿ ತ್ರಿಶೂಲದಿಂದ ಮಹಿಷಾಸುರನ ವಧೆಯನ್ನು ಮಾಡುತ್ತಾಳೆ. ಆಗ ದುರ್ಗಾದೇವಿಯು ”ಮಹಿಷಾಸುರಮರ್ದಿನಿ” ”ಸಿಂಹವಾಹಿನೀ” ಎಂದು ಪ್ರಸಿದ್ಧಳಾದಳು. ಎಮ್ಮೆ ಎಂಬುದು ಅಹಂಕಾರದ ಪ್ರತೀಕ. ಎಲ್ಲಿಯ ವರೆಗೂ ಅಹಂಕಾರವಿರುವುದೋ ಅಲ್ಲಿಯ ವರೆಗೂ ಬುದ್ಧಿ-ಮನಸ್ಸುಗಳು ದೇವರೆಡೆಗೆ ಸಾಗುವದೇ ಇಲ್ಲ. ನಮ್ಮಲ್ಲಿರುವ ಅಂತಹ ಮಹಿಷರೂಪದ ಅಹಂಕಾರವನ್ನು ಈ ಸಿಂಹವಾಹಿನಿ ದುರ್ಗೆಯು ನಾಶಗೊಳಿಸಲಿ ಎಂದು ಪ್ರಾರ್ಥಿಸಿ ಈ ಪೂಜೆಯನ್ನು ಮಾಡಬೇಕು.

ಹೀಗೆ ಭಗವಂತನ ವಿಶೇಷ ಸನ್ನಿಧಾನವನ್ನು ಹೊಂದಿ ದುರ್ಗಾದೇವಿಯು ಅನೇಕ ರೂಪಗಳನ್ನು ಧರಿಸಿ ಎಲ್ಲ ದುಷ್ಟ ಅಸುರರ ಸಂಹಾರವನ್ನು ಮಾಡುತ್ತಾಳೆ. ಚಕ್ರವನ್ನು ಕೈಯಲ್ಲಿ ಹಿಡಿದಿರುವ ದುರ್ಗಾದೇವಿಯು ಸಂಸಾರವನ್ನು ಭೇದಿಸಿ ಮೋಕ್ಷಪ್ರದವಾದ ಜ್ಞಾನವನ್ನು ಕೊಡುವುದರ ಸಂಕೇತ. ದುರ್ಗೆಯು ಶಂಖವನ್ನು ಧರಿಸಿರುವುದು ವಿಜಯದ ಸಂಕೇತ. ಶಂಖನಾದ ವಿಜಯದ ಪ್ರತೀಕ. ಸತ್ಕಾರ್ಯಗಳಲ್ಲಿ ಸಜ್ಜನರಿಗೆ ಸದಾ ವಿಜಯವನ್ನು ದಯಪಾಲಿಸುವುಳು. ಅಜ್ಞಾನ ಮತ್ತು ಅಧರ್ಮಗಳನ್ನು ಕತ್ತರಿಸಿ ಸುಜ್ಞಾನವನ್ನು ನೀಡುವದರ ಮೂಲಕ ಧರ್ಮವನ್ನು ಸ್ಥಾಪಿಸುವಳು ಎಂಬುದು ಪರಶುಧಾರಿಯಾದ ದುರ್ಗೆಯ ಸಂಕೇತ. ವಿಪರೀತ ಜ್ಞಾನ ಮತ್ತು ಸಂಶಯಗಳನ್ನು ಹೋಗಲಾಡಿಸುವುದೇ ದುರ್ಗೆ ಧರಿಸಿರುವ ಬಿಲ್ಲು ಬಾಣಗಳ ಸಂಕೇತ. ದುರ್ಗಾದೇವಿಯು ಅಷ್ಟಭುಜಗಳನ್ನು ಹೊಂದಿರುವಳು. ಎಂಟು ಭುಜಗಳೆಂದೆರೆ ಪಂಚಭೂತಗಳು, ಮನಸ್ಸು, ಅಹಂಕಾರ, ಮಹತ್ತತ್ವ ಇವುಗಳ ಸಂಕೇತ. ಭಗವಂತನ ವಿಶೇಷ ಅನುಗ್ರಹದಿಂದ ದುರ್ಗಾದೇವಿಯು ಈ ಎಂಟೂ ತತ್ವಗಳಿಗೆ ನಿಯಾಮಕಳಾಗಿರುವಳು.

ಸ್ತ್ರೀದೇವತೆಗಳಾದ ದುರ್ಗಾ, ಅಂಬಾಭವಾನಿಯ ನವರಾತ್ರಿಯನ್ನು ಆಚರಿಸುವವರು ನವರಾತ್ರಿಯಲ್ಲಿ ದೇವಿಯ ಅನುಗ್ರಹಕ್ಕಾಗಿ ಉಪವಾಸವನ್ನು ಮಾಡುತ್ತಾರೆ. ಪ್ರತಿಪತ್ ತಿಥಿಯಿಂದ ಅಷ್ಟಮೀ ವರೆಗು ಉಪವಾಸವನ್ನು ಮಾಡಿ ಮಹಾನವಮಿಯದಿನ ಪಾರಣೆಯನ್ನು ಮಾಡುವ ಸಂಪ್ರದಾಯವೂ ಕೆಲವರಲ್ಲಿ ಇದೆ. ಇಲ್ಲಿ ಉಪವಾಸವೆಂದರೆ ಏಕಾದಶಿಯಂತೆ ನಿರ್ಜಲ ಉಪವಾಸವಲ್ಲ. ಕಿಂತು ಫಲಾಹಾರವನ್ನು ಸ್ವೀಕರಿಸಿ ಮಾಡುವುದು.

ಲೇಖಕರು ಹವ್ಯಾಸಿ ಬರಹಗಾರರು

ಇದನ್ನೂ ಓದಿ | Navratri 2022 | ಮೊದಲನೇ ದಿನ ಯಾವ ದೇವಿಯನ್ನು ಪೂಜಿಸಬೇಕು? ಬಿಳಿಯ ವಸ್ತ್ರಧಾರಣೆ ಏಕೆ?

Exit mobile version