Site icon Vistara News

ರಾಜ ಮಾರ್ಗ ಅಂಕಣ | ಕ್ರಿಕೆಟ್ ಮತ್ತು ಚೆಸ್ ಆಟದಲ್ಲಿ ಪ್ರೆಡಿಕ್ಷನ್ ನಡೆಯುವುದಿಲ್ಲ! ಬದುಕಿನಲ್ಲಿ ಕೂಡ!

chess life

ಚೆಸ್ ಮತ್ತು ಕ್ರಿಕೆಟ್ ಆಟಗಳು ಬಹಳಷ್ಟು ವಿಶೇಷತೆ ಪಡೆದವುಗಳು. ಅದಕ್ಕೆ ಕಾರಣ ಏನೆಂದರೆ ಆ ಆಟಗಳ ಒಳಗೆ ಅಡಗಿರುವ ಅನಿಶ್ಚಿತತೆ ಮತ್ತು ವಿಕಲ್ಪಗಳು. ಅವುಗಳು ನಮ್ಮ ಬದುಕಿನ ಪ್ರತಿಫಲನದ ಕನ್ನಡಿಗಳು ಕೂಡ ಆಗಿವೆ! ಜಗತ್ತಿನ ಬಲಾಢ್ಯ ತಂಡವಾದ ಭಾರತೀಯ ಕ್ರಿಕೆಟ್ ತಂಡವನ್ನು ಜಾಗತಿಕ ಕ್ರಿಕೆಟ್ ಶಿಶುಗಳಾದ ಬಾಂಗ್ಲಾ ಸೋಲಿಸಿದ ಉದಾಹರಣೆ ಇಲ್ಲವೇ?

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ, ಅದು ಹೀಗೆಯೇ ಆಗಬೇಕು, ಹಾಗೆಯೇ ಆಗಬೇಕು ಎಂದು. ಆದರೆ ಅದು ಹಾಗೆ ಆಗುವುದಿಲ್ಲ! ಹೀಗೆ ಕೂಡ ಆಗಲೇ ಬೇಕು ಅಂದಿಲ್ಲ! ಯಾಕೆಂದರೆ ವಿಧಿಯ ನಿರ್ಧಾರವು ಬೇರೆಯೇ ಇರುತ್ತದೆ.

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ಅವನು/ ಅವಳು ಹೀಗೇ ಇರಬೇಕು, ಹಾಗೆಯೇ ಇರಬೇಕು ಎಂದು. ಅವನು/ ಅವಳು ನೀವು ಅಂದುಕೊಂಡ ಹಾಗೆ ಯಾಕಿರಬೇಕು?

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅದೊಂದು ಘಟನೆ ನನ್ನ ಜೀವನದಲ್ಲಿ ನಡೆಯದೇ ಹೋಗಿದ್ದರೆ ಚೆನ್ನಾಗಿತ್ತು. ಆದ್ರೆ ಸ್ವಲ್ಪ ಕೂತು ಯೋಚನೇ ಮಾಡಿ. ಅದೇ ಘಟನೆ ನಿಮಗೆ ಲಾಂಗ್ ರೆಂಜಲ್ಲಿ ಅದ್ಭುತ ಫಲಿತಾಂಶ ಕೊಟ್ಟಿರುತ್ತದೆ!

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ, ಅದೊಂದು ಸೋಲು ಬಾರದೆ ಹೋಗಿದ್ದರೆ ಚೆನ್ನಾಗಿತ್ತು. ಜಗತ್ತಿನ ಯಾವುದೇ ಆಟದಲ್ಲಿ ಎಲ್ಲರೂ, ಎಲ್ಲಾ ಕಾಲಕ್ಕೂ ಗೆಲ್ಲಲು ಸಾಧ್ಯವಿದೆಯೇ? ಸೋಲು ನಮಗೆ ಒಂದಲ್ಲ ಒಂದು ಗಟ್ಟಿ ಅನುಭವ ಕೊಟ್ಟಿರುತ್ತದೆ!

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ, ಅದೊಂದು ನಿರ್ಧಾರ ತಪ್ಪಾಗಿ ಹೋಯಿತಲ್ಲ ಎಂದು! ಆದ್ರೆ ನಿರ್ಧಾರ ಸರಿಯಾ ತಪ್ಪಾ ಎಂದು ಗೊತ್ತಾಗುವುದು ಫಲಿತಾಂಶ ಬಂದ ನಂತರ ಅಲ್ವಾ!

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅವನನ್ನು ಅಥವಾ ಅವಳನ್ನು ನಂಬಿ ಮೋಸ ಹೋದೆ ಎಂದು! ಆದ್ರೆ ನೀವು ಸೋಲಲು ಕಾರಣ ನೀವು ಅಲ್ಲ. ತಪ್ಪು ವ್ಯಕ್ತಿಗಳ ಮೇಲೆ ನೀವು ಇಟ್ಟ ಅತಿಯಾದ ನಂಬಿಕೆ! ಇದು ಗೊತ್ತಾದರೆ ನೀವು ಮುಂದೆ ಜಾಗ್ರತೆ ವಹಿಸುವುದಿಲ್ಲವೆ?

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು! ಆದ್ರೆ ನಮ್ಮನ್ನು ತುಂಬಾ ಪ್ರೀತಿ ಮಾಡುವವರು ಮತ್ತು ಅರ್ಥ ಮಾಡಿಕೊಳ್ಳುವವರು ನಮ್ಮ ಪಕ್ಕದಲ್ಲಿಯೇ ಇರುತ್ತಾರೆ! ನಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬಯಸುವ ನಾವು ಉಳಿದವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೆ?

ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ ನನ್ನ ಗ್ರಹಚಾರವೇ ಸರಿ ಇಲ್ಲ ಎಂದು. ಆದರೆ ನಮ್ಮ ಗೇಮ್ ಪ್ಲ್ಯಾನ್ ಮತ್ತು ಪ್ರಯತ್ನದಲ್ಲಿ ತಪ್ಪು ಇರುತ್ತದೆ. ಅದನ್ನು ಮೊದಲು ಸರಿ ಪಡಿಸಬೇಕು ತಾನೇ?

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅವನು ಅಥವಾ ಅವಳು ನನಗೆ ಸಪೋರ್ಟ್ ಮಾಡಲಿಲ್ಲ ಎಂದು! ಆದರೆ ಯೋಚನೆ ಮಾಡಿ, ತನ್ನ ಮೇಲೆ ಭರವಸೆ ಇಡದೆಯೆ ಬೇರೆಯವರನ್ನು ನಾವು ಹೆಚ್ಚು ಅವಲಂಬನೆ ಮಾಡಿದ್ದು ತಪ್ಪಲ್ಲವೇ?

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ, ವಿರಾಟ್ ಕೊಹ್ಲಿ ಹಾಗೆ ಮಾಡಿದ್ದು ತಪ್ಪು. ಹೀಗೆ ಮಾಡಬೇಕಿತ್ತು ಎಂದು. ಆದರೆ ಗಮನಿಸಿ ವಿರಾಟ್ ಕೊಹ್ಲಿ ಆ ನಿರ್ಧಾರವನ್ನು ತೆಗೆದುಕೊಂಡದ್ದು ಕ್ರಿಕೆಟ್ ಗ್ರೌಂಡಲ್ಲಿ! ಕೋಟಿ ಕೋಟಿ ಜನರ ಮುಂದೆ ಮತ್ತು ನೂರಾರು ಟಿವಿ ಕ್ಯಾಮೆರಾಗಳ ಎದುರು! ಆಗ ಅವನಿಗೆ ಗೈಡ್ ಮಾಡಲು ಯಾರಿದ್ದರು?

ಎಷ್ಟೋ ಬಾರಿ ಅಂದುಕೊಳ್ಳುತ್ತೇವೆ ಅವಳು ಅವನನ್ನು ಯಾಕೆ ಮದುವೆ ಆದಳು? ಅವನು ಅವಳನ್ನು ಯಾಕೆ ಮದುವೆ ಆದ? ಅದು ಅವರವರ ಖಾಸಗಿ ಬದುಕು. ಪ್ರತೀ ಒಬ್ಬರ ಆದ್ಯತೆಗಳು ಬೇರೆ ಬೇರೆಯೇ ಇರುತ್ತವೆ. ಎಲ್ಲರೂ ನಮ್ಮ ಹಾಗೆ ಯಾಕೆ ಯೋಚನೆ ಮಾಡಬೇಕು? ಅವರನ್ನು ಪ್ರಶ್ನೆ ಮಾಡಲು ನಾವು ಯಾರು?

ಎಷ್ಟೋ ಬಾರಿ ರಿಯಾಲಿಟಿ ಶೋ ಮುಗಿದಾಗ ನಾವು ಹೇಳುತ್ತೇವೆ ಏನೆಂದರೆ ತೀರ್ಪುಗಾರರು ಅನ್ಯಾಯ ಮಾಡಿದರು ಎಂದು! ಆದರೆ ಅವರ ಮುಂದೆ ಮಾನದಂಡಗಳು ಇರುತ್ತವೆ ಮತ್ತು ಸ್ಕೋರ್ ಶೀಟ್ ಇರುತ್ತದೆ ಎಂದು ನಾವು ಮರೆತಿರುತ್ತೇವೆ. ಒಂದು ಸ್ಪರ್ಧೆಯನ್ನು ವೀಕ್ಷಕನಾಗಿ ನೋಡುವುದಕ್ಕೂ, ತೀರ್ಪುಗಾರನಾಗಿ ನೋಡುವುದಕ್ಕೂ ಅಜಗಜಾಂತರ ಇರುತ್ತದೆ ಎಂದು ನಮಗೆ ಅರ್ಥ ಆದರೆ ಎಷ್ಟೋ ನೋವುಗಳು ಕಡಿಮೆ ಆಗುತ್ತವೆ.

ಒಟ್ಟಿನಲ್ಲಿ ನಾನು ಹೇಳಲು ಹೊರಟದ್ದು ಏನೆಂದರೆ ನಮ್ಮ ಬದುಕು ಇದೇ ರೀತಿಯ ಅನಿಶ್ಚಿತತೆಯ ಮೂಟೆ! ಇಲ್ಲಿ ಯಾವುದೂ ನಾವು ಪ್ರೆಡಿಕ್ಟ್ ಮಾಡಿದ ಹಾಗೆ ನಡೆಯುವುದಿಲ್ಲ. ನಡೆಯಬೇಕು ಅಂತ ಕೂಡ ಇಲ್ಲ!

ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ನೂರಾರು ಕ್ಯಾಮೆರಾಗಳ ಮುಂದೆ ಅಂಪಾಯರ್ ಒಂದೇ ಒಂದು ತಪ್ಪು ತೀರ್ಪನ್ನು ಕೊಟ್ಟಿರುತ್ತಾನೆ. ಆಗ ತಂಡಗಳ DRS ಆಯ್ಕೆಗಳು ಮುಗಿದಿರುತ್ತವೆ. ಆ ತೀರ್ಪು ಪಂದ್ಯದ ಫಲಿತಾಂಶವನ್ನು ಬದಲಾವಣೆ ಮಾಡುತ್ತದೆ. ಈ ಅನುದ್ದೇಶಿತ ತಪ್ಪುಗಳೇ ಕ್ರಿಕೆಟ್ ಆಟದ ಬ್ಯೂಟಿ ಆಗಿರುತ್ತವೆ!

That’s the BEAUTY of cricket! And that’s the BEAUTY of LIFE too!

ಇದನ್ನೂ ಓದಿ| ರಾಜ ಮಾರ್ಗ | ನಮ್ಮ ಬಾಲ್ಯಕ್ಕೆ ಕಲ್ಪನೆಗಳ ರೆಕ್ಕೆ ಕಟ್ಟಿ ಎಲ್ಲೆಲ್ಲೋ ಹಾರಾಡಿಸಿದ ಬಣ್ಣ ಬಣ್ಣದ ಚಂದಮಾಮ!

Exit mobile version