Site icon Vistara News

Actor Darshan: ಹಿಂಡಲಗಾ ಜೈಲಿನ ʼಅಂಧೇರಿ ಸೆಲ್‌ʼಗೆ ದರ್ಶನ್‌ ಹಿಂಡು ಶಿಫ್ಟ್‌ ಖಚಿತ

Actor Darshan

ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಐಷಾರಾಮಿಯಾಗಿ ಬದುಕುತ್ತಿದ್ದ ನಟ ದರ್ಶನ್‌ (Actor Darshan) ಹಾಗೂ ಗ್ಯಾಂಗ್‌ಗೆ ಸಂಕಷ್ಟ ಫಿಕ್ಸ್‌ ಆಗಿದೆ. ಹಿಂಡಲಗಾ ಜೈಲಿನ (Hindalaga Jail) ʼಅಂದೇರಿʼ ಸೆಲ್‌ಗಳಿಗೆ ಈ ಹಿಂಡು ಶಿಫ್ಟ್‌ ಆಗುವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ಕೋಕಾ ಕಾಯ್ದೆಯಡಿ ಇರುವವರನ್ನು ಶಿಫ್ಟ್‌ ಮಾಡಲು ಬೆಂಗಳೂರು ಪೊಲೀಸರು ಪತ್ರ ಬರೆದಿದ್ದರು. ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಸೇರಿದಂತೆ 26 ಆರೋಪಿಗಳನ್ನು ಶಿಫ್ಟ್‌ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ. ಇದಕ್ಕಾಗಿ ಕಾನೂನು ಸಂಬಂಧಿತ ಸಂಗತಿಗಳನ್ನು ಜೈಲು ಆಧಿಕಾರಿಗಳು ಚರ್ಚೆ ಮಾಡುತ್ತಿದ್ದಾರೆ.

ಶಿಫ್ಟ್‌ ಮಾಡಲು ನ್ಯಾಯಾಲಯದ ಅನುಮತಿ ಬೇಕೇ ಅಥವಾ ಜೈಲು ಆಡಳಿತವೇ ನಿರ್ಧರಿಸಬಹುದಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಜೈಲು ಆಡಳಿತವೇ ನಿರ್ಧಾರ ತೆಗೆದುಕೊಳ್ಳಬಹುದು ಎಂದಾರೆ ಇಂದೇ ಶಿಫ್ಟ್‌ ಮಾಡುವ ಸಾಧ್ಯತೆ ಇದೆ. ದರ್ಶನ್ ಜೊತೆಗೆ, ಆತನೊಂದಿಗೆ ಟೀ ಪಾರ್ಟಿ ಮಾಡಿದ ಐದು ಜನ ಆರೋಪಿಗಳೂ ಶಿಫ್ಟ್ ಆಗುವುದು ಪಕ್ಕಾ ಆಗಿದೆ. ಇವರನ್ನು ಹಿಂಡಲಗಾ ಅಲ್ಲದೆ ಬಳ್ಳಾರಿ, ಮೈಸೂರು, ತುಮಕೂರು, ಹುಬ್ಬಳ್ಳಿ ಧಾರವಾಡ ಜೈಲಿಗೂ ಕಳಿಸುವ ಸಾಧ್ಯತೆ ಇದೆ.

ಪರಪ್ಪನ ಅಗ್ರಹಾರದಲ್ಲಿ ಕೆಲವು ರೌಡಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಕೆಲವು ರೌಡಿಗಳು ಜೈಲಿನಿಂದಲೇ ಕೊಲೆ ಸುಪಾರಿ ಸೇರಿದಂತೆ ಅಕ್ರಮದಲ್ಲಿ ತೊಡಗಿದ್ದಾರೆ. ಇಲ್ಲಿಂದ ಬೇರೆಡೆ ಕಳಿಸಬೇಕೆಂದು ಕೋರಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಈಗ ಆ ರೌಡಿಗಳ ವಿಲಾಸಿ ಜೀವನದ ಜೊತೆಗೆ ದರ್ಶನ್‌ ಕೂಡ ತಳುಕುಹಾಕಿಕೊಂಡಿದ್ದಾನೆ. ಇದರ ಫೋಟೋ ವಿಡಿಯೋಗಳೂ ಹರಿದಾಡುತ್ತಿವೆ. ದರ್ಶನ್‌ ಇದೇ ಜೈಲಿನಲ್ಲಿದ್ದರೆ ನಾಗನಂತಹ ರೌಡಿಗಳ ಜೊತೆ ಸೇರಿ ಸಾಕ್ಷಿಗಳ ಮೇಲೆ ಬೆದರಿಕೆ ಹಾಕಿಸುವ ಸಾಧ್ಯತೆ ಇದೆ. ಜೊತೆಗೆ ದರ್ಶನ್‌ ಅನ್ನು ನೋಡಲು ಪದೇ ಪದೆ ವಿಐಪಿಗಳು ಬರುವುದರಿಂದ ಕಾನೂನು ಸುವ್ಯವಸ್ಥೆಗೂ ಧಕ್ಕೆಯಾಗುತ್ತಿದೆ ಎಂದು ತಿಳಿಸಲಾಗಿದೆ.

ಹಿಂಡಲಗಾ ಜೈಲಿಗೆ ಶತಮಾನಗಳ ಇತಿಹಾಸವಿದೆ. ಇಲ್ಲಿನ ಕೋಣೆಗಳು ಅಂಧೇರಿ ಸೆಲ್ ಎಂದು ಕರೆಯಲ್ಪಡುತ್ತವೆ. ಅಂಧೇರಿ ಅಂದರೆ ಕತ್ತಲೆ ಕೋಣೆಗಳು. ಇಲ್ಲಿ ಹದಿನೈದು ಅಂಧೇರಿ ಸೆಲ್‌ಗಳು ಖಾಲಿ ಇವೆ. ಹೀಗಾಗಿ ಅಲ್ಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದ್ದು, ಈ ಸೆಲ್‌ಗಳ ಬಗ್ಗೆ ಜೈಲು ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ.

ನಾಮಕಾವಸ್ಥೆಗಷ್ಟೇ ಜೈಲು!

ಆರೋಪಿ ದರ್ಶನ್ ನಾಮಕಾವಸ್ಥೆಗಷ್ಟೇ ಜೈಲಿನಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲೇ ಆತನಿಗೆ ಎಲ್ಲಾ ಸೌಲಭ್ಯ ಸಿಗುತ್ತಿದೆ ಎಂದು ಗೊತ್ತಾಗಿದೆ. ಜೈಲಿನ ಅಧಿಕಾರಿಗಳು, ರೌಡಿಗಳಿಂದಲೇ ದರ್ಶನ್‌ಗೆ ಎಲ್ಲಾ ರೀತಿ ವ್ಯವಸ್ಥೆ ಆಗುತ್ತಿದೆ. ಸಿಗರೇಟ್ ಮಾತ್ರವಲ್ಲ ಬೇಕಾದ ಎಲ್ಲಾ ವಸ್ತುಗಳೂ ದರ್ಶನ್‌ಗೆ ಸಿಗುತ್ತಿದೆ. ಯಾವ ಊಟ ಎಲ್ಲಿಂದ ಬೇಕು ಅನ್ನುತ್ತಾನೋ ಅಲ್ಲಿಂದಲೇ ಸಪ್ಲೈ ಆಗುತ್ತಿದೆಯಂತೆ.

ಮನೆ ಊಟ ಮಾತ್ರವಲ್ಲ, ಫೇಮಸ್ ಮಿಲ್ಟ್ರಿ ಹೋಟೆಲ್‌ನಿಂದಲೇ ಬಿರಿಯಾನಿ ಒದಗಿಸಲಾಗುತ್ತಿದೆ. ಬನಶಂಕರಿಯ ಶಿವಾಜಿ ಮಿಲ್ಟ್ರಿ ಹೋಟೆಲ್‌ನಿಂದಲೇ ದರ್ಶನ್‌ಗೆ ಬಿರಿಯಾನಿ ಹೋಗುತ್ತಿದೆ. ಜೈಲಿನಲ್ಲಿರೋ ನಟೋರಿಯಸ್ ಕೈದಿಗಳ ಜೊತೆ ದರ್ಶನ್ ಎಣ್ಣೆ ಪಾರ್ಟಿ ಮಾಡುತ್ತಿದ್ದಾನೆ. ಪ್ರತಿದಿನ ದರ್ಶನ್ ಇರುವ ಹೈ ಸೆಕ್ಯೂರಿಟಿ ಬ್ಯಾರಕ್‌ನಲ್ಲಿಯೇ ಪಾರ್ಟಿ ನಡೆಯುತ್ತಿದೆ. ಈ ಪಾರ್ಟಿಯಲ್ಲಿ ರೌಡಿಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ, ಬೇಕರಿ ರಘು, ಆಪ್ತ ನಾಗರಾಜ್, ಪವನ್ ಭಾಗಿಯಾಗುತ್ತಿದ್ದಾರೆ ಎಂದು ಗೊತ್ತಾಗಿದೆ.

ಇದನ್ನೂ ಓದಿ: Actor Darshan: ನಟಿ ರಚಿತಾ ರಾಮ್‌ ಜೈಲಿಗೆ ಎಂಟ್ರಿ ಕೊಟ್ಟ ದಿನವೇ ನಡೀತಾ ದರ್ಶನ್ ಸಿಗರೇಟ್ ಪಾರ್ಟಿ?

Exit mobile version