Site icon Vistara News

Anjali Murder Case: ಥಳಿಸಿದವರಿಗೆ ಈತ ಅಂಜಲಿ ಹಂತಕ ಎಂದು ಗೊತ್ತೇ ಇರಲಿಲ್ಲ! ಕೊಲೆಗಾರ ಸಿಕ್ಕಿಬಿದ್ದಿದ್ದು ಹೀಗೆ

anjali murder suspect girish2

ಹುಬ್ಬಳ್ಳಿ: ಹುಬ್ಬಳ್ಳಿಯ ಬೆಂಡಿಗೇರಿಯಲ್ಲಿ (Hubli Crime) ಅಂಜಲಿಯನ್ನು ಕೊಲೆ (Anjali Murder Case) ಮಾಡಿ ಪರಾರಿಯಾಗಿದ್ದ ಆರೋಪಿ ಗಿರೀಶ್‌ ಸಾವಂತ್ (Anjali Murder suspect) ಬಂಧನ ಪ್ರಕರಣ ಅನಿರೀಕ್ಷಿತ, ರೋಚಕ ರೀತಿಯಲ್ಲಿ ಸಂಭವಿಸಿದೆ. ರೈಲಿನಲ್ಲಿ ಇತರ ಪ್ರಯಾಣಿಕರಿಂದ (Co passengers) ಥಳಿತಕ್ಕೊಳಗಾದ ಗಿರೀಶ್‌, ಕೊಲೆ ಆರೋಪಿ ಎಂದು ಥಳಿಸಿದವರಿಗೆ ಗೊತ್ತೇ ಇರಲಿಲ್ಲ!

ಇದು ನಡೆದದ್ದು ಹೀಗೆ: ಕೊಲೆ ಆರೋಪಿ ಗಿರೀಶ್ ಸಾವಂತ್ ಮೈಸೂರಿನಿಂದ ಹುಬ್ಬಳ್ಳಿಗೆ ರೈಲಿನಲ್ಲಿ ಬರುತ್ತಿದ್ದ. ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾನೆ. ಈ ಸಂದರ್ಭದಲ್ಲಿ ಪ್ರಯಾಣಿಕರು ಒಟ್ಟು ಸೇರಿ ಈತನನ್ನು ಥಳಿಸಿದ್ದಾರೆ. ಜನರಿಂದ ತಪ್ಪಿಸಿಕೊಳ್ಳಲು ಚಲಿಸುವ ರೈಲಿನಿಂದ ಜಿಗಿದಿದ್ದ. ಆಗ ತೀವ್ರವಾಗಿ ಗಾಯಗೊಂಡಿದ್ದ.

ಆರೋಪಿಯನ್ನ ದಾವಣಗೆರೆ ಪೊಲೀಸರು ವಶಕ್ಕೆ ಪಡೆದಿದ್ದರು. ಅಂಜಲಿ ಕೊಲೆ ಆರೋಪಿ ಎಂದು ಆರಂಭದಲ್ಲಿ ತಿಳಿದಿರಲಿಲ್ಲ. ಬಳಿಕ ಆರೋಪಿಯ ಗುರುತು ಪತ್ತೆ ಹಚ್ಚಿದ ದಾವಣಗೆರೆ ಪೊಲೀಸರು, ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈತನನ್ನು ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆತಂದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಕಿಮ್ಸ್‌ಗೆ ಆಗಮಿಸಿ ಆರೋಪಿಯನ್ನು ಪರಿಶೀಲಿಸಿದ್ದಾರೆ.

ಎಲ್ಲಿದ್ದ ಗಿರೀಶ್?‌

ಆರೋಪಿ ಗಿರೀಶ್‌ ಮೈಸೂರಿನಲ್ಲಿ ಮಹಾರಾಜ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಆತ ನೀಡಿದ ಮಾಹಿತಿ ಪ್ರಕಾರ, ಗಿರೀಶ್ ಮತ್ತು ಅಂಜಲಿ ಪರಸ್ಪರ ಪ್ರೀತಿಸುತ್ತಿದ್ದರು. 15 ದಿನಗಳ ಹಿಂದೆ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಒಂದು ವಾರದ ಮೊದಲು 2 ಸಾವಿರ ರೂ. ಹಣ ಕೇಳಿದ್ದಳು. ಗಿರೀಶ್‌ ಅದನ್ನು ಫೋನ್ ಪೇ ಮಾಡಿದ್ದ. ಆ ನಂತರ ಗಿರೀಶನ ನಂಬರ್ ಅನ್ನು ಅಂಜಲಿ ಬ್ಲಾಕ್ ಲಿಸ್ಟ್‌ಗೆ ಹಾಕಿದ್ದಳು. ಆತನ ಫೋನ್ ರೀಸಿವ್ ಮಾಡುತ್ತಿರಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಗಿರೀಶ್‌ ಮೈಸೂರನಿಂದ ಹುಬ್ಬಳ್ಳಿಗೆ ಬಂದು ನಸುಕಿನ ಜಾವ ಕೊಲೆ ಮಾಡಿದ್ದಾನೆ.

ಕೊಲೆ ನಂತರ ಹುಬ್ಬಳ್ಳಿ ಹೊಸ ಬಸ್ ಸ್ಟ್ಯಾಂಡ್‌ನಿಂದ ಬಸ್‌ ಹತ್ತಿ ಹಾವೇರಿಗೆ ಬಂದಿದ್ದ. ಹಾವೇರಿಯಿಂದ ಮೈಸೂರಿಗೆ ಟ್ರೈನ್ ಹತ್ತಿದ್ದ. ಮೈಸೂರಿನ ಮಹಾರಾಜ್ ಹೋಟೆಲ್‌ನಲ್ಲಿ ಮಲಗಿದ್ದ. ಆ ನಂತರ ಮೈಸೂರಿನಿಂದ ಹುಬ್ಬಳ್ಳಿಗೆ ಬರಲೆಂದು ವಾಪಸ್ ಬರುತ್ತಿದ್ದಾಗ ಟ್ರೈನ್‌ನಲ್ಲಿ ಸಾರ್ವಜನಿಕರೊಡನೆ ಕಿರಿಕ್ ಆಗಿ ಟ್ರೈನ್‌ನಿಂದ ಹಾರಿದ್ದ.

ಪೊಲೀಸರು ಹೇಳೋದೇನು?

“ಅಂಜಲಿ ಕೊಲೆ ಆರೋಪಿ ಪತ್ತೆಗಾಗಿ ಎಂಟು ತಂಡಗಳನ್ನು ನಾವು ರಚನೆ ಮಾಡಿದ್ದೆವು. ನಿನ್ನೆ ರೇಲ್ವೆ ಪೊಲೀಸರ ಸಹಾಯದಿಂದ ಆರೋಪಿ ಸಿಕ್ಕಿದ್ದಾನೆ. ಆರೋಪಿ ಗಿರೀಶ್‌ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ. ಸದ್ಯ ಕೋಮಾ ಸ್ಟೇಜ್‌ನಲ್ಲಿದ್ದಾನೆ. ಟ್ರೈನಿನಿಂದ ಯಾಕೆ ಜಿಗಿದ ಎಂದು ಅವನು ಹೇಳಬೇಕಿದೆ” ಎಂದು ಪೋಲಿಸ್ ಕಮೀಷನರ್ ರೇಣುಕಾ ಸುಕುಮಾರ್ ಹೇಳಿಕೆ ನೀಡಿದ್ದಾರೆ.

“ಬೆಳಗಿನ ಜಾವ 4.30ಗೆ ನಮ್ಮ ಕಸ್ಟಡಿಗೆ ದೊರೆತಿದ್ದಾನೆ. ಈತ ಮೈಸೂರಿನಿಂದ ಗೋವಾ, ಮಹಾರಾಷ್ಟ್ರ ಕಡೆ ಹೋಗಿ ತಲೆಮರೆಸಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿಕೊಂಡಿದ್ದ. ಗಿರೀಶ್ ಮೇಲೆ ಬೈಕ್ ಕಳ್ಳತನ ವಿಚಾರದಲ್ಲಿಯೂ 4 ಪ್ರಕರಣಗಳು ದಾಖಲು ಆಗಿವೆ. ಅವನು ಹೇಳುವ ಪ್ರಕಾರ ಹುಡುಗಿ ಫೋನ್ ಬ್ಲಾಕ್ ಮಾಡಿದ್ದಳು. ನಾವು ಪ್ರೀತಿ ಮಾಡ್ತಿದ್ದೆವು ಎಂದು ಹೇಳಿದ್ದಾನೆ. ಪ್ರಜ್ಞೆ ಬಂದರ ನಂತರ ಪೂರ್ತಿ ಹೇಳಿಕೆ ಪಡೆದುಕೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧನ

ದೊಡ್ಡಬಳ್ಳಾಪುರ: ಕೊಲೆ ಆರೋಪಿಯೊಬ್ಬನ (Murder Suspect) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Encounter) ಬಂಧಿಸಿದ್ದಾರೆ. ಹೇಮಂತ್‌ ಕುಮಾರ್‌ ಗೌಡ ಎಂಬ ಯುವಕನ ಕೊಲೆ (Murder Case) ಆರೋಪಿ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಮಿಟ್ಟೆ ಕಾಲಿಗೆ ಗುಂಡು ಹಾರಿಸಿ (Shoot out) ಬಂಧಿಸಲಾಗಿದೆ.

ಯಲಹಂಕ ತಾಲೂಕಿನ ಶ್ರೀರಾಮನಹಳ್ಳಿ ಬಳಿ ಘಟನೆ ನಡೆದಿದೆ. ರೌಡಿ‌ ಶೀಟರ್ ಬಂಧನಕ್ಕೆ ತೆರಳಿದ ವೇಳೆ ಪೊಲೀಸ್ ಕಾನ್‌ಸ್ಟೇಬಲ್ ಚಂದ್ರು ಮೇಲೆ ಈತ ಹಲ್ಲೆ‌ ನಡೆಸಿದ್ದಾನೆ. ಪೊಲೀಸರ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಸಾಧಿಕ್ ಪಾಷ ಅವರಿಂದ ಫೈರಿಂಗ್ ನಡೆದಿದೆ.

ಈತ ಕೊಲೆ ಕೇಸ್‌ನ 2ನೇ ಆರೋಪಿಯಾಗಿದ್ದಾನೆ. ಮೇ 11ರಂದು ದೊಡ್ಡಬಳ್ಳಾಪುರ ಹೊರವಲಯ ನವೋದಯ ಶಾಲೆಯ ಮುಂಭಾಗ ಹೇಮಂತ್ ಕುಮಾರ್ ಗೌಡ (27) ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹೇಮಂತ್ ಅವರನ್ನು ಅಟ್ಟಾಡಿಸಿ ಕೊಲೆ ಮಾಡಿ ಆರೋಪಿಗಳು ಕಾರಿನಲ್ಲಿ ಶವದ ಜೊತೆ ರೌಂಡ್ಸ್ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಬಂಧನಕ್ಕಾಗಿ ಬಲೆ ಬೀಸಿದ್ದರು.

ಪ್ರಕರಣದ ಪ್ರಮುಖ ಆರೋಪಿ ನರಸಿಂಹಮೂರ್ತಿ ಅಲಿಯಾಸ್​ ಮಿಟ್ಟೆ ಎಂಬಾತನನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ರವಿಕುಮಾರ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿತ್ತು.

ಸಾಫ್ಟ್‌ವೇರ್‌ ಎಂಜಿನಿಯರ್‌ ಪತ್ನಿಯ ಅನುಮಾನಾಸ್ಪದ ಸಾವು

ಬೆಂಗಳೂರು: ರಾಜಧಾನಿಯ (bengaluru crime) ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ (woman self harming) ಮಾಡಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತರು ಸಾಫ್ಟ್‌ವೇರ್‌ ಎಂಜಿನಿಯರ್‌ (Software engineer) ಪತ್ನಿಯಾಗಿದ್ದು, ಇದೊಂದು ಅಸಹಜ ಸಾವು (UDR Case) ಎಂದು ಮೃತಳ ತವರಿನವರು ಶಂಕಿಸಿದ್ದಾರೆ.

ಮಂಜುನಾಥ ನಗರದ ಸಂಧ್ಯಾ ಮೃತ ಮಹಿಳೆ. ನೆನ್ನೆ ರಾತ್ರಿ ಘಟನೆ ನಡೆದಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಸಂಧ್ಯಾ ಮೃತ ದೇಹ ಪತ್ತೆಯಾಗಿದೆ. ಇವರಿಗೆ ಮದುವೆಯಾಗಿ 5 ವರ್ಷ ಆಗಿತ್ತು. ನಾಲ್ಕು ವರ್ಷದ ಗಂಡು ಮಗುವೂ ಇತ್ತು. ಅಳಿಯ ಜಯಪ್ರಕಾಶ್‌ ಮೈತುಂಬಾ ಸಾಲ ಮಾಡಿ ಅದನ್ನು ತೀರಿಸಲು ಕಿರುಕುಳ ನೀಡುತ್ತಿದ್ದ. ನನ್ನ ಮಗಳಿಗೆ ಈ ವಿಚಾರವಾಗಿ ಕಿರುಕುಳ ನೀಡುತ್ತಿದ್ದ ಎಂದು ಸಂಧ್ಯಾ ತಂದೆ ಆಪಾದಿಸಿದ್ದಾರೆ. ಸದ್ಯ ಬಸವೇಶ್ವರನಗರ ಪೊಲೀಸ್ ಠಾಣಾ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case : ತಂಗಿಯನ್ನು ಬೈಕ್‌ನಲ್ಲಿ ಸುತ್ತಾಡಿಸುತ್ತಿದ್ದವನನ್ನು ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಕೊಂದ

Exit mobile version