Site icon Vistara News

UP Encounter: ಯೋಗಿ ರಾಜ್ಯದಲ್ಲಿ ಮತ್ತೊಂದು ಎನ್‌ಕೌಂಟರ್: 40 ಕೊಲೆ ಮಾಡಿದ ಪಾತಕಿ ರಶಿದ್ ಕಾಲಿಯಾ ಖತಂ

criminal rashi kalia

ಲಖನೌ: 40 ಕೊಲೆಗಳನ್ನು ಮಾಡಿರುವ ಆರೋಪಿ, ಕುಖ್ಯಾತ ಕ್ರಿಮಿನಲ್ ರಶೀದ್ ಕಾಲಿಯಾ (Rashid Kalia) ಎಂಬಾತನನ್ನು ಉತ್ತರ ಪ್ರದೇಶ (uttar pradesh) ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಬೆಳಿಗ್ಗೆ ಎನ್‌ಕೌಂಟರ್‌ನಲ್ಲಿ (UP encounter) ಕೊಂದುಹಾಕಿದೆ.

ಝಾನ್ಸಿಯ ಮೌರಾನಿಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಈತನನ್ನು ಕೊಲ್ಲಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತನ ತಲೆಗೆ ₹1.25 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಗುಂಡಿನ ಚಕಮಕಿಯ ಸಂದರ್ಭದಲ್ಲಿ, ಉಪ ಎಸ್ಪಿ ಮತ್ತು ಇನ್ಸ್‌ಪೆಕ್ಟರ್ ಶ್ರೇಣಿಯ ಅಧಿಕಾರಿಗೆ ಗುಂಡುಗಳು ತಗುಲಿದವು. ಬುಲೆಟ್ ಪ್ರೂಫ್ ಜ್ಯಾಕೆಟ್‌ ಧರಿಸಿದ ಕಾರಣ ಅಪಾಯವಿಲ್ಲದೆ ಪಾರಾಗಿದ್ದಾರೆ.

ಎಸ್‌ಟಿಎಫ್‌ನ ಅಧಿಕೃತ ಹೇಳಿಕೆಯ ಪ್ರಕಾರ, ಕಾಲಿಯಾ ಸುಪಾರಿ ಕೊಲೆಯೊಂದನ್ನು ನಡೆಸಲು ಬಂದಾಗ ಈ ಘಟನೆ ಸಂಭವಿಸಿದೆ. ಎಸ್‌ಟಿಎಫ್ ಎರಡು ಕಾರ್ಖಾನೆ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದೆ ಮತ್ತು ಎನ್‌ಕೌಂಟರ್ ಸಮಯದಲ್ಲಿ ಕಾಲಿಯಾ ಸವಾರಿ ಮಾಡುತ್ತಿದ್ದ ಮೋಟಾರ್‌ಸೈಕಲ್ ಅನ್ನು ವಶಪಡಿಸಿಕೊಂಡಿದೆ.

ರಶೀದ್ ಕಾಲಿಯಾನ ಕ್ರಿಮಿನಲ್ ದಾಖಲೆ ದೊಡ್ಡದಿದೆ. ಹಲವಾರು ಹೈ-ಪ್ರೊಫೈಲ್ ಕ್ರಿಮಿನಲ್‌ ಪ್ರಕರಣಗಳಲ್ಲಿ ಅವನು ಪಾಲ್ಗೊಂಡಿದ್ದಾನೆ. ಅತ್ಯಂತ ಗಮನಾರ್ಹವಾದುದೆಂದರೆ 2020ರಲ್ಲಿ ರಾಜಕಾರಣಿಯಾಗಿ ಪರಿವರ್ತನೆಗೊಂಡ ಕುಖ್ಯಾತ ದರೋಡೆಕೋರ ಪಿಂಟು ಸೆಂಗರ್‌ನ ಕೊಲೆ. 45 ವರ್ಷದ ಕಾಲಿಯಾ ಇದುವರೆಗೂ ಕಾನೂನು ಕ್ರಮಗಳಿಂದ ಜಾರಿಕೊಳ್ಳುತ್ತಲೇ ಇದ್ದ. ಪೊಲೀಸರ ಕೈಗೆ ಸಿಗದೆ ಪರಾರಿಯಾಗುತ್ತಿದ್ದ. ಕಾನ್ಪುರ ಒಂದರಲ್ಲೇ ಈತನ ಮೇಲೆ 11 ಗಂಭೀರ ಅಪರಾಧಗಳ ಆರೋಪವಿದೆ.

ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ರೂಪುಗೊಂಡ ನಂತರದ ಆರು ವರ್ಷಗಳಲ್ಲಿ ಉತ್ತರ ಪ್ರದೇಶ ಪೊಲೀಸರು ನಡೆಸಿದ 10,713 ಎನ್‌ಕೌಂಟರ್‌ಗಳಲ್ಲಿ 77 ಕ್ರಿಮಿನಲ್‌ಗಳನ್ನು ಕೊಂದಿದ್ದಾರೆ. 5,967 ಕ್ರಿಮಿನಲ್‌ಗಳನ್ನು ಬಂಧಿಸಿದ್ದಾರೆ ಮತ್ತು 1,708 ಕ್ರಿಮಿನಲ್‌ಗಳು ಗಾಯಗೊಂಡಿದ್ದಾರೆ.

ಇದನ್ನೂ ಓದಿ: Terrorists Killed: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಇಬ್ಬರು ಉಗ್ರರ ಎನ್‌ಕೌಂಟರ್

Exit mobile version