Site icon Vistara News

Seer Suicide | ಬಂಡೆ ಸ್ವಾಮೀಜಿ ಆತ್ಮಹತ್ಯೆ ಕೇಸ್‌; ನ.4ರವರೆಗೆ ಪೊಲೀಸ್‌ ಕಸ್ಟಡಿಯಲ್ಲಿ ಮೂವರು ಆರೋಪಿಗಳು

bande accused

ರಾಮನಗರ: ಕಂಚುಗಲ್ ಬಂಡೇಮಠ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ (Seer Suicide) ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧಿತರಾಗಿರುವ ಮೂವರು ಆರೋಪಿಗಳನ್ನು ನವೆಂಬರ್ 4ರ ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ.

ಮಾಗಡಿ ತಾಲೂಕು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಧನಲಕ್ಷ್ಮಿ ಅವರು, ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ನವೆಂಬರ್ 5ರಂದು ಮುಂದಿನ ವಿಚಾರಣೆ‌ ನಡೆಸುವುದಾಗಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕೆ ಅಲಿಯಾಸ್‌ ಚಂದು (21), ತುಮಕೂರು ಮೂಲದ ನಿವೃತ್ತ ಶಿಕ್ಷಕ ಮಹದೇವಯ್ಯರನ್ನು ಈಗ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದ್ದಾರೆ. ಭಾನುವಾರ (ಅ.30) ಇವರ ಬಂಧನವಾಗಿತ್ತು.

ಜಮೀನು ವಿಚಾರವಾಗಿ ಇಬ್ಬರ ನಡುವೆ ತಕರಾರು
ಮೃತ ಬಂಡೇಮಠದ ಬಸವಲಿಂಗ ಸ್ವಾಮೀಜಿ ಹಾಗೂ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ ಇಬ್ಬರು ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳಾಗಿದ್ದು, ಮೊದಲಿನಿಂದಲೂ ಜಮೀನು ವಿಚಾರವಾಗಿ ಇಬ್ಬರ ನಡುವೆ ತಕರಾರು ನಡೆಯುತ್ತಿತ್ತು ಎನ್ನಲಾಗಿದೆ. ಜಾಗದ ವಿಚಾರವು ಕೋರ್ಟ್‌ನಲ್ಲಿತ್ತು, ಇದೇ ವಿಚಾರವಾಗಿ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳವೂ ಆಗಿತ್ತೆಂದು ತಿಳಿದು ಬಂದಿದೆ. ಮೊದಲಿನಿಂದಲೂ ಮನಸ್ತಾಪ ಇದ್ದ ಕಾರಣದಿಂದ ಹನಿಟ್ರ್ಯಾಪ್‌ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ | Seer suicide | ಬಂಡೆ ಸ್ವಾಮೀಜಿ ಆತ್ಮಹತ್ಯೆಯ ಹಿಂದೆ ಕೇಳಿಬರುತ್ತಿದೆ ಇನ್ನಷ್ಟು ಪ್ರಭಾವಿಗಳ ಹೆಸರು

ಜಮೀನಿನ ಜಿದ್ದಿಗೆ ಬಸವಲಿಂಗ ಶ್ರೀಗಳ ವಿರುದ್ಧ ಮಸಲತ್ತು ಮಾಡಿದ್ದರು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮಾಗಡಿ ಪೊಲೀಸರು ಪ್ರಕರಣದ ಕೇಂದ್ರಬಿಂದುವಾಗಿರುವ ಬೆಂಗಳೂರು ಮೂಲದ ನೀಲಾಂಬಿಕೆಯನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದರು. ಕಳೆದ ಫೆಬ್ರವರಿಯಲ್ಲಿಯೇ ಶ್ರೀಗಳ ಹೆಸರು ಹಾಳು ಮಾಡಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಏಪ್ರಿಲ್‌ನಲ್ಲಿ ಶ್ರೀಗಳ ವಿಡಿಯೊ ಮಾಡಿಕೊಂಡಿದ್ದರು ಎಂಬ ವಿಷಯ ತಿಳಿದು ಬಂದಿದೆ. ಸದ್ಯ ಬಂಧಿತರಾಗಿರುವ ಮೂವರನ್ನು ನವೆಂಬರ್‌ ೪ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣಗೆ ಪೊಲೀಸರು ಒಳಪಡಿಸಲಿದ್ದಾರೆ.

ಮತ್ತಷ್ಟು ಪ್ರಭಾವಿಗಳು ಜೈಲುಪಾಲು?
ಈ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಕೇಳಿಬರುತ್ತಿದ್ದು, ಅವರೆಲ್ಲರೂ ಜೈಲು ಸೇರುವ ಸಾಧ್ಯತೆಗಳು ದಟ್ಟವಾಗಿವೆ. ಬಸವಲಿಂಗ ಶ್ರೀಗಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೂರು ಪುಟಗಳ ಆತ್ಮಹತ್ಯೆ ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ಒಬ್ಬ ಪ್ರಭಾವಿ ನಾಯಕರ ಹೆಸರು ಬರೆದಿದ್ದಾರೆ ಎನ್ನಲಾಗಿದೆ. ನಿಜವೆಂದರೆ, ಇಡೀ ಡೆತ್ ನೋಟ್‌ನಲ್ಲಿ ಬಸವಲಿಂಗ ಶ್ರೀಗಳು ಬರೆದಿರುವುದು ಇದೊಂದೇ ಹೆಸರು ಎನ್ನಲಾಗಿದೆ.

ಆ ಮೂರು ಪುಟಗಳ ಡೆತ್ ನೋಟ್‌ನಲ್ಲಿ ಪ್ರಭಾವಿ ನಾಯಕನಾಗಿರುವ ವೀರಶೈವ ಲಿಂಗಾಯಿತ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಸಚ್ಚಿದಾನಂದ ಮೂರ್ತಿ ಹೆಸರನ್ನು ಬಸವಲಿಂಗ ಶ್ರೀಗಳು ಬರೆದಿಟ್ಟಿದ್ದಾರೆ. ʻʻ500, 1000 ಸಹಾಯ ಕೇಳುವ ನೆಪದಲ್ಲಿ ಪರಿಚಯವಾದ ಮಹಿಳೆ ವಿಡಿಯೊ ಕಾಲ್ ಮೂಲಕ ಮಾತನಾಡುತ್ತ ನನ್ನ ವಿಡಿಯೊ ಮಾಡಿಕೊಂಡಿದ್ದಾಳೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುವುದಾಗಿ ನನಗೆ ಬೆದರಿಸಿದ್ದಾಳೆ. ಬಳಿಕ ಬಿ.ಎಸ್. ಸಚ್ಚಿದಾನಂದ ಮೂರ್ತಿ ಮೂಲಕ ವಿಡಿಯೊ ಹರಿಬಿಡುವ ಪ್ರಯತ್ನ ನಡೆಸಲಾಗಿತ್ತು. ಸಚ್ಚಿದಾನಂದ ಮೂರ್ತಿ ಕೂಡ ಪೂರ್ವಪರ ಯೋಚಿಸದೆ ಮಠದ ಭಕ್ತರಿಗೆ ಈ ವಿಡಿಯೊ ತೋರಿಸಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರುʼʼ ಎಂದು ಶ್ರೀಗಳು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ಮಠದಿಂದ ಸಚ್ಚಿದಾನಂದಮೂರ್ತಿ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಹೀಗೆ ಮಾಡಿದ್ದಾರೆನ್ನಲಾಗಿದೆ.

ಇನ್ನೊಬ್ಬ ಮಹಿಳೆಯ ಪಾಲುದಾರಿಕೆ?
ಈ ಪ್ರಕರಣದಲ್ಲಿ ಪಂಕಜಾ ಎಂಬ ಮತ್ತೊಬ್ಬ ಮಹಿಳೆಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇವರು ಬಂಡೆ ಮಠದ ಎಸ್‌ಎಂಎಸ್‌ ಶಾಲೆಯ ಆಡಳಿತ ನೋಡಿಕೊಳ್ಳುತ್ತಿದ್ದವರು ಎನ್ನಲಾಗಿದ್ದು, ಇವರೂ ಈ ಕೃತ್ಯದಲ್ಲಿ ಭಾಗಿದಾರರು ಎಂಬ ಸಂಶಯ ಪೊಲೀಸರಿಗಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.

ಇದನ್ನೂ ಓದಿ | ಬಂಡೆಮಠ ಸ್ವಾಮೀಜಿ ಮತ್ತೊಂದು ಖಾಸಗಿ ವಿಡಿಯೋ ಲೀಕ್

Exit mobile version