Site icon Vistara News

D. S. Veeraiah: ಅರಸು ಟರ್ಮಿನಲ್ ಹಗರಣದಲ್ಲಿ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್. ವೀರಯ್ಯ ಬಂಧನ

D. S. Veeraiah

ಬೆಂಗಳೂರು: ದೇವರಾಜ ಅರಸು ಟರ್ಮಿನಲ್ ಬಹುಕೋಟಿ ಹಗರಣಕ್ಕೆ (Devaraja Arasu truck terminal scam) ಸಂಬಂಧಿಸಿ ಬಿಜೆಪಿ ಮಾಜಿ ಎಂಎಲ್‌ಸಿ ಡಿ.ಎಸ್‌. ವೀರಯ್ಯ ಬಂಧನವಾಗಿದೆ. 47 ಕೋಟಿ ಹಗರಣದ ಆರೋಪದಲ್ಲಿ ಮೈಸೂರಿನಲ್ಲಿ ವೀರಯ್ಯರನ್ನು ಸಿಐಡಿ ಬಂಧಿಸಿದೆ. ಈ ಹಿಂದೆ ವಾರ್ತಾ ಇಲಾಖೆಯ ಶಂಕರಪ್ಪ ಬಂಧನವಾಗಿತ್ತು, ಇದೀಗ ಮೈಸೂರಿನಲ್ಲಿ ಮುಡಾ ಅಕ್ರಮ ವಿರೋಧಿಸಿ ಶುಕ್ರವಾರ ಪ್ರತಿಭಟನೆಗೆ ತೆರಳಿದ್ದಾಗ ವೀರಯ್ಯರನ್ನು ಬಂಧಿಸಲಾಗಿದೆ.

2021ರಿಂದ 2023ರವರೆಗೆ ಡಿ.ಎಸ್.ವೀರಯ್ಯ ಅವರು ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಗಮದ ಅಧ್ಯಕ್ಷರಾಗಿದ್ದಾಗ ನಡೆದಿದ್ದ ಸುಮಾರು 47 ಕೋಟಿ ರೂ. ಅಕ್ರಮದ ಬಗ್ಗೆ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿಎನ್​ ಶಿವಪ್ರಸಾದ್ ವಿಲ್ಸನ್​​ ಗಾರ್ಡ್​ನ್​ ಠಾಣೆಗೆ ದೂರು ನೀಡಿದ್ದರು. ತುಂಡು ಗುತ್ತಿದೆ ಆಧಾರದಲ್ಲಿ ಅಕ್ರಮ ನಡೆದಿದೆ ನೀಡಿದ್ದ ದೂರಿನ ಮೇರೆಗೆ 2023ರ ಸೆಪ್ಟೆಂಬರ್​ 23ರಂದು ಎಫ್​ಐಆರ್ ದಾಖಲಾಗಿತ್ತು. ಬಳಿಕ ವೀರಯ್ಯ ಅವರಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ, 600ಕ್ಕೂ ಹೆಚ್ಚು ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಇದೀಗ ಮಾಜಿ ಎಂಎಲ್‌ಸಿ ವೀರಯ್ಯನ್ನು ಬಂಧಿಸಿದೆ.

ಏನಿದು ಹಗರಣ?

2021ರ ಅಕ್ಟೋಬರ್ 25ರಂದು ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ 194ನೇ ನಿರ್ದೇಶಕ ಮಂಡಳಿ ಸಭೆಯಲ್ಲಿ ಟ್ರಕ್ ಟರ್ಮಿನಲ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ 10 ಕೋಟಿ ರೂ.ಗಳವರೆಗೆ ತುಂಡು ಗುತ್ತಿಗೆ ನೀಡಲು ಅನುಮೋದನಾ ನಿರ್ಣಯ ಮಾಡಲಾಗಿತ್ತು. ಆನಂತರ ಕಾಮಗಾರಿ ನಡೆಸದೆ ನಕಲಿ ದಾಖಲೆ ಸೃಷ್ಟಿಸಿ ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನಿಗಮದ ಹಾಲಿ ಎಂಡಿ, ಬಳಿಕ ವಿಲ್ಸನ್ ಗಾರ್ಡನ್ ಠಾಣೆಗೆ ತುಂಡು ಗುತ್ತಿಗೆ ಕಾಮಗಾರಿಯಲ್ಲಿ 47.10 ಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶ ನೀಡಿತ್ತು.

ಸತತ 7 ಗಂಟೆ ಇಡಿ ವಿಚಾರಣೆ ಬಳಿಕ ಮಾಜಿ ಸಚಿವ ನಾಗೇಂದ್ರ ಬಂಧನ

ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸತತ 7 ಗಂಟೆ ವಿಚಾರಣೆ ಬಳಿಕ ಮಾಜಿ ಸಚಿವ ಬಿ.ನಾಗೇಂದ್ರರನ್ನು ಇಡಿ ಬಂಧನ ಮಾಡಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮಾಜಿ ಸಚಿವರನ್ನು ಕೋರ್ಟ್‌ಗೆ ಹಾಜರುಪಡಿಸಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ನಿರಂತರ 40 ಗಂಟೆಗಳ ತಪಾಸಣೆ ಹಾಗೂ ತನಿಖೆಯ ಬಳಿಕ, ವಾಲ್ಮೀಕಿ ನಿಗಮ ಹಗರಣ (Valmiki Corporation Scam) ಕುರಿತು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಅವರನ್ನು ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿತ್ತು. ಮೊನ್ನೆ ಮುಂಜಾನೆಯಿಂದ ನಾಗೇಂದ್ರ ಮನೆ ಹಾಗೂ ಕಚೇರಿ ಮುಂತಾದೆಡೆ ಇಡಿ ದಾಳಿ (ED Raid) ನಡೆದಿತ್ತು.

ಇದನ್ನೂ ಓದಿ | Govt Employees: ಸರ್ಕಾರಿ ನೌಕರರ ಬೇಡಿಕೆ ಈಡೇರಿಸದಿದ್ದರೆ ಜುಲೈ 29ರಿಂದ ಮುಷ್ಕರ; ಸಿ.ಎಸ್‌.ಷಡಾಕ್ಷರಿ ಎಚ್ಚರಿಕೆ

40 ಗಂಟೆಗಳ ಕಾಲ ನಾಗೇಂದ್ರ ಹಾಗೂ ಕುಟುಂಬದವರನ್ನು ಮನೆಯಿಂದ ಹೊರಬಿಡದ ಇಡಿ ಅಧಿಕಾರಿಗಳು ನಿರಂತರವಾಗಿ ಪ್ರಶ್ನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ.

Exit mobile version