Site icon Vistara News

Karnataka Election 2023: ಜಗತ್ತಿನಾದ್ಯಂತ ಕರ್ನಾಟಕದ ಜೈಕಾರ ಮೊಳಗಲು ಬಿಜೆಪಿ ಆಯ್ಕೆ ಮಾಡಿ ಎಂದ ಪ್ರಧಾನಿ ಮೋದಿ

If you want karnataka famous all over the world, the then elect bjp govt, Says Modi

ಮೂಡಬಿದಿರೆ, ದಕ್ಷಿಣ ಕನ್ನಡ: ಈಗ ಭಾರತದ ಕೀರ್ತಿ ಪತಾಕೆ ಇಡೀ ಜಗತ್ತಿನಾದ್ಯಂತ ಪಸರಿಸಿದೆ. ಎಲ್ಲ ರಾಷ್ಟ್ರಗಳಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಅಮೆರಿಕದಿಂದ ಹಿಡಿದು ಆಸ್ಟ್ರೇಲಿಯಾ ತನಕ ಭಾರತೀಯರಿಗೆ ಗೌರವ, ಸಮ್ಮಾನಗಳು ದೊರೆಯುತ್ತಿವೆ. ಇದಕ್ಕೆ ಕೇವಲ ನರೇಂದ್ರ ಮೋದಿ ಕಾರಣವಲ್ಲ. ನೀವು(ಮತದಾರರು) ನೀಡಿರುವ ಒಂದು ಮತ. ಅದೇ ರೀತಿ, ಇಡೀ ಜಗತ್ತಿನಲ್ಲೇ ಕರ್ನಾಟಕ ಬಗ್ಗೆ ಜೈಕಾರ ಮೊಳಗ ಬೇಕು ಎಂದಾದರೆ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು(Karnataka Election 2023).

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ನಮ್ಮ ಸೇನೆ ಹಾಗೂ ಯೋಧರನ್ನು ಅವಮಾನ ಮಾಡುತ್ತಲೇ ಬಂದಿದೆ. ಅಂಥ ಸರ್ಕಾರವನ್ನು ಆಯ್ಕೆ ಮಾಡಬೇಕೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷವು ರಿವರ್ಸ್ ಗೇರ್ ಪಕ್ಷವಾಗಿದೆ. ಕಾಂಗ್ರೆಸ್ ಆಯ್ಕೆಯಾದರೆ ಕರ್ನಾಟಕ ಹತ್ತು ವರ್ಷಗಳ ಹಿಂದೆ ಹೋಗಲಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದ ಎಲ್ಲ ಕಾರ್ಯಕ್ರಮಗಳನ್ನು ಅದು ರದ್ದು ಮಾಡಲಿದೆ. ಬಡವರ, ರೈತರ ಕಲ್ಯಾಣ ಕಾರ್ಯಕ್ರಮಗಳು ನಿಂತು ಹೋಗಲಿವೆ. ಹಾಗಾಗಿ, ಕಾಂಗ್ರೆಸ್ ಬಗ್ಗೆ ಜನರು ಬಹಳ ಎಚ್ಚರದಿಂದ ಇರಬೇಕು ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋದಿ ಬಿಜೆಪಿ ಪರ ಪ್ರಚಾರ

ಸಮಸ್ಯೆಗಳನ್ನು ಜೀವಂತವಾಗಿಟ್ಟ ಕಾಂಗ್ರೆಸ್

ದಿಲ್ಲಿಯಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಪಕ್ಷಕ್ಕೆ ಜನರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶವೇ ಇರಲಿಲ್ಲ. ಹಾಗಾಗಿ, ನಮ್ಮ ತಾಯಿ, ಸಹೋದರಿಯರು ಸಮಸ್ಯೆಗಳಲ್ಲೇ ತಮ್ಮ ಬದಕನ್ನು ಕಳೆದರು. ಆದರೆ, ನಾನು ಅವರಿಗೆ ಶೌಚಾಯಲ ನಿರ್ಮಾಣ ಮಾಡಿಕೊಟ್ಟೆ. ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳು ಇರಲಿಲ್ಲ. ಹಾಗಾಗಿ, ಹೆಣ್ಣುಮಕ್ಕಳ ಶಿಕ್ಷಣ ಕುಂಠಿತವಾಗುತ್ತಿತ್ತು. ಶಾಲೆಗಳಲ್ಲೂ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿರಲಿಲ್ಲ. ಆ ಕೆಲಸವನ್ನು ನಾನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಬಾಹ್ಯಾಕಾಶದಲ್ಲಿ ಕರ್ನಾಟಕದ ಯುವಕರ ಪಾತ್ರ

ಇಂದು ದೇಶ ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಈ ಪೈಕಿ ಹಲವು ಕ್ಷೇತ್ರಗಳಲ್ಲಿ ಕರ್ನಾಟಕದ ಯುವಕರು ತಮ್ಮ ಕಾಣಿಕೆಯನ್ನು ನೀಡುತ್ತಿದ್ದಾರೆ. ಆ ಯುವಕರಿಗೆ ನಾನು ಹೃದಯಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಅದರಲ್ಲೂ ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಇದರಲ್ಲಿ ಕರ್ನಾಟಕದ ಯುವಕರ ಪ್ರಯತ್ನ ಹಿರಿದಾಗಿದೆ. ಕರ್ನಾಟಕದ ಯುವಕರು ಈಗ ರಾಕೆಟ್, ಉಪಗ್ರಹಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕರ್ನಾಟಕದ ಹೆಮ್ಮೆಯಾಗಿರುವ ಎಚ್‌ಎಎಲ್ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಲಾಭವನ್ನು ಗಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಶೀಘ್ರವೇ 3ನೇ ಅತಿದೊಡ್ಡ ಆರ್ಥಿಕ ರಾಷ್ಟ್ರ

ಭಾರತವು ಈಗ ಜಗತ್ತಿನ ಟಾಪ್ 5 ಆರ್ಥಿಕತೆಯ ರಾಷ್ಟ್ರಗಳಲ್ಲಿ ಒಂದಾಗಿದೆ. ಇದರಿಂದಾಗಿ ಇಡೀ ಜಗತ್ತೇ ಭಾರತದತ್ತ ನೋಡುತ್ತಿದೆ. ನಮ್ಮನ್ನು ಗುಲಾಮರನ್ನಾಗಿಸಿಕೊಂಡಿದ್ದ ಇಂಗ್ಲೆಂಡ್ ಅನ್ನು ಹಿಂದಿಕ್ಕಿ ನಾವು ಮುಂದೆ ಹೋಗಿದ್ದೇವೆ. ನಾವೀಗ ಮೂರನೇ ಸ್ಥಾನಕ್ಕೆ ಹೋಗಬೇಕಾಗಿದೆ. ಈ ಕೆಲಸವನ್ನು ಭಾರತವು ಕರ್ನಾಟಕದ ಪ್ರಗತಿ ಇಲ್ಲದೇ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಕರ್ನಾಟಕದಲ್ಲಿ ಸ್ಥಿರ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡುವುದು ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

Exit mobile version