Site icon Vistara News

₹15 ಸಾವಿರದಲ್ಲಿ ಕಾಶಿ- ಅಯೋಧ್ಯೆ-ಪ್ರಯಾಗ ಯಾತ್ರೆ: ಸರ್ಕಾರದ ಯೋಜನೆಯ ಬುಕ್ಕಿಂಗ್‌ ಆರಂಭ

KASHI TEMPLE

ಬೆಂಗಳೂರು: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ ಪ್ಯಾಕೇಜ್‌ ಟೂರ್‌ ಬುಕ್ಕಿಂಗ್‌ ಪ್ರಾರಂಭವಾಗಿದೆ.

ಕಾಶಿ- ಅಯೋಧ್ಯೆ-ಪ್ರಯಾಗ ಯಾತ್ರೆ ಪೂರ್ಣಗೊಳಿಸುವ ಈ ಯೋಜನೆಯ ಮೊದಲ ರೈಲು ನವೆಂಬರ್‌ 11 ರಂದು ಬೆಂಗಳೂರಿನಿಂದ ಹೊರಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ನೀಡುವ ಕುರಿತು ಯೋಜಿಸಲಾಗುತ್ತಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಮುತುವರ್ಜಿಯಿಂದ ಮರು ನಿರ್ಮಾಣವಾಗಿರುವ ʼದಿವ್ಯ ಕಾಶಿ – ಭವ್ಯಕಾಶಿʼ ಯನ್ನು ರಾಜ್ಯದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಕಾಶಿ ವಿ‍ಶ್ವನಾಥನ ದರ್ಶನ ಪಡೆಯಲಿ ಎನ್ನುವ ಉದ್ದೇಶದಿಂದ ಈ ವಿಶೇಷ ಪ್ಯಾಕೇಜ್‌ ಟೂರನ್ನು ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಭಾರತ್‌ ಗೌರವ್‌ ಯೋಜನೆಯ ಅಡಿಯಲ್ಲಿ ರೈಲನ್ನು ಮುಜರಾಯಿ ಇಲಾಖೆ ಗುತ್ತಿಗೆಗೆ ಪಡೆದು ಈ ಯೋಜನೆ ಕಾರ್ಯತಗೊಳಿಸಲಾಗುತ್ತಿದೆ. ಕೇಂದ್ರ ರೈಲ್ವೇ ಸಚಿವರ ಸಂಪೂರ್ಣ ಸಹಕಾರದೊಂದಿಗೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಮೊದಲ ರೈಲು ನವೆಂಬರ್‌ 11 ರಂದು ಬೆಂಗಳೂರಿನಿಂದ ಹೊರಡಲಿದೆ.

ಉತ್ತರ ಕರ್ನಾಟಕದಲ್ಲೂ ರೈಲು ಹತ್ತುವ ಅವಕಾಶ
ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಹತ್ತಲು ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಬೆಂಗಳೂರು, ಬಿರೂರ್‌, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗರಾಜ್‌ ಗೆ ಸಂಚರಿಸಲಿದೆ.

ಐಆರ್‌ಸಿಟಿಸಿ ಸಹಭಾಗಿತ್ವದಲ್ಲಿ ಪ್ಯಾಕೇಜ್‌
ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧಯಾ ರಾಮಲಲ್ಲಾ ದೈವ ಭೂಮಿಯ ವೈಭವ ಸವಿಯುವ ಅವಕಾಶ ಇದು. 8 ದಿನಗಳ ಈ ಟೂರ್‌ ಪ್ಯಾಕೇಜ್‌ನಲ್ಲಿ ಎಲ್ಲ ಸವಲತ್ತುಗಳನ್ನೂ ಸೇರಿಸಲಾಗಿದೆ. ಟ್ರೈನ್‌ ದರ, ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್‌ ವ್ಯವಸ್ಥೆ, ಉಳಿದುಕೊಳ್ಳಲು ಹೋಟೇಲ್‌, ಮತ್ತು 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ಪ್ಯಾಕೇಜ್‌ ಒಳಗೊಂಡಿರಲಿದೆ.

ಕರ್ನಾಟಕ ಸರ್ಕಾರ 5 ಸಾವಿರ ರೂ.
ಐಆರ್‌ಸಿಟಿಸಿ ಸಹಭಾಗಿತ್ವದ ಈ ಟೂರ್‌ ಪ್ಯಾಕೇಜ್‌ ತಗೆದುಕೊಳ್ಳುವ ಪ್ರತಿ ವ್ಯಕ್ತಿಗೂ 5 ಸಾವಿರ ರೂಪಾಯಿಗಳ ಸಹಾಯಧನವನ್ನು ಕರ್ನಾಟಕ ಸರಕಾರ ನೀಡಲಿದೆ. ಈ ಪ್ಯಾಕೇಜ್‌ ದರ ಮೂಲತಃ 20 ಸಾವಿರ ರೂ. ಪ್ರಯಾಣಿಕರು ಕೇವಲ 15,000 ರೂ. ನೀಡಿದರೆ, ಉಳಿದ 5,000 ರೂ. ಕರ್ನಾಟಕ ಸರ್ಕಾರ ಸಹಾಯಧನದ ರೂಪದಲ್ಲಿ ಕಂಪನಿಗೆ ನೀಡಲಿದೆ.

ಪ್ರವಾಸದ ಸ್ಥಳಗಳು:
ವಾರಾಣಸಿ: ತುಳಸಿ ಮಾನಸ ಮಂದಿರ, ಸಂಕಟ ಮೋಚನ ಹನುಮಾನ್‌ ಮಂದಿರ, ಕಾಶಿ ವಿಶ್ವನಾಥ ದೇವಸ್ಥಾನ, ಗಂಗಾ ಆರತಿ
ಅಯೋಧ್ಯೆ: ರಾಮ ಜನ್ಮಭೂಮಿ ದೇವಸ್ಥಾನ, ಹನುಮಾನ್‌ ಗಢಿ, ಸರಯೂಘಾಟ್‌
ಪ್ರಯಾಗರಾಜ್‌: ಗಂಗಾ-ಯಮುನಾ ಸಂಗಮ, ಹನುಮಾನ್‌ ದೇವಸ್ಥಾನ

ಬುಕ್ಕಿಂಗ್‌ ಈಗಾಗಲೇ ಪ್ರಾರಂಭ
ಕರ್ನಾಟಕ-ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯೋಜನೆಯ ಬುಕ್ಕಿಂಗ್‌ ಈಗಾಗಲೇ ಪ್ರಾರಂಭವಾಗಿದೆ. ಐಆರ್‌ಸಿಟಿಸಿ ಹಾಗೂ ಐಟಿಎಂಎಸ್‌ ವೆಬ್‌ಸೈಟ್ ಗಳ ಮೂಲಕ ಬುಕ್ಕಿಂಗ್‌ ಗೆ ಅವಕಾಶ ನೀಡಲಾಗಿದ್ದು, ಈಗಾಗಲೇ ಹಲವಾರು ಜನರು ಬುಕ್ಕಿಂಗ್‌ ಮಾಡಿಕೊಳ್ಳುತ್ತಿದ್ದಾರೆ. ಈ ಲಿಂಕ್‌ ಗಳ ಮೂಲಕ ಬುಕ್ಕಿಂಗ್‌ ಮಾಡಬಹುದಾಗಿದೆ:

ಬುಕಿಂಗ್‌ ಲಿಂಕ್‌ 1: ಬುಕಿಂಗ್‌ ಲಿಂಕ್‌ 2:

ಇದನ್ನೂ ಓದಿ | ಅಯೋಧ್ಯಾ ರಾಮಮಂದಿರಕ್ಕೆ 2024ರ ಜನವರಿಯಿಂದ ಭಕ್ತರಿಗೆ ಪ್ರವೇಶ; ಸಂಕ್ರಾಂತಿಯಂದೇ ರಾಮಲಲ್ಲಾ ಪ್ರತಿಷ್ಠಾಪನೆ

Exit mobile version