Site icon Vistara News

Karnataka Election: ಹಿಜಾಬ್‌, ಹಲಾಲ್‌ ಚುನಾವಣೆ ವಿಷಯವೇ ಅಲ್ಲ; ಎಲ್ಲ ಮುಗಿದು ಹೋಗಿದೆ: ಸಿಎಂ ಬಸವರಾಜ ಬೊಮ್ಮಾಯಿ

C M Basavaraj Bommai at India Today Interview.

ಬೆಂಗಳೂರು: ಹಲಾಲ್‌, ಹಿಜಾಬ್‌ ಮುಂತಾದವುಗಳು ಚುನಾವಣೆ ವಿಷಯವೇ ಅಲ್ಲ, ಜನ ಅದನ್ನು ಮರೆತುಬಿಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂಗ್ಲಿಷ್‌ ಸುದ್ದಿ ವಾಹಿನಿ ಇಂಡಿಯಾ ಟುಡೆ ಸಂವಾದದಲ್ಲಿ ಬೊಮ್ಮಾಯಿ ಈ ಮಾತನ್ನು ಹೇಳಿದ್ದಾರೆ.

ಹಲಾಲ್, ಹಿಜಾಬ್, ಈಗ ಚುನಾವಣಾ ವಿಷಯವೇ ಅಲ್ಲ. ಈಗ ಎಲ್ಲವೂ ಮುಗಿದು ಹೊಗಿದೆ. ರಾಜ್ಯದ ಜನರೇ ಅದನ್ನು ಮರೆತಿದ್ದಾರೆ. ‌ಕರ್ನಾಟಕದಲ್ಲಿ ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ‌ ಇವೆ ಎಂದರು.

ನಾವು ರಾಜ್ಯದಲ್ಲಿ ಆರು ಹೊಸ ನಗರಗಳ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಏಳು ಎಂಜಿನಿಯರಿಂಗ್‌ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ತೀರ್ಮಾನ ಮಾಡಿದ್ದೇನೆ. ನಾಲ್ಕು ಬಂದರು ನಿರ್ಮಾಣ ಮಾಡಲು ತೀರ್ಮಾನವಾಗಿದೆ.

ಬೆಂಗಳೂರು ಅಭಿವೃದ್ಧಿಗೆ ಆದ್ಯತೆ‌ ನೀಡಿದ್ದೇವೆ. ಮೆಟ್ರೊ 3ನೇ ಹಂತ ವಿಸ್ತರಣೆ ಮಾಡುತ್ತಿದ್ದೇವೆ. ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಮೂವತ್ತು ವರ್ಷದಿಂದ ರಾಜಕಾರಣದಲ್ಲಿ ಇದ್ದು, ಸಣ್ಣ ಪುಟ್ಟ ಚುನಾವಣೆಗಳನ್ನು ಎದುರಿಸಿದ್ದೇನೆ. ಮೇ 13ಕ್ಕೆ ಎಲ್ಲರೂ ನಮಗೆ ಅಭಿನಂದನೆ ಸಲ್ಲಿಸುತ್ತಾರೆ. ಕೋವಿಡ್ ಸಂದರ್ಭದಿಂದ ಹಿಡಿದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹೀಗಾಗಿ ನಮಗೆ ಆತ್ಮವಿಶ್ವಾಸವಿದೆ ಎಂದು ತಿಳಿಸಿದರು.

ಎಲ್ಲದರಲ್ಲೂ ರಾಜಕಾರಣ
ನಂದಿನಿ ಉತ್ಪನ್ನವನ್ನು ಅಮುಲ್ ಮೀರಿಸುತ್ತದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಅವರ ಕಾಲದಲ್ಲಿ 65 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, ನಮ್ಮ ಅವಧಿಯಲ್ಲಿ 85 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದೆ.

ಅಮುಲ್‌ಗೆ ವಿರೋಧ ಮಾಡಿದವರು ಸಿದ್ದರಾಮಯ್ಯ. ಅವರ ಅವಧಿಯಲ್ಲಿ ಅಮುಲ್ ಇದ್ದಾಗ ಯಾವುದೇ ವಿರೋಧ ಮಾಡಲಿಲ್ಲ. ಕೆಲವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರು ನೀರು, ಹಾಲು ಸೇರಿದಂತೆ ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದು, ಹತಾಶಾರಾಗಿದ್ದಾರೆ.

ರಾಜ್ಯದಲ್ಲಿ ನಾನು ಸಿಎಂ ಆದ ಮೇಲೆ ಎರಡು ಮೆಗಾ ಡೈರಿ ಸ್ಥಾಪನೆ ಮಾದಿದ್ದು, ನಂದಿನಿ ಅಮುಲ್‌ಗೆ ಸವಾಲಾಗಲಿದೆ. ವಿರೋಧ ಪಕ್ಷಗಳು ಜನರಿಗೆ ಬೇಡದ ವಿಷಯಗಳನ್ನು ಮುಂದಿಟ್ಟುಕೊಂಡು ವಾದ ಮಾಡುತ್ತಿದ್ದಾರೆ. ನಾವು ಸಾಮಾಜಿಕ ಆರ್ಥಿಕ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಕರ್ನಾಟಕಕ್ಕೆ ನವ ರೂಪ ನೀಡಲು ಪ್ರಯತ್ನ ನಡೆಸಿದ್ದೇನೆ. ಥೀಮ್ ಸಿಟಿಗಳು, ಮಾದರಿ ಗ್ರಾಮಗಳು, ಡಿಜಿಟಲೈಸೇಷನ್, ಜನರ ಸುತ್ತ ಅಭಿವೃದ್ಧಿ ಆಗುತ್ತಿದೆ ಹಾಗೂ ಜನರು ಖುಷಿಯಾಗಿರುವಂತೆ ನೋಡಿಕೊಳ್ಳಲಾಗುವುದು ಎಂದರು.

40% ಆರೋಪದ ಹಿಂದೆ ಪ್ರತಿ ಪಕ್ಷಗಳ ಕೈವಾಡ
40% ಬಗ್ಗೆ ಆರೋಪ ಮಾಡಿರುವ ಗುತ್ತಿಗೆ ಸಂಘದವರು ಯಾವುದೇ ದಾಖಲೆ ಕೊಡಲಿಲ್ಲ. ಅವರ ವಿರುದ್ದ ಮಾನನಷ್ಟ ಮೊಕದ್ದಮೆಯಾಗಿ ಜೈಲಿಗೆ ಹೋಗಿ ಬಂದರು. ಅವರ ಹಿಂದೆ ಪ್ರತಿಪಕ್ಷದ ಕೈವಾಡ ಇದೆ. ನಾವು ಟೆಂಡರ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಶೇ 60% ಕಾಮಗಾರಿಗೆ ಒಪ್ಪಿಗೆ ನೀಡುತ್ತಿದ್ದರು. ಅದರ ಅರ್ಥ ಏನು ? ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳು ನಡೆದವು, ಆದರೆ, ಅದನ್ನು ಎಸಿಬಿಯಲ್ಲಿ ಹಾಕಿ ಎಲ್ಲದಕ್ಕೂ ಬಿ ರಿಪೋರ್ಟ್ ಪಡೆದರು. ಆಗ ಲೊಕಾಯುಕ್ತ ಇದ್ದಿದ್ದರೆ, ಅವಾಗಲೇ ಪ್ರಕರಣಗಳು ಅವರ ವಿರುದ್ದ ದಾಖಲಾಗುತ್ತಿದ್ದವು.

ನಾನು ಮಾಡಾಳು ವಿರುಪಾಕ್ಷಪ್ಪ ಪ್ರಕರಣವನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ನಾವು ಲೋಕಾಯುಕ್ತವನ್ನು ಬಲಗೊಳಿಸಿದ್ದೇವೆ. ಬಿಜೆಪಿಯ ಮಾಜಿ ಸಿಎಂ ಮತ್ತು ಮಾಜಿ ಡಿಸಿಎಂ ಪಕ್ಷ ತೊರೆದಿದ್ದು ದುರ್ದೈವ. ಅವರಿಗೆ ಪಕ್ಷ ಬೇರೆ ಅವಕಾಶ ಕಲ್ಪಿಸುವ ಭರವಸೆ ನೀಡಿಲಾಗಿತ್ತು. ನಾವು ಎರಡೂ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದರು.

ಸಿಎಂ ಕುರಿತು ಹೈ ಕಮಾಂಡ್ ನಿರ್ಧಾರ
ಈ ಬಾರಿ ಲಿಂಗಾಯತರ ಜೊತೆಗೆ ಬೇರೆ ಸಮುದಾಯಗಳ ಮತಗಳನ್ನೂ ಹೆಚ್ಚಿಗೆ ಪಡೆಯುತ್ತೇವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಆಗುತ್ತಾರೆ ಎಂದು ನಮ್ಮ ಹೈ ಕಮಾಂಡ್ ನಿರ್ಧರಿಸುತ್ತದೆ. ನನ್ನ ಕೆಲಸ ಪಕ್ಷವನ್ನು ಅಧಿಕಾರಕ್ಕೆ ತರುವುದು. ಕಾಂಗ್ರೆಸ್ ನಲ್ಲಿ ತೀರ್ಮಾನಗಳನ್ನು ಕುಟುಂಬದಿಂದ ತೆಗೆದುಕೊಳ್ಳುತ್ತಾರೆ. ಪಕ್ಷದಿಂದ ಅಲ್ಲ. ಇಂದಿರಾಗಾಂಧಿ ಕಾಲದಿಂದ ದೆಹಲಿಯಲ್ಲಿಯೇ ನಿರ್ಧಾರ ಆಗುತ್ತಿತ್ತು. ನಮ್ಮದು ಪ್ರಜಾಪ್ರಭುತ್ವ ಮಾದರಿಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ ಎಂದರು.

ಕಳೆದ ಚುನಾವಣೆಯಲ್ಲಿ ಫಲಿತಾಂಶ ಬರುವ ಮೊದಲೇ ಕಾಂಗ್ರೆಸ್‌ನವರು ದೇವೇಗೌಡರ ಮನೆಯ ಬಾಗಿಲಿಗೆ ಹೋಗಿ ನಿಂತಿದ್ದರು. ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡುವುದಿಲ್ಲ. ಕಾಂಗ್ರೆಸ್ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪ್ರತಿ ದಿನ ಇಬ್ಬರೂ ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಾರೆ. ಕಾಂಗ್ರೆಸ್ ‌ನ ಮೂಲ ಮತದಾರರು ಬಿಜೆಪಿ ಕಡೆಗೆ ವಾಲುತ್ತಾರೆ. ಎಸ್‌ಸಿಎಸ್‌ಟಿ, ಒಬಿಸಿ ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಕಳೆದ ಐವತ್ತು ವರ್ಷದಿಂದ ಯಾವುದೇ ಲಿಂಗಾಯತ ಸಿಎಂ ಮಾಡಲಿಲ್ಲ. ವೀರೇಂದ್ರ ಪಾಟೀಲರನ್ನು ಯಾವುದೇ ಗೌರವ ನೀಡದೆ ಅವರನ್ನು ಸಿಎಂ ಸ್ಥಾನದಿಂದ ತೆಗೆದು ಹಾಕಿದರು. ಚುನಾವಣೆ ಬಂದಾಗ ಕಾಂಗ್ರೆಸ್ ಲಿಂಗಾಯತರ ಜಪ ಮಾಡುತ್ತಾರೆ. ಅನೇಕ ರಾಜ್ಯಗಳಲ್ಲಿ ಹೀಗೆ ಮಾಡಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕೆಲವು ಲಿಂಗಾಯತ ನಾಯಕರು ಶಿಕ್ಷಣ ಕ್ಷೇತ್ರದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದರು.

ಇದನ್ನೂ ಓದಿ: ಕುಲಗಳ ನಡುವೆ ಬಡಿದಾಟ ಉಂಟುಮಾಡುವವರಿಗೆ ದೇವರು ಸದ್ಬುದ್ಧಿ ಕೊಡಲಿ: ಸಿದ್ದರಾಮಯ್ಯರನ್ನು ಟೀಕಿಸಿದ ಸಿಎಂ ಬೊಮ್ಮಾಯಿ

Exit mobile version