Site icon Vistara News

Crime News: ಹಾಡಹಗಲೇ ನಡುರಸ್ತೆಯಲ್ಲಿ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿದ ಗುಂಪು, ಗಾಯಾಳು ಚಿಂತಾಜನಕ

attack on youth with stone

ಕೊಪ್ಪಳ: ಹಾಡಹಗಲೇ ನಡುರಸ್ತೆಯಲ್ಲಿ ವ್ಯಕ್ತಿಯ ಮೇಲೆ ಗುಂಪೊಂದು ಮಾರಕವಾದ ದಾಳಿ ನಡೆಸಿದ್ದು, ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲ್ಲಲು ಯತ್ನಿಸಿದೆ. ಗಾಯಾಳು ಚಿಂತಾಜನಕ ಸ್ಥಿತಿಯಲ್ಲಿದ್ದಾನೆ.

ಇದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಭಯಾನಕ ಘಟನೆ. ವ್ಯಕ್ತಿಯ ಮೇಲೆ ಗುಂಪು ಅಟ್ಯಾಕ್ ಮಾಡುವ ಭಯಾನಕ ದೃಶ್ಯ ಸಾರ್ವಜನಿಕರ ಮೊಬೈಲ್‌ನಲ್ಲೂ ಸೆರೆಯಾಗಿದೆ. ಸುಮಾರು 10ಕ್ಕೂ ಹೆಚ್ಚು ಯುವಕರ ಗುಂಪಿನಿಂದ ಮಾರುತಿ ಅಲಿಯಾಸ್ ಸಲಗ ಎನ್ನುವ ವ್ಯಕ್ತಿ ಮೇಲೆ ದಾಳಿ ನಡೆದಿದೆ.

ಗಂಗಾವತಿ ನಗರದ ರಾಜ್ಯ ಹೆದ್ದಾರಿಯಲ್ಲಿಯೇ ಮಾರುತಿಯ ತಲೆ ಮೇಲೆ ಈ ಗ್ಯಾಂಗ್‌ ಕಲ್ಲು ಎತ್ತಿ ಹಾಕಿದೆ. ಈ ಭಯಾನಕ ದೃಶ್ಯ ಕಂಡು ಗಂಗಾವತಿ ಜನತೆ ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದವರಿಗಾಗಿ ಬಲೆ ಬೀಸಲಾಗಿದೆ. ಪೂರ್ವ ದ್ವೇಷ, ಗ್ಯಾಂಗ್‌ವಾರ್‌ ಈ ಕೃತ್ಯದ ಹಿಂದಿದೆ ಎಂದು ಶಂಕಿಸಲಾಗಿದೆ.

ಕೌಟುಂಬಿಕ ಕಲಹದಲ್ಲಿ ಪತ್ನಿಯ ಕೊಲೆ

ಚಾಮರಾಜನಗರ: ಕೌಟುಂಬಿಕ ಕಲಹದಿಂದ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಚಾಮರಾಜನಗರ ತಾಲೂಕು ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ (30) ಕೊಲೆಯಾದ ಮಹಿಳೆ. ಆರೋಪಿ ಪತಿ ಮಹೇಶ್‌ನನ್ನು ಬಂಧಿಸಲಾಗಿದೆ. ಪತಿ ಪತ್ನಿಯ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ಆಗಾಗ್ಗೆ ಜಗಳವಾಗುತ್ತಿದ್ದು, ಜಗಳ ತಾರಕಕ್ಕೇರಿ ಮಚ್ಚಿನಿಂದ ಹೊಡೆದು ಪತ್ನಿಯನ್ನು ಮಹೇಶ್‌ ಕೊಲೆ ಮಾಡಿದ್ದಾನೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಮುಳುಗಿ ಬಾಲಕ ಸಾವು

ಮೈಸೂರು: ನದಿಯಲ್ಲಿ ಈಜಲು ಹೋಗಿ ಬಾಲಕ ಸಾವಿಗೀಡಾದ ಘಟನೆ ತಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ನಡೆದಿದೆ. ತಲಕಾಡು ಗ್ರಾಮದ ದೀಕ್ಷಿತ್ (16) ಮೃತ ಬಾಲಕ.

ತಲಕಾಡಿನಲ್ಲಿ 10ನೇ ತರಗತಿ ಓದುತ್ತಿದ್ದ ದೀಕ್ಷಿತ್, ವೈಕುಂಠ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವ ಹಿನ್ನೆಲೆಯಲ್ಲಿ ಗೆಳೆಯರೊಂದಿಗೆ ಮಾಧವ ಮಂತ್ರಿ ಅಣೆಕಟ್ಟೆ ಬಳಿ ಸ್ನೇಹಿತರೊಂದಿಗೆ ತೆರಳಿದ್ದ. ಈ ವೇಳೆ ನದಿಯಲ್ಲಿ ಈಜಲು ಹೋಗಿ ಈಜು ಬಾರದೆ ಸಾವನ್ನಪ್ಪಿದ್ದಾನೆ. ದೀಕ್ಷಿತ್ ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದು, ತಡರಾತ್ರಿ ದೀಕ್ಷಿತ್ ಶವ ಪತ್ತೆಯಾಗಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime news: ಹಳೆ ದ್ವೇಷ, ಹಾಡಹಗಲೇ ಯುವಕನ ಬರ್ಬರ ಹತ್ಯೆ

Exit mobile version