Site icon Vistara News

Attack by minor | ಬಾಲಕಿಯನ್ನು ಚುಡಾಯಿಸಿದ್ದಕ್ಕೆ ಬುದ್ಧಿವಾದ ಹೇಳಿದ ಹಿರಿಯರಿಗೇ ಚೂರಿಯಿಂದ ಇರಿದ ಬಾಲಕ

ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು

ಬೆಳಗಾವಿ: ಕೆಲವು ಮಕ್ಕಳು ಸಣ್ಣ ವಯಸ್ಸಿನಲ್ಲೇ ಎಷ್ಟೊಂದು ಕ್ರೌರ್ಯವನ್ನು, ದಾರ್ಷ್ಟ್ಯವನ್ನು ಮೈಗೂಡಿಸಿಕೊಂಡಿರುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ. ಬಾಲಕಿಯೊಬ್ಬಳನ್ನು ಚುಡಾಯಿಸಿದ್ದ ಬಾಲಕನನ್ನು ಯಾಕೆ ಹೀಗೆ ಮಾಡಿದ್ದು ಎಂದು ಕೇಳಿದ್ದೇ ತಡ ಆತ ಹಾಗೆ ಪ್ರಶ್ನಿಸಿದ ಹಿರಿಯರ ಮೇಲೆಯೇ ಚೂರಿಯಿಂದ ದಾಳಿ ನಡೆಸಿದ್ದಾನೆ! ಒಬ್ಬರಲ್ಲ, ಇಬ್ಬರಲ್ಲ ನಾಲ್ವರ ಮೇಲೆ ಈ ಬಾಲಕ ಚೂರಿಯಿಂದ ಇರಿದಿದ್ದಾನೆ. ನಾಲ್ವರಿಗೂ ಗಂಭೀರ ಗಾಯಗಳಾಗಿವೆ.

ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಬಸವೇಶ್ವರ ಕಾಲನಿಯಲ್ಲಿ. ೧೭ ವರ್ಷದ ಬಾಲಕ ಆ ಕಾಲೊನಿಯ ಒಬ್ಬ ಹುಡುಗಿಯನ್ನು ಚುಡಾಯಿಸಿದ್ದ. ಇದನ್ನು ತಿಳಿದ ಹಿರಿಯರು ಹುಡುಗನನ್ನು ಕರೆದು ಬುದ್ಧಿವಾದ ಹೇಳಿದ್ದರು.

ಆದರೆ ಆ ಹುಡುಗ ಇದಕ್ಕೆ ದ್ವೇಷ ಸಾಧಿಸಲು ಮುಂದಾದ. ಚೂರಿಯನ್ನು ಹಿಡಿದುಕೊಂಡು ಬಂದು ನಾಲ್ವರಿಗೆ ಇರಿದಿದ್ದಾನೆ. ಅತಾವುಲ್ಲ ಹುಬ್ಬಳ್ಳಿ, ಮುನೀರ್ ಬೇಪಾರಿ, ರಫೀಕ್ ಕೊರವಿನಕೊಪ್ಪ, ಮೆಹಬೂಬ್ ಹುಬ್ಬಳ್ಳಿ ಇವರೇ ಹುಡುಗನಿಂದ ಇರಿತಕ್ಕೆ ಒಳಗಾಗಿ ಗಾಯಗೊಂಡವರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ‌ಕಳುಹಿಸಲಾಗಿದೆ. ಈ ದುಷ್ಕೃತ್ಯ ನಡೆಸಿದ ಆರೋಪಿ ಬಾಲಕ ಕೂಡಾ ಮುಸ್ಲಿಂ ಸಮುದಾಯಕ್ಕೆ ಸೇರಿದವನು.

೧೭ ವರ್ಷದ ಈ ಬಾಲಕ ಬೈಲಹೊಂಗಲ ಪಟ್ಟಣದ ಮೌನೇಶ್ವರ ನಗರದವನು. ಹುಡುಗಿ ಇರುವ ಮನೆಯ ಪರಿಸರಕ್ಕೆ ಬಂದೇ ಈ ಪರಿಯಲ್ಲಿ ಕ್ರೌರ್ಯ ಮೆರೆದಿದ್ದಾನೆ. ಘಟನೆ ಸಂಬಂಧ ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕುಡಿದ ಮತ್ತಿನಲ್ಲಿ ಯುವತಿಯ ಬೀದಿ ರಂಪಾಟ; ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ

Exit mobile version