Site icon Vistara News

ನಲಪಾಡ್‌ ಅವರಿಗೆ ಸೇರಿದ್ದೆಂದು ಗೊತ್ತಿರಲಿಲ್ಲ ಎಂದ ಕೃತಿಕಾ: ಮೈಸೂರು ಹೋಟೆಲ್‌ ಗಲಾಟೆ

ಮೈಸೂರು: ಹೋಟೆಲ್‌ ಗುತ್ತಿಗೆ ಅವಧಿ ಪೂರ್ಣಗೊಳ್ಳುವ ಮೊದಲೇ ಖಾಲಿ ಮಾಡುವಂತೆ ಒತ್ತಾಯ ಹಾಗೂ ಕಿರುಕುಳ ನೀಡಿದ್ದರು ಎನ್ನಲಾದ ಪ್ರಕರಣದಲಿ ಆರೋಫ ಪ್ರತ್ಯಾರೋಪಗಳು ಮುಂದುವರಿದಿವೆ. ಈ ಜಾಗ ಮೊಹಮ್ಮದ್‌ ನಲಪಾಡ್‌ ಅವದಿಗೆ ಸೇರಿದ್ದು ಎನ್ನುವುದು ನನಗೆ ಗೊತ್ತೇ ಇರಲಿಲ್ಲ, ಅವರಿಂದ ಗುತ್ತಿಗೆ ಪಡೆದು ಸೈಯದ್‌ ನನಗೆ ಕಾನೂನುಬಾಹಿರವಾಗಿ ಉಪಗುತ್ತಿಗೆ ನೀಡಿದ್ದಾರೆ, ಅವರೊಬ್ಬ ರೌಡಿ ಶೀಟರ್‌ ಎಂದು ಕೃತಿಕಾ ಗೌಡ ತಿಳಿಸಿದ್ದಾರೆ.

ಹೋಟೆಲ್‌ಗೆ ಆಗಮಿಸುವ ಸೈಯದ್‌ ರಿಯಾಜ್‌, ಕೃತಿಕಾ ಜತೆಗೆ ವಾಗ್ವಾದಕ್ಕಿಳಿದು ಕೊನೆಗೆ ಆಕೆಯನ್ನು ತಳ್ಳಿ ಕ್ಯಾಷಿಯರ್‌ ಕುರ್ಚಿ ಮೇಲೆ ಕುಳಿತುಕೊಳ್ಳುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. (ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ)

ಇದಕ್ಕೆ ವ್ಯತಿರಿಕ್ತವಾಗಿ ಮಾತನಾಡಿರುವ ಸೈಯದ್‌ ರಿಯಾಜ್‌, ನಾನು ರೌಡಿಶೀಟರ್‌ ಅಲ್ಲ. ನನಗಷ್ಟೆ ಅಲ್ಲದೆ, ಹೋಟೆಲ್‌ಗೆ ತರಕಾರಿ, ದಿನಸಿ ನೀಡಿದವರಿಗೂ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿದ್ದಾರೆ ಕೃತಿಕಾ. ಅವರೆಲ್ಲರೂ ನನ್ನ ಬಳಿ ಬಂದು ನೋವು ಹೇಳಿಕೊಂಡರು. ಈ ವಿಚಾರವನ್ನು ಕೇಳಲು ಹೋದಾಗ ರಂಪ ಮಾಡಿದ್ದಾರೆ ಎಂದಿದ್ದಾರೆ.

ಗುತ್ತಿಗೆ ನೀಡಲು 20 ಲಕ್ಷ ರೂ. ಪಡೆಯಲಾಗಿತ್ತು ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇದೀಗ ಮಾತನಾಡಿರುವ ಕೃತಿಕಾ, ಗುತ್ತಿಗೆಗೆ 20 ಲಕ್ಷ ರೂ. ಅಲ್ಲ, 30 ಲಕ್ಷ ರೂ. ನೀಡಲಾಗಿತ್ತು ಎಂದಿದ್ದಾರೆ. ನಲಪಾಡ್‌ ಅವರಿಂದ ಗುತ್ತಿಗೆ ಪಡೆದು ನನಗೆ ಉಪಗುತ್ತಿಗೆ ನೀಡಿದ್ದಾರೆ, ಆದರೂ ನೆಮ್ಮದಿಯಿಂದ ಇರಲು ಬಿಡುತ್ತಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ರಿಯಾಜ್‌, ಹೋಟೆಲ್‌ ನಡೆಸುವ ಸಂಬಂಧ ಕೃತಿಕಾ ಗೌಡ ಜತೆಗೆ ಹಣಕಾಸು ನಿರ್ವಹಣಾ ಒಪ್ಪಂದ ಆಗಿದೆ. ಇದೀಗ ಸುಖಾಸುಮ್ಮನೆ ಅರೋಪ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೂ ನಲಪಾಡ್‌ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

Exit mobile version