ಮೈಸೂರು: ಗುರುತು ಪತ್ತೆಯಾಗದಂತೆ ಅಪರಿಚಿತ ಯುವತಿಯೊಬ್ಬಳನ್ನು ಯಾರೋ ಪಾತಕಿಗಳು ಸುಟ್ಟು ಹಾಕಿರುವುದು ಕಂಡುಬಂದಿದೆ.
ಮೈಸೂರು ತಾಲೂಕಿನ ಸಾಗರಕಟ್ಟೆ ಬಳಿ ಘಟನೆ ನಡೆದಿರುವುದು ಕಂಡುಬಂದಿದೆ. ಕೃಷ್ಣರಾಜಸಾಗರ ಅಣೆಕಟ್ಟಿನ ಹಿನ್ನೀರು ಪ್ರದೇಶದಲ್ಲಿ ದೇಹವನ್ನು ದುಷ್ಕರ್ಮಿಗಳು ಸುಟ್ಟುಹಾಕಿದ್ದಾರೆ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಮೈಸೂರಿನ ಇಲವಾಲ ಪೋಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಶವಾಗಾರಕ್ಕೆ ಅಪರಿಚಿತ ಯುವತಿಯ ಮೃತದೇಹ ರವಾನಿಸಲಾಗಿದೆ. ಅಪರಿಚಿತ ಯುವತಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಯುವತಿಯನ್ನು ಕೊಲೆ ಮಾಡಿ ತಂದು ಇಲ್ಲಿ ಸುಟ್ಟು ಹಾಕಲಾಗಿದೆಯೇ, ಅಥವಾ ಪುಸಲಾಯಿಸಿ ಕರೆದುಕೊಂಡು ಬಂದು ಸಜೀವವಾಗಿ ಸುಟ್ಟು ಹಾಕಲಾಗಿದೆಯೇ ಇತ್ಯಾದಿ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ.
ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ
ಉಡುಪಿ/ಬೆಂಗಳೂರು: ಉಡುಪಿಯ ಬೈಂದೂರಿನ ಕಾಲ್ತೋಡು ಗ್ರಾಮದಲ್ಲಿ ಯುವತಿಯೊಬ್ಬಳು (Crime News) ನೇಣಿಗೆ ಶರಣಾಗಿದ್ದಾಳೆ. ಗೌತಮಿ (22) ಮೃತ ದುರ್ದೈವಿ.
ಗೌತಮಿ ಉಡುಪಿಯ ಖಾಸಗಿ ಕಾಲೇಜಿನಲ್ಲಿ ಎಂ.ಕಾಂ ಪದವಿ ಮುಗಿಸಿದ್ದರು. ಬ್ಯಾಂಕಿಂಗ್ ಪರೀಕ್ಷೆ ಸೇರಿದಂತೆ ಇತರೆ ಕಂಪನಿಗಳ ನೇಮಕಾತಿ ಪರೀಕ್ಷೆ ಬರೆದಿದ್ದರು. ಅರ್ಹತೆ ಇದ್ದರೂ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಇತ್ತೀಚೆಗೆ ಹೆಚ್ಚು ಒಬ್ಬಂಟಿಯಾಗಿ ಇರುತ್ತಿದ್ದ ಗೌತಮಿ, ಡೆತ್ ನೋಟ್ ಬರೆದಿಟ್ಟು ಮನೆಯ ಮೊದಲ ಮಹಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಉದ್ಯೋಗ ಪಡೆಯುವಲ್ಲಿ ತಾನು ವಿಫಲವಾಗುತ್ತಿರುವ ಬಗ್ಗೆ ಅವರು ಡೆತ್ ನೋಟ್ನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ಯಾನಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು(ಸಿಕೆ ಅಚ್ಚುಕಟ್ಟು) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದಕೊಂಡಿದ್ದಾರೆ. ಶಿವರುದ್ರ (40) ಆತ್ಮಹತ್ಯೆಗೆ ಶರಣಾದ ದುರ್ದೈವಿ.
ಮಂಡ್ಯದ ನಾಗಮಂಗಲ ಮೂಲದ ಶಿವರುದ್ರ, ಬೆಂಗಳೂರಿನ ಇಟ್ಟಮಡುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಟರಿಂಗ್ ಕೆಲಸ ಮಾಡಿಕೊಂಡಿದ್ದ ಶಿವರುದ್ರ, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Heart Attack: ಬಸ್ಸು ಓಡಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ಸಾವು, ಸಮಯಪ್ರಜ್ಞೆ ಮೆರೆದ ಕಂಡಕ್ಟರ್