Site icon Vistara News

ಸಿದ್ರಾಮಣ್ಣ, ಸಿದ್ರಾಮಣ್ಣ, ಸಿದ್ರಾಮಣ್ಣ ಎನ್ನುತ್ತಲೇ ವಾಗ್ದಾಳಿ ನಡೆಸಿದ ನಳಿನ್‍ಕುಮಾರ್ ಕಟೀಲ್‌

nalin kumar kateel

ಧಾರವಾಡ: ಇಂದಿರಾ ಗಾಂಧಿಯನ್ನು ಮೊದಲು ಬೈಯ್ಯುತ್ತಿದ್ದ ಸಿದ್ರಾಮಣ್ಣನವರು ಕೊನೆಗೆ ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದರು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಗುರುವಾರ ಟೀಕಿಸಿದ್ದಾರೆ.

‘ಜನಸಂಕಲ್ಪ ಯಾತ್ರೆ’ ಪ್ರಯುಕ್ತ ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕಟೀಲ್‌, ಯಡಿಯೂರಪ್ಪ ಅವರು ಹಾಗಲ್ಲ. ಅವರು ಈ ರಾಜ್ಯದಲ್ಲಿ ಮಾಡಿದಷ್ಟು ಪಾದಯಾತ್ರೆಗಳು, ಸೈಕಲ್ ಯಾತ್ರೆಗಳು ಮತ್ತು ಹೋರಾಟಗಳನ್ನು ಇಲ್ಲಿಯವರೆಗೆ ಯಾರೂ ಮಾಡಿಲ್ಲ. ಅದು ಯಾವ ನಾಯಕರಿಂದಲೂ ಸಾಧ್ಯವೂ ಇಲ್ಲ ಎಂದರು.

ಇವತ್ತಿನ ಸ್ಥಿತಿಗತಿಗಳನ್ನು ನೋಡಿದಾಗ ಕಾಂಗ್ರೆಸ್‌ನವರಿಗೆ ಕೇವಲ ಅರಳುಮರಳಲ್ಲ. ಸಿದ್ರಾಮಣ್ಣ ಅಧಿಕಾರ ಕಳೆದುಕೊಂಡು ಹುಚ್ಚರಾಗಿದ್ದಾರೆ. ಕಳೆದ 5 ವರ್ಷಗಳಲ್ಲಿ ಕೆಟ್ಟ ಕೆಟ್ಟ ಶಬ್ದದಿಂದ ಏಕವಚನದಿಂದ ಮಾತನಾಡಿ ದುರಹಂಕಾರ ತೋರುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಡಿ.ಕೆ. ಶಿವಕುಮಾರ್– ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವ ಭಯ ಅವರನ್ನು ಕಾಡುತ್ತಿದೆ. ಅಧಿಕಾರ ಕಳೆದುಕೊಂಡು ಹುಚ್ಚರಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದರು.

ಇದನ್ನೂ ಓದಿ | BJP ಜನಸ್ಪಂದನ | ಇದು ವ್ಯಕ್ತಿಯ ವೈಭವೀಕರಣವಲ್ಲ, ಆಸೆಯೆಂಬ ಬಿಸಿಲುಗುದುರೆ ಏಕೆ ಏರುವೆ? ಸಿದ್ದು ಕಾಲೆಳೆದ ಸುಧಾಕರ್‌

ರಾಹುಲ್ ಗಾಂಧಿ ಕೇವಲ ಸಂಸದರಷ್ಟೇ. ಅವರು ಕಾಂಗ್ರೆಸ್ ನಾಯಕರಿರಬಹುದು. ಮೋದಿಯವರು ಈ ದೇಶದ ಪ್ರಧಾನಮಂತ್ರಿ. ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದಾಗ ಅವರನ್ನು ಬಿಜೆಪಿ ಹಿರಿಯ ಮುಖಂಡ- ವಿರೋಧ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿಯವರು ಯಾವತ್ತೂ ಏಕವಚನದಿಂದ ಟೀಕಿಸಿರಲಿಲ್ಲ. ವಿರೋಧ ಪಕ್ಷಗಳ ಮಾದರಿ ನಡವಳಿಕೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಮಾದರಿ. ಸಿದ್ರಾಮಣ್ಣನ ವಿರುದ್ಧ ಯಡಿಯೂರಪ್ಪರವರು ಹೇಳಿದ್ದು ಸರಿ ಇದೆ ಎಂದು ಸಮರ್ಥಿಸಿದರು.

ಶಬ್ದಗಳ ಬಳಕೆ ಮಾಡುವುದನ್ನು ಸಿದ್ರಾಮಣ್ಣ ಕಲಿಯಲಿ. ಅವರು ಗೌರವಯುತವಾಗಿ ನಡೆದರೆ ಎಲ್ಲರೂ ಗೌರವದಿಂದ ನಡೆದುಕೊಳ್ಳುತ್ತಾರೆ. ಅವರು ಬೇಜವಾಬ್ದಾರಿಯಿಂದ ನಡೆದರೆ ಅನಿವಾರ್ಯವಾಗಿ ಬೇಜವಾಬ್ದಾರಿ ಉತ್ತರ ಕೊಡಬೇಕಾಗುತ್ತದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಸಿದ್ರಾಮಣ್ಣನನ್ನು ಕಂಡರೆ ನಮಗ್ಯಾಕೆ ಭಯ ಇರಬೇಕು? ಡಿಕೆಶಿ, ಪರಮೇಶ್ವರ್, ಖರ್ಗೆಗೆ ಭಯ ಇರಬೇಕು. ಅವರೆಲ್ಲರ ಭಯ ಇವರಿಗೆ, ಇವರ ಭಯ ಅವರಿಗೆ ಇದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಕಾಂಗ್ರೆಸ್ ಈಗ ಪಾದಯಾತ್ರೆ ಆರಂಭಿಸಿದೆ. ನಮ್ಮ ಪಕ್ಷ ಬೆಳೆದಿರುವುದೇ ಯಾತ್ರೆಯ ಮುಖಾಂತರ. ಸಿದ್ರಾಮಣ್ಣ ಯಾರ್ಯಾರದ್ದೋ ಕಾಲು ಹಿಡಿದು, ಭಿಕ್ಷೆ ಬೇಡಿ ಮುಖ್ಯಮಂತ್ರಿ ಆದವರು. ದೇವೇಗೌಡರ ಕಾಲಿಗೆ ಅಡ್ಡ ಬಿದ್ದು, ಬೆಳೆದವರು. ಮೊದಲು ಅವರ ಕಾಲಡಿಯಲ್ಲಿ ಕುಳಿತು ನಂತರ ಕಾಲಿನಲ್ಲಿ ತುಳಿದವರು ಎಂದು ಟೀಕಿಸಿದರು.

ಇದನ್ನೂ ಓದಿ | Ban politics | ಆರೆಸ್ಸೆಸ್ಸನ್ನಲ್ಲ ಮೊದಲು ಕಾಂಗ್ರೆಸನ್ನು ಬ್ಯಾನ್‌ ಮಾಡ್ಬೇಕು ಎಂದ ನಳಿನ್‌ ಕುಮಾರ್‌ ಕಟೀಲ್‌

Exit mobile version