Site icon Vistara News

Organ Donation | ಏರ್‌ಲಿಫ್ಟ್‌ ಮಾಡಿ ಹೃದಯ ರವಾನೆ; 9 ಅಂಗಾಂಗ ದಾನ, ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ

ಚಿಕ್ಕಮಗಳೂರು: ಬಸ್‌ನಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಸೋಮನಹಳ್ಳಿ ತಾಂಡಾದ ರಕ್ಷಿತಾ ನಾಯಕ್ ಅಂಗಾಂಗವನ್ನು (Organ Donation) ಗುರುವಾರ ವಿಶೇಷ ಹೆಲಿಕಾಪ್ಟರ್‌ ಮೂಲಕ ರವಾನಿಸಲಾಯಿತು. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವೈದ್ಯರ ತಂಡ ಅಂಗಾಂಗ ಶಸ್ತ್ರಚಿಕಿತ್ಸೆ ನಡೆಸಿದ್ದು, ಅಂಗಾಂಗಗಳನ್ನು ಬೆಂಗಳೂರಿಗೆ ರವಾನಿಸಲಾಯಿತು.

ಹೃದಯ, ಶ್ವಾಸಕೋಶ, ಕಿಡ್ನಿ, ಯಕೃತ್ತು, ಕಣ್ಣುಗಳು ಸೇರಿದಂತೆ ಒಟ್ಟು ೯ ಅಂಗಗಳನ್ನು ದಾನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಹೃದಯವನ್ನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗುತ್ತಿದ್ದರೆ, ಕಿಡ್ನಿಗಳನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ. ಕಣ್ಣುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಇರಿಸಿಕೊಳ್ಳಲಿದ್ದಾರೆ.

ಘಟನೆ ಏನು?

ಚಿಕ್ಕಮಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ‌ ಮೊದಲ ವರ್ಷದ ಬಿ.ಕಾಮ್ ಓದುತ್ತಿದ್ದ ರಕ್ಷಿತಾ ನಾಲ್ಕು ದಿನಗಳ ಹಿಂದೆ ಸಾರಿಗೆ ಬಸ್‌ನಿಂದ ಇಳಿಯುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು. ತಲೆಗೆ ಗಂಭೀರವಾಗಿ ಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದ ತಕ್ಷಣ ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ರಕ್ಷಿತಾಳ ಮೆದುಳು ನಿಷ್ಕ್ರಿಯವಾಗಿರುವುದಾಗಿ ಬುಧವಾರ ವೈದ್ಯರು ತಿಳಿಸಿದ್ದರು.

ಮಗಳ ಅಗಲಿಕೆಯ ದುಃಖದಲ್ಲೂ ತಾಯಿ ಲಕ್ಷ್ಮಿಬಾಯಿ, ತಂದೆ ಸುರೇಶ್ ನಾಯಕ್‌ರಿಂದ ಯುವತಿಯ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದರು. ಹೃದಯ, ಎರಡು ಕಿಡ್ನಿ, ಎರಡು ಕಣ್ಣುಗಳು, ಎರಡು ಶ್ವಾಸಕೋಶ ಸೇರಿ ಒಟ್ಟು ಒಂಬತ್ತು ಮಂದಿಗೆ ರಕ್ಷಿತಾಳ ಅಂಗಾಂಗಗಳನ್ನು ಜೋಡಿಸಲಾಗುತ್ತಿದೆ. ಸಾರಿಗೆ ಬಸ್‌ ಚಲಿಸುವಾಗ ನಿರ್ವಾಹಕನ ನಿರ್ಲಕ್ಷ್ಯದಿಂದ ಯುವತಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಇದನ್ನೂ ಓದಿ | ಬಸ್‌ನಿಂದ ಬಿದ್ದು ಮೆದುಳು ನಿಷ್ಕ್ರಿಯ; ಅಂಗಾಂಗ ದಾನದೊಂದಿಗೆ ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ

Exit mobile version