Site icon Vistara News

Hubballi News: ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು; ಚಾಕು ಇರಿದು ದೇಗುಲದ ಪೂಜಾರಿಯ ಕೊಲೆ

Hubballi News

Temple Priest Killed In Hubballi; Police Start Investigation

ಹುಬ್ಬಳ್ಳಿ: ಯುವತಿ ನೇಹಾ ಹಿರೇಮಠ (Neha Hiremath) ಕೊಲೆಯ ಬಳಿಕ ದೇಶಾದ್ಯಂತ ಸುದ್ದಿಯಾಗಿದ್ದ ಹುಬ್ಬಳ್ಳಿಯಲ್ಲೀಗ (Hubballi News) ಮತ್ತೆ ನೆತ್ತರು ಹರಿದಿದೆ. ಹುಬ್ಬಳ್ಳಿಯ ಈಶ್ವರ ನಗರದಲ್ಲಿರುವ ದೇವಾಲಯದ ಪೂಜಾರಿ ಆಗಿದ್ದ ದೇವೇಂದ್ರಪ್ಪ ಹೊನ್ನಳ್ಳಿ (Devendrappa Honnalli) ಎಂಬುವರನ್ನು ದುಷ್ಕರ್ಮಿಯೊಬ್ಬ ಭಾನುವಾರ (ಜುಲೈ 21) ಸಂಜೆ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ನಡೆಸಿದ್ದಾನೆ. ಈಶ್ವರಿ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ.

ದೇವೇಂದ್ರಪ್ಪ ಹೊನ್ನಳ್ಳಿ ಅವರು ಈಶ್ವರ ನಗರದ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜಾರಿಯಾಗಿದ್ದರು. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. “ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಒಬ್ಬ ವ್ಯಕ್ತಿ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

“ಆರೋಪಿಯ ಬಂಧನಕ್ಕೆ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುತ್ತದೆ. ಚಾಕುವಿನಿಂದ ಇರಿದು ಆರೋಪಿಯು ಪರಾರಿಯಾಗಿದ್ದಾನೆ. ಇದಕ್ಕೂ ಮೊದಲು ಕೂಡ ದೇವೇಂದ್ರಪ್ಪ ಮೇಲೆ ಹಲ್ಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ” ಎಂಬುದಾಗಿ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಅವರು ತಿಳಿಸಿದ್ದಾರೆ.

ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ

ಕೆಲ ದಿನಗಳ ಹಿಂದಷ್ಟೇ, ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ‌ ನಡೆಸಿ ಯುವಕನೊಬ್ಬನ ಕೊಲೆ ಮಾಡಲಾಗಿತ್ತು. ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ನೇಪಾಳಿ ಮೂಲದ ಬಾಲಾಜಿ ಮೃತ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಬಾಲಾಜಿ ಸ್ನೇಹಿತರೊಂದಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ. ಬಳಿಕ ಕುಡಿದ ಅಮಲಿನಲ್ಲಿ ಕ್ಯಾತೆ ತೆಗೆದು ಸ್ನೇಹಿತರೊಟ್ಟಿಗೆ ಜಗಳ ಶುರು ಮಾಡಿದ್ದ. ಜಗಳವು ವಿಕೋಪಕ್ಕೆ ತಿರುಗಿದ್ದು, ಬಾಲಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಮಾಡಲಾಗಿತ್ತು.

ಕೋಣನಕುಂಟೆ ಸಮುದಾಯ ಭವನ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೋಣನಕುಂಟೆ ಪೊಲೀಸರು ಹಾಗೂ ಡಿಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಕೋರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: Director Arrest: ಕೊಲೆ ಕೇಸ್​​ನಲ್ಲಿ 20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಸ್ಯಾಂಡಲ್​ವುಡ್ ನಿರ್ದೇಶಕ ಅರೆಸ್ಟ್​!

Exit mobile version