Site icon Vistara News

ವಿಸ್ತಾರ TOP 10 NEWS |ಚಾಮರಾಜಪೇಟೆಯಲ್ಲಿ ಯಥಾಸ್ಥಿತಿಯಿಂದ ಜಾರ್ಖಂಡ್‌ CM ಬದಲಾವಣೆವರೆಗಿನ ಪ್ರಮುಖ ಸುದ್ದಿಗಳಿವು

5G service, assembly session karnataka, Bommai Chief minister, chamarajapet, chamarajpet ground, Explainer, Hemant Soren, Kannada and culture department, karnataka, latest, Siddaramaiah, siddaramayya, tumakuru accident, tumkur accident, WhatsApp New Update

ಬೆಂಗಳೂರು: ಅನೇಕ ದಿನಗಳಿಂದ ವಿವಾದದ ಕೇಂದ್ರಬಿಂದುವಾಗಿ ಇತ್ತೀಚೆಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಂತಿಯುತವಾಗಿ ಆಚರಿಸಲಾಗಿರುವ ಚಾಮರಾಜಪೇಟೆ ಮೈದಾನದ ಕುರಿತು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ. ಸರ್ಕಾರ ಹಾಗೂ ಪ್ರತಿಪಕ್ಷದ ನಡುವಿನ ಅನೇಕ ಹಗ್ಗಜಗ್ಗಾಟದ ನಡುವೆಯೇ ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ. ಕಲ್ಲು ಗಣಿಗಾರಿಕೆ ಗುತ್ತಿಗೆ ಪ್ರಕರಣದಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ (Hemant Soren) ಅವರ ತಲೆದಂಡವಾಗಿದೆ. ವೈಯಕ್ತಿಕ ಮೆಸೇಜಿಂಗ್‌ ಪ್ಲಾಟ್‌ಫಾರಂ ವಾಟ್ಸ್‌ಆ್ಯಪ್ ಹೊಸ ಫೀಚರ್‌ಗಳನ್ನು ಪರಿಚಯಿಸಿದೆ ಎನ್ನುವುದು ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಚಾಮರಾಜಪೇಟೆ ಮೈದಾನದ ಯಥಾಸ್ಥಿತಿ ಕಾಪಾಡಲು ಹೈಕೋರ್ಟ್‌ ಆದೇಶ, ಗಣೇಶೋತ್ಸವಕ್ಕೂ ಅವಕಾಶ ಇಲ್ಲ?
ಬೆಂಗಳೂರಿನ ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ರಾಜ್ಯ ಹೈಕೋರ್ಟ್‌ ಮೌಖಿಕ ಆದೇಶ ನೀಡಿದೆ. ಹೀಗಾಗಿ ಈ ಬಾರಿ ಗಣೇಶೋತ್ಸವಕ್ಕೆ ಅವಕಾಶ ಸಿಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಮೈದಾನವನ್ನು ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಿಸಿದ ಬಿಬಿಎಂಪಿ ಜಂಟಿ ಆಯುಕ್ತರ ಆದೇಶವನ್ನು ಪ್ರಶ್ನಿಸಿ ವಕ್ಫ್‌ ಬೋರ್ಡ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌ ಈ ಮಹತ್ವದ ಸೂಚನೆಯನ್ನು ನೀಡಿದೆ.
ಹೈಕೋರ್ಟ್‌ ಆದೇಶದ ಪ್ರಕಾರ ಸದ್ಯಕ್ಕೆ ವರ್ಷಕ್ಕೆ ಎರಡು ಬಾರಿ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಗೆ ಮತ್ತು ಆಟದ ಮೈದಾನವಾಗಿ ಬಳಸಬಹುದು. ರಾಷ್ಟ್ರ ಧ್ವಜಾರೋಹಣಕ್ಕೆ ಯಾವುದೇ ಅನುಮತಿ ಬೇಕಾಗಿಲ್ಲ. ಆದರೆ, ಇದನ್ನು ಉಳಿದು ಬೇರೆ ಯಾವ ಉದ್ದೇಶಕ್ಕೂ ಬಳಸದೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕಾಗಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. ಬೆಂಗಳೂರಿನಲ್ಲೇ ವಿಧಾನ ಮಂಡಲ ಅಧಿವೇಶನ, 40% ಕಮಿಷನ್‌, ಮೊಟ್ಟೆ, ಸಾವರ್ಕರ್‌ ಫೈಟ್‌ ಸಾಧ್ಯತೆ
ವಿಧಾನಮಂಡಲ ಅಧಿವೇಶನವನ್ನು ಈ ಬಾರಿ ಬೆಂಗಳೂರಿನಲ್ಲೇ ಸೆ.12ರಿಂದ ಆಯೋಜಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸಚಿವ ಜೆ.ಸಿ. ಮಾಧುಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದು, ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಹತ್ತು ದಿನ ಅಧಿವೇಶನ ನಡೆಯುತ್ತದೆ ಎಂದಿದ್ದಾರೆ. ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವ ಕುರಿತೂ ಚರ್ಚೆಗಳಾಗಿದ್ದು, ಅಂತಿಮವಾಗಿ ಬೆಂಗಳೂರಿನಲ್ಲೇ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಧಿವೇಶನದಲ್ಲಿ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ಹಗ್ಗಜಗ್ಗಾಟಕ್ಕೆ ಸಾವರ್ಕರ್‌ ವಿಚಾರ, ಮೊಟ್ಟೆ ವಿವಾದ, 40% ಆರೋಪದಂತಹ ಮೂರ್ನಾಲ್ಕು ವಿಚಾರಗಳು ಕೋಲಾಹಲ ಎಬ್ಬಿಸುವ ಸಾಧ್ಯತೆಯಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. Hemant Soren | ಜಾರ್ಖಂಡ್‌ ಸಿಎಂ ತಲೆದಂಡ, ಹೇಮಂತ್‌ ಸೊರೆನ್‌ ಪತ್ನಿಯೇ ಮುಂದಿನ ಮುಖ್ಯಮಂತ್ರಿ?
ಕಲ್ಲು ಗಣಿಗಾರಿಕೆ ಗುತ್ತಿಗೆ ಪ್ರಕರಣದಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ (Hemant Soren) ಅವರ ತಲೆದಂಡವಾಗಿದೆ. ಅವರನ್ನು ಅನರ್ಹಗೊಳಿಸಬೇಕು ಎಂದು ಚುನಾವಣೆ ಆಯೋಗವು ಶಿಫಾರಸು ಮಾಡಿದ ಬೆನ್ನಲ್ಲೇ ಅನರ್ಹಗೊಳಿಸಲು ರಾಜ್ಯಪಾಲರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಹೇಮಂತ್‌ ಸೊರೆನ್‌ ಅವರು ಹುದ್ದೆಯಿಂದ ಕೆಳಗಿಳಿದ ಬಳಿಕ ಅವರ ಪತ್ನಿ ಕಲ್ಪನಾ ಸೊರೆನ್‌ ಅವರು ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. Tumkur accident | ಶಿರಾ ಬಳಿ ಭೀಕರ ರಸ್ತೆ ಅಪಘಾತ, 10 ಕಾರ್ಮಿಕರ ಸಾವು
ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ಗುರುವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದೆ. ಲಾರಿ ಮತ್ತು ಕ್ರೂಸರ್ ನಡುವೆ ಡಿಕ್ಕಿ ಸಂಭವಿಸಿದ್ದು, ೧೦ ಮಂದಿ ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟಿದ್ದ ೧೦ ಜನರಲ್ಲಿ ಆರು ಮಂದಿಯ ನೇತ್ರದಾನಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದು, ಸಾವಿನ ದುಃಖದಲ್ಲಿಯೂ ಕುಟುಂಬದವರು ಸಾರ್ಥಕತೆ (Tumkur Accident) ಮೆರೆದಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. ಸಿದ್ದರಾಮಯ್ಯ ಕಣ್ಣಿಗೆ ಎಣ್ಣೆ ಬಿಟ್ಕೊಂಡಿದ್ರ?: 40% ಆರೋಪದ ಕುರಿತು ಸಿಎಂ ಬೊಮ್ಮಾಯಿ ಆಕ್ರೋಶ
ರಾಜ್ಯ ಸರ್ಕಾರದಲ್ಲಿ ಕಾಮಗಾರಿಗಳಿಗಾಗಿ 40% ಕಮಿಷನ್‌ ಪಡೆಯಲಾಗುತ್ತಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಇಷ್ಟು ದಿನ ಸಿದ್ದರಾಮಯ್ಯ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಿದ್ದರಾ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆಯೂ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹಾಗಾದರೆ ಇಷ್ಟು ದಿನ ಅವರು ಏಕೆ ಸುಮ್ಮನಿದ್ದರು? ಸುಮ್ಮನೆ ರಾಜಕೀಯಕ್ಕಾಗಿ ಹೇಳಿಕೆ ನೀಡಬಾರದು ಎಂದಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲ ಟ್ರಸ್ಟ್‌ಗಳ ನೇಮಕ ಆದೇಶ ಒಂದೇ ದಿನಕ್ಕೆ ರದ್ದು!
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ 21 ಟ್ರಸ್ಟ್‌ಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿದ್ದ ಆದೇಶವನ್ನು ಒಂದು ದಿನದೊಳಗೇ ರಾಜ್ಯ ಸರ್ಕಾರ ರದ್ದುಪಡಿಸಿದೆ. 21 ಟ್ರಸ್ಟ್‌ಗಳಿಗೆ ತಲಾ ಒಬ್ಬರು ಅಧ್ಯಕ್ಷರು, ಒಟ್ಟು 147 ಸದಸ್ಯರು, ತಲಾ ಒಬ್ಬರು ಸದಸ್ಯ ಕಾರ್ಯದರ್ಶಿಯನ್ನು ನೇಮಕ ಮಾಡಿ ಬುಧವಾರ ಆದೇಶ ಹೊರಡಿಸಲಾಗಿತ್ತು. ಪ್ರಮುಖವಾಗಿ ಇದರಲ್ಲಿ ಪೂರ್ಣಚಂದ್ರ ತೇಜಸ್ವಿ ಟ್ರಸ್ಟ್‌ಗೆ ದಿವಂಗತ ರಾಜೇಶ್ವರಿ ಅವರನ್ನು ನೇಮಕ ಮಾಡಿದ್ದು ಸರ್ಕಾರಕ್ಕೆ ಇರಸುಮುರಸು ಉಂಟುಮಾಡಿತ್ತು. ಗಳಗನಾಥ ಮತ್ತು ರಾಜಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷರಾಗಿ ನೇಮಕ ಮಾಡಿದ್ದನ್ನು ಚಕ್ರವರ್ತಿ ಸೂಲಿಬೆಲೆ ತಿರಸ್ಕರಿಸಿದ್ದರು. ಅದೇ ರೀತಿ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನರೇಂದ್ರ ರೈ ದೇರ್ಲ ನಿರಾಕರಿಸಿದ್ದರು. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. 5G services | ದೇಶದಲ್ಲಿ ಅಕ್ಟೋಬರ್​ 12ರೊಳಗೇ ಶುರುವಾಗಲಿದೆ 5ಜಿ ಸೇವೆ; ಕೇಂದ್ರ ಸಚಿವರಿಂದ ಮಹತ್ವದ ಘೋಷಣೆ
ದೇಶದಲ್ಲಿ 5ಜಿ ನೆಟ್ವರ್ಕ್​ ಸೇವೆ (5G Services) ಶೀಘ್ರವೇ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದ್ದರೂ ಯಾವಾಗಿನಿಂದ ಶುರು ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ. ಹೀಗಿರುವಾಗ ಇಂದು ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಅಶ್ವಿನಿ ವೈಷ್ಣವ್​ ಅವರು ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಭಾರತದಲ್ಲಿ 5ಜಿ ಅಂತರ್ಜಾಲ ಸೇವೆಯನ್ನು ಆದಷ್ಟು ಕ್ಷಿಪ್ರವಾಗಿ ಅಂದರೆ ಅಕ್ಟೋಬರ್​ 12ರೊಳಗೇ ಪ್ರಾರಂಭಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. WhatsApp New Feature: ವಾಟ್ಸ್‌ಆ್ಯಪ್ ಗ್ರೂಪ್‌ನೊಳಗೇ ಮತ್ತೆ ಗ್ರೂಪ್ಸ್ ಮಾಡಿ!
ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಹೊಸ ಫೀಚರ್ಸ್ ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ಮೆಟಾ ಒಡೆತನದ ವಾಟ್ಸ್‌ಆ್ಯಪ್ ಯಾವಾಗಲೂ ಮುಂದಿರುತ್ತದೆ. ವಾಟ್ಸ್‌ಆ್ಯಪ್ ಮಾಲೀಕ ಮಾರ್ಕ್‌ ಜುಕರ್‌ಬರ್ಗ್ ಅವರು ಈ ವರ್ಷದ ಆರಂಭದಲ್ಲಿ ಘೋಷಣೆಯೊಂದನ್ನು ಮಾಡಿ, ವಾಟ್ಸ್‌ಆ್ಯಪ್ ಗ್ರೂಪ್‌ನೊಳಗೇ ಮತ್ತೆ ಚಿಕ್ಕ ಗ್ರೂಪ್‌ ಮಾಡಲು ಅನುಕೂಲವಾಗುವ ಫೀಚರ್ಸ್ ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಘೋಷಣೆ ಮಾಡಿ ಕೆಲವಾರು ತಿಂಗಳ ಬಳಿಕ ಅದೀಗ ನಿಜವಾಗುತ್ತಿದೆ. ಈ ಹೊಸ ವಾಟ್ಸ್‌ಆ್ಯಪ್ ಫೀಚರ್ (WhatsApp New Feature) ಇದೀಗ ಬೀಟಾ ಬಳಕೆದಾರರಿಗೆ ಲಭ್ಯವಾಗಿದೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. Asia Cup- 2022 | ಎಲ್ಲೆಲ್ಲಿ ನಡೆಯುತ್ತವೆ ಏಷ್ಯಾ ಕಪ್ ಪಂದ್ಯಗಳು, ವೇಳಾಪಟ್ಟಿ ಇಂತಿದೆ
ಏಷ್ಯಾ ಖಂಡದ ಆರು ಕ್ರಿಕೆಟ್‌ ದೇಶಗಳ ನಡುವೆ ನಡೆಯಲಿರುವ Asia Cup- 2022 ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಟಿ೨೦ ಮಾದರಿಯಲ್ಲಿ ನಡೆಯುವ ಹಾಲಿ ಆವೃತ್ತಿಯ ಏಷ್ಯಾ ಕಪ್‌ ಪಂದ್ಯಗಳು ಯುಎಇನ ಎರಡು ಸ್ಟೇಡಿಯಮ್‌ಗಳಲ್ಲಿ ನಡೆಯಲಿವೆ. ಅರ್ಹತಾ ಸುತ್ತಿನ ಪಂದ್ಯಗಳು ಒಮನ್‌ನಲ್ಲಿ ನಡೆದಿದ್ದು, ಪ್ರಮುಖ ಪಂದ್ಯಗಳು ಆಗಸ್ಟ್‌ ೨೮ರಂದು ಆರಂಭವಾಗಲಿದೆ. ಈ ಬಾರಿಯ ಟೂರ್ನಿಯ ಕುರಿತು ಮಾಹಿತಿ ಇಲ್ಲಿದೆ.

10. ವಿಸ್ತಾರ Explainer | ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ; ನೈಜ ಕಥೆಯೇನು?
ಬಿಲ್ಕಿಸ್​ ಬಾನೊ ಅತ್ಯಾಚಾರ ಪ್ರಕರಣದ (Bilkis Bano Case) 11 ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್​ ಇಂದು ವಿಚಾರಣೆ ಮಾಡಿದೆ. ಪ್ರತಿಕ್ರಿಯೆ ನೀಡುವಂತೆ ಗುಜರಾತ್​ ಸರ್ಕಾರಕ್ಕೆ ನೋಟಿಸ್​ ಕೂಡ ನೀಡಿದೆ. ಈ ಅತ್ಯಾಚಾರ ಆರೋಪಿಗಳನ್ನು ಬಿಟ್ಟಿದ್ದು ತಪ್ಪು, ಇವರನ್ನೆಲ್ಲ ಮತ್ತೊಮ್ಮೆ ಜೈಲಿಗೆ ಕಳಿಸಿ ಎಂಬ ಅಗ್ರಹ ಬಲವಾಗಿ ಕೇಳಿಬರುತ್ತಿದೆ. ಸದ್ಯದ ಮಟ್ಟಿಗೆ ದೇಶದಲ್ಲಿ ಪ್ರಚಲಿತ ವಿಷಯ ಬಿಲ್ಕಿಸ್​ ಬಾನೊ ರೇಪ್​ ಕೇಸ್​ ಆರೋಪಿಗಳನ್ನು ಬಿಡುಗಡೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ. 15 ವರ್ಷಗಳ ಹಿಂದಿನ ಕೇಸ್​ ಇದೀಗ ಮತ್ತೆ ದೊಡ್ಡ ಮಟ್ಟದಲ್ಲಿ ಸುದ್ದಿ-ಸದ್ದು ಮಾಡುತ್ತಿರುವುದೇಕೆ? 2002ರಲ್ಲಿ ಏನಾಗಿತ್ತು? ಎಂಬ ಬಗ್ಗೆ ಸಮಗ್ರ ವಿವರಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ.

ದಿನದ ಇನ್ನಷ್ಟು ಪ್ರಮುಖ ಸುದ್ದಿಗಳು
Raja Singh Row | ಹೈದರಾಬಾದ್‌ನಲ್ಲಿ ಪ್ರತಿಭಟನೆ ಬೆನ್ನಲ್ಲೇ ಶಾಸಕ ರಾಜಾ ಸಿಂಗ್‌ ಮರು ಬಂಧನ
Delhi Politics | ದೆಹಲಿ ಸರಕಾರ ಉರುಳಿಸಲು ಬಿಜೆಪಿ 800 ಕೋಟಿ ರೂ. ಮೀಸಲಿಟ್ಟಿದೆ ಎಂದ ಕೇಜ್ರಿವಾಲ್‌
Liger Movie | ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಕ್ಲೈಮ್ಯಾಕ್ಸ್‌: ಷರಾ ಬರೆದ ಟ್ವಿಟ್ಟಿಗರು!

Exit mobile version