Site icon Vistara News

ವಿಸ್ತಾರ TOP 10 NEWS | ರಾಜ್ಯದಲ್ಲಿ ಮಳೆ ಹಾವಳಿಯಿಂದ ದೀಪಾವಳಿಗೆ ರಿಲಯನ್ಸ್‌ 5Gವರೆಗಿನ ಪ್ರಮುಖ ಸುದ್ದಿಗಳಿವು

Baraguru Ramachandrappa, BJP Karnataka, Congress, heavy rains, Hijab Controversy, karnataka, latest, milk price, murugha mutt case, Reliance AGM, reliance industries, Surjewala

ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆ ಅವಾಂತರ ಮುಂದುವರಿದಿದ್ದು, ಪ್ರಮುಖವಾಗಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಆಸುಪಾಸಿನ ಜನಜೀವನ, ಕೃಷಿಕರ ಪಾಡು ಹೇಳತೀರದಾಗಿದೆ. ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚಿತ್ರದುರ್ಗದ ಮುರುಘಾಶ್ರೀಗಳು ತಮ್ಮ ಮೇಲಿನ ಆರೋಪದ ನಂತರ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ, ದೀಪಾವಳಿಗೆ 5G ಸೇವೆಗಳನ್ನು ಆರಂಭಿಸುವುದಾಗಿ ರಿಲಯನ್ಸ್‌ ಘೋಷಿಸಿದೆ, ನಂದಿನಿ ಹಾಲಿನ ದರದಲ್ಲಿ ಏರಿಕೆಯಾಗುವ ಸಂಭವವಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ದಿಢೀರ್‌ ಮಳೆಗೆ ತತ್ತರಿಸಿದ ಅನೇಕ ಜಿಲ್ಲೆಗಳು, ರಸ್ತೆ ಹದಗೆಟ್ಟು ಹೆಲಿಕಾಪ್ಟರ್‌ನಲ್ಲಿ ತೆರಳಿದ ಸಿಎಂ
ಚಾಮರಾಜನಗರ, ಮೈಸೂರು, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರದಿಂದ ಹುಬ್ಬಳ್ಳಿ, ಹಾವೇರಿಯಲ್ಲೂ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖವಾಗಿ ರಾಮನಗರ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು, ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ಬೆಳಗುಂಬ ಅಂಡರ್‌ಪಾಸ್‌ನಲ್ಲಿ ನಿಂತ ನೀರಿನಲ್ಲಿ ಸೋಮವಾರ ಮುಂಜಾನೆ ಖಾಸಗಿ ಬಸ್‌ಗಳು ಹಾಗೂ ಕಾರುಗಳು ಸಿಲುಕಿಕೊಂಡಿದ್ದವು. ರಾಮನಗರದಲ್ಲಿ ಮಳೆಹಾನಿ ವೀಕ್ಷಣೆಗೆ ಸಿಎಂ ಬೊಮ್ಮಾಯಿ ಹೆಲಿಕಾಪ್ಟರ್‌ನಲ್ಲಿ ತೆರಳಿದರು.
ರಾಜ್ಯದ ವಿವಿಧೆಡೆ ಮಳೆ ಅವಾಂತರ (ಪೂರ್ಣ ಓದಲು ಲಿಂಕ್‌ ಮೇಲೆ ಕ್ಲಿಕ್‌ ಮಾಡಿ)
☔ಬೆಂಗಳೂರು-ಮೈಸೂರು ಹೆದ್ದಾರಿ ಕಾಲುವೆಗಳು ಮುಚ್ಚಿದ್ದಕ್ಕೆ ಪ್ರವಾಹ; ಸಿಎಂ ಬೊಮ್ಮಾಯಿ
ಏಕಾಏಕಿ ಉಕ್ಕೇರಿದ ಬೆಣ್ಣೆಹಳ್ಳ, ಸಿಲುಕಿಕೊಂಡ 25ಕ್ಕೂ ಅಧಿಕ ಮಂದಿ ರಕ್ಷಣೆ, ನೀರುಪಾಲಾದವನಿಗಾಗಿ ಶೋಧ
ರಭಸವಾಗಿ ಹರಿಯುತ್ತಿರುವ ಅರ್ಕಾವತಿ ನದಿಯಲ್ಲಿ ಕೊಚ್ಚಿ ಹೋದ ಹಸು!
ಚಾಮರಾಜನಗರದಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು; ಹೊಳೆ ಮಧ್ಯೆಯೇ ಊಟ!
ಮಳೆ ಅವಾಂತರದ ಮಾಹಿತಿ ಪಡೆದ ಸಿಎಂ, ರಾಮನಗರಕ್ಕೆ ಹೆಲಿಕಾಪ್ಟರ್‌ ಮೂಲಕ ಹೋಗಲು ನಿರ್ಧಾರ
ತಿ.ನರಸೀಪುರದಲ್ಲಿ ಧಾರಾಕಾರ ಮಳೆ: ಮನೆ ಕುಸಿತ
ಚಿಕ್ಕಬಳ್ಳಾಪುರದಲ್ಲಿ ಮಳೆ‌ ನೀರಿಗೆ ಕೊಚ್ಚಿ ಹೋದ ಟ್ರ್ಯಾಕ್ಟರ್- ಬೈಕ್‌ಗಳು
ಚಲಿಸುತ್ತಿದ್ದ ಕಾರಿಗೆ ಬೃಹತ್‌ ಮರ ಬಿದ್ದು ರಾಮನಗರದಲ್ಲಿ ವ್ಯಕ್ತಿ ಸಾವು

2. ಮುರುಘಾಶ್ರೀ ಪ್ರಕರಣ | ಆರೋಪದ ನಂತರ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ ಸ್ವಾಮೀಜಿ
ಇಬ್ಬರು ಬಾಲಕಿಯರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಕುರಿತು ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿ ಇದೇ ಮೊದಲ ಬಾರಿಗೆ ಬಹಿರಂಗ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧ ಹದಿನೈದು ವರ್ಷದಿಂದ ಇಂತಹ ಪಿತೂರಿ ನಡೆಯುತ್ತಿದೆ ಎಂದಿರುವ ಸ್ವಾಮೀಜಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹದಿನೈದು ವರ್ಷದಿಂದ ಇದು ನಡೆದೇ ಬಂದಿದೆ. ಇಲ್ಲಿಯವರೆಗೆ ಇಂತಹ ಪಿತೂರಿಗಳು ಒಳಗೇ ನಡೆಯುತ್ತಿದ್ದವು. ಈಗ ಹೊರಗೆ ನಡೆಯುತ್ತಿವೆ. ಯಾವುದಾದರೂ ಒಂದು ಹಂತದಲ್ಲಿ ಅಂತಿಮ ಹಂತಕ್ಕೆ ಇದನ್ನು ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಇರಬೇಕು ಎಂದಿದ್ದಾರೆ. ಶ್ರೀಗಳ ಪರವಾಗಿ ನಿರೀಕ್ಷಣಾ ಜಾಮೀನಿಗೆ ಅರ್ಜಿ, ನಡೆಯದ ತುರ್ತು ವಿಚಾರಣೆ, ಸೆ. 1ಕ್ಕೆ ಮುಂದೂಡಿಕೆಯಾಗಿದೆ. ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಬಿಜೆಪಿ ಸಂಸದ ಲೆಹರ್‌ ಸಿಂಗ್ ಸಲಹೆ ನೀಡಿದ್ದಾರೆ.

3. Reliance AGM | ರಿಲಯನ್ಸ್‌ ಇಂಡಸ್ಟ್ರೀಸ್‌ನಿಂದ ದೀಪಾವಳಿಗೆ 5G ಸೇವೆ ಆರಂಭ
ರಿಲಯನ್ಸ್‌ ಇಂಡಸ್ಟ್ರೀಸ್‌ ತನ್ನ ೫ಜಿ ಸೇವೆಯನ್ನು ಮುಂಬರುವ ದೀಪಾವಳಿಗೆ ಆರಂಭಿಸಲಿದೆ ( Reliance AGM) ಎಂದು ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ಸೋಮವಾರ ತಿಳಿಸಿದ್ದಾರೆ. ದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತಾದಲ್ಲಿ ದೀಪಾವಳಿಗೆ ಜಿಯೊ (ಅಕ್ಟೋಬರ್ 24)‌ ೫ಜಿ ಸೇವೆ ಆರಂಭವಾಗಲಿದೆ. ೨೦೨೩ರ ಡಿಸೆಂಬರ್‌ ವೇಳೆಗೆ ದೇಶದ ಎಲ್ಲ ತಾಲ್ಲೂಕುಗಳಲ್ಲಿ ರಿಲಯನ್ಸ್‌ ೫ಜಿ ಸೇವೆ ಸಿಗಲಿದೆ ಎಂದು ಮುಕೇಶ್‌ ಅಂಬಾನಿ ತಿಳಿಸಿದರು.
ಸಮೂಹದ ೪೫ನೇ ವಾರ್ಷಿಕ ಮಹಾ ಸಭೆಯಲ್ಲಿ (Reliance AGM) ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು ಸೋಮವಾರ ಈ ಘೋಷಣೆ ಮಾಡಿದ್ದಾರೆ. ಮಧ್ಯಾಹ್ನ ವಿಡಿಯೊ ಕಾನ್ಫರೆನ್ಸ್‌ ಮೂಲಕ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ ಮುಕೇಶ್‌ ಅಂಬಾನಿ ಅವರು, ೫ಜಿ ಸೇವೆಯ ವಿವರಗಳನ್ನು ನೀಡಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Reliance AGM | ದಿನಬಳಕೆ ವಸ್ತುಗಳ ಬಿಸಿನೆಸ್‌ಗೂ ರಿಲಯನ್ಸ್‌ ಭರ್ಜರಿ ಎಂಟ್ರಿ!
ರಿಲಯನ್ಸ್‌ ಇಂಡಸ್ಟ್ರೀಸ್‌ ಈ ವರ್ಷ ಎಫ್‌ಎಂಸಿಜಿ ( Fast-moving consumer business) ವಲಯದಲ್ಲಿ ವಹಿವಾಟು ಆರಂಭಿಸಲಿದೆ ಎಂದು ರಿಲಯನ್ಸ್‌ ರಿಟೇಲ್‌ ವೆಂಚರ್ಸ್‌ನ ನಿರ್ದೇಶಕಿ ಇಶಾ ಅಂಬಾನಿ ಘೋಷಿಸಿದ್ದಾರೆ. ಇದರೊಂದಿಗೆ ರಿಲಯನ್ಸ್‌ ರಿಟೇಲ್‌ ಎಫ್‌ಎಂಸಿಜಿ ಕ್ಷೇತ್ರದ ದಿಗ್ಗಜಗಳಾದ ಹಿಂದುಸ್ತಾನ್‌ ಯುನಿಲಿವರ್‌, ನೆಸ್ಲೆ ಮತ್ತು ಬ್ರಿಟಾನಿಯಾಗೆ ಪೈಪೋಟಿ ನೀಡಲಿದೆ. ” ಈ ವರ್ಷ ನಾವು ಎಫ್‌ಎಂಸಿಜಿ ಬಿಸಿನೆಸ್‌ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದೇವೆ. ಭಾರತೀಯರು ದಿನ ನಿತ್ಯ ಬಳಸುವ ಅನೇಕ ಉತ್ಪನ್ನಗಳನ್ನು ಕೈಗೆಟಕುವ ದರದಲ್ಲಿ ಒದಗಿಸಲು ಸಿದ್ಧರಾಗಿದ್ದೇವೆʼʼ ಎಂದು ಇಶಾ ಅಂಬಾನಿ ಅವರು ಗ್ರೂಪ್‌ನ ೪೫ನೇ ಎಜಿಎಂನಲ್ಲಿ ತಿಳಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Jio Air Fiber | ಫೈಬರ್‌ ಇಂಟರ್‌ನೆಟ್‌ ವೇಗದ ಅಂತರ್ಜಾಲ ಒದಗಿಸುವ ಜಿಯೋ ಹಾಟ್‌ಸ್ಪಾಟ್‌, ಏನಿದು ಹೊಸ ಸೇವೆ?
ದೇಶದಲ್ಲಿ ಇಂಟರ್‌ನೆಟ್‌ ಕ್ರಾಂತಿಗೆ ಕಾರಣವಾದ ರಿಲಯನ್ಸ್‌ ಜಿಯೋ ಈಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ಫೈಬರ್‌ ಆಪ್ಟಿಕ್‌ ಇಂಟರ್‌ನೆಟ್‌ (Fiber Internet) ವೇಗದಲ್ಲಿಯೇ ಅಂತರ್ಜಾಲ ಒದಗಿಸುವ ವೈಫೈ ಹಾಟ್‌ಸ್ಪಾಟ್‌ “ಜಿಯೋ ಏರ್‌ ಫೈಬರ್‌” (Jio Air Fiber) ಎಂಬ ಹೊಸ ಸೇವೆ ಘೋಷಣೆ ಮಾಡಿದೆ.
ಜಿಯೋ ಚೇರ್ಮನ್‌ ಆಕಾಶ್‌ ಅಂಬಾನಿ ಅವರು ಹೊಸ ಯೋಜನೆ ಘೋಷಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. BJPಯಿಂದ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ 6 ರ‍್ಯಾಲಿ: ಪಕ್ಷದ ಕಾರ್ಯಕ್ರಮ ಘೋಷಿಸಿದ ಸಿಎಂ ಬೊಮ್ಮಾಯಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆ ಮೇರೆಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಪಕ್ಷದ ಸಂಘಟನೆ, ಪ್ರವಾಸ, ಜನಸಂಪರ್ಕದ ಬಗ್ಗೆ ಚರ್ಚೆ ಮಾಡಲಾಗಿದ್ದು, ಆರು ಕಡೆ ದೊಡ್ಡ ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಾಜಿ ಮುಖ್ಯ ಮಂತ್ರಿ ಹಾಗೂ ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ವಿಸ್ತಾರ Exclusive | ಪಾರ್ಟಿ ಫಸ್ಟ್‌: ಸಿದ್ದು, ಡಿಕೆಶಿ ಗುಂಪುಗಾರಿಕೆಗೆ ಸುರ್ಜೆವಾಲ ಖಡಕ್‌ ವಾರ್ನಿಂಗ್‌
ರಾಜ್ಯ ಕಾಂಗ್ರೆಸ್‌ ಪಕ್ಷದಲ್ಲಿ ಗುಂಪುಗಾರಿಕೆ, ಪಕ್ಷದ ಸೂಚನೆಗಳಿಗೆ ನಿರುತ್ಸಾಹ ತೋರುವುದರ ಕುರಿತು ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲ ಆಕ್ರೋಶಗೊಂಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾನುವಾರ ಈ ಕುರಿತು ಖಾರವಾಗಿ ಮಾತನಾಡಿದ್ದಾರೆ. ಪಾರ್ಟಿ ಫಸ್ಟ್ – ಪರ್ಸನಲ್‌ ನೆಕ್ಸ್ಟ್ ಎಂದು ಆಂಗ್ಲ ಭಾಷೆಯಲ್ಲೇ ಸ್ಪಷ್ಟನೆ ನೀಡಿದ ಸುರ್ಜೆವಾಲ, ಪಕ್ಷಕ್ಕೆ ನಾನು ಸೇರಿದಂತೆ ಯಾರೂ ಅನಿವಾರ್ಯವಲ್ಲ. ಪಕ್ಷದ ಸಿದ್ಧಾಂತ ಮೇಲೆ ಕೆಲಸ ಮಾಡಿ. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ದೂರ ಇಟ್ಟು ಪಕ್ಷ ಸಂಘಟನೆ ಕೆಲಸ ಮಾಡಿ ಎಂದಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Milk Price Hike | ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಕೆ?; ಸಿಎಂ ಮುಂದೆ ಪ್ರಸ್ತಾವನೆ!
ರಾಜ್ಯದಲ್ಲಿ ನಂದಿನಿ ಹಾಲಿನ ದರದಲ್ಲಿ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಹಾಲಿನ ದರದಲ್ಲಿ ಏರಿಕೆ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್‌ (Milk Price Hike) ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ ಬೆಲೆ ಏರಿಕೆ ಮಾಡಿದರೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ಈಗಾಗಲೇ ತೈಲ ದರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ನಿತ್ಯ ಬಳಕೆಯ ಹಾಲಿನ ದರವೂ ಏರಿಕೆ ಸಂಕಷ್ಟ ಎದುರಾಗಲಿದೆ. ಆದರೆ, ಹಾಲಿನ ದರ ಏರಿಕೆಗೆ 14 ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಡ ಹಾಕುತ್ತಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಬರಗೂರು ರಾಮಚಂದ್ರಪ್ಪ ವಿರುದ್ಧ BJP ದೂರು: ಸಿದ್ದರಾಮಯ್ಯ ಉತ್ತರಿಸಲಿ ಎಂದ ರವಿಕುಮಾರ್
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ತಮ್ಮ ಕಾದಂಬರಿ ʼಭರತನಗರಿʼ ಯಲ್ಲಿ ರಾಷ್ಟ್ರಗೀತೆ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಬರೆದಿದ್ದಾರೆ. ವಿಡಂಬನೆ ಮಾಡಿದ್ದಲ್ಲದೆ ಭಾರತವನ್ನು ಜಡಭಾರತ ಎಂದು ಕರೆದಿದ್ದಾರೆ. ಗಂಗಾನದಿಯನ್ನು ಹಾದರ ಎಂದು ಕರೆದಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಹಿಜಾಬ್‌ ವಿವಾದ: ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ ಸುಪ್ರೀಂ, ಅರ್ಜಿದಾರರಿಗೆ ತೀವ್ರ ತರಾಟೆ
ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್‌ ಇಸ್ಲಾಂ ಧಾರ್ಮಿಕ ಪದ್ಧತಿಯಲ್ಲಿ ಅನಿವಾರ್ಯ ಭಾಗವೇನೂ ಅಲ್ಲ ಎಂಬ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ೨೩ ಅರ್ಜಿಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಸೋಮವಾರ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಕಳೆದ ಮಾರ್ಚ್‌ನಿಂದಲೇ ಬಾಕಿ ಉಳಿದಿರುವ ಈ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್‌ ಐದರಂದು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಪೀಠ ಪ್ರಕಟಿಸಿದೆ. ಇದರ ನಡುವೆಯೇ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ ಅರ್ಜಿದಾರರನ್ನು ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version